ಮತ್ತೊಂದು ಆಟ ಕಟ್ಟಿದ ಕೊರೊನಾ: ಆನೇಕಲ್​ ಶಾಲೆಯಲ್ಲೇ ವಿದ್ಯಾರ್ಥಿಗಳಿಗೆ ಕ್ವಾರಂಟೈನ್, ಧಾರವಾಡ ಕಾಲೇಜಿನಲ್ಲಿ ಉಲ್ಬಣ, ಮದುವೆಗೆ ಕಂಟಕ

ನಗರದ ಸರ್ಜಾಪುರ ರಸ್ತೆಯಲ್ಲಿರುವ ದೊಡ್ಡಸಂದ್ರದ ಖಾಸಗಿ ಶಾಲೆಯಲ್ಲಿ 37 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 13 ರಿಂದ 15 ವರ್ಷದ 33 ವಿದ್ಯಾರ್ಥಿಗಳು, ನಾಲ್ವರು ಶಾಲಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಮತ್ತೊಂದು ಆಟ ಕಟ್ಟಿದ ಕೊರೊನಾ: ಆನೇಕಲ್​ ಶಾಲೆಯಲ್ಲೇ ವಿದ್ಯಾರ್ಥಿಗಳಿಗೆ ಕ್ವಾರಂಟೈನ್, ಧಾರವಾಡ ಕಾಲೇಜಿನಲ್ಲಿ ಉಲ್ಬಣ, ಮದುವೆಗೆ ಕಂಟಕ
ಸಾಂದರ್ಭಿಕ ಚಿತ್ರ
Edited By: ಆಯೇಷಾ ಬಾನು

Updated on: Nov 26, 2021 | 1:25 PM

ಬೆಂಗಳೂರು: ಮಹಾಮಾರಿ ಕೊರೊನಾ ಮತ್ತೆ ತನ್ನ ಆಟ ಶುರು ಮಾಡಿದೆ. ನಿನ್ನೆ ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈಗ ಬೆಂಗಳೂರಿನ ಮಹದೇವಪುರ ವಲಯದ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ನಗರದ ಸರ್ಜಾಪುರ ರಸ್ತೆಯಲ್ಲಿರುವ ದೊಮ್ಮಸಂದ್ರದ ಇಂಟರ್ ನ್ಯಾಷನಲ್ ಬೆಂಗಳೂರು ಬೋರ್ಡಿಂಗ್ ಖಾಸಗಿ ಶಾಲೆಯಲ್ಲಿ 37 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 13 ರಿಂದ 15 ವರ್ಷದ 33 ವಿದ್ಯಾರ್ಥಿಗಳು, ನಾಲ್ವರು ಶಾಲಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸುಮಾರು 300 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡ್ತಿದ್ದಾರೆ. ಈ ಪೈಕಿ 282 ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ವಾಸವಾಗಿದ್ದಾರೆ. ಶಾಲೆಯಲ್ಲೇ ಎಲ್ಲಾ ವಿದ್ಯಾರ್ಥಿಗಳನ್ನ ಕ್ವಾರಂಟೈನ್ ಮಾಡಲಾಗಿದೆ. ಸ್ಥಳಕ್ಕೆ DHO ಶ್ರೀನಿವಾಸ್ ಮತ್ತು THO ವಿನಯ್ ಶಾಲೆಗೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಶಾಲಾ ಆಡಳಿತ ಮಂಡಳಿಯು ಕೊರೊನಾ ನಿಯಮಾವಳಿಗಳಂತೆ ಮಾರ್ಗಸೂಚಿ ಜಾರಿ ಮಾಡಿದೆ.

ಎಸ್​ಡಿಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಪೋಷಕರಲ್ಲಿ ಹೆಚ್ಚಾಯ್ತು ಆತಂಕ
ಇನ್ನು ಮತ್ತೊಂದೆಡೆ ಧಾರವಾಡದ ಎಸ್‌ಡಿಎಂ ಮೆಡಿಕಲ್ ಕಾಲೇಜಿನ 182 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ನಿನ್ನೆ 66 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ನಿನ್ನೆ 690 ಜನರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗಿತ್ತು. ಈ ಪೈಕಿ ಮತ್ತೆ 116 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸದ್ಯ ಜಿಲ್ಲಾಡಳಿತ ಹಾಸ್ಟೆಲ್‌ ಸೀಲ್‌ಡೌನ್ ಮಾಡಿದೆ.

ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ಸಂಖ್ಯೆ ಹೆಚ್ಚಾದ ಹಿನ್ನೆಲೆ ಪಾಲಕರಿಗೂ ಸಂಕಷ್ಟ ಎದುರಾಗಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ‌ ವಿದ್ಯಾರ್ಥಿಗಳ ಪಾಲಕರಿಗೆ ಕೊವಿಡ್ ಟೆಸ್ಟ್‌ ಮಾಡಿಸುವಂತೆ ಸೂಚನೆ ನೀಡಿದ್ದಾರೆ. ನ. 17ರಂದು ವಿದ್ಯಾರ್ಥಿಗಳ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಲ್ಲೇ ಕೊರೊನಾ ಪತ್ತೆಯಾಗಿದೆ. ಅದರಲ್ಲೂ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಪಾಲಕರು ಬಂದಿದ್ದ ಆತಂಕ ಹೆಚ್ಚಾಗಿದೆ. ಹೀಗಾಗಿ ಸದ್ಯ ಪಾಲಕರು ತಪಾಸಣೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಮದುವೆಗೆ ಕಂಟಕವಾದ ಕೊರೊನಾ
ನ‌. 17ರಂದು ಸಭಾಭವನದಲ್ಲಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಸಮಾರಂಭವಿತ್ತು. ಅದೇ ಸಭಾ ಭವನದಲ್ಲಿ ನ. 19ರಂದು ಅದ್ದೂರಿ ಮದುವೆ ಕೂಡ ನಡೆದಿದೆ. ಸದ್ಯ ಮದುವೆಗೆ ಬಂದವರ ಪತ್ತೆಗಾಗಿ ಜಿಲ್ಲಾಡಳಿತ ಹರ ಸಾಹಸ ಪಡುತ್ತಿದೆ. ಮದುವೆ ಮನೆಯವರನ್ನೂ ತಪಾಸಣೆ ಮಾಡಲು ನಿರ್ಧಾರ ಮಾಡಿದೆ.

ಧಾರವಾಡ SDM ಕಾಲೇಜಿನಲ್ಲಿ ಕೊರೊನಾ ಸ್ಫೋಟ ಹಿನ್ನೆಲೆ ಕಾಲೇಜು ಸುತ್ತಮುತ್ತಲಿನ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಶಾಲಾ-ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಕಾಲೇಜಿನಲ್ಲಿ 182 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈಗಾಗಲೆ 1,500 ಜನರಿಗೆ ಕೊರೊನಾ ಟೆಸ್ಟ್​ ಮಾಡಿದ್ದೇವೆ. ನಾಳೆಯೊಳಗೆ ಎಲ್ಲರದ್ದು ಕೊರೊನಾ ಟೆಸ್ಟ್​ ಮಾಡುತ್ತೇವೆ. ಎಲ್ಲರ ಪರೀಕ್ಷಾ ವರದಿ ಬರುವವರೆಗೂ ಕಾಲೇಜಿಗೆ ಜನರ ಭೇಟಿ ನಿರ್ಬಂಧಿಸಲು ಸೂಚಿಸಿದ್ದೇವೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್ ಮಾಹಿತಿ ನೀಡಿದ್ದಾರೆ.

ಇನ್ನು SDM ಕಾಲೇಜಿನಲ್ಲಿ ಕೊರೊನಾ ಸ್ಫೋಟ ಹಿನ್ನೆಲೆ ಆಸ್ಪತ್ರೆಗೆ ಧಾರವಾಡ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್, ಪೊಲೀಸ್ ಕಮಿಷನರ್ ಲಾಭೂರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊರ ರೋಗಿಗಳ ವಿಭಾಗ ಬಂದ್​​ ಮಾಡುವಂತೆ ಸೂಚನೆ ನೀಡಿದ್ದಾರೆ. ಸದ್ಯ ಈಗಾಗಲೇ ಅಡ್ಮಿಟ್ ಆದವರಿಗೆ ಮಾತ್ರ ಚಿಕಿತ್ಸೆ ಮುಂದುವರಿದಿದ್ದು ಹೊಸ ರೋಗಿಗಳಿಗೆ ಅವಕಾಶ ಇಲ್ಲ.

ಭಾರತದಲ್ಲಿ 24 ಗಂಟೆಯಲ್ಲಿ 10,549 ಜನರಿಗೆ ಕೊರೊನಾ
ದೇಶದಲ್ಲಿ 24 ಗಂಟೆಯಲ್ಲಿ 10,549 ಜನರಿಗೆ ಕೊರೊನಾ ಸೋಂಕು ತಗುಲಿದೆ. ಕೊರೊನಾಗೆ 488 ಜನರು ಬಲಿಯಾಗಿದ್ದಾರೆ. ಭಾರತದಲ್ಲಿ 1,10,133 ಸಕ್ರಿಯ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: Coronavirus: ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ

Published On - 10:02 am, Fri, 26 November 21

Web contact

TV9 Kannada

Read More
Follow Us