ಬೆಂಗಳೂರು ಏರ್​ಪೋರ್ಟ್​ನಿಂದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ: ಕಾರಣ ಇಲ್ಲಿದೆ

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಥರ್ಡ್ ಪಾರ್ಟಿ ಸಿಸ್ಟಂ’ ದೋಷದಿಂದ ಚೆಕ್-ಇನ್ ವ್ಯತ್ಯಯ ಉಂಟಾಗಿ ಇಂಡಿಗೋ, ಏರ್ ಇಂಡಿಯಾ ಸೇರಿದಂತೆ ಹಲವು ಏರ್‌ಲೈನ್ಸ್‌ಗಳ 58ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ. ವ್ಯವಸ್ಥೆ ಪುನಃಸ್ಥಾಪನೆ ನಡೆಯುತ್ತಿದ್ದು, ಪ್ರಯಾಣಿಕರು ನಿಲ್ದಾಣಕ್ಕೆ ಹೊರಡುವ ಮುನ್ನ ವಿಮಾನ ಸ್ಥಿತಿ ಪರಿಶೀಲಿಸಿಕೊಳ್ಳುವಂತೆ ಏರ್​ಲೈನ್ಸ್​​ಗಳು ಮನವಿ ಮಾಡಿವೆ.

ಬೆಂಗಳೂರು ಏರ್​ಪೋರ್ಟ್​ನಿಂದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ: ಕಾರಣ ಇಲ್ಲಿದೆ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)

Updated on: Dec 03, 2025 | 7:33 AM

ಬೆಂಗಳೂರು, ಡಿಸೆಂಬರ್ 3: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಮಂಗಳವಾರ ಸಂಚಾರ ಮಾಡಬೇಕಿದ್ದ ಮತ್ತು ಬುಧವಾರ ಹೊರಡಲಿರುವ ಸುಮಾರು 58 ವಿಮಾನಗಳು ವಿಳಂಬವಾಗಿ ಸಂಚರಿಸುತ್ತಿವೆ ಎಂದು ವಿಮಾನ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಕೈಸ್ಕ್ಯಾನರ್ ತಿಳಿಸಿದೆ. ಈ ಪೈಕಿ, ಮಂಗಳವಾರ ಸುಮಾರು 29 ವಿಮಾನಗಳು ವಿಳಂಬವಾಗಿ ಹಾರಾಟ ನಡೆಸಿವೆ. ಅದರಲ್ಲೂ ಇಂಡಿಗೋ ಏರ್​ಲೈನ್ಸ್​ನ ಹೆಚ್ಚಿನ ವಿಮಾನಗಳು ವಿಳಂಬವಾಗಿವೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಮೂಲಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯ ಕಾರಣಗಳಿಂದ ಈ ವಿಳಂಬವಾಗಿದೆ. ವಿಮಾನ ನಿಲ್ದಾಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

ವಿಮಾನ ಸಂಚಾರ ವಿಳಂಬಕ್ಕೆ ಕಾರಣವೇನು?

ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯನ್ನು ನಿರ್ವಹಿಸುವ ‘ಥರ್ಡ್ ಪಾರ್ಟಿ ಸಿಸ್ಟಂ’ನಲ್ಲಿ ಉಂಟಾದ ಅಡಚಣೆಯಿಂದಾಗಿ ಚೆಕ್-ಇನ್ ಮೇಲೆ ಪರಿಣಾಮವಾಗುತ್ತಿದೆ. ಇದರ ಪರಿಣಾಮವಾಗಿ ಏರ್ ಇಂಡಿಯಾ ಸೇರಿದಂತೆ ಹಲವಾರು ಏರ್​ಲೈನ್ಸ್​​ಗಳ ಕಾರ್ಯಾಚರಣೆಯಲ್ಲಿ ವಿಳಂಬವಾಗುತ್ತಿದೆ.

ಪ್ರಯಾಣಿಕರಿಗೆ ಸುಗಮ ಚೆಕ್-ಇನ್ ಮಾಡಿಕೊಡುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ತಂಡಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಿವೆ. ವ್ಯವಸ್ಥೆಯನ್ನು ಹಂತಹಂತವಾಗಿ ಪುನಃಸ್ಥಾಪಿಸಲಾಗುತ್ತಿದ್ದರೂ, ಪರಿಸ್ಥಿತಿ ಸಂಪೂರ್ಣವಾಗಿ ಮೊದಲಿನ ಸ್ಥಿತಿಗೆ ಬರುವ ವರೆಗೆ ನಮ್ಮ ಕೆಲವು ವಿಮಾನಗಳು ವಿಳಂಬವಾಗಿ ಸಂಚರಿಸಬಹುದು ಎಂದು ಏರ್ ಇಂಡಿಯಾ ಎಕ್ಸ್‌ ಹೇಳಿಕೆಯಲ್ಲಿ ತಿಳಿಸಿದೆ. ಏರ್ ಇಂಡಿಯಾದ 6 ವಿಮಾನಗಳು ಈಗಾಗಲೇ ವಿಳಂಬವಾಗಿ ಸಂಚರಿಸಿವೆ.

ಏರ್ ಇಂಡಿಯಾ ಎಕ್ಸ್ ಸಂದೇಶ


ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ತಾವು ಪ್ರಯಾಣಿಸಲಿರುವ ವಿಮಾನದ ಸ್ಥಿತಿಗತಿ ಪರಿಶೀಲಿಸಿಕೊಂಡು ಹೊರಡುವಂತೆ ಪ್ರಯಾಣಿಕರಿಗೆ ಏರ್ ಇಂಡಿಯಾ ಮನವಿ ಮಾಡಿದೆ.

ಇದನ್ನೂ ಓದಿ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಹೊಸ ರೂಲ್ಸ್​: ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ರೆ ದಂಡ ಫಿಕ್ಸ್​​

ಸ್ಟಾರ್ ಏರ್, ಸ್ಪೈಸ್‌ಜೆಟ್,ಅಕಾಸಾ ಏರ್, ಸಿಂಗಾಪುರ್ ಏರ್‌ಲೈನ್ಸ್, ಬಾಟಿಕ್ ಏರ್ ಮಲೇಷ್ಯಾ, ಏರ್ ಫ್ರಾನ್ಸ್, ಲುಫ್ಥಾನ್ಸ, ವರ್ಜಿನ್ ಅಟ್ಲಾಂಟಿಕ್ ಮತ್ತು ಕುವೈತ್ ಏರ್‌ವೇ ಗಳ ಕೆಲ ವಿಮಾನಗಳು ಕೂಡ ವಿಳಂಬವಾಗಿ ಸಂಚರಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us