ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ: ಇಂದು ಮಹಾದೇವಪುರ ಸೇರಿದಂತೆ ಹಲವೆಡೆ ಒತ್ತುವರಿ ತೆರವು ಕಾರ್ಯಾಚರಣೆ

ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ, ವಿಲ್ಲಾಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ಬಿಬಿಎಂಪಿ ತೆರವು ಮಾಡುತ್ತಿದೆ.

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ: ಇಂದು ಮಹಾದೇವಪುರ ಸೇರಿದಂತೆ ಹಲವೆಡೆ ಒತ್ತುವರಿ ತೆರವು ಕಾರ್ಯಾಚರಣೆ
ಮಹದೇವಪುರ ವಲಯದ ಒತ್ತುವರಿ ತೆರವು ಕಾರ್ಯಾಚರಣೆ
Updated By: ವಿವೇಕ ಬಿರಾದಾರ

Updated on: Sep 20, 2022 | 9:00 AM

ಬೆಂಗಳೂರು: ರಾಜಕಾಲುವೆ ಒತ್ತುವರಿ (Rajakaluve Encroachment) ಮಾಡಿಕೊಂಡು ಮನೆ, ವಿಲ್ಲಾಗಳನ್ನು (Villa) ನಿರ್ಮಾಣ ಮಾಡಿಕೊಂಡಿದ್ದು, ಬಿಬಿಎಂಪಿ (BBMP) ಅವುಗಳನ್ನು ತೆರವು ಮಾಡುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸರ್ವೇ ಪ್ರಕಾರ ಬರೋಬ್ಬರಿ 696 ಕಡೆ ಒತ್ತುವರಿ ಆಗಿದೆ. ಸದ್ಯ 84 ಕಡೆ ಒತ್ತುವರಿ ತೆರವು ಕಾರ್ಯ ಆಗಿದೆ. ಎರಡು ದಿನ ಬಂದ್​ ಆಗಿದ್ದ ತೆರವು ಕಾರ್ಯ ನಿನ್ನೆ (ಸೆ.19) ರಿಂದ ಪ್ರಾರಂಭವಾಗಿದೆ. ಇಂದು ಕೂಡ ಒತ್ತುವರಿ ತೆರವು ಕಾರ್ಯ ಮುಂದುವರೆಯಲಿದ್ದು, ಮಹಾದೇವಪುರ ವಲಯದಲ್ಲಿ 5 ಕಡೆ ತೆರವು ಕಾರ್ಯಾಚರಣೆ ನಡೆಯಲಿದೆ.

ಜೊತೆಗೆ ರೈನ್​ಬೋ ಡ್ರೈನ್ ಲೇಔಟ್​​ನಲ್ಲಿ 13ಕ್ಕೂ ಹೆಚ್ಚು ವಿಲ್ಲಾಗಳಿಂದ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದ್ದು ತಹಶೀಲ್ದಾರ್ ನೋಟಿಸ್ ನೀಡಿದ್ದರು. ತಹಶೀಲ್ದಾರ್​ ಗಡುವು​ ಮುಕ್ತಾಯ ಹಿನ್ನೆಲೆ ತೆರವು ಕಾರ್ಯ ನಡೆಯಲಿದೆ. ರಾಜಕಾಲುವೆ ಒತ್ತುವರಿ ಜಾಗ ತೆರವಿಗೆ ರೈನ್​ಬೋ ಡ್ರೈವ್​ ಲೇಔಟ್ ವಿಲ್ಲಾದ ನಿವಾಸಿಗಳಿಗೆ ಖುದ್ದು ತಹಶೀಲ್ದಾರ್ ಸೆಪ್ಟೆಂಬರ್ 12ರಂದು ನೋಟಿಸ್ ನೀಡಿದ್ದರು. ನೋಟಿಸ್ ನೀಡಿ 7 ದಿನ ಗಡುವು ನೀಡಲಾಗಿತ್ತು. ಇಂದು ತಹಶೀಲ್ದಾರ್​ ಗಡುವು​ ಮುಕ್ತಾಯ ಹಿನ್ನೆಲೆ ತೆರವು ಕಾರ್ಯಾಚರಣೆ ನಡೆಯಲಿದೆ.

ಮತ್ತೊಂದೆಡೆ ಇಂದು ಸರ್ಜಾಪುರ ರಸ್ತೆಯ ವಿಪ್ರೋ ಮುಂಭಾಗದ ಕಾಲುವೆ ತೆರವು, ಸಲಾಪುರಿ ಅಪಾರ್ಟ್ಮೆಂಟ್ ಮುಂಭಾಗ, ಗ್ರೀಬ್ ವುಡ್ ರೆಸಿಡೆನ್ಸಿ ಮುಂಭಾಗದಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗುತ್ತೆ. ಸಾಕ್ರಾ ಆಸ್ಪತ್ರೆ ಹಿಂಭಾಗ, ಪೂರ್ವಪಾರ್ಕ್ ರೈಡ್ಜ್ ರಿಡ್ಜ್ ಹಿಂಭಾಗದ ರಸ್ತೆ, ವಿಜಯಲಕ್ಷ್ಮಿ ಕಾಲೋನಿ ಕಾಡುಗೋಡಿಯಲ್ಲಿ, ಮಾರತಹಳ್ಳಿಯ ಬೆಳ್ಳಂದೂರು ಅಡ್ಡಲಾಗಿರುವ ಬಿಡಬ್ಲ್ಯೂಎಸ್ಎಸ್ ಬ್ರಿಡ್ಜ್ ತೆರವು ಮಾಡಲಾಗುತ್ತೆ. ಹಾಗೇ ನಾಳೆ ಯಲಹಂಕ ವಲಯದಲ್ಲೂ ತೆರವು ಕಾರ್ಯಾಚರಣೆ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ