ಬೆಂಗಳೂರಿನ ಈ ರಸ್ತೆಯಲ್ಲಿ ಪ್ರತಿದಿನ ಕಿಲೋಮೀಟರ್​ ಗಟ್ಟಲೇ ಟ್ರಾಫಿಕ್ ಜಾಮ್: ವಾಹನ ಸವಾರರಿಗೆ ನಿತ್ಯ ನರಕ ದರ್ಶನ

ಸಿಲಿಕಾನ್ ಸಿಟಿ ಬೆಂಗಳೂರು ದಿನದಿಂದ ದಿನಕ್ಕೆ ಟ್ರಾಫಿಕ್ ಸಿಟಿ ಆಗುತ್ತಿದೆ ಎಂದೆನ್ನಿಸುತ್ತಿದೆ. ನಗರದ ಯಾವ ರಸ್ತೆಗೆ ಹೋದರೂ ಸಹ ಟ್ರಾಫಿಕ್ ಜಾಮ್ ನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಈ ಒಂದು ರಸ್ತೆಯಲ್ಲಿ ಪ್ರತಿದಿನ ಕಿ.ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ವಾಹನಗಳ ಅಡ್ಡದಿಡ್ಡಿ ಸಂಚಾರ,ಯಾವ ಏರಿಯಾಗೆ ಹೋಗಬೇಕಂದ್ರು ಗಂಟೆಗಟ್ಟಲೆ ರೋಡ್ ನಲ್ಲಿ ಕಾಯ ಬೇಕಾಗಿದ್ದು, ಈ ಬಗ್ಗೆ ಟಿವಿ9 ಗ್ರೌಂಡ್ ರಿಪೋರ್ಟ್ ಇಲ್ಲಿದೆ.

ಬೆಂಗಳೂರಿನ ಈ ರಸ್ತೆಯಲ್ಲಿ ಪ್ರತಿದಿನ ಕಿಲೋಮೀಟರ್​ ಗಟ್ಟಲೇ ಟ್ರಾಫಿಕ್ ಜಾಮ್: ವಾಹನ ಸವಾರರಿಗೆ ನಿತ್ಯ ನರಕ ದರ್ಶನ
Bengaluru Traffic
Updated By: ರಮೇಶ್ ಬಿ. ಜವಳಗೇರಾ

Updated on: Jul 31, 2025 | 10:10 PM

ಬೆಂಗಳೂರು, (ಜುಲೈ 31): ನಗರದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ (Bengaluru Traffic ) ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಕೆಆರ್.ಪುರ, ಟಿನ್ ಫ್ಯಾಕ್ಟರಿ, ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಪ್ರತಿದಿನ ಟ್ರಾಫಿಕ್ ಜಾಮ್. ಅದರಲ್ಲೂ ಮುಖ್ಯವಾಗಿ ಕಗ್ಗದಾಸಪುರ ರೈಲ್ವೆ ಕ್ರಾಸಿಂಗ್ ನಲ್ಲಂತೂ ವಾಹನ ಸವಾರರು ನಿತ್ಯ ಸಂಕಷ್ಟ ಎದುರಿಸುತ್ತಾರೆ. ಈ ರೈಲ್ವೆ ಕ್ರಾಸಿಂಗ್ ಮೂಲಕ ಪ್ರತಿನಿತ್ಯ 30 ರೈಲು ಸಂಚಾರ ಮಾಡುತ್ತಿದ್ದು, ಇದರಿಂದ ಪ್ರತಿ ಅರ್ಧ ಒಂದು ಗಂಟೆಗೊಮ್ಮೆ ಗೇಟ್ ಕ್ಲೋಸ್ ಮಾಡಲಾಗುತ್ತಿದೆ. ಇದರಿಂದ ಕಿಮೀಗಟ್ಟಲೇ ವಾಹನಗಳು ಟ್ರಾಫಿಕ್ ನಲ್ಲಿ ನಿಲ್ಲುತ್ತಿದೆ. ಈ ಹಿನ್ನೆಲೆಯಲ್ಲಿ ಬಸವನಗರ, ವಿಜ್ಞಾನ ನಗರ, ಜಿ.ಎಂ ಪಾಳ್ಯದ ರೋಡ್ ಗಳಲ್ಲಿ ವಿಪರೀತವಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಪ್ರತಿನಿತ್ಯ ಇಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಜನರು ತುಂಬಾ ಸಮಸ್ಯೆ ಎದುರಿಸುತ್ತಿದ್ದು, ಇಲ್ಲಿ ಒಂದು ಫ್ಲೈ ಓವರ್ ಮಾಡಿದ್ರೆ ಸಮಸ್ಯೆ ಬಗಹರಿಯುತ್ತದೆ ಎಂದು ವಾಹನ ಸವಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತ ಹೆಬ್ಬಾಳ ಫ್ಲೈ ಓವರ್ ಮೇಲೆ ಬರುವ ವಾಹನ ಸವಾರರಿಗೆ ಟ್ರಾಫಿಕ್ ಪೋಲಿಸರು ಮಲತಾಯಿ ಧೋರಣೆ ತೋರುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಏರ್ ಪೋರ್ಟ್ ರಸ್ತೆಯ ಫ್ಲೈ ಓವರ್ ಮೇಲೆ ಬರುತ್ತಿದ್ದ ವಾಹನಗಳನ್ನು, ಹೆಚ್ಚಿನ ಸಮಯಕ್ಕೆ ಟ್ರಾಫಿಕ್ ಪೋಲಿಸರು ಬಿಡ್ತಿದ್ದಾರಂತೆ. ಸರ್ವಿಸ್ ರಸ್ತೆ ಮೂಲಕ ಹೆಬ್ಬಾಳ ಫ್ಲೈ ಓವರ್ ಮೇಲೆ ಸಂಚಾರ ಮಾಡುತ್ತಿದ್ದ ವಾಹನಗಳನ್ನು ಅರ್ಧಗಂಟೆ ಕಾಲ ಬ್ಲಾಕ್ ಮಾಡಿದ್ದರಂತೆ. ಈ ವೇಳೆ ವಾಹನ ಸವಾರರು, ಪೊಲೀಸರು ಜೊತೆ ವಾಗ್ವಾದ ಮಾಡಿದ್ದಾರೆ.

ಇದನ್ನೂ ಓದಿ: Viral: ಕಡಿಮೆ ಸಂಬಳ, ಬೆಂಗಳೂರಿನಲ್ಲಿ ಬದುಕೋದು ಕಷ್ಟ ಎಂದ ಯುವಕ

ನಾವೂ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಬೇಕು ನಾವೂ ಮನುಷ್ಯರಲ್ಲವೆ, ನಮ್ಮ ವಾಹನಗಳನ್ನು ನಿಲ್ಲಿಸುತ್ತೀರಿ,ಏರ್ ಪೋರ್ಟ್ ಕಡೆಯಿಂದ ಬರುವವರನ್ನು ವಿಐಪಿ ಗಳ ತರ ಟ್ರೀಟ್ ಮಾಡ್ತಿರಾ, ನಿಮಗೆ ಮಾನ ಮರ್ಯಾದೆ ಇಲ್ವಾ ಎಂದು ವಾಹನ ಸವಾರರು ಪೋಲಿಸರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ..

ಒಟ್ಟಿನಲ್ಲಿ ನಗರದಲ್ಲಿ ಪ್ರತಿದಿನ ಎರಡೂವರೆ ಸಾವಿರ ಹೊಸ ವಾಹನಗಳು ರಿಜಿಸ್ಟ್ರೇಷನ್ ಆಗುತ್ತಿದ್ದು, ಇದರಿಂದ ಬೆಂಗಳೂರಿನಲ್ಲಿ ವಿಪರೀತವಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಪ್ರತಿನಿತ್ಯ ಸಂಕಷ್ಟ ಎದುರಿಸುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಆಡಿ

Published On - 10:06 pm, Thu, 31 July 25