ತಿಂಗಳಿಗೆ 500 ಕೋಟಿ ಲೀಟರ್ ನೀರು ಉಳಿಸಿದ ಬೆಂಗಳೂರು ಜಲಮಂಡಳಿ; ಇದು ಸಾಧ್ಯವಾಗಿದ್ದು ಹೀಗೆ ನೋಡಿ!

|

Updated on: Jul 31, 2023 | 9:25 PM

ಅನಧಿಕೃತ ಸಂಪರ್ಕಗಳನ್ನು ಕಾನೂನುಬದ್ಧಗೊಳಿಸುವುದರಿಂದ ತೊಡಗಿ ಪೈಪ್‌ಲೈನ್‌ಗಳನ್ನು ಬದಲಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಪೋಲಾಗುವ ಅಥವಾ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಶೇ 20ಕ್ಕೆ ಇಳಿಕೆ ಮಾಡಲು ಜಲಮಂಡಳಿ ಉದ್ದೇಶಿಸಿದೆ ಎಂದು ವರದಿಯಾಗಿದೆ.

ತಿಂಗಳಿಗೆ 500 ಕೋಟಿ ಲೀಟರ್ ನೀರು ಉಳಿಸಿದ ಬೆಂಗಳೂರು ಜಲಮಂಡಳಿ; ಇದು ಸಾಧ್ಯವಾಗಿದ್ದು ಹೀಗೆ ನೋಡಿ!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸುವ ಅಥವಾ ಅಪ್​ಗ್ರೇಡ್ ಮಾಡುವ ಮೂಲಕ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಸಿಕ (BWSSB) ಲೆಕ್ಕಕ್ಕೆ ಸಿಗದ ಅಥವಾ ಪೋಲಾಗುವ ನೀರನ್ನು (Unaccounted for Water / UfW) ಸಾರ್ವಕಾಲಿಕ ಕನಿಷ್ಠ ಮಟ್ಟವಾದ ಶೇ 28ಕ್ಕೆ ಇಳಿಕೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ. 2021 ರ ಜೂನ್​ನಲ್ಲಿ, ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇಕಡಾ 36.95 ರಷ್ಟಿತ್ತು. ಇದು 2022 ರ ಜೂನ್ ವೇಳೆಗೆ ಶೇಕಡಾ 30.05 ಕ್ಕೆ ಇಳಿದಿತ್ತು. ಇದೀಗ ತಿಂಗಳಿಗೆ ಸುಮಾರು 500 ಕೋಟಿ ಲೀಟರ್ ನೀರನ್ನು ಉಳಿಸಲು ಮಂಡಳಿಗೆ ಸಾಧ್ಯವಾಗುತ್ತಿದೆ.

ಅನಧಿಕೃತ ಸಂಪರ್ಕಗಳನ್ನು ಕಾನೂನುಬದ್ಧಗೊಳಿಸುವುದರಿಂದ ತೊಡಗಿ ಪೈಪ್‌ಲೈನ್‌ಗಳನ್ನು ಬದಲಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಪೋಲಾಗುವ ಅಥವಾ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಶೇ 20ಕ್ಕೆ ಇಳಿಕೆ ಮಾಡಲು ಜಲಮಂಡಳಿ ಉದ್ದೇಶಿಸಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಯೋಜನೆಯ ಒಂದು ಭಾಗವಾಗಿ, ಉಪವಿಭಾಗದ ಹಂತಗಳಲ್ಲಿ ನವೀಕೃತ ಬೃಹತ್ ಮೀಟರ್‌ಗಳನ್ನು ಅಳವಡಿಸಲು ಜಲಮಂಡಳಿಯು ಮುಂದಾಗಿದೆ. ಮೇಲ್ದರ್ಜೆಗೆ ಏರಿಸಿದ ತಂತ್ರಜ್ಞಾನದ ಸಹಾಯದಿಂದ ನೂತನ ಮೀಟರ್​ಗಳನ್ನು ಅಳವಡಿಸಲು ಮುಂದಾಗಿದ್ದು, ಅವುಗಳ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರಲಿವೆ ಎಂದು ವರದಿ ಉಲ್ಲೇಖಿಸಿದೆ.

ಈಗ ಅಸ್ತಿತ್ವದಲ್ಲಿರುವ ಮೀಟರ್​​​ಗಳನ್ನು 10 ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ. ನವೀಕೃತ ತಂತ್ರಜ್ಞಾನದ ಮೀಟರ್​​ಗಳನ್ನು ಅಳವಡಿಸುವುದರಿಂದ ಪೋಲಾಗುವ ನೀರಿನ ಪ್ರಮಾಣವನ್ನು ಇನ್ನಷ್ಟು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಜಲಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಮತ್ತೆ ಮರುಜೀವ; ಭೂಮಿ ಕೊಟ್ಟ ರೈತರ ಜತೆ ಡಿಸಿಎಂ ಸಭೆ, ಅಳಲು ತೋಡಿಕೊಂಡ ಮಾಜಿ ಸೈನಿಕ

ಈಗ ಹೊಸ ತಂತ್ರಜ್ಞಾನ ಲಭ್ಯವಿದ್ದು, ಇವುಗಳ ಸಹಾಯದಿಂದ ನೀರಿನ ಹರಿವಿನ ಮೇಲೆ ಹೆಚ್ಚಿನ ನಿಗಾ ಇರಿಸಬಹುದು. ಪ್ರತಿ ಗಂಟೆಗೆ ಉಪವಿಭಾಗಗಳಿಗೆ ನೀರಿನ ಹರಿವನ್ನು ಮೇಲ್ವಿಚಾರಣೆ ಮಾಡಲು ಬೃಹತ್ ಮೀಟರ್‌ಗಳು ನಮಗೆ ಸಹಾಯ ಮಾಡುತ್ತವೆ. ಇಷ್ಟೇ ಅಲ್ಲದೆ, ಇವುಗಳ ಮೂಲಕ ನಿಖರವಾಗಿ ಎಲ್ಲಿ ಸೋರಿಕೆಯಾಗುತ್ತಿದೆ ಅಥವಾ ವ್ಯರ್ಥವಾಗಿದೆ ಎಂಬುದನ್ನು ನಾವು ಕಂಡುಹಿಡಿಯಬಹುದು ಎಂದು ಮಂಡಳಿಯ ಇಂಜಿನಿಯರ್ ಇನ್ ಚೀಫ್ ಸುರೇಶ್ ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.

ಮಂಡಳಿಯ ಅಧಿಕಾರಿಗಳು ಕಂಟ್ರೋಲ್ ರೂಂನಿಂದಲೇ ರೀಡಿಂಗ್‌ಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ತಕ್ಷಣ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಾರೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ