ಚಾಮರಾಜನಗರ, ಫೆಬ್ರವರಿ 26: ಗಡಿನಾಡು ಚಾಮರಾಜನಗರದ ಕಾಡಂಚಿನ ಪ್ರದೇಶದಲ್ಲಿ ರೈತರ ದೊಡ್ಡ ಸಮಸ್ಯೆ ಎಂದರೆ, ಅದು ಕಾಡು ಪ್ರಾಣಿಗಳದ್ದು. ಒಂದೆಡೆ ಕಾಡಾನೆ ದಾಳಿಯಾದರೆ ಮತ್ತೊಂದೆಡೆ ಕಾಡುಹಂದಿಗಳ ಉಪಟಳ. ಅತ್ತ ಕಾಡಾನೆಗಳು ಬೆಳೆ ನಾಶ ಪಡಿಸಿದ್ರೆ ಸರ್ಕಾರದಿಂದ ಪರಿಹಾರ ಸಿಗುತ್ತೆ. ಆದ್ರೆ ಕಾಡುಹಂದಿಗಳು ಬೆಳೆ ಹಾನಿ ಮಾಡಿದ್ರೆ ಸರ್ಕಾರದಿಂದ ಯಾವುದೆ ರೀತಿಯ ಪರಿಹಾರಗಳು ಸಿಗೋದಿಲ್ಲ. ಇದರಿಂದ ರೋಸಿ ಹೋಗಿರುವ ಕಾಡಂಚಿನ ಭಾಗದ ರೈತರು ಕಚ್ಚಾ ಬಾಂಬ್, ಅಂದರೆ ಸ್ಫೋಟಕಗಳನ್ನ ಸ್ವತಃ ತಯಾರಿಸುತ್ತಿದ್ದಾರೆ. ಹೀಗೆ ತಯಾರಿಸಿದ ಸ್ಪೋಟಕಗಳನ್ನ ಜಮೀನಿನ ಸುತ್ತಮುತ್ತ ಇಟ್ಟಿರುತ್ತಾರೆ ಇದನ್ನು ತಿನ್ನಲು ಬಂದ ಕಾಡುಹಂದಿಗಳು ಕಚ್ಚಾಬಾಂಬ್ ಸ್ಪೋಟಗೊಂಡು ಸಾವನ್ನಪ್ಪುತ್ತವೆ. ಆದ್ರೆ ಕಾಡುಹಂದಿಗಳ ಬದಲಾಗಿ ಮೇಯಲು ಬಂದ ಹಸುಗಳು ಇದಕ್ಕೆ ಬಾಯಿ ಹಾಕಿ ಸಾವನ್ನಪ್ಪಿರುವ ಪ್ರಕರಣ ಇತ್ತೀಚೆಗೆ ಹೆಚ್ಚಾಗಿದೆ. ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಈಗ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ರಾಮಶೆಟ್ಟಿ ಹಾಗೂ ಸೋಮಣ್ಣ ಎಂಬುವವರನ್ನ ಬಂಧಿಸಿದ್ದಾರೆ.
ಈ ರಾಮಶೆಟ್ಟಿ ಹಾಗೂ ಸೋಮಣ್ಣ ಕೊಳ್ಳೇಗಾಲ ಹನೂರು ಭಾಗದ ರೈತರಿಗೂ ಕಚ್ಚಾ ಬಾಂಬ್ ಸರಬರಾಜು ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನು ಆರೋಪಿಗಳ ಬಂಧನ ವೇಳೆ 10 ಕ್ಕೂ ಹೆಚ್ಚು ಕಚ್ಛಾ ಬಾಂಬ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದುವರೆಗೂ ಐದಕ್ಕೂ ಹೆಚ್ಚು ಗೋವುಗಳ ಬಾಯಿಗೆ ಈ ಕಚ್ಚಾ ಬಾಂಬ್ನಿಂದ ತೀವ್ರ ಹಾನಿಯಾಗಿದ್ದು ಮೂರಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿವೆ. ಅಮಾಯಕ ಮೂಕ ಪ್ರಾಣಿಗಳ ಸಾವಿಗೆ ಕಾರಣವಾಗಿರುವ ಈ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಲೆಂದು ಗೋವುಗಳ ಮಾಲೀಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಹಾಶಿವರಾತ್ರಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಜಾತ್ರೆ, ಖಾಸಗಿ ವಾಹನಗಳ ಪ್ರವೇಶಕ್ಕೆ ನಿಷೇಧ
ಗನ್ ಪೌಡರ್ ಮೂಲಕ ಬೇಕಾಬಿಟ್ಟಿಯಾಗಿ ಸ್ಪೋಟಕಗಳನ್ನ ತಯಾರಿಸಿದವರು ಈಗ ಜೈಲು ಪಾಲಾಗಿದ್ದು, ಇವರು ತಯಾರಿಸಿದ ಕಚ್ಛಾ ಬಾಂಬ್ ಗಳು ಎಲ್ಲೆಲ್ಲಿ ಮಾರಾಟ ಆಗಿವೆ ಎಂಬುದರ ಮಾಹಿತಿಯನ್ನ ಪೊಲೀಸರು ಪಡೆಯುತ್ತಿದ್ದಾರೆ. ಮತ್ತೆ ಯಾವತ್ತೂ ಈ ರೀತಿ ಸ್ಪೋಟಕಗಳನ್ನ ತಯಾರಿಸದಂತೆ ಆರೋಪಿಗಳನ್ನು ಬಂಧಿಸಿ ಸ್ಫೋಟಕ ಪ್ರತಿಬಂಧಕ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ನ್ಯಾಯಂಗ ಬಂಧನಕ್ಕೊಪ್ಪಿಸಲಾಗಿದೆ.