ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದ ನೌಕರ ಜೀವಂತ! ಚಾಮರಾಜನಗರದಲ್ಲೊಂದು ಅಚ್ಚರಿಯ ಘಟನೆ

|

Updated on: Apr 18, 2023 | 6:30 PM

ಚಾಮರಾಜನಗರ ಜಿಲ್ಲೆಯಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಸ್ವತಃ ವೈದ್ಯರೇ ಸಾವನ್ನಪ್ಪಿದ್ದಾಗಿ ಘೋಷಣೆ ಮಾಡಿದ ನಂತರ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುತ್ತಿದ್ದಾಗ ವ್ಯಕ್ತಿ ಕೈಕಾಲುಗಳನ್ನು ಅಲುಗಾಡಿಸಿದ್ದು, ವೈದ್ಯರ ಸಹಿತ ಇತರರು ಅಚ್ಚರಿಗೊಂಡಿದ್ದಾರೆ.

ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದ ನೌಕರ ಜೀವಂತ! ಚಾಮರಾಜನಗರದಲ್ಲೊಂದು ಅಚ್ಚರಿಯ ಘಟನೆ
ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದ ನೌಕರ ಜೀವಂತ
Follow us on

ಚಾಮರಾಜನಗರ: ಹೃದಯಾಘಾತದಿಂದ ನಿಧನಹೊಂದಿದ್ದಾಗಿ ವೈದ್ಯರು ಘೋಷಿಸಿದ್ದ ನೌಕರ ಜೀವಂತವಾಗಿರುವುದು ತಿಳಿದುಬಂದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ಹನೂರಿನಲ್ಲಿ (Hanur) ಚುನಾವಣಾ ತರಬೇತಿ ವೇಳೆ ಎದೆನೋವಿನಿಂದ ಕುಸಿದುಬಿದ್ದಿದ್ದ ನೌಕರ ಸಾವನ್ನಪ್ಪಿದ್ದಾಗಿ ವೈದ್ಯರು ಘೋಷಣೆ ಮಾಡಿದ್ದರು. ಅದರಂತೆ ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಕೊಂಡೊಯ್ಯುವಾಗ ನೌಕರ ಜೀವಂತವಾಗಿರುವುದು ತಿಳಿದುಬಂದಿದೆ. ಕೂಡಲೇ ನೌಕರನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ (Mysuru) ಆಸ್ಪತ್ರೆಯೊಂದಕ್ಕೆ ರವಾನಿಸಿದ್ದಾರೆ.

ತಾಲೂಕು ಖಜಾನೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರ ಜಗದೀಶ್ (40) ಎಂಬವರು ಹನೂರಿನ ವಿವೇಕಾನಂದ ಶಾಲೆಯಲ್ಲಿ ಏರ್ಪಡಿಸಿದ್ದ ಚುನಾವಣಾ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ತರಬೇತಿ ಆರಂಭವಾಗುತ್ತಿದ್ದಂತೆ ಎದೆನೋವಿನಿಂದ ಕುಸಿದು ಬಿದ್ದ ಜಗದೀಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ತಪಾಸಣೆ ನಡೆಸಿದ್ದ ವೈದ್ಯರು ದಾರಿಮಧ್ಯಯೇ ಹೃದಯಾಘಾತವಾಗಿ ಜಗದೀಶ್ ಸಾವನ್ನಪ್ಪಿದ್ದಾಗಿ ಘೋಷಣೆ ಮಾಡಿದ್ದರು. ಅದರಂತೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ: ಮೈಸೂರು ಕೇಂದ್ರ ಕಾರಾಗೃಹದಲ್ಲಿ ವೀರಪ್ಪನ್ ಸಹಚರ ಸಾವು

ವೈದ್ಯರು ಮೃತಪಟ್ಟಿದ್ದಾಗಿ ಘೋಷಣೆ ಮಾಡಿದ ಹಿನ್ನೆಲೆ ಜಗದೀಶ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಜೊತೆಗಿದ್ದವರು ಜಗದೀಶ್ ಕೈಕಾಲು ಅಲುಗಾಡಿಸುತ್ತಿರುವುದನ್ನು ಗಮನಿಸಿ ಕೂಡಲೇ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ವೈದ್ಯರು ಜಗದೀಶ್ ಅವರ ನಾಡಿಮಿಡಿತ ಪರಿಶೀಲಿಸಿದ್ದಾರೆ. ಈ ವೇಳೆ ಜೀವಂತವಾಗಿರುವುದು ತಿಳಿದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ರವಾನಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Tue, 18 April 23