ಬೆಂಗಳೂರು: ಮಳೆ ನೀರು ಕೋಯ್ಲು ಅಳವಡಿಕೆಗೆ ಸಿಎಸ್​ಆರ್​ ನಿಧಿ ಮೊರೆ ಹೋದ ಜಲ ಮಂಡಳಿ

ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ನೀರು ಕೊಯ್ಲು ಅಳವಡಿಸಲು ಹಾಗೂ ಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಗಟ್ಟಲು ಮತ್ತು ಇನ್ನಿತರ ಯೋಜನೆಗಳಿಗೆ ಖರ್ಚು ಮಾಡಲು ಜಲಮಂಡಳಿ ಸಿಎಸ್​ಆರ್​ ನಿಧಿ (CSR) ಮೊರೆ ಹೋಗಿದೆ.

ಬೆಂಗಳೂರು: ಮಳೆ ನೀರು ಕೋಯ್ಲು ಅಳವಡಿಕೆಗೆ ಸಿಎಸ್​ಆರ್​ ನಿಧಿ ಮೊರೆ ಹೋದ ಜಲ ಮಂಡಳಿ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

Updated on: Mar 20, 2024 | 8:19 AM

ಬೆಂಗಳೂರು, ಮಾರ್ಚ್​ 19: ನಗರದಲ್ಲಿ ನೀರಿನ ಅಭಾವವನ್ನು ಮನಗಂಡಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಜಲ ಮಂಡಳಿ BWSSB) ಇದೀಗ ಮಳೆ ನೀರು ಕೋಯ್ಲು ಅಳವಡಿಕೆಗೆ ಒತ್ತು ನೀಡಿದೆ. ನಗರಕ್ಕೆ ನೀರು ಸರಬರಾಜು ಮಾಡಲು ಕಾವೇರಿ ನದಿ ಮೂಲವನ್ನೇ ಹೆಚ್ಚು ಅವಲಂಬಿಸುವುದು ಅಸಾಧ್ಯವೆಂದು ಅರಿತಿರುವ ಜಲಮಂಡಳಿಯು ಭವಿಷ್ಯದ ದೃಷ್ಟಿಯಿಂದ ಕಂಡುಕೊಂಡಿರುವ ಹಲವು ಪರ್ಯಾಯ ಮೂಲಗಳ ಪೈಕಿ ಮಳೆ ನೀರು ಕೊಯ್ಲು ಅವಳವಡಿಕೆಯೂ ಒಂದಾಗಿದೆ. ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸವ ಮೂಲಕ ಸಾರ್ವತ್ರೀಕರಣಗೊಳಿಸಲು ಜಲಮಂಡಳಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ನೀರು ಕೊಯ್ಲು ಅಳವಡಿಸಲು ಹಾಗೂ ಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಗಟ್ಟಲು ಮತ್ತು ಇನ್ನಿತರ ಯೋಜನೆಗಳಿಗೆ ಖರ್ಚು ಮಾಡಲು ಜಲಮಂಡಳಿ ಸಿಎಸ್​ಆರ್​ ನಿಧಿ (CSR) ಮೊರೆ ಹೋಗಿದೆ.

ಬಿಡಬ್ಲೂಎಸ್​ಎಸ್​​ಬಿ ಸಂಪೂರ್ಣವಾಗಿ ಜನರಿಂದ ಸಂಗ್ರಹಿಸಿದ ತೆರಿಗೆ ಮೇಲೆ ಕಾರ್ಯ ನಿರ್ವಹಿಸುತ್ತದೆ. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ತೆರಿಗೆ ಹಣ ಸಾಕಾಗುವುದಿಲ್ಲ. ಮತ್ತು ಮಂಡಳಿಯಲ್ಲಿ ಅಷ್ಟೊಂದು ಹಣವಿಲ್ಲ. ಬೆಂಗಳೂರು ನಗರ ಒಳಿತಿಗಾಗಿ ಹಲವು ಕಂಪಿನಗಳು ಸಿಎಸ್​ಆರ್​ ನಿಧಿ ಮೂಲಕ ಹಣ ನೀಡಲು ಮುಂದೆ ಬಂದಿವೆ. ಹೀಗಾಗಿ ನಾವು ಆ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಜಲಮಂಡಳಿಯ ಬೋರ್‌ವೆಲ್‌ಗಳ ನಿರ್ವಹಣೆಗೆ ರೋಬೋಟಿಕ್ ತಂತ್ರಜ್ಞಾನ

ನಗರದಲ್ಲಿ ಅಂತರ್ಜಲ ಮಟ್ಟ ವೃದ್ಧಿಸುವ ನಿಟ್ಟಿನಲ್ಲಿ ಈ ಎಲ್ಲ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಹವಾಮಾನದಲ್ಲಿ ಆದ ಬದಲಾವಣೆಯಿಂದ ಈ ಬಾರಿ ಮಳೆ ಕಡಿಮೆಯಾಗಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ನೀರಿಲ್ಲದೆ ಪರದಾಡುವಂತಾಗಿದೆ. ಮುಖ್ಯವಾಗಿ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ತೊಂದರೆಯಾಗಿದೆ. ಇದು ಬೆಂಗಳೂರು ಜನರಿಗೆ ಎಚ್ಚರಿಕೆ ಗಂಟೆಯಾಗಿದೆ. ಹೀಗಾಗಿ ನೈಸರ್ಗಿಕವಾಗಿ ನೀರು ಇಂಗುವಂತೆ (ಕೆರೆಗಳನ್ನು ಉಳಿಸಿಕೊಳ್ಳುವುದು) ಮತ್ತು ಮಳೆ ನೀರು ಕೋಯ್ಲು ಹೆಚ್ಚು ಅವಶ್ಯಕವಾಗಿದೆ. ಈ ಮಳೆ ನೀರು ಕೊಯ್ಲು ನಿರ್ಮಾಣ ಹೂಡಿಕೆಗೆ ಜಲ ಮಂಡಳಿ ಖಾಸಗಿ ಕಂಪನಿಗಳ ಮೊರೆ ಹೋಗಿದೆ.

ಸಂಸ್ಕರಿಸಿದ ನೀರಿನ ಮರು ಬಳಕೆಗೆ ‘ಜಲಸ್ನೇಹಿ’ ಆ್ಯಪ್

ಸಂಸ್ಕರಿಸಿದ ನೀರಿನ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಬಿಡಬ್ಲ್ಯುಎಸ್​ಎಸ್​ಬಿ ‘ಜಲಸ್ನೇಹಿ’ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಈ ಆ್ಯಪ್ ಮೂಲಕ ಬೆಂಗಳೂರಿನ ಗ್ರಾಹಕರು ಬಿಡಬ್ಲ್ಯುಎಸ್​ಎಸ್​ಬಿಯಿಂದ ಸಂಸ್ಕರಿಸಿದ ನೀರಿಗೆ ಮನವಿ ಸಲ್ಲಿಸಬಹುದಾಗಿದೆ.

ಕೊಳವೆ ಬಾವಿ ಕೊರೆಯಲಿ ‘ಅಂತರ್ಜಲ’ ಮೂಲಕ ಮನವಿ

ಇತ್ತೀಚೆಗೆ, ಬೆಂಗಳೂರು ನಗರದಲ್ಲಿ ಬೋರ್‌ವೆಲ್‌ಗಳನ್ನು ಕೊರೆಯಲು ಅನುಮತಿಯನ್ನು ಕಡ್ಡಾಯಗೊಳಿಸಿ ಬಿಡಬ್ಲ್ಯುಎಸ್​ಎಸ್​ಬಿ ಆದೇಶ ಹೊರಡಿಸಿತ್ತು. ಇದಕ್ಕಾಗಿ ‘ಅಂತರ್ಜಲ’ ಅಪ್ಲಿಕೇಶನ್ ಆರಂಭಿಸಲಾಗಿದೆ. ಇದು ಬೋರ್‌ವೆಲ್‌ಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸಲಿದೆ. ಇದರ ಮೂಲಕ ಬೆಂಗಳೂರು ನಗರ ವಾಸಿಗಳು ಕೊಳವೆ ಬಾವಿ ಕೊರೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ಅರ್ಜಿ ಸಲ್ಲಿಕೆಗೆ ಕಚೇರಿಗೆ ಅಲೆಯಬೇಕಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ