ಕುಡಿದು ಲಾರಿ ಚಾಲನೆ, ಪೊಲೀಸರಿಂದ ಲಾರಿ ಜಪ್ತಿ, ರಾತ್ರಿಯಿಡೀ ಲಾರಿಯಲ್ಲೇ ಮಲಗಿದ್ದ ಚಾಲಕ ಬೆಳಗ್ಗೆ ನಾಪತ್ತೆ! ಕುಟುಂಬಸ್ಥರ ಆಕ್ರೋಶ

ಪೊಲೀಸ್ರು ಲಾರಿ ಜಪ್ತಿ ಮಾಡಿದ್ದೇ ಚಾಲಕ ನಾಪತ್ತೆ ಆಗಲು ಕಾರಣ ಆಯಿತಾ? ಠಾಣೆಗೆ ಬಂದಿದ್ದ ಚಾಲಕನಿಗೆ ಪೊಲೀಸ್ರಿಂದ ತೊಂದರೆ ಆಯಿತಾ? ಅದೇನೆ ಇರಲಿ ಹೊಳಲ್ಕೆರೆ ಪೊಲೀಸ್ರು ಆದಷ್ಟು ಬೇಗ ಚಾಲಕನನ್ನು ಪತ್ತೆ ಮಾಡುವ ಕೆಲಸ ಮಾಡಬೇಕಿದೆ.

ಕುಡಿದು ಲಾರಿ ಚಾಲನೆ, ಪೊಲೀಸರಿಂದ ಲಾರಿ ಜಪ್ತಿ, ರಾತ್ರಿಯಿಡೀ ಲಾರಿಯಲ್ಲೇ ಮಲಗಿದ್ದ ಚಾಲಕ ಬೆಳಗ್ಗೆ ನಾಪತ್ತೆ! ಕುಟುಂಬಸ್ಥರ ಆಕ್ರೋಶ
ರಾತ್ರಿಯಿಡೀ ಲಾರಿಯಲ್ಲೇ ಮಲಗಿದ್ದ ಚಾಲಕ ಬೆಳಗ್ಗೆ ನಾಪತ್ತೆ!
Edited By: ಸಾಧು ಶ್ರೀನಾಥ್​

Updated on: Jun 14, 2023 | 4:07 PM

ಕುಡಿದ ಅಮಲಿನಲ್ಲಿ ಲಾರಿ ಚಾಲನೆ ಮಾಡುತ್ತಿದ್ದ ಚಾಲಕನನ್ನು (Drunk Lorry driver) ತಡೆದ ಪೊಲೀಸ್ರು ಲಾರಿ ಜಪ್ತಿ ಮಾಡಿದ್ದರು. ಆದ್ರೆ, ಪೊಲೀಸ್ರ ವಶದಲ್ಲಿದ್ದ ಲಾರಿ ಚಾಲಕ ಠಾಣೆಯಿಂದಲೇ ನಾಪತ್ತೆ ಆಗಿದ್ದಾನೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಹಾಗಾದ್ರೆ, ಈ ಘಟನೆ ನಡೆದಿದ್ದೆಲ್ಲಿ, ಕಥೆ ಏನು ಅಂತೀರಾ. ಈ ವರದಿ ನೋಡಿ. ಮಗ ನಾಪತ್ತೆಯಾದ ಸುದ್ದಿ ತಿಳಿದು ಆತಂಕಗೊಂಡಿರುವ ಕುಟುಂಬಸ್ಥರು. ಮಗ ನಾಪತ್ತೆಯಾಗಲು (Missing) ಪೊಲೀಸ್ರೆ ಕಾರಣ ಎಂದು ಕಿಡಿ. ನಾಪತ್ತೆಯಾದವನನ್ನು ಹುಡುಕಿಕೊಡುವಂತೆ ಎಸ್ಪಿ ಕಚೇರಿ ಎದುರು ಧರಣಿ ನಡೆಸಿ ಸಂಬಂಧಿಕರ ಆಗ್ರಹ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗದಲ್ಲಿ (Holalkere police).

ಹೌದು, ಜೂನ್ 4ರ ರಾತ್ರಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಠಾಣೆ ಪೊಲೀಸ್ರು ಲಾರಿಯೊಂದನ್ನು ಸೀಜ್ ಮಾಡಿದ್ದರು. ಲಾರಿ ಚಾಲಕ ಕುಡಿದ ಅಮಲಿನಲ್ಲಿ ಚಾಲನೆ ಮಾಡುತ್ತಿದ್ದಾನೆಂಬ ಆರೋಪದ ಮೇರೆಗೆ ಲಾರಿ ಸೀಜ್ ಮಾಡಿ ಠಾಣೆಗೆ ತಂದಿದ್ದರು. ಆದ್ರೆ, ಲಾರಿ ಚಾಲಕನಾದ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿಯ ಬಸವಂತಕುಮಾರ್ (36) ತನ್ನ ಬಳಿ ದಂಡ ಭರಿಸಲು ಹಣವಿಲ್ಲ ಎಂದು ಹೇಳಿದ್ದನು. ಅಂತೆಯೇ ರಾತ್ರಿಯಿಡೀ ಲಾರಿಯಲ್ಲೇ ಮಲಗಿದ್ದನು.

ಜೂನ್ 5ರ ಬೆಳಗ್ಗೆ ಎರಡು ಸಲ ಹೊಳಲ್ಕೆರೆ ಠಾಣೆಯೊಳಗೆ ಬಂದು ಪೊಲೀಸ್ರ ಬಳಿ ಮಾತನಾಡಿದ್ದನು. ಲಾರಿ ಮಾಲೀಕರು ಬಂದು ದಂಡ ಕಟ್ಟುತ್ತಾರೆಂದು ಒಮ್ಮೆ ಹೇಳಿದ್ದನು. ಮತ್ತೊಮ್ಮೆ 9 ಗಂಟೆ ಸುಮಾರಿಗೆ ತಿಂಡಿ ತಿಂದು ಬರುವುದಾಗಿ ಹೇಳಿ ಹೋಗಿದ್ದನು. ಬಳಿಕ ಲಾರಿ ಮಾಲೀಕ ಬಂದು ದಂಡದ ಹಣ ಪಾವತಿಸಿ ಲಾರಿ ಬಿಡಿಸಿಕೊಂಡು ಹೋಗಿದ್ದರು. ಆದ್ರೆ, ಆ ವೇಳೆಗಾಗಲೇ ಬಸವಂತಕುಮಾರ್ ಮಾತ್ರ ಅಲ್ಲಿಂದ ನಾಪತ್ತೆ ಆಗಿದ್ದನು.

ಹೀಗಾಗಿ, ಸುಮಾರು ಒಂದು ವಾರ ಕಾಲ ಹುಡುಕಿದ ಪೋಷಕರಿಗೆ ಬಸವಂತಕುಮಾರ್ ಸುಳಿವು ಸಿಕ್ಕಿಲ್ಲ. ಹೀಗಾಗಿ, ಹೊಳಲ್ಕೆರೆ ಠಾಣೆಗೆ ಬಂದು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಬಸವಂತಕುಮಾರ್ ಕುಡಿದ ಅಮಲಿನಲ್ಲಿದ್ದ ಎಂದು ಕರೆ ತಂದಿದ್ದ ಪೊಲೀಸ್ರೇ ಮಗನ ನಾಪತ್ತೆಗೆ ಕಾರಣ. ಹೊಳಲ್ಕೆರೆ ಠಾಣೆಯಿಂದಲೇ ಬಸವಂತಕುಮಾರ್ ನಾಪತ್ತೆ ಆಗಿದ್ದಾನೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಮಗನನ್ನು ಪತ್ತೆ ಮಾಡಿಕೊಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

Also Read: ಪ್ರೀತಿಸಿ ಮದುವೆಯಾಗಿ 9 ವರ್ಷ ಕಳೆದಿತ್ತು, ಮೂರು ಪುಟಾಣಿ ಮಕ್ಕಳು ಸಹ ಇದ್ರು, ಕೊನೆಯ ಮಗುವನ್ನು ಅಪ್ಪ ಕೊಂದು ಬಿಟ್ಟ, ಕಾರಣವೇನು?

ಇನ್ನು ಈ ಬಗ್ಗೆ ಚಿತ್ರದುರ್ಗ ಎಸ್ಪಿ ಕೆ. ಪರಶುರಾಮ್ ಅವ್ರನ್ನು ಕೇಳಿದ್ರೆ ಜೂನ್ 4ರ ರಾತ್ರಿ ಕುಡಿದ ಅಮಲಿನಲ್ಲಿ ಚಾಲಕ ಲಾರಿ ಓಡಿಸುತ್ತಿರುವ ಕಾರಣ ಲಾರಿ ಸೀಜ್ ಮಾಡಲಾಗಿದೆ. ಆದ್ರೆ, ಚಾಲಕನನ್ನು ಪೊಲೀಸ್ರು ಬಂಧಿಸಿಲ್ಲ. ದಂಡ ಕಟ್ಟಿ ಲಾರಿ ಬಿಡಿಸಿಕೊಂಡು ಹೋಗುವ ಪ್ರಕರಣವದು. ಬೆಳಗ್ಗೆ ಲಾರಿ ಮಾಲೀಕರು ಬಂದು ದಂಡದ ಹಣ ಪಾವತಿಸಿ ಲಾರಿ ಬಿಡಿಸಿಕೊಂಡು ಹೋಗಿದ್ದಾರೆ. ಜೂನ್ 5ರ ಬೆಳಗ್ಗೆ ಲಾರಿ ಚಾಲಕ ಬಸವಂತಕುಮಾರ್, ಹೊಳಲ್ಕೆರೆ ಠಾಣೆಯೊಳಗೆ ಎರಡು ಸಲ ಬಂದು ಹೊರಗೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಪ್ರಕರಣ ನಡೆದ ಕೆಲ ದಿನಗಳ ಬಳಿಕ ಪೋಷಕರು ನಾಪತ್ತೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಕುಡಿದು ಲಾರಿ ಚಲಾಯಿಸುತ್ತಿದ್ದ ಚಾಲಕ ನಾಪತ್ತೆಯಾದ ಘಟನೆ ನಡೆದಿದೆ. ಪೊಲೀಸ್ರು ಲಾರಿ ಜಪ್ತಿ ಮಾಡಿದ್ದೇ ಚಾಲಕ ನಾಪತ್ತೆ ಆಗಲು ಕಾರಣ ಆಯಿತಾ? ಠಾಣೆಗೆ ಬಂದಿದ್ದ ಚಾಲಕನಿಗೆ ಪೊಲೀಸ್ರಿಂದ ತೊಂದರೆ ಆಯಿತಾ? ಎಂಬುದು ತನಿಖೆಯಿಂದ ಬಯಲಾಗಬೇಕಿದೆ. ಅದೇನೆ ಇರಲಿ ಪೊಲೀಸ್ರು ಆದಷ್ಟು ಬೇಗ ನಾಪತ್ತೆಯಾದ ಲಾರಿ ಚಾಲಕನನ್ನು ಪತ್ತೆ ಮಾಡುವ ಕೆಲಸ ಮಾಡಬೇಕಿದೆ.

ಚಿತ್ರದುರ್ಗ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us