ಬೆಂಗಳೂರಿನಲ್ಲಿ ತಾಯಿ ಮುಂದೆ ಗೋಡೆಗೆ ಎಸೆದು ಚಿತ್ರಹಿಂಸೆ ನೀಡಿ ನಾಯಿ ಮರಿಯನ್ನು ಕೊಂದ ವ್ಯಕ್ತಿ

ಬೆಂಗಳೂರಿನ ಜೆ.ಪಿ. ನಗರದಲ್ಲಿ ನಾಯಿಮರಿ ಥಳಿಸಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಸಿಸಿಟಿವಿ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ನಾಯಿಮರಿಯನ್ನು ಗೋಡೆಗೆ ಹೊಡೆದು ಸಾಯಿಸಿರುವುದು ಸೆರೆಯಾಗಿದೆ. ಆರೋಪಿ ನೇಪಾಳ ಕಿರಣ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇಂತಹ ಪ್ರಾಣಿ ಕ್ರೌರ್ಯದ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಹಾಗೂ ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಇದು ಸಮಾಜಕ್ಕೆ ದೊಡ್ಡ ಆತಂಕ ಎಂದು ಪ್ರಾಣಿ ಪ್ರಿಯರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ತಾಯಿ ಮುಂದೆ ಗೋಡೆಗೆ ಎಸೆದು ಚಿತ್ರಹಿಂಸೆ ನೀಡಿ ನಾಯಿ ಮರಿಯನ್ನು ಕೊಂದ ವ್ಯಕ್ತಿ
ವಿಡಿಯೋ

Updated on: Jan 14, 2026 | 3:26 PM

ಬೆಂಗಳೂರು, ಜ.14: ಬೆಂಗಳೂರಿನಲ್ಲಿ ಒಂದು ಆತಂಕಕಾರಿ ಘಟನೆಯೊಂದು ನಡೆದಿದೆ. ಜೆ.ಪಿ. ನಗರದಲ್ಲಿ ಕಳೆದ ವಾರ ನಾಯಿಮರಿಯ (Puppy Brutally Killed) ಮನಸೋಯಿಚ್ಛೆ ಥಳಿಸಿರುವ ಘಟನೆಯೊಂದು ನಡೆದಿದೆ. ಈ ಬಗ್ಗೆ ಸಿಸಿಟಿವಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವ್ಯಕ್ತಿಯೊಬ್ಬ ನಾಯಿಮರಿಯನ್ನು ಗೋಡೆಗೆ ಎಸೆದು ಚಿತ್ರಹಿಂಸೆ ನೀಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಬಗ್ಗೆ  ಎಕ್ಸ್​ನಲ್ಲಿ ಹಂಚಿಕೊಳ್ಳಲಾಗಿದೆ. ಇದೀಗ ಈ ವಿಡಿಯೋ ಹಾಗೂ ಪ್ರಾಣಿ ಪ್ರಿಯರ ದೂರಿನ ಆಧಾರದಲ್ಲಿ ದಕ್ಷಿಣ ಬೆಂಗಳೂರು ಪುಟ್ಟೇನಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡು ಆ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಕೃತ್ಯವನ್ನು ಮಾಡಿರುವ ವ್ಯಕ್ತಿಯನ್ನು ನೇಪಾಳ ಕಿರಣ್ ಎಂದು ಹೇಳಲಾಗಿದೆ. ಜೆ.ಪಿ. ನಗರದ ರೆಸ್ಟೋರೆಂಟ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ, ಈತ ತನ್ನ ಸಹೋದರನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎಂದು ಹೇಳಲಾಗಿದೆ. ಜನವರಿ 9 ರಂದು ಸ್ಥಳೀಯ ನಾಯಿಗಳಿಗೆ ಆಹಾರ ನೀಡುವ ವ್ಯಕ್ತಿಯೊಬ್ಬರು ವಾಟ್ಸಾಪ್ ಗುಂಪಿನಲ್ಲಿ ವೀಡಿಯೊಗಳನ್ನು ಹಂಚಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಪ್ರತಿದಿನ ಎಂಟು ನಾಯಿಮರಿಗಳಿಗೆ ಆಹಾರ ನೀಡುವ ವ್ಯಕ್ತಿಯೇ ಈ ನಾಯಿಮರಿಗೂ ಆಹಾರ ನೀಡಿದ್ದರು ಎಂದು ಪ್ರಾಣಿ ಕಲ್ಯಾಣ ಸ್ವಯಂಸೇವಕರು ತಿಳಿಸಿದ್ದಾರೆ. ನಾಯಿ ಮರಿಗಳಿಗೆ ಆಹಾರ ಹಾಕುವ ವೇಳೆ ಈ ನಾಯಿ ಮರಿ ದೇಹ ಪತ್ತೆಯಾಗಿದೆ. ಇದರಲ್ಲಿ ಉಳಿದ ನಾಯಿಮರಿಗಳು ಕಾಣೆಯಾಗಿವೆ ಎಂದು ಹೇಳಿದ್ದಾರೆ.

ಎಕ್ಸ್​ನಲ್ಲಿ ಮೂರು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಒಂದು ವಿಡಿಯೋದಲ್ಲಿ ನಾಯಿಮರಿಯನ್ನು ಒಂದು ಪೊದೆಯಿಂದ ತೆಗೆಯುವುದನ್ನು ನೋಡಬಹುದು. ಎರಡನೇ ವಿಡಿಯೋದಲ್ಲಿ ಅಲ್ಲಿದ್ದ ಒಂದು ಗೋಡೆಗೆ ಹೊಡೆಯುತ್ತಾನೆ. ಮೂರನೇ ವಿಡಿಯೋದಲ್ಲಿ ಆ ನಾಯಿ ಮರಿಯನ್ನು ತಾಯಿಯ ಮುಂದೆಯೇ ಚಿತ್ರಹಿಂಸೆ ನೀಡುವುದನ್ನು ಕಾಣಬಹುದು. ಕೊನೆಗೆ ಆ ನಾಯಿ ಮರಿ ನರಳಾಡಿ ನರಳಾಡಿ ಪ್ರಾಣವನ್ನು ಬಿಡುತ್ತದೆ. ಈ ಬಗ್ಗೆ ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ. ಈ ವಿಡಿಯೋವನ್ನು ನೋಡಿ ಹಲವು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಬೆಂಗಳೂರಿನಲ್ಲಿ ಇಂತಹ ವಿಕೃತಿ ಮನುಷ್ಯರಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: “ನನಗೆ ಕೆಲಸ ತೊರೆಯುವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ”: ಇದು ನನ್ನ ಜೀವನದ ಕಹಿ ಕ್ಷಣ ಎಂದ ಬೆಂಗಳೂರಿನ ಯುವಕ

ಇದು ಮನುಷ್ಯನಂತೆ ನಾಯಿಮರಿಯ ಕೊಲೆ ಎಂದು ಒಬ್ಬರು ಹೇಳಿದ್ದಾರೆ. ಇದು ಸಮಾಜಕ್ಕೆ ದೊಡ್ಡ ತಲೆನೋವಾಗಿರುವ ಮನೋರೋಗಿಗಳ ಕೆಲಸ ಎಂದು ಇನ್ನೊಬ್ಬರು ಹೇಳಿದ್ದಾರೆ. ಪ್ರಾಣಿ ಹಕ್ಕುಗಳ ಕಾರ್ಯಕರ್ತ ಪ್ರಿಯಮ್ ಛೆಟ್ರಿ ಅವರು ಇಂತಹ ವ್ಯಕ್ತಿಗಳ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲೂ ಕೂಡ ಈ ಇಂತಹದೇ ಪ್ರಕರಣವೊಂದು ನಡೆದಿದೆ. ಬೆಂಗಳೂರಿನ ಮನೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಅಪಾರ್ಟ್ಮೆಂಟ್ ಲಿಫ್ಟ್ ಒಳಗೆ ನಾಯಿಯನ್ನು ಎಸೆದಿರುವ ಘಟನೆ ಕೂಡ ಎಲ್ಲರಿಗೂ ಅಚ್ಚರಿಯನ್ನು ತಂದಿತ್ತು. ಇದೀಗ ಈ ಘಟನೆಯೂ ಕೂಡ ಪ್ರಾಣಿ ಪ್ರಿಯರಿಗೆ ಆತಂಕವನ್ನು ತಂದಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More
Follow Us