ಬೆಂಗಳೂರು, ಕಲಬುರಗಿಯಲ್ಲೂ ಪ್ರತಿಧ್ವನಿಸಿತು ಗುಂಬಜ್ ವಿವಾದ: ಕೆಪಿಟಿಸಿಎಲ್ ಕಟ್ಟಡದ ಮೇಲೆ ಗುಂಬಜ್ ಕಟ್ಟಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಕಿಡಿ

ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಹಸಿರು ಬಣ್ಣ ಬಳಿದಿರೋದು ವಿವಾದದ ಸ್ವರೂಪ ಪಡೆದಿದೆ. ರೈಲ್ವೆ ನಿಲ್ದಾಣದ ಹೊರಗೋಡೆಗೆ ಹಸಿರು ಬಣ್ಣ ಬಳಿದಿರೋದು ಹಿಂದುಪರ ಸಂಘಟನೆಗಳ ಕಿಡಿಗೆ ಕಾರಣವಾಗಿದೆ.

ಬೆಂಗಳೂರು, ಕಲಬುರಗಿಯಲ್ಲೂ ಪ್ರತಿಧ್ವನಿಸಿತು ಗುಂಬಜ್ ವಿವಾದ: ಕೆಪಿಟಿಸಿಎಲ್ ಕಟ್ಟಡದ ಮೇಲೆ ಗುಂಬಜ್ ಕಟ್ಟಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಕಿಡಿ
ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಹಸಿರು ಬಣ್ಣ ಬಳಿಯಲಾಗಿದ್ದು ವಿವಾದ ಸೃಷ್ಟಿಯಾಗಿದೆ
Edited By: ಆಯೇಷಾ ಬಾನು

Updated on: Dec 13, 2022 | 10:12 AM

ಬೆಂಗಳೂರು: ಮೈಸೂರು ಬಸ್ ನಿಲ್ದಾಣಗಳನ್ನು ಗುಂಬಜ್ ಮಾದರಿಯಲ್ಲಿ ನಿರ್ಮಾಣ ಮಾಡಿದ್ದು ರಾಜ್ಯದಲ್ಲಿ ದೊಡ್ಡ ವಿವಾದವಾಗಿತ್ತು. ಆ ಘಟನೆ ಮಾಸುವ ಮುನ್ನವೇ ಇದೀಗ ಕಲಬುರಗಿ, ಬೆಂಗಳೂರಿನಲ್ಲಿ ಮತ್ತೊಂದು ವಿವಾದ ಆರಂಭವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಗುಂಬಜ್ ಪ್ರಕರಣ ಧ್ವನಿ ಎತ್ತಿದೆ. ಮೈಸೂರಿನ ನಂತರ ಬೆಂಗಳೂರಿನಲ್ಲಿ ಇದೀಗ ಗುಂಬಜ್ ಫೈಟ್ ಶುರುವಾಗಿದೆ. ನಗರದ ಸರ್ಕಾರಿ ಕಟ್ಟಡಕ್ಕೆ ಗುಂಬಜ್ ಶೈಲಿ ನೀಡಲಾಗಿದೆ ಎಂಬ ಬಗ್ಗೆ ವಿರೋಧ ಕೇಳಿ ಬಂದಿದೆ. ರೇಸ್ ಕೋರ್ಸ್ ಮುಖ್ಯೆ ರಸ್ತೆಯಲ್ಲಿರುವ ಕೆಪಿಟಿಸಿಎಲ್ ಪವರ್ ಸಪ್ಲೈ ಕಟ್ಟಡದ ಮೇಲೆ ಗುಂಬಜ್ ವಿವಾದ ಹುಟ್ಟಿಕೊಂಡಿದೆ.

ಹಿಜಾಬ್ ವಿವಾದ, ಕೇಸರಿ ಶಾಲು ವಿವಾದ, ಜಟ್ಕಾ ಕಟ್, ಹಲಾಲ್ ಕಟ್ ಮಾಂಸ ವಿವಾದ, ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ, ಆಜಾನ್ ವಿವಾದ ಬಳಿಕ ಇದೀಗ ಈ ವಿವಾದಕ್ಕೆ ಗುಮ್ಮಟ ವಿವಾದವೂ ಸೇರಿಕೊಂಡಿದೆ. ಮೈಸೂರಿನ ಬಸ್ ನಿಲ್ದಾಣದಲ್ಲಿ ಗುಂಬಜ್ ಮಾದರಿ ಕಟ್ಟಲಾಗಿದೆ ಎಂಬ ವಿವಾದದ ಬಳಿಕ ನಗರದ ಕೆಪಿಟಿಸಿಎಲ್ ಕಟ್ಟಡಕ್ಕೆ ಗುಂಬಜ್ ಆಕೃತಿಯ ಗುಂಬಜ್ ನಿಲ್ಲಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕೆಪಿಟಿಸಿಎಲ್ ಕಟ್ಟಡದ ಚಾವಣಿ, ಕಂಬಗಳು ಹಾಗೂ ಗೋಪುರವು ಗುಂಬಜ್ ಹಾಗೂ ಮುಸ್ಲಿಂ ಮಸೀದಿಗಳ ಮಾದರಿಯ ಹೊಲಿಕೆಯನ್ನು ಹೊಂದಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಅರೆಬಿಕ್ ಹಾಗೂ ಗುಂಬಜ್ ಆರ್ಕಿಟೆಕ್ಚರ್ ಕಾಪಾಡುವ ಬೆಳಸುವ ಹುನ್ನಾರ ಇದು. ಇದಕ್ಕೆ ಯಾರೂ ವಿರೋಧ ಮಾಡಲ್ಲ ಅಂತಾ ಈಗ ಗುಂಬಜ್ ಮಾದರಿಯಲ್ಲಿ ಮಸೀದ್​ಗಳ ಶೈಲಿಯಲ್ಲಿ ಕಟ್ಟಡಗಳನ್ನ ನಿರ್ಮಾಣ ಮಾಡ್ತೀದ್ದಾರೆ ಅಂತಾ ಚಿಂತಕ ಚಕ್ರವರ್ತಿ ಸೂಲಿಬೆಲೆ ಈ ಕಟ್ಟಡದ ಶೈಲಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಿರಾಳಕೊಪ್ಪ: 2ನೇ ವಿವಾಹವಾದ ನಿವೃತ್ತ ಪೊಲೀಸ್​​ ತಂದೆಯನ್ನು ಮಕ್ಕಳೇ ಸುಪಾರಿ ಕೊಟ್ಟು ಸಾಯಿಸಿದರು! ಅಂಥಾ ಕಾರಣವೇನಿತ್ತು?

ಕಲಬುರಗಿಯಲ್ಲೂ ಗುಂಬಜ್ ವಿವಾದ

ಕಲಬುರಗಿ; ಈ ಬಾರಿ ರೈಲ್ವೆ ನಿಲ್ದಾಣಕ್ಕೆ ಹಸಿರು ಬಣ್ಣ ಬಳಿದಿರೋದು ವಿವಾದದ ಸ್ವರೂಪ ಪಡೆದಿದೆ. ರೈಲ್ವೆ ನಿಲ್ದಾಣದ ಹೊರಗೋಡೆಗೆ ಹಸಿರು ಬಣ್ಣ ಬಳಿದಿರೋದು ಹಿಂದುಪರ ಸಂಘಟನೆಗಳ ಕಿಡಿಗೆ ಕಾರಣವಾಗಿದೆ. ಕಲಬುರಗಿ ನಗರದಲ್ಲಿರುವ ರೈಲ್ವೆ ನಿಲ್ದಾಣಕ್ಕೆ, ರೈಲ್ವೆ ಇಲಾಖೆಯಿಂದ ಬಣ್ಣ ಬಳೆಯುವ ಕೆಲಸ ಕೆಲ ದಿನಗಳಿಂದ ನಡೆಯುತ್ತಿದೆ. ಈ ಹಿಂದೆ ರೈಲ್ವೆ ನಿಲ್ದಾಣಕ್ಕೆ ಬಿಳಿ ಬಣ್ಣ ಬಳಿಯಲಾಗಿತ್ತು. ಆದರೆ ಇದೀಗ ರೈಲ್ವೆ ಇಲಾಖೆ ವತಿಯಿಂದ ನಡೆಯುತ್ತಿರುವ ಬಣ್ಣ ಹಚ್ಚುವ ಕೆಲಸ, ತೀರ್ವವಾಗಿ ನಡೆಯುತ್ತಿದ್ದು, ಇಡೀ ರೈಲ್ವೆ ನಿಲ್ದಾಣದ ಪ್ರತಿಯೊಂದು ಗೋಡೆಗೂ ಬಣ್ಣ ಬಳೆಯಲಾಗುತ್ತಿದೆ. ಆದರೆ ಹೊರಗೋಡೆಗೆ ಹಸಿರು ಬಣ್ಣ ಬಳಿದಿರೋದು ಹಿಂದು ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮಸೀದಿಯಂತೆ ಕಾಣುತ್ತಿದೆ ಅಂತಿರೋ ಹಿಂದು ಮುಖಂಡರು

ಕಲಬುರಗಿ ರೈಲ್ವೆ ನಿಲ್ದಾಣದ ಹೊರಗೋಡೆಗೆ ಹಸಿರು ಬಣ್ಣ ಬಳಿದಿರೋದರಿಂದ, ಅದು ಮಸೀದಿ ರೀತಿ ಕಾಣುತ್ತಿದೆ. ಕೂಡಲೇ ಬಣ್ಣವನ್ನು ಬದಲಾಯಿಸಬೇಕು ಅಂತ ಹಿಂದು ಜಾಗೃತಿ ಸೇನೆಯ ಅಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ ಆಗ್ರಹಿಸಿದ್ದಾರೆ. ಇಂದು ಪ್ರತಿಭಟನೆ ಕೂಡಾ ನಡೆಸಲಿರೋ ಮುಖಂಡರು, ರೈಲ್ವೆ ಇಲಾಖೆಗೆ ಬಣ್ಣ ಬದಲಿಸುವಂತೆ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲು ಮುಂದಾಗಿದ್ದಾರೆ. ಆದರೆ ರೈಲ್ವೆ ಇಲಾಖೆಯ ಅಧಿಕಾರಿಗಳು ಮಾತ್ರ ಇನ್ನು ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲಾ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:12 am, Tue, 13 December 22

Loading...
Unable to load recommendations.
Follow Us