ಬರದ ನಾಡು ಬೀದರ್​ನಲ್ಲಿ ಬಟರ್ ಫ್ರೂಟ್ ಬೆಳೆದು ಸೈ ಎನಿಸಿಕೊಂಡ ರೈತ

ಬೆಣ್ಣೆ ಹಣ್ಣಿನ(Butter fruit) ಕೃಷಿಯನ್ನು ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ಕರ್ನಾಟಕದ ಮಲೆನಾಡಿನಲ್ಲಿ ಅತಿ ಹೆಚ್ಚಾಗಿ ಬೆಳೆಸಲಾಗುತ್ತದೆ. ಆದರೆ, ಬಯಲು ಸಿಮೇಯ ರೈತನೊಬ್ಬ ಈ ಹಣ್ಣನ್ನ ವಾಣಿಜ್ಯ ಬೆಳೆಯಾಗಿ ಬೆಳೆಸುವ ಮೂಲಕ ಸೈ ಎಣಿಸಿಕೊಂಡಿದ್ದಾನೆ. ರೈತನ ಈ ಹೊಸ ಪ್ರಯೋಗಕ್ಕೆ ಸಹ ರೈತರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಲಾಭದ ನಿರೀಕ್ಷೆಯಲ್ಲಿದ್ದಾರೆ.

ಬರದ ನಾಡು ಬೀದರ್​ನಲ್ಲಿ ಬಟರ್ ಫ್ರೂಟ್ ಬೆಳೆದು ಸೈ ಎನಿಸಿಕೊಂಡ ರೈತ
ಬೀದರ್​ನಲ್ಲಿ ಬಟರ್ ಫ್ರೂಟ್ ಬೆಳೆದು ಸೈ ಎನಿಸಿಕೊಂಡ ರೈತ
Edited By: ಕಿರಣ್ ಹನುಮಂತ್​ ಮಾದಾರ್

Updated on: Jun 08, 2024 | 3:22 PM

ಬೀದರ್, ಜೂ.08: ಅವಕಾಡೊ ಹಣ್ಣು ಎಲ್ಲರಿಗೂ ಬಟರ್ ಫ್ರೂಟ್(Butter fruit) ಅಥವಾ ಬೆಣ್ಣೆ ಹಣ್ಣು ಹೆಸರಿನಲ್ಲಿ ಚಿರಪರಿಚಿತ. ಭಾರತದಲ್ಲಿ ಈ ಹಣ್ಣನ್ನು ಶ್ರೀಲಂಕಾದಿಂದ ಪರಿಚಯಿಸಲ್ಪಟ್ಟಿತು ಎನ್ನಲಾಗಿದೆ. ಸದ್ಯ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಹಣ್ಣು ಹೆಚ್ಚಾಗಿ ಬೆಳೆಯಲಾಗುತ್ತದೆ. ಪಿಯರ್ ಹಣ್ಣಿನ ಆಕಾರದಲ್ಲಿರುವ ಈ ಹಣ್ಣು ಮೆಕ್ಸಿಕೊ ದೇಶದಲ್ಲಿ ಹೆಚ್ಚು ಕಂಡು ಬರುತ್ತದೆ. ಇಂತಹ ಹಣ್ಣನ್ನ ಈಗ ಗಡೀ ಜಿಲ್ಲೆ ಬೀದರ್​ನಲ್ಲಿಯೂ ಬೆಳೆಯಲು ಆರಂಭಿಸಿದ್ದಾರೆ.

ಹೌದು, ಎರಡು ರಾಜ್ಯದ ಗಡಿಯನ್ನ ಹಂಚಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ಮಾವು, ಕಲ್ಲಂಗಡಿ ಹಣ್ಣು ಸೇರಿದಂತೆ ವಿವಿಧ ರೀತಿಯ ತರಕಾರಿಗಳನ್ನು ಬೆಳೆಯುವುದರಲ್ಲಿ ಅತಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಆದ್ರೆ, ಇತ್ತೀಚೆಗೆ ಇಲ್ಲಿನ ರೈತರು ಇವುಗಳ ಹೊರತಾಗಿ ವಿದೇಶಿ ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಇದೀಗ ಮಲೆನಾಡು ಭಾಗದಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಬಟರ್ ಪ್ರೂಟ್ ಕೃಷಿ ಮಾಡುತ್ತಿದ್ದಾರೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಅಲ್ಲೂರು ಗ್ರಾಮದ ಡಾ. ನಾಗೇಂದ್ರಪ್ಪ ಬಿರಾದಾರ್ ಅವರು ತಮ್ಮ ಎರಡೂವರೆ ಎಕರೆಯಷ್ಟು ಜಮೀನಿನಲ್ಲಿ ಬಟರ್ ಫ್ರೂಟ್​ ಅನ್ನು ಬೆಳೆದು ಇತರ ರೈತರಿಗೂ ಮಾದರಿಯಾಗಿದ್ದಾರೆ.

ಇದನ್ನೂ ಓದಿ:ವಿನೂತನ ವಿಧಾನಗಳ ಮೂಲಕ ಮಾವು ಬೆಳೆದು 75 ಲಕ್ಷ ರೂಪಾಯಿ ಸಂಪಾದಿಸಿದ ರೈತ!

ಕೊರೊನಾ ಬಂದ ಸಮಯದಲ್ಲಿ ತಮ್ಮ ಎರಡೂವರೆ ಎಕರೆ ಪ್ರದೇಶದಲ್ಲಿ 220 ಬಟರ್ ಫ್ರೂಟ್ ಹಣ್ಣಿನ ಗಿಡಗಳನ್ನ ನಾಟಿ ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದ ವೈಜ್ಞಾನಿಕ ಹಾಗೂ ಸಾವಯವ ರೀತಿಯಲ್ಲಿ ಗಿಡಗಳನ್ನ ಆರೈಕೆ ಮಾಡುತ್ತಿದ್ದಾರೆ. ಸದ್ಯ ಈಗ ಗಿಡಗಳಲ್ಲಿ ಫಸಲು ಬಿಡಲು ಆರಂಭವಾಗಿದ್ದು, ಉತ್ತಮ ಲಾಭವೂ ಸಿಗುತ್ತಿದೆಂದು ರೈತ ಹೇಳುತ್ತಿದ್ದಾರೆ.

ಕೇರಳ ರಾಜ್ಯದಿಂದ ಗಿಡಗಳಿವು

ಬೀದರ್ ಜಿಲ್ಲೆಗೆ ಅವಕಾಡೊ ಹಣ್ಣಿನ ಗಿಡಗಳು ಹೊಸ ಬೆಳೆಯಾಗಿದ್ದು, ಸ್ಥಳೀಯ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಪ್ರೋತ್ಸಾಹದಿಂದ ಕೇರಳ ರಾಜ್ಯದಿಂದ ಕಸಿ ಮಾಡಿರುವ ಅವಕಾಡೊ ತಳಿಯ ಗಿಡಗಳನ್ನ ತಂದು ಬೆಳೆಯಲಾಗಿದೆ. ಗಿಡಗಳನ್ನ ಆರೈಕೆ ಮಾಡುವ ವಿಧಾನವನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳೇ ತರಬೇತಿಯನ್ನ ನೀಡಿದ್ದು, ಅಧಿಕಾರಿಗಳ ಮಾರ್ಗದರ್ಶನದಿಂದ ಡಾ. ನಾಗೇಂದ್ರಪ್ಪ ಬಿರಾದಾರ್ ಅವರು ಯಶಸ್ವಿಯಾಗಿ ಗಿಡಗಳನ್ನ ಬೆಳೆಸಿದ್ದಾರೆ. ಬೆಣ್ಣೆ ಹಣ್ಣು ಪೌಷ್ಠಿಕ ಆಹಾರ ಮಾತ್ರವಲ್ಲದೆ, ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ.

ಇದನ್ನೂ ಓದಿ:ಮಾರುಕಟ್ಟೆಯಲ್ಲಿ ಇಳಿಕೆ ಕಂಡ ತರಕಾರಿ ಬೆಲೆ; ರೈತನಿಗೆ ತಪ್ಪದ ಗೋಳು

ಸುತ್ತಮುತ್ತ ಜಿಲ್ಲೆಗಳಿಂದ ಇತರ ರೈತರ ಆಗಮನ

ಈಗ ಇವರು ಗಿಡಗಳನ್ನ ನಾಟಿ ಮಾಡಿ ಮೂರು ವರ್ಷವಾಗಿದೆ. ನಾಟಿ ಮಾಡಿದ ಎರಡನೇ ವರ್ಷದಿಂದ ಹಣ್ಣು ಬಿಡಲು ಆರಂಭವಾಗುತ್ತದೆ. ಆದರೆ, ಐದು ವರ್ಷದ ಗಿಡವಾದಾಗ ವರ್ಷಕ್ಕೆ ಎರಡು ಸಲ ಕಾಯಿ ಬಿಡುತ್ತದೆ. ಒಂದು ಗಿಡಕ್ಕೆ ಸರಿ ಸುಮಾರು ಹತ್ತರಿಂದ ಹದಿನೈದು ಕೆಜಿಯಷ್ಟು ಹಣ್ಣು ಕೊಡುತ್ತದೆ. ಒಂದು ಕೆಜಿಗೆ ನೂರು ರೂಪಾಯಿಯಂತೆ ಮಾರಾಟವಾದರೂ ಕೂಡ ಎಕರೆಗೆ ಐದರಿಂದ ಹತ್ತು ಲಕ್ಷ ರೂಪಾಯಿ ಆದಾಯ ಬರುತ್ತದೆಂದು ರೈತ ಡಾ. ನಾಗೇಂದ್ರಪ್ಪ ಬಿರಾದಾರ್ ಹೇಳುತ್ತಿದ್ದಾರೆ. ಇನ್ನು ಈ ರೈತನ ತೋಟಕ್ಕೆ ರಾಯಚೂರು, ಯಾದಗಿರಿ ಜಿಲ್ಲೆಯಿಂದ ಅವಕಾಡು ಹಣ್ಣಿನ ತೋಟವನ್ನ ನೋಡಲು ರೈತರು ಬರುತ್ತಿದ್ದಾರೆ.

ಶೂನ್ಯ ಬಂಡವಾಳದಲ್ಲಿ ಬೆಳೆ ಬೆಳೆಯುವ ನೈಸರ್ಗಿಕ ಕೃಷಿ ಪದ್ಧತಿ

ಅವರು ಈ ತೋಟವನ್ನ ಬಂದು ನೋಡಿಕೊಂಡು ಈ ರೈತನಿಂದಾ ಮಾಹಿತಿ ಪಡೆದು ಮಾರುಕಟ್ಟೆಯ ಮಾಹಿತಿಯನ್ನ ಪಡೆದುಕೊಂಡು ಹೋಗುತ್ತಿದ್ದಾರೆ. ಪ್ರತಿ ದಿನವೂ ಒಂದೆರಡು ರೈತರು ಇಲ್ಲಿಗೆ ಬಂದು ಈ ಹಣ್ಣಿನ ಬಗ್ಗೆ ಮಾಹಿತಿಯನ್ನ ಪಡೆದುಕೊಂಡು ತಾವು ತಮ್ಮ ಹೊಲದಲ್ಲಿ ಬಟರ್ ಹಣ್ಣು ಬೆಳೆಸಲು ಮುಂದಾಗುತ್ತಿದ್ದಾರೆ.  ಎರಡೂ ವರೆ ಎಕರೆ ಜಮೀನಿನಲ್ಲಿ ಬೆಳೆದಿರುವ ಅವಕಾಡೆ ಹಣ್ಣನ್ನ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆಯಲಾಗಿದೆ. ಒಮ್ಮೆ ನಾಟಿ ಮಾಡಿದ ನಂತರ ಯಾವುದೇ ಖರ್ಚು ಇಲ್ಲದೇ ಶೂನ್ಯ ಬಂಡವಾಳದಲ್ಲಿ ಬೆಳೆ ಬೆಳೆಯುವ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಕಳೆದೊಂದು ದಶಕದಿಂದ ಕೃಷಿ ಕಾಯಕದಲ್ಲಿ ತೋಡಗಿಕೊಂಡಿರುವ ಇವರು ಜಿಲ್ಲೆ ಹಾಗೂ ರಾಜ್ಯ ರೈತರಿಗೆ ಮಾದರಿಯಾಗಿ ನಿಂತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Suresh Naik

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
Follow Us