
ಬೆಂಗಳೂರು, ಅಕ್ಟೋಬರ್ 23: ಬೆಂಗಳೂರಿನಿಂದ ಮುಂಬೈಗೆ ತೆರಳುವ ಪ್ರಯಾಣಿಕರಿಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬೆಂಗಳೂರಿನಿಂದ (Bengaluru) ಹುಬ್ಬಳ್ಳಿ-ಧಾರವಾಡ ಮಾರ್ಗವಾಗಿ ಸಂಚರಿಸಲಿರುವ ಸೂಪರ್ ಫಾಸ್ಟ್ ರೈಲಿಗೆ ಅನುಮೋದನೆ ಸಿಕ್ಕಿದ್ದು, ಈ ಬಗ್ಗೆ ಸ್ವತಃ ಸಚಿವರೇ ಮಾಹಿತಿ ಹಂಚಿಕೊಂಡಿದ್ದಾರೆ. ಕೇಂದ್ರ ಸಚಿವ, ಸಂಸದ ಪ್ರಹ್ಲಾದ್ ಜೋಶಿಯವರು ಅಕ್ಟೋಬರ್ 16, 2025ರಂದು ಸಲ್ಲಿಸಿದ್ದ ಮನವಿಯನ್ನ ಉಲ್ಲೇಖಿಸಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ಈ ಮುಂಚೆ ಬೆಂಗಳೂರು-ಮುಂಬಯಿ ಮಧ್ಯೆ ಸಂಪರ್ಕ ಕಲ್ಪಿಸಲು ಉದ್ಯಾನ ಎಕ್ಸ್ ಪ್ರೆಸ್ ಮಾತ್ರ ಸಂಚಾರ ನಡೆಸುತ್ತಿತ್ತು. ಅದು ಬೆಂಗಳೂರಿನಿಂದ ಗುಂಟಕಲ್ – ಸೊಲ್ಲಾಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರಣ, ಬೆಂಗಳೂರು-ಮುಂಬಯಿ ನಗರಗಳನ್ನು ಸಂಪರ್ಕಿಸುವ ಇನ್ನೊಂದು ಸೂಪರ್ ಫಾಸ್ಟ್ ರೈಲನ್ನು ಕರ್ನಾಟಕದ ಮಧ್ಯಭಾಗದಿಂದ ಓಡಿಸಬೇಕು ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪ್ರಹ್ಲಾದ್ ಜೋಶಿ ಮನವಿ ಮಾಡಿದ್ದರು. ಅವರಿಗೆ ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ , ತೇಜಸ್ವಿ ಸೂರ್ಯ ಸಾಥ್ ಕೊಟ್ಟಿದ್ದರು. ಮನವಿಗೆ ಸ್ಪಂದಿಸಿದ ರೈಲ್ವೇ ಸಚಿವರು, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಾರ್ಗವಾಗಿ ಸಂಚರಿಸುವ ಬೆಂಗಳೂರು ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಒಪ್ಪಿಗೆ ಸೂಚಿಸಿದ್ದು, ಅದಕ್ಕೀಗ ಅನುಮೋದನೆಯೂ ಸಿಕ್ಕಿದೆ.
ಇದನ್ನೂ ಓದಿ: ರೈಲಿನ ಶೌಚಾಲಯದಲ್ಲಿ 6 ಗಂಟೆಗಳ ಕಾಲ ಲಾಕ್ ಆದ ಪ್ರಯಾಣಿಕ, ಮುಂದೆ ಆಗಿದ್ದೇ ಬೇರೆ
ನಮ್ಮ ಹುಬ್ಬಳ್ಳಿ-ಧಾರವಾಡ ಮೂಲಕ ಸಂಚರಿಸುವ ಬೆಂಗಳೂರು- ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಅನುಮೋದನೆ ಪತ್ರವನ್ನು ನೀಡಿದ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ @AshwiniVaishnaw ಅವರಿಗೆ ಅನಂತ ಧನ್ಯವಾದಗಳು.
ನಮ್ಮ ಬಹುದಿನದ ಬೇಡಿಕೆಯಾಗಿದ್ದ ಈ ರೈಲಿಗಾಗಿ ನಾನು ಕೇಂದ್ರ ರೇಲ್ವೆ ಸಚಿವರಿಗೆ ವಿನಂತಿಸಿದ್ದೆ. ಈ ಸೂಪರ್ ಫಾಸ್ಟ್… pic.twitter.com/1RbfUDxAvz
— Pralhad Joshi (@JoshiPralhad) October 23, 2025
ಹುಬ್ಬಳ್ಳಿ-ಧಾರವಾಡ ಮೂಲಕ ಸಂಚರಿಸುವ ಬೆಂಗಳೂರು- ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಅನುಮೋದನೆ ನೀಡಿರುವ ರೈಲ್ವೇ ಸಚಿವರಿಗೆ ಪ್ರಹ್ಲಾದ್ ಜೋಶಿ ಧನ್ಯವಾದ ತಿಳಿಸಿದ್ದಾರೆ. ನಮ್ಮ ಬಹುದಿನದ ಬೇಡಿಕೆಯಾಗಿದ್ದ ಈ ರೈಲಿಗಾಗಿ ನಾನು ಕೇಂದ್ರ ರೇಲ್ವೆ ಸಚಿವರಿಗೆ ವಿನಂತಿಸಿದ್ದೆ. ಲಕ್ಷಾಂತರ ಜನರಿಗೆ ಈ ರೈಲು ಸಂಚಾರದಿಂದ ಅನುಕೂಲವಾಗಲಿದೆ ಹಾಗೂ ವ್ಯಾಪಾರ ವಹಿವಾಟು ಮತ್ತಷ್ಟು ವೃದ್ಧಿಯಾಗಲಿದೆ ಎಂದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.