ಬೆಂಗಳೂರು: ಸಸ್ಯಾಹಾರಿ ಮಗನಿಗೆ ಚಿಕನ್ ಬರ್ಗರ್ ನೀಡಿದ ಹೊಟೇಲ್; ಪಾವತಿಸಿದ ಹಣ ವಾಪಸ್ ಪಡೆದ ತಂದೆ

ಮಗ ಆರ್ಡರ್ ಮಾಡಿದ್ದು ಸಸ್ಯಾಹಾರ ಬರ್ಗರ್. ಆದರೆ ಹೊಟೇಲ್ ಸಿಬ್ಬಂದಿ ನೀಡಿದ್ದು ಚಿಕನ್ ಬರ್ಗರ್. ಇದರಿಂದ ಮನನೊಂದ ಯುವಕನ ತಂದೆ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಆಯೋಗವು, ರೂಮ್ ಬಾಡಿಗೆ, ಆಹಾರ ಇತ್ಯಾದಿಗಳಿಗೆ ಪಾವತಿಸಿದ ಒಟ್ಟು 15 ಸಾವಿರ ರೂಪಾಯಿಯನ್ನು ದೂರುದಾರರಿಗೆ ನೀಡುವಂತೆ ಹೊಟೇಲ್​ಗೆ ಆದೇಶ ಹೊರಡಿಸಿದೆ.

ಬೆಂಗಳೂರು: ಸಸ್ಯಾಹಾರಿ ಮಗನಿಗೆ ಚಿಕನ್ ಬರ್ಗರ್ ನೀಡಿದ ಹೊಟೇಲ್; ಪಾವತಿಸಿದ ಹಣ ವಾಪಸ್ ಪಡೆದ ತಂದೆ
ಮಗನಿಗೆ ಸಸ್ಯಾಹಾರಿ ಎಂದು ಚಿಕನ್ ಬರ್ಗರ್ ನೀಡಿದ ಹೊಟೇಲ್​ಗೆ ಪಾವತಿಸಿದ ಹಣವನ್ನು ಗ್ರಾಹಕರ ಆಯೋಗದ ಮೂಲಕ ವಾಪಸ್ ಪಡೆದ ತಂದೆ
Rakesh Nayak Manchi

Updated on: Sep 03, 2023 | 5:00 PM

ಬೆಂಗಳೂರು, ಸೆ.3: ಸಸ್ಯಾಹಾರ ಎಂದು ಮಗನಿಗೆ ಚಿಕನ್ ಬರ್ಗರ್ (Chicken Burger) ನೀಡಿದ ಹೊಟೇಲ್ ವಿರುದ್ಧ ವ್ಯಕ್ತಿಯೊಬ್ಬರು ಗ್ರಾಹಕರ ಆಯೋಗಕ್ಕೆ (Consumer Commission) ದೂರು ನೀಡಿದ್ದರು. ವಿಚಾರಣೆ ನಡೆಸಿದ ಆಯೋಗವು, ದೂರುದಾರರು ರೂಮ್ ಬಾಡಿಗೆ, ಆಹಾರ ಇತ್ಯಾದಿಗಳಿಗೆ  ಪಾವತಿಸಿದ ಒಟ್ಟು 15 ಸಾವಿರ ರೂಪಾಯಿಯನ್ನು ವಾಪಸ್ ನೀಡುವಂತೆ ಹೋಟೆಲ್ ಹರ್ಷ ದಿ ಫರ್ನ್ ಹೊಟೇಲ್​ಗೆ ಆದೇಶಿಸಿದೆ.

ಬೆಂಗಳೂರಿನ ದೊಡ್ಡಬಳ್ಳಾಪುರ ರಸ್ತೆಯಲ್ಲಿ ವಾಸವಾಗಿರುವ 62 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಅಧ್ಯಕ್ಷ ಶಿವರಾಮ ಕೆ, ಸದಸ್ಯರಾದ ಚಂದ್ರಶೇಖರ ಎಸ್ ನೂಲಾ ಮತ್ತು ರೇಖಾ ಸಾಯಣ್ಣವರ್ ಅವರನ್ನೊಳಗೊಂಡ ಮೂರನೇ ಹೆಚ್ಚುವರಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಈ ಆದೇಶ ನೀಡಿದೆ.

ದೂರುದಾರರು ಶುದ್ಧ ಸಸ್ಯಾಹಾರಿ ಆಹಾರ ಪದ್ಧತಿಗೆ ಅನುಸರಿಸುತ್ತಿದ್ದಾರೆ. ಇವರಿಗೆ ಮಾಂಸಾಹಾರಿ ಆಹಾರವನ್ನು ನೀಡುವ ಮೂಲಕ ಧಾರ್ಮಿಕ ಭಾವನೆಗಳು, ಆಚರಣೆಗಳು ಮತ್ತು ದೀರ್ಘಕಾಲದ ಪವಿತ್ರ ಸಂಪ್ರದಾಯಕ್ಕೆ ಧಕ್ಕೆ ತರಲಾಗಿದೆ. ಅಲ್ಲದೆ, ಯಾತನೆಯನ್ನು ಉಂಟುಮಾಡಿದೆ ಎಂದು ಆಯೋಗವು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಧಾರವಾಡ: ಸಿಮ್ ಸಕ್ರಿಯಗೊಳಿಸಲು ಜಿಯೋ ಕಂಪನಿಗೆ ನಿರ್ದೇಶನ ನೀಡಿದ ಗ್ರಾಹಕರ ಆಯೋಗ

ಸಂಬಂಧಿಕರೊಬ್ಬರ ಅಗಲಿಕೆಯ ಸಮಾರಂಭದಲ್ಲಿ ಭಾಗವಹಿಸಲು ಬೆಂಗಳೂರಿನ ದೊಡ್ಡಬಳ್ಳಾಪುರ ರಸ್ತೆ ಬಳಿಯ ನಿವಾಸಿ ದೂರುದಾರರು ಸೇರಿದಂತೆ ಮೂವರು,  2023 ರ ಫೆಬ್ರವರಿ 5 ರಂದು ಶಿವಮೊಗ್ಗಕ್ಕೆ ಆಗಮಿಸಿದ್ದರು. ಅಲ್ಲದೆ, ಕಾರ್ಯಕ್ರಮ ಮುಕ್ತಾಯದ ವರೆಗೆ ತಂಗಲು ಫೆ.5ರಿಂದ ಫೆ.8ರ ವರೆಗೆ ಹೋಟೆಲ್ ಹರ್ಷ ದಿ ಫರ್ನ್​​​ನಲ್ಲಿ ರೂಮ್ ಬುಕ್ ಮಾಡಿದ್ದರು.

ಇವರು ತಂಗಿದ್ದ ರೂಮ್​ನಲ್ಲಿದ್ದ ಮಂಚ-ಹಾಸಿಗೆ ಸರಿಯಿರಲಿಲ್ಲ. ಇದರಿಂದಾಗಿ ದೂರುದಾರರಿಗೆ ಬೆನ್ನು ನೋವು ಉಂಟಾಗಿದೆ. ಅಲ್ಲದೆ, ಕಡಲೆಕಾಯಿ, ಸಸ್ಯಾಹಾರಿ ಬರ್ಗರ್ ಮತ್ತು ಸ್ಯಾಂಡ್ವಿಚ್ ಅನ್ನು ಆರ್ಡರ್ ಮಾಡಲಾಗಿತ್ತು. ಅದರಂತೆ, ದೂರುದಾರನ ಮಗ ಸಸ್ಯಾಹಾರಿ ಎಂದು ತಿಂದ ಬರ್ಗರ್ ಚಿಕನ್ ಬರ್ಗರ್ ಆಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಘಟನೆಯು ತನ್ನ ಮಗನಿಗೆ ತೀವ್ರ ಆಘಾತ ಪಶ್ಚಾತ್ತಾಪ, ಖಿನ್ನತೆ ಮತ್ತು ಅಪರಾಧವನ್ನು ಉಂಟುಮಾಡಿತು. ಅವರು ತೀವ್ರವಾದ ಜೀರ್ಣಕಾರಿ ಸಮಸ್ಯೆಗಳು ಮತ್ತು ಹೊಟ್ಟೆಯ ಕಾಯಿಲೆಗಳಿಂದ ಬಳಲಿದ್ದಾರೆ. ಹೀಗಾಗಿ ಪರಿಹಾರ ನೀಡುವಂತೆ ದೂರಿನಲ್ಲಿ ಮನವಿ ಮಾಡಿದ್ದರು. ದೂರು ದಾಖಲಾದ ನಂತರ ಆಯೋಗದಿಂದ ಹೋಟೆಲ್‌ಗೆ ನೋಟಿಸ್ ಜಾರಿ ಮಾಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:52 pm, Sun, 3 September 23

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us