ರೈತರ ಪರಿಹಾರ ಹಣ ವಿಳಂಬ: ವಿಕಾಸಸೌಧದಲ್ಲಿರುವ ಸಣ್ಣ ನೀರಾವರಿ ಕಾರ್ಯದರ್ಶಿ ಕಚೇರಿಯ ಸಲಕರಣೆ ಜಪ್ತಿ

ಈವರೆಗೆ ಜಿಲ್ಲೆ-ತಾಲೂಕು ಸ್ಥಳೀಯ ಸರ್ಕಾರಿ ಆಡಳಿತ ಕಚೇರಿಗಳ ಸಲಕರಣೆ ಜಪ್ತಿಗೆ ಕೋರ್ಟ್​ ಆದೇಶ ನೀಡಿದನ್ನು ನೋಡಿದ್ದೇವೆ. ಕೇಳಿದ್ದೇವೆ. ಆದರೆ, ಈಗ ಬೆಂಗಳೂರಿನಲ್ಲಿರುವ ವಿಕಾಸಸೌಧದಲ್ಲಿರುವ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಕಚೇರಿಯ ಸಲಕರಣೆ ಜಪ್ತಿಗೆ ಕೋರ್ಟ್​ ಆದೇಶಿಸಿದೆ. ಏನಿದು ಕೇಸ್​ ಎನ್ನುವ ಮಾಹಿತಿ ಇಲ್ಲಿದೆ.

ರೈತರ ಪರಿಹಾರ ಹಣ ವಿಳಂಬ: ವಿಕಾಸಸೌಧದಲ್ಲಿರುವ ಸಣ್ಣ ನೀರಾವರಿ ಕಾರ್ಯದರ್ಶಿ ಕಚೇರಿಯ ಸಲಕರಣೆ ಜಪ್ತಿ
ವಿಕಾಸಸೌಧ

Updated on: Dec 06, 2024 | 4:54 PM

ಬೆಂಗಳೂರು/ಕಲಬುರಗಿ, (ಡಿಸೆಂಬರ್ 06): ವಿಕಾಸಸೌಧದಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಕಚೇರಿಯ ಲಕರಣೆ ಜಪ್ತಿಗೆ ಕಲಬುರಗಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊತನಹಿಪ್ಪರಗಾ ಗ್ರಾಮದಲ್ಲಿ ಭೂಸ್ವಾಧೀನ ಪಡಿಸಿಕೊಂಡು ರೈತರಿಗೆ ಪರಿಹಾರ ನೀಡದಿರುವ ಪ್ರಕರಣದಲ್ಲಿ ವಿಕಾಸಸೌಧದಲ್ಲಿರುವ ರಾಜ್ಯ ಮುಖ್ಯ ನೀರಾವರಿ ಇಲಾಖೆಯ ಕಾರ್ಯದರ್ಶಿ ಕಚೇರಿಯ ಪೀಠೋಪಕರಣಗಳ ಜಪ್ತಿ ಮಾಡುವಂರೆ ಕೋರ್ಟ್ ಆದೇಶಿಸಿದೆ. ಹೀಗಾಗಿ ರೈತ ಸಿದ್ದಪ್ಪ ಬಸಪ್ಪ ಪೂಜಾರಿ ಸಮ್ಮುಖದಲ್ಲಿ ಕೋರ್ಟ್ ಅದೇಶ ಅನ್ವಯ ಕಚೇರಿಯ ಸಲಕರಣೆಗಳನ್ನು ಜಪ್ತಿ ಮಾಡಿದ್ದಾರೆ.

ಸಂತ್ರಸ್ತ ರೈತ ಸಿದ್ದಪ್ಪ ಬಸಪ್ಪ ಪೂಜಾರಿ ಎನ್ನುವರು ಜಪ್ತಿ ವಾರೆಂಟ್ ಪಡೆದುಕೊಂಡು ಬಂದು ವಿಕಾಸಸೌಧದಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಕಚೇರಿ ಯಲ್ಲಿ ಸಾಮಾನುಗಳನ್ನು ಜಪ್ತಿ ಮಾಡಿದ್ದಾರೆ. 13 ಕುರ್ಚಿ, 4 ಕಂಪ್ಯೂಟರ್, 4 ಜೆರಾಕ್ಸ್ ಮಷಿನ್​ಗಳನ್ನು ಜಪ್ತಿ ಮಾಡಲಾಗಿದೆ.

ಎನ್.ಎಸ್ ಬೋಸರಾಜು ಸಚಿವರಾಗಿರುವ ಸಣ್ಣ ನೀರಾವರಿ ಇಲಾಖೆ, 2013 ರಿಂದಲೂ ಭೂ ಸ್ವಾಧೀನ ಪರಿಹಾರ ಬಾಕಿ ಉಳಿಸಿಕೊಂಡಿದೆ. ಇಲಾಖೆಯಲ್ಲಿ ಹಣ ಇಲ್ಲ ಎಂದು ಸಚಿವರು, ಕಾರ್ಯದರ್ಶಿ ಸಬೂಬು ಹೇಳುತ್ತಿದ್ದಾರೆ. ಇದೀಗ ಸಣ್ಣ ನೀರಾವರಿ ಕಾರ್ಯದರ್ಶಿ ರಾಘವನ್ ಕಚೇರಿಯ ಉಪಕರಣಗಳ ಜಪ್ತಿ ಮಾಡಲಾಗಿದೆ.

ಹೊಸ ಕೆರೆ ನಿರ್ಮಾಣಕ್ಕಾಗಿ ಸಣ್ಣ ನೀರಾವರಿ ಇಲಾಖೆಯು ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊತನಹಿಪ್ಪರಗಾ ಗ್ರಾಮದಲ್ಲಿ ರೈತರ ಜ,ಮೀನು ಭೂಸ್ವಾದೀನ ಮಾಡಿಕೊಂಡಿತ್ತು. ಆದ್ರೆ, ನೀರಾವರಿ ಇಲಾಖೆ, ಎಂಟು ವರ್ಷದ ಹಿಂದೆ ರೈತರಿಗೆ ಅಲ್ಪ ಪರಿಹಾರ ನೀಡಿ ಸುಮ್ಮನಾಗಿತ್ತು. ಇನ್ನುಳಿದ ಪರಿಹಾರಕ್ಕಾಗಿ ನೂರಾರು ರೈತರು ಪಟ್ಟು ಹಿಡಿದಿದ್ದರು. ಆದರೂ ಇಲಾಖೆ ಸ್ಪಂದಿಸಿಲ್ಲ. ಕೊನೆಗೆ ರೈತರು ಕೋರ್ಟ್​ ಮೆಟ್ಟಿಲೇರಿದ್ದರು. ರೈತರ ಅರ್ಜಿ ವಿಚಾರಣೆ ನಡೆಸಿದ ಕಲಬುರಗಿ ಜಿಲ್ಲಾ ಕೋರ್ಟ್, ಇಲಾಖೆಯ ಕಾರ್ಯದರ್ಶಿ ಕಚೇರಿಯ ಪೀಠೋಪಕರಣಗಳ ಜಪ್ತಿ ಮಾಡುವಂತೆ ಹೇಳಿ ಆದೇಶ ಹೊರಡಿಸಿದೆ.

ಮೈಸೂರು ಪಾಲಿಕೆ ಕಚೇರಿಯ ಪೀಠೋಪಕರಣಗಳ ಜಪ್ತಿ

ಮೈಸೂರು: ರೈತರಿಗೆ ಭೂಸ್ವಾಧೀನ ಹಣ ನೀಡಿದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿಯ ಪೀಠೋಪಕರಣಗಳ ಜಪ್ತಿ ಕೋರ್ಟ್​ ಆದೇಶ ಹೊರಡಿಸಿದೆ. 1996-97 ರಲ್ಲಿ ಮೇಗಲಾಪುರ ಕುಡಿಯುವ ನೀರಿನ ಯೋಜನೆಗಾಗಿ ಪಾಲಿಕೆ, 13 ಜನ ರೈತರಿಗೆ ಸೇರಿದ 45 ಎಕರೆ ಜಮೀನು ಭೂಸ್ವಾದೀನ ಮಾಡಿಕೊಂಡಿತ್ತು. ಆದ್ರೆ, ಪಾಲಿಕೆ ವತಿಯಿಂದ ಒಂದು ಎಕರೆಕೆಗೆ 45,000 ರೂ.ಪರಿಹಾರ ನೀಡಿದೆ. ಇದು ಸಾಲುವುದಿಲ್ಲ ಎಂದು ರೈತರು, ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿ ಹೆಚ್ಚುವರಿ ಪರಿಹಾರ ನೀಡಲು ನಿರ್ದೇಶಿಸಬೇಕೆಂದು ಮನವಿ ಮಾಡಿದ್ದರು.

ಇದಕ್ಕೆ ಕೋರ್ಟ್ ಸಹ ಹೆಚ್ಚುವರಿ ಹಣ ನೀಡಲು ಮೈಸೂರು ಪಾಲಿಕೆಗೆ ಸೂಚಿಸಿದ ಆದೇಶಿಸಿತ್ತು.ಒಂದು ಎಕರೆಗೆ 1 ಕೋಟಿ ರೂ,ಗೆ ಬಡ್ಡಿ ಸಮೇತ ಪರಿಹಾರ ನೀಡಲು ಹೇಳಿತ್ತು. ಆದ್ರೆ, 1 ವರ್ಷದ ಹಿಂದೆ ಅರ್ಧದಷ್ಟು ಹಣ ನೀಡಿ ಸುಮ್ಮನಾಗಿತ್ತು. ಈ ಬಾಕಿ ಹಣ ನೀಡಲು ಪಾಲಿಕೆ ಹಿಂದೇಟು ಹಾಕಿದ್ದರಿಂದ ಕೋರ್ಟ್ ಪಾಲಿಕೆ ಉಪಕರಣ ಜಪ್ತಿಗೆ ಆದೇಶ ನೀಡಿದ್ದು, ಈ ಆದೇಶದಂತೆ ಇಂದು(ಡಿಸೆಂಬರ್ 06) ಬೆಳಗ್ಗೆ ರೈತರು ಪಾಲಿಕೆಗೆ ಬಂದು ಉಪಕರಣಗಳನ್ನು ಜಪ್ತಿ ಮಾಡಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us