AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ: ಕಲುಷಿತ ನೀರಿನ ಆತಂಕ, ಕವಾಡಿಗರಹಟ್ಟಿ ಗ್ರಾಮ ಖಾಲಿ ಖಾಲಿ

ಕೋಟೆನಾಡು ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ದೊಡ್ಡ ದುರಂತವೇ ನಡೆದು ಹೋಗಿದೆ. ಐವರು ಸಾವಿಗೀಡಾಗಿದ್ದು ಓರ್ವ ಗರ್ಭಿಣಿಗೆ ಗರ್ಭಪಾತವೇ ಆಗಿದೆ. ಇನ್ನೂರಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.

ಚಿತ್ರದುರ್ಗ: ಕಲುಷಿತ ನೀರಿನ ಆತಂಕ, ಕವಾಡಿಗರಹಟ್ಟಿ ಗ್ರಾಮ ಖಾಲಿ ಖಾಲಿ
ಜನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿರುವ ಚಿತ್ರದುರ್ಗದ ಕವಾಡಿಗರಹಟ್ಟಿ ಗ್ರಾಮ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: Rakesh Nayak Manchi|

Updated on: Aug 07, 2023 | 9:18 PM

Share

ಚಿತ್ರದುರ್ಗ, ಆಗಸ್ಟ್ 7: ಕೋಟೆನಾಡು ಚಿತ್ರದುರ್ಗ (Chitradurga) ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ಐವರು ಸಾವಿಗೀಡಾಗಿದ್ದು ಓರ್ವ ಗರ್ಭಿಣಿಗೆ ಗರ್ಭಪಾತವಾಗಿದ್ದು, ಇನ್ನೂರಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಹೀಗಾಗಿ ಭೀತಿಗೊಂಡ ಜನರು ಗ್ರಾಮ ತೊರೆದಿದ್ದಾರೆ.

ಕವಾಡಿಗರಹಟ್ಟಿ ಚಿತ್ರದುರ್ಗ ನಗರಸಭೆ ವ್ಯಾಪ್ತಿಗೆ ಸೇರುತ್ತದೆಯಾದರೂ ಇದೊಂದು ಪುಟ್ಟ ಹಳ್ಳಿ ಎಂದೇ ಹೇಳಬಹುದು. ಆಗಸ್ಟ್ 1 ರಿಂದ ಈ ಗ್ರಾಮದಲ್ಲಿ ಮರಣ ಮೃದಂಗವೇ ಬಾರಿಸಿದೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದಂತೆ ಇನ್ನೂರಕ್ಕೂ ಹೆಚ್ಚು ಜನರು ವಾಂತಿ ಬೇಧಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಐವರು ಸಾವಿಗೀಡಾಗಿದ್ದು ಓರ್ವ ಗರ್ಭಿಣಿಗೆ ಗರ್ಭಪಾತವೂ ಆಗಿದೆ. ಹೀಗಾಗಿ, ಬಡಾವಣೆಯ ಜನರಲ್ಲಿ ಸಹಜವಾಗಿಯೇ ಆತಂಕ ಮೂಡಿದೆ.

ಇದನ್ನೂ ಓದಿ: ಚಿತ್ರದುರ್ಗ: ಕಲುಷಿತ ನೀರು ಸೇವಿಸಿ ಐವರು ಸಾವು; ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ – ಗುಂಡೂರಾವ್

ಕಲುಷಿತ ನೀರಿನಿಂದಲೇ ಕಾಲರಾ ಮಾದರಿ ರೋಗ ಹರಡಿದೆ ಎಂಬುದಾಗಿ ಸರ್ವೇಕ್ಷಣಾ ಇಲಾಖೆ ವರದಿಯೇನೋ ನೀಡಿದೆ. ಆದರೆ, ಇನ್ನಿತರೆ ಎಫ್​ಎಸ್​ಎಲ್​ ವರದಿ, ಮರಣೋತ್ತರ ವರದಿ, ತಜ್ಞರ ತಂಡದ ವರದಿ ಬರಲು ಬಾಕಿಯಿದೆ. ಅಷ್ಟೇ ಅಲ್ಲದೆ, ದ್ವೇಷದ ಹಿನ್ನೆಲೆ ನೀರಿನ ಟ್ಯಾಂಕಿಗೆ ವಿಷ ಬೆರೆಸಲಾಗಿದೆ ಎಂಬ ಅನುಮಾನವೂ ಜನರಲ್ಲಿದ್ದು ಅನೇಕರಲ್ಲಿ ಇನ್ನೂ ಭೀತಿ ಮನೆ ಮಾಡಿದೆ.

ಸ್ಪಷ್ಟ ಮಾಹಿತಿಯಿಲ್ಲದೆ ಅನೇಕರು ಮಕ್ಕಳು, ಗರ್ಭಿಣಿಯರನ್ನು ಸಂಬಂದಿಕರ ಮನೆಗೆ ಕಳುಹಿಸಿದ್ದು ಊರಿಗೆ ಊರು ಖಾಲಿ ಖಾಲಿ ಆಗಿದೆ. ಊಟ ಮಾಡಲೂ ಭಯ, ನೀರು ಕುಡಿಯಲು ಸಹ ಭಯ ಆಗುತ್ತಿದೆ ಎಂದು ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ.

ಇನ್ನು ಕವಾಡಿಗರಹಟ್ಟಿಯ ಹಳೇಹಟ್ಟಿಯಲ್ಲಿ ಮಾತ್ರ ಈ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ, ಇದೇ ಟ್ಯಾಂಕಿನಿಂದ ನೀರು ಸರಬರಾಜು ಆಗುವ ಹೊಸಹಟ್ಟಿ, ಲಿಂಗಾಯತರ ಕಾಲೋನಿ ಜನರಿಗೆ ಮಾತ್ರ ಯಾವುದೇ ಸಮಸ್ಯೆ ಆಗಿಲ್ಲದೇ ಇರುವುದು ಇಲ್ಲಿನ ಜನರಲ್ಲಿ ಭೀತಿ ಸೃಷ್ಠಿಸಿದೆ. ವಿಷ ಬೆರೆಸಿದ್ದೇ ಇಷ್ಟಕ್ಕೆಲ್ಲಾ ಕಾರಣವೆಂಬ ಅಂಶ ಜನರಲ್ಲಿ ಬೇರೂರಿದ್ದು ಆತಂಕ ಹುಟ್ಟಿಸಿದೆ. ಅಂತೆಯೇ ಗರ್ಭಿಣಿ ಉಷಾಗೆ ಗರ್ಭಪಾತ ಆಗಿರುವ ಸುದ್ದಿ ಗರ್ಭಿಣಿಯರು ಮತ್ತು ಬಾಣಂತಿರನ್ನು ಬೆಚ್ಚಿ ಬೀಳಿಸಿದೆ.

ಒಟ್ಟಾರೆಯಾಗಿ ಸರ್ಕಾರ ಮತ್ತು ಜಿಲ್ಲಾಡಳಿತವು ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಘಟನೆಗೆ ಕಾರಣವೇನೆಂಬ ಸ್ಪಷ್ಟ ಮಾಹಿತಿ ನೀಡುವ ಮೂಲಕ ಜನರಲ್ಲಿ ಆತ್ಮಸ್ಥೈರ್ಯ ತುಂಬಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Basavaraj Mudnur
Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More