ನಾಲ್ವರು ಹೆಂಡಿರ ಮುದ್ದಿನ ಗಂಡ! ನಾಲ್ಕನೇ ಪತ್ನಿಗಾಗಿ 3ನೇ ಪತ್ನಿಯ ಚಿನ್ನ ಕದ್ದವನಿಗೆ ಮಗನಿಂದಲೇ ಬಿತ್ತು ಗೂಸಾ

ಚಿತ್ರ ವಿಚಿತ್ರ ಅಪರಾಧ ಪ್ರಕರಣಗಳು ಆಗಾಗ ವರದಿಯಾಗುತ್ತಿರುವುದು ಸಾಮಾನ್ಯ. ಆದರೆ, ನೆಲಮಂಗಲದಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಕಾನೂನು ಬಾಹಿರವಾಗಿ ನಾಲ್ಕು ಮದುವೆಯಾಗಿ ನಾಲ್ಕನೇ ಪತ್ನಿಗೆ ಕೊಡಲೆಂದು ಮೂರನೇ ಪತ್ನಿಯ ಚಿನ್ನ ಕದ್ದು ಕೊನೆಗೆ ಮಗನಿಂದಲೇ ಏಟು ತಿಂದಿದ್ದಾನೆ. ಈ ಬಗ್ಗೆ ‘ಟಿವಿ9’ ಎಕ್ಸ್​ಕ್ಲೂಸಿವ್ ವರದಿ ಇಲ್ಲಿದೆ.

ನೆಲಮಂಗಲ, ಜೂನ್ 21: ಅಬ್ಬಬ್ಬಾ ಎಂದರೆ ವ್ಯಕ್ತಿಯೊಬ್ಬ ಎಷ್ಟು ಮದುವೆಯಾಗಬಹುದು? ಒಂದು, ಎರಡು… ಅಲ್ಲ ಮೂರು? ಅಲ್ಲವೇ ಅಲ್ಲ. ಇಲ್ಲೊಬ್ಬ ವ್ಯಕ್ತಿ ಕಾನೂನುಬಾಹಿರವಾಗಿ ನಾಲ್ಕು (Marriage) ಮದುವೆಯಾಗಿದ್ದಾನೆ. ನಾಲ್ವರು ಹೆಂಡತಿಯರಿಗೂ ಮಕ್ಕಳನ್ನೂ ಕರುಣಿಸಿದ್ದಾನೆ. ಅಷ್ಟೇ ಏಕೆ, ನಾಲ್ಕನೇ ಹೆಂಡತಿಗೆ ಕೊಡಲೆಂದು ಮೂರನೇ ಹೆಂಡತಿಯ ಚಿನ್ನ ಕದ್ದು (Gold Theft) ಇದೀಗ ಆಕೆಯಿಂದ ಪಡೆದ ಮಗನಿಂದಲೇ ಏಟು ತಿಂದಿದ್ದಾನೆ. ಈ ಘಟನೆ ನಡೆದಿರುವುದು ಬೆಂಗಳೂರು ಉತ್ತರ ತಾಲೂಕಿನ ದೊಡ್ಡಬಿದರಕಲ್ಲು ಗ್ರಾಮದಲ್ಲಿ.

ದೊಡ್ಡಬಿದರಕಲ್ಲು ಗ್ರಾಮದ ಭಕ್ತವತ್ಸಲ ಎಂಬ ವ್ಯಕ್ತಿಗೆ ನಾಲ್ಕು ಮದುವೆಯಾಗಿದೆ. ಮೊದಲ ಪತ್ನಿ ಕವಿತ, ಎರಡನೇ ಪತ್ನಿ ಸಾವಿತ್ರಿ, ಮೂರನೇ ಪತ್ನಿ ನಾಗರತ್ನಮ್ಮ. ನಾಲ್ಕನೇ ಪತ್ನಿಯ ಹೆಸರು ಪದ್ಮಾವತಿ. ಈ ಭಕ್ತವತ್ಸಲ ತನ್ನ 3ನೇ ಪತ್ನಿ ನಾಗರತ್ನಮ್ಮ ಮನೆಯಲ್ಲಿದ್ದ 50 ಗ್ರಾಂಗೂ ಹೆಚ್ಚು ಚಿನ್ನಾಭರಣ ಕದ್ದು ನಾಲ್ಕನೇ ಪತ್ನಿ ಪದ್ಮಾವತಿಗೆ ಕೊಟ್ಟಿದ್ದಾನೆ. ಈ ವಿಚಾರ ಮೂರನೇ ಪತ್ನಿಯ ಮಗ 18 ವರ್ಷದ ಜೀವನ್​ಗೆ ಗೊತ್ತಾಗಿದೆ. ಇದರಿಂದ ಸಿಟ್ಟಾದ ಜೀವನ್ ಸೀದಾ ಪದ್ಮಾವತಿ ಮನೆಗೆ ತೆರಳಿದ್ದಾನೆ. ಈ ವೇಳೆ ಅಲ್ಲೇ ಮಲಗಿದ್ದ ಭಕ್ತವತ್ಸಲ ಮೇಲೆ ದಾಳಿ ನಡೆಸಿದ್ದಾನೆ.

ಇದನ್ನೂ ಓದಿ: ಅತ್ತಿಗೆ ಮೇಲಿನ ಕೋಪಕ್ಕೆ 3 ವರ್ಷದ ಮಗುವಿನ ಕತ್ತು ಸೀಳಿ ಕೊಲೆ: ಸತ್ಯ ಬಾಯ್ಬಿಟ್ಟ ಆರೋಪಿ

ಸರ್ಕಾರಿ ನೌಕರ ಭಕ್ತವತ್ಸಲನಿಗಾಗಿ ಪತ್ನಿಯರ ಫೈಟ್

ನಾಲ್ಕು ಮದುವೆಯಾಗಿರುವ ಭಕ್ತವತ್ಸಲ ‘ಕೃಷ್ಣ ಭಾಗ್ಯ ಜಲ ನಿಗಮ’ದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದಾನೆ. ಈಗಾಗಲೇ ಮದುವೆಯಾಗಿರುವ ಯಾರೊಬ್ಬರಿಗೂ ವಿಚ್ಛೇದನ ಕೊಡದೇ ನಾಲ್ಕು ಮದುವೆಯಾಗಿದ್ದಾನೆ. ಈ ನಾಲ್ವರು ಪತ್ನಿಯರಿಂದ ಒಟ್ಟಾಗಿ ಆತನಿಗೆ 6 ಮಕ್ಕಳಿದ್ದಾರೆ.

ನಾಲ್ಕನೇ ಪತ್ನಿ ಪದ್ಮಾವತಿ ಜತೆ ಭಕ್ತವತ್ಸಲ

ಸದ್ಯ ಮೂರನೇ ಪತ್ನಿ ನಾಗರತ್ನಮ್ಮ ಹಾಗೇ ನಾಲ್ಕನೇ ಪತ್ನಿ ಪದ್ಮಾವತಿ ಇಬ್ಬರೂ ಕೂಡ ಗಂಡ ಬೇಕು ಎಂದು ಪಟ್ಟುಹಿಡಿದಿದ್ದಾರೆ. ಘಟನೆ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:47 pm, Fri, 21 June 24

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More
Follow Us