ಡಿಕೆ ಶಿವಕುಮಾರ್ ಮಂಗಳವಾರ ಸುಳ್ಯ ಕೋರ್ಟ್​ಗೆ ಹಾಜರು; ಕಾರಣ ಇಲ್ಲಿದೆ

ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ವಿದ್ಯುತ್ ಸಮಸ್ಯೆ ಬಗ್ಗೆ ಬಳ್ಳಾರಿಯ ಸಾಯಿ ಗಿರಿಧರ್ ಮತ್ತು ಡಿಕೆಶಿ ಫೋನಿನಲ್ಲಿ ಮಾತನಾಡುವಾಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.

ಡಿಕೆ ಶಿವಕುಮಾರ್ ಮಂಗಳವಾರ ಸುಳ್ಯ ಕೋರ್ಟ್​ಗೆ ಹಾಜರು; ಕಾರಣ ಇಲ್ಲಿದೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌
Updated By: sandhya thejappa

Updated on: Oct 04, 2021 | 12:27 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನ್ಯಾಯಾಲಯದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ (DK Shivakumar) ವಾರಂಟ್ (Warrant) ಜಾರಿಯಾಗಿದೆ. ಈ ಹಿನ್ನೆಲೆ ಡಿ.ಕೆ.ಶಿವಕುಮಾರ್ ಮಂಗಳವಾರ ಸುಳ್ಯ ಕೋರ್ಟ್​ಗೆ ಹಾಜರಾಗಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಸೆಪ್ಟೆಂಬರ್ 29ರಂದು ಡಿ.ಕೆ.ಶಿವಕುಮಾರ್​ರನ್ನು ಕೋರ್ಟ್‌ಗೆ ಹಾಜರು ಪಡಿಸುವಂತೆ ಡಿಜಿ ಮತ್ತು ಐಜಿಪಿಗೆ ನೋಟಿಸ್ ನೀಡಲಾಗಿತ್ತು.

ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ವಿದ್ಯುತ್ ಸಮಸ್ಯೆ ಬಗ್ಗೆ ಬಳ್ಳಾರಿಯ ಸಾಯಿ ಗಿರಿಧರ್ ಮತ್ತು ಡಿಕೆಶಿ ಫೋನಿನಲ್ಲಿ ಮಾತನಾಡುವಾಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಆಗ ಡಿ.ಕೆ.ಶಿವಕುಮಾರ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ಡಿ.ಕೆ.ಶಿವಕುಮಾರ್ ದೂರು ಆಧರಿಸಿ ಗಿರಿಧರ್ ರೈನನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಸಂಬಂಧ ಸಾಕ್ಷ್ಯ ಹೇಳಲು ಡಿಕೆಶಿ ಬರಬೇಕಾಗಿತ್ತು. ಆದರೆ ಹಲವು ಬಾರಿ ನೋಟಿಸ್ ನೀಡಿದರೂ ಹಾಜರಾಗದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ವಾರಂಟ್ ಜಾರಿ ಮಾಡಲಾಗಿತ್ತು.

ಪ್ರಕರಣವೇನು?
ಸ್ಥಳೀಯವಾಗಿ ನಿರಂತರ ಕಾಡುತ್ತಿದ್ದ ವಿದ್ಯುತ್ ಸಮಸ್ಯೆ ಬಗ್ಗೆ ಬೆಳ್ಳಾರೆಯ ವರ್ತಕ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ್ ರೈ 2016ರ ಫೆಬ್ರವರಿ 28ರಂದು ರಾತ್ರಿ ಅಂದಿನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿ ಸಮಸ್ಯೆ ತಿಳಿಸಿದ್ದರು. ಈ ವೇಳೆ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಅವಾಚ್ಯ ಶಬ್ದಗಳ ಬಳಕೆ ಕೂಡ ಆಗಿತ್ತು ಎಂದು ಆರೋಪಿಸಲಾಗಿದ್ದು, ಇದು ಡಿಕೆ ಶಿವಕುಮಾರ್ ಅವರು ಕೋಪಗೊಳ್ಳಲು ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಸಚಿವ ಡಿಕೆ ಶಿವಕುಮಾರ್ ಮೆಸ್ಕಾಂ ಎಂಡಿ ಮೂಲಕ ಅಂದಿನ ಸುಳ್ಯ ಪ್ರಭಾರ ಎಇಇ ಹರೀಶ್ ನಾಯಕ್ ಅವರಿಂದ ಸಾಯಿ ಗಿರಿಧರ್ ವಿರುದ್ಧ ಪೊಲೀಸರಿಗೆ ದೂರು ನೀಡಿಸಿದ್ದರು. ಈ ಪ್ರಕರಣ ಸಂಬಂಧ ಬೆಳ್ಳಾರೆ ಪೊಲೀಸರು ಗಿರಿಧರ್ ರೈ ಅವರನ್ನು ಬಂಧಿಸಿದ್ದರು.

ಇದನ್ನೂ ಓದಿ

KL Rahul: ಆರೆಂಜ್ ಕ್ಯಾಪ್​ಗಾಗಿ ರಾಹುಲ್-ಗಾಯಕ್ವಾಡ್ ನಡುವೆ ಹೋರಾಟ: ಪರ್ಪಲ್ ಕ್ಯಾಪ್ ಹರ್ಷಲ್ ಬಳಿ ಭದ್ರ

ದತ್ತಪೀಠದಲ್ಲಿ ಅನಗತ್ಯವಾಗಿ ನಿರ್ಮಾಣ ಮಾಡಿರುವ ಘೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರ ಮಾಡಿ; ಸಚಿವ ಸುನಿಲ್ ಕುಮಾರ್ ಸೂಚನೆ

Published On - 12:26 pm, Mon, 4 October 21