ಚಾಮರಾಜನಗರ: ಚಿರತೆ ಸೆರೆಗಾಗಿ ಇಟ್ಟಿದ್ದ ಬೋನಿಗೆ ಬಿದ್ದ ವ್ಯಕ್ತಿ! ಆಮೇಲೇನಾಯ್ತು…

ಕೆಟ್ಟ ಕುತೂಹಲ ಒಮ್ಮೊಮ್ಮೆ ಎಂಥಾ ಅವಾಂತರಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಚಿರತೆ ಸೆರೆಗೆಂದು ಅರಣ್ಯ ಇಲಾಖೆಯವರು ಇಟ್ಟ ಬೋನಿನೊಳಗೆ ವ್ಯಕ್ತಿಯೊಬ್ಬ ಸಿಕ್ಕಿಹಾಕಿಕೊಂಡಿದ್ದಾನೆ. ಕೊನೆಗೆ ಆತ ಬಚಾವಾಗಿದ್ದು ಹೇಗೆ? ತಿಳಿಯಲು ಮುಂದೆ ಓದಿ.

ಚಾಮರಾಜನಗರ: ಚಿರತೆ ಸೆರೆಗಾಗಿ ಇಟ್ಟಿದ್ದ ಬೋನಿಗೆ ಬಿದ್ದ ವ್ಯಕ್ತಿ! ಆಮೇಲೇನಾಯ್ತು...
ಚಿರತೆ ಬೋನಿನಲ್ಲಿ ಹನುಮಂತಯ್ಯ
Edited By:

Updated on: Jan 17, 2025 | 12:46 PM

ಚಾಮರಾಜನಗರ, ಜನವರಿ 17: ಚಿರತೆಯನ್ನು ಸೆರೆ ಹಿಡಿಯುವುದಕ್ಕೆಂದು ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬ ಸಿಲುಕಿಕೊಂಡ ವಿಚಿತ್ರ ಪ್ರಕರಣ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ. ಬೋನಿಗೆ ಬಿದ್ದ ವ್ಯಕ್ತಿಯನ್ನು ಗ್ರಾಮದ ಹನುಮಂತಯ್ಯ ಎಂದು ಗುರುತಿಸಲಾಗಿದ್ದು, ಸದ್ಯ ಆತನನ್ನು ರಕ್ಷಿಸಲಾಗಿದೆ.

ಪಡಗೂರು ಗ್ರಾಮದಲ್ಲಿ ನಡೆದಿದ್ದೇನು?

ಪಡಗೂರು ಗ್ರಾಮದ ಸುತ್ತಮುತ್ತ ಕಳೆದ ಕೆಲವು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿತ್ತು. ಹೀಗಾಗಿ ಚಿರತೆಯನ್ನು ಸೆರೆ ಹಿಡಿದು ಜನರಿಗೆ ಸುರಕ್ಷತೆ ಒದಗಿಸುವಂತೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಯನ್ನು ಪುರಸ್ಕರಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಮಹದೇವಸ್ವಾಮಿ ಎಂಬವರ ಜಮೀನಿನಲ್ಲಿ ಬೋನು ಇಟ್ಟಿದ್ದರು. ಜೊತೆಗೆ ಬೋನಿನ ಒಳಗೆ ಕರು ಒಂದನ್ನು ಇರಿಸಿದ್ದರು.

ಇಷ್ಟೆಲ್ಲಾ ಆದ ಬಳಿಕ ಹನುಮಂತಯ್ಯ ಬೋನಿನ ಸಮೀಪ ಹೋಗಿದ್ದಾನೆ. ಬೋನು ಹೇಗಿದೆ ಎಂದು ನೋಡಲು ಒಳಗಡೆ ಹೋಗಿದ್ದಾನೆ. ಆತ ಒಳಗಡೆ ಹೋಗುತ್ತಿದ್ದಂತೆಯೇ ಬೋನಿನ ಗೇಟ್ ಲಾಕ್ ಆಗಿದೆ. ಹೀಗಾಗಿ ಸುಮಾರು ನಾಲ್ಕೈದು ಗಂಟೆ ಆತ ಅದರ ಒಳಗಡೆ ಸಿಲುಕಿದ್ದಾನೆ.

ಚಿರತೆ ಬೋನಿನಲ್ಲಿ ಹನುಮಂತಯ್ಯ

ಇದಾದ ಸುಮಾರು ಹೊತ್ತಿನ ಬಳಿಕ ಜಮೀನಿಗೆ ಕೆಲಸಕ್ಕೆಂದು ಬಂದ ಕೂಲಿ ಕಾರ್ಮಿಕರು ಹನುಮಂತಯ್ಯ ಬೋನಿನ ಒಳಗೆ ಇರುವುದನ್ನು ಗಮನಿಸಿದ್ದಾರೆ. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಿ ಸಿಬ್ಬಂದಿ ಹನುಮಂತಯ್ಯನನ್ನು ರಕ್ಷಿಸಿದ್ದಾರೆ.

ಹೆಚ್ಚಿದ ವನ್ಯ ಪ್ರಾಣಿ – ಮಾನವ ಸಂಘರ್ಷ

ಚಾಮರಾಜನಗರ ಜಿಲ್ಲೆಯಾದ್ಯಂತ ಕಳೆದ ಕೆಲವು ತಿಂಗಳುಗಳಿಂದ ವನ್ಯ ಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚಾಗಿದೆ. ಒಂದೆಡೆ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಬೆಳೆಗಳನ್ನು ನಾಶ ಮಾಡುತ್ತಿವೆ. ಮತ್ತೊಂದೆಡೆ ಚಿರತೆ ಕಾಟ ಜನರನ್ನು ಆತಂಕಕ್ಕೆ ಈಡುಮಾಡಿದೆ.

ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಎರಡು ವರ್ಷಗಳಲ್ಲಿ 24 ಸರ್ಕಾರಿ ಶಾಲೆಗಳಿಗೆ ಬಿತ್ತು ಬೀಗ!

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಮುಖ್ಯರಸ್ತೆಯಲ್ಲಿ ಕಾಡಾನೆಗಳ ಹಿಂಡು ಹಾಗೂ ಹುಲಿ ಸಂಚಾರ ಕೆಲವು ದಿನಗಳ ಹಿಂದೆ ಕಂಡುಬಂದಿತ್ತು. ಆನೆಗಳ ಹಿಂಡು ಹಾಗೂ ಹುಲಿ ರಸ್ತೆ ದಾಟುತ್ತಿರುವ ವಿಡಿಯೋ ಪ್ರವಾಸಿಗರ ಮೊಬೈಲ್​ನಲ್ಲಿ ರೆಕಾರ್ಡ್​ ಆಗಿದ್ದು, ವೈರಲ್ ಆಗಿತ್ತು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Follow Us