
ಬೆಂಗಳೂರು, (ಫೆಬ್ರವರಿ 28): ಒಂದು ದಿನದ ಹಿಂದಷ್ಟೇ ಬೆಂಗಳೂರಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಆಹಾರ ಇಲಾಖೆ ಅಧಿಕಾರಿಗಳು, ಹೋಟೆಲ್ ಗಳಲ್ಲಿ ಇಡ್ಲಿಗಳನ್ನು ತಯಾರಿಸುವಾಗ ಪ್ಲಾಸ್ಟಿಕ್ ಶೀಟ್ ಬಳಸುವುದನ್ನು ಪತ್ತೆ ಹಚ್ಚಿ ಅವುಗಳ ಮೇಲೆ ನಿಷೇಧ ಹೇರಲು ತಯಾರಿ ನಡೆಸಿದ್ದಾರೆ. ಇದಾದ ಬಳಿಕ ಟ್ಯಾಟೋದಿಂದ ಎಚ್ಐವಿ, ಸ್ಕಿನ್ ಕ್ಯಾನ್ಸರ್ ಸೇರಿದತೆ ಚರ್ಮ ರೋಗಗಳು ಬರುತ್ತಿವೆ ಎನ್ನಲಾಗಿದೆ. ಹೀಗಾಗಿ ಇದಕ್ಕೆ ರಾಜ್ಯದಲ್ಲಿ ಹೊಸ ಕಾನೂನು ತರಲು ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೇ ತರಕಾರಿ ಅಂಗಡಿಗಳಲ್ಲಿ ಮಾರಾಟ ಮಾಡುವ ಹಸಿ ಬಟಾಣಿ ಕಾಳು, ರಸ್ತೆ ಬದಿಗಳಲ್ಲಿ ಮಾರಾಟ ಮಾಡುವ ಕಲ್ಲಂಗಡಿ ಹಣ್ಣುಗಳಲ್ಲಿ ಕೃತಕ ಬಣ್ಣಗಳನ್ನು ಬಳಸಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದೆ.
ಬೀದಿ ಬದಿಗಳಲ್ಲಿ, ಅಂಗಡಿಗಳಲ್ಲಿ, ಮಾಲ್ ಗಳಲ್ಲಿ ಮಾರಾಟ ಮಾಡುವ ಕಲ್ಲಂಗಡಿ ಹಣ್ಣುಗಳನ್ನು ವಿವಿಧ ಮದ್ಯವರ್ತಿಗಳು ಹೊಲಗಳಿಂದ ಖರೀದಿ ಮಾಡಿ ಈ ಮಾರಾಟ ಕೇಂದ್ರಗಳಿಗೆ ತಲುಪಿಸುತ್ತಾರೆ. ಈ ಮದ್ಯವರ್ತಿಗಳಲ್ಲಿ ಕೆಲವರು ಹಣ್ಣುಗಳಿಗೆ ಕೃತಕ ಬಣ್ಣದ ಇಂಜೆಕ್ಷನ್ ನೀಡುತ್ತಾರೆ. ಅದರಿಂದ ಕಲ್ಲಂಗಡಿ ಹಣ್ಣನ್ನು ಕೊಯ್ದಾಗ ಅದು ಅತ್ಯಂತ ಕೆಂಪಾಗಿ, ಆಕರ್ಷಣೀಯವಾಗಿ ಕಾಣುತ್ತದೆ. ಇನ್ನೂ ಕೆಲವರು ಕೆಂಪು ಬಣ್ಣದ ಜೊತೆಗೆ ರುಚಿಯನ್ನು ತರುವಂಥ ರಾಸಾಯನಿಕಗಳನ್ನು ಇಂಜೆಕ್ಟ್ ಮಾಡಿರುತ್ತಾರೆ. ಹಾಗಾಗಿ, ಕಲ್ಲಂಗಡಿ ಹಣ್ಣನ್ನು ಕೊಳ್ಳುವಾಗ ಅಂಗಡಿಯವರು ನೀಡುವ ಸ್ಯಾಂಪಲ್ ಹಣ್ಣು ಕೆಂಪು ಬಣ್ಣದ್ದಾಗಿರುತ್ತದೆ ಹಾಗೂ ರುಚಿಕರವಾಗಿರುತ್ತದೆ. ಇದಕ್ಕೆ ಗ್ರಾಹಕರು ಮರುಳಾಗಿ ಹಣ್ಣುಗಳನ್ನು ಕೊಳ್ಳುತ್ತಾರೆ. ಹೀಗಾಗಿ ಇದನ್ನು ತಡೆಯಲು ಕೃತಕ ರಾಸಾಯನಿಕಗಳಿಂದ ಜನರನ್ನು ಪಾರು ಮಾಡಲು ಆಹಾರ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಕೆಮಿಕಲ್ ಕಲರ್ ಇಂಜೆಕ್ಟ್ ಮಾಡಲಾಗುತ್ತಿದೆ ಎಂಬ ಆರೋಪ ಸಂಬಂಧ ಆಹಾರ ಇಲಾಖೆ ಅಧಿಕಾರಿಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ಕಲ್ಲಂಗಡಿ ಹಣ್ಣಿನ ಸ್ಯಾಂಪಲ್ ಸಂಗ್ರಹ ಮಾಡುತ್ತಿದ್ದಾರೆ. ಬಳಿಕ ಹಣ್ಣನ್ನು ಲ್ಯಾಬ್ ರವಾನೆ ಮಾಡಲಾಗುತ್ತಿದ್ದು, ವರದಿ ಬಳಿಕ ಹಣ್ಣಿನ ಗುಣಮಟ್ಟ ತಿಳಿಯಲಿದೆ.
ಕಲ್ಲಂಗಡಿಗೆ ಕೃತಕ ಬಣ್ಣ ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸಿ ಆಕರ್ಷಣೀಯವಾಗಿ ಕಾಣುವಂತೆ ಮಾಡಿರುವ ಕಲ್ಲಂಗಡಿ ಸೇವಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ. ಹೀಗಾಗಿ ನೀವು ಕಲ್ಲಂಗಡಿ ಹಣ್ಣಿನ ಕಲರ್ ಕಂಡು ಮರುಳಾಗುವ ಮುಂಚೆ ಸ್ವಲ್ಪ ಎಚ್ಚರವಿರಲಿ.