43 ವರ್ಷ ಬಳಿಕ ತುಂಬಿದ ಅಣಜಿ ಕೆರೆಯಿಂದ ನೀರು ಹೊರಬಿಡಿ ಎಂಬ ಅಚ್ಚರಿಯ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ! ಏನು ಕಾರಣ?

ನೀರು ಹೊರ ಬಿಟ್ಟಿದ್ದರಿಂದ ಕೆಲ ರೈತರು ಅಯ್ಯೋ ನೀರು ಹೊರಬಿಟ್ಟರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಅಬ್ಬಾ ನೀರು ಕಡಿಮೆಯಾಗಿ ನಮ್ಮ ತೋಟ ಉಳಿಯಿತು ಎಂದು ನಿಟ್ಟುಸಿರು ಬಿಟ್ಟರು.

43 ವರ್ಷ ಬಳಿಕ ತುಂಬಿದ ಅಣಜಿ ಕೆರೆಯಿಂದ ನೀರು ಹೊರಬಿಡಿ ಎಂಬ ಅಚ್ಚರಿಯ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ! ಏನು ಕಾರಣ?
43 ವರ್ಷ ಬಳಿಕ ತುಂಬಿದ ಅಣಜಿ ಕೆರೆಯಿಂದ ನೀರು ಹೊರಬಿಡುವಂತೆ ಜಿಲ್ಲಾಧಿಕಾರಿ ಆದೇಶ
Edited By: ಸಾಧು ಶ್ರೀನಾಥ್​

Updated on: Dec 31, 2022 | 11:40 AM

ತುಂಬಿದ ಕೆರೆಯಿಂದ ನೀರು ಹೊರಬಿಡಲು ಅಚ್ಚರಿಯ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ! ಕಾರಣ ಏನ್ ಗೊತ್ತಾ? ಅದು ನಾಲ್ಕ ದಶಕಗಳ ಬಳಿಕ ಭರ್ತಿಯಾಗಿತ್ತು. ಇದೇ ಕಾರಣಕ್ಕೆ ಗ್ರಾಮಸ್ಥರು ಹಬ್ಬ ಮಾಡಿದ್ದರು. ಇದೊಂದು ಐತಿಹಾಸಿಕ ಕೆರೆ. ಇಂತಹ ತುಂಬಿದ ಕೆರೆಯಿಂದ ನೀರನ್ನು ಹೊರಗೆ ಬಿಡಲು ಖುದ್ದು ಜಿಲ್ಲಾಧಿಕಾರಿಗಳೇ ಆದೇಶ ಮಾಡಿದ್ದು ಅಚ್ಚರಿಯ ಸಂಗತಿ. ಇಲ್ಲಿದೆ ಕೆರೆ ಕೋಡಿ ಸ್ಟೋರಿ. ಆ ಕೆರೆ 43 ವರ್ಷಗಳ ಬಳಿಕ ತುಂಬಿದ್ದರಿಂದ ಇಡೀ 900 ಎಕರೆ ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಅದ್ರೇ ಅ ಕೆರೆಯ ಹಿನ್ನೀರಿನ ಭಾಗದ ರೈತರ ತೋಟಗಳಲ್ಲಿ ಮೊಣಕಾಲಷ್ಟು ನೀರು ನಿರಂತರವಾಗಿ ನಿಂತಿರುವುದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದರು. ದುರಂತ ಅಂದ್ರೇ ಕೆರೆಯಲ್ಲಿ ಶೇಖರಣೆಯಾಗಿರುವ ನೀರನ್ನು ಕೋಡಿ ಒಡೆದು ಹೊರಬಿಡಲು ಜಿಲ್ಲಾಧಿಕಾರಿ (Davanagere DC) ಆದೇಶಿಸಿದ್ರು, ತುಂಬಿದ ಕೆರೆಯ ನೀರನ್ನು ಕೆಲ ರೈತರ ಪರ-ವಿರೋಧ ನಡುವೆ ಕೆರೆಯ ಕೋಡಿ ಒಡೆದು ನೀರು ಹೊರಬಿಡಲಾಗಿದೆ.

ತುಂಬಿದ ಅಣಜಿ ಕೆರೆಯಲ್ಲಿ (Anaji lake) ನೀರು 13 ಸೆಂಟಿ ಮೀಟರ್ ಹೆಚ್ಚಿದೆ ಎಂಬ ಕಾರಣಕ್ಕೆ ಬರದಿಂದ ಕಂಗ್ಗೆಟ್ಟಿದ್ದ ರೈತರ ವಿರೋಧದ ನಡುವೆಯೂ ನೀರು ಹೊರ ಬಿಡಲಾಗಿದೆ. ಕೆರೆಯ ನೀರನ್ನು ಹೊರಬಿಡುವಂತೆ ಖುದ್ದು ದಾವಣಗೆರೆ (Davanagere) ಜಿಲ್ಲಾಧಿಕಾರಿ ಶಿವಾನಂದ ಕಪಾಶಿಯವರೇ ಅಚ್ಚರಿಯ ಆದೇಶನ ಹೊರಡಿಸಿರುವುದು ರೈತರನ್ನು (Farmers) ಕಂಗೆಡಿಸಿದೆ. ಹೌದು ಇತಂಹದೊಂದು ವಿಚಿತ್ರ ಆದೇಶಕ್ಕೆ ದಾವಣಗೆರೆ ತಾಲೂಕಿನ ಐತಿಹಾಸಿಕ ಅಣಜಿ ಕೆರೆ ಸಾಕ್ಷಿಯಾಗಿದೆ.

ಅಣಜಿ ಕೆರೆಯ ಹಿನ್ನೀರಿನಲ್ಲಿ ಬರುವ ಕೆರೆಯಾಗಲಹಳ್ಳಿಯ ಸುಮಾರು ನೂರಾರು ಎಕರೆ ಅಡಿಕೆ ತೋಟ ನೀರಿನಲ್ಲಿ ಮುಳುಗಿ ಹೋಗಿವೆ. ಈ ಭಾಗದ ರೈತರು ಕಣ್ಣೀರಿನಲ್ಲಿ ಕೈತೊಳೆಯತ್ತಿದ್ದರು. ಇದರಿಂದ ನೀರನ್ನು ಕೆರೆಯ ಕೋಡಿ ಒಡೆದು ಹೊರಬಿಟ್ಟು ನಮ್ಮ ತೋಟಗಳನ್ನು ಉಳಿಸುವಂತೆ ಜಿಲ್ಲಾಧಿಕಾರಿಗೆ ರೈತರು ಮನವಿ ಮಾಡಿದ್ದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಶಿವಾನಂದ ಕಪಾಶಿಯವರು ರೈತರಿಗೆ ಬೆನ್ನಿಗೆ ನಿಂತು 13 ಸೆಂಟಿ ಮೀಟರ್ (ಒಂದೂವರೆ ಅಡಿ) ನಷ್ಟು ನೀರನ್ನು ಹೊರಬಿಡುವಂತೆ ಆದೇಶ ಮಾಡಿದ್ರು. ಈ ಆದೇಶ ಕೆಲ ರೈತರಿಗೆ ನೋವುಂಟು ಮಾಡಿದ್ರೇ ಇನ್ನು ಕೆಲವೊಂದು ರೈತರಿಗೆ ಸಂತಸ ತಂದಿದೆ.

ಹೊರಬಿಟ್ಟಿರುವ ನೀರನ್ನು ಮತ್ತೆ ಕೆರೆಗೆ ತುಂಬಿಸಬೇಕಾದ್ರೆ ಕನಿಷ್ಠ ಅಂದ್ರು ಎರಡು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಇತಂಹ ಪರಿಸ್ಥಿತಿಯಲ್ಲಿ ನೀರು ಹೊರಬಿಟ್ಟಿರುವುದು ರೈತರನ್ನು ಆಘಾತಕ್ಕೆ ಒಳಗಾಗುವಂತೆ ಮಾಡಿದ್ದಾರೆ. ಇನ್ನು ನೀರನ್ನು ಹೊರಬಿಟ್ಟಿದ್ದರಿಂದ ಶೇಂಗಾ, ಕಬ್ಬು, ಭತ್ತ, ಕಡಲೆ ಹೀಗೆ ನಾನಾ ಬೆಳೆಗಳು ಮುಳುಗಡೆಯಾಗುವ ಸಾಧ್ಯತೆಯಾಗುವುದು ದಟ್ಟವಾಗಿದೆ. ನೀರನ್ನು ಹೊರಗಡೆ ಬಿಡುವುದರಿಂದ‌ ನೀರು ಹರಿಯುವ ಸ್ಥಳದ ಕೂಗಳತೆಯಲ್ಲೇ ಸಾಕಷ್ಟು ಜಮೀನುಗಳಿದ್ದು, ಅ ಜಮೀನುಗಳಿಗೆ ತೆರಳಲು ರೈತರಿಗೆ ದಾರಿ ಇಲ್ಲದಂತಾಗಿದೆ ಎಂದು ರೈತ ಪ್ರಕಾಶ್ ಪಾಟೀಲ್ ಆಕ್ರೋಶ ಹೊರಹಾಕಿದ್ರು.

ಒಟ್ಟಾರೆ ಅಣಜಿ ಕೆರೆಯ ಹಿನ್ನೀರಿನಲ್ಲಿ ಮುಳುಗಡೆಯಾದ ತೋಟವನ್ನು ಉಳಿಸುವ ದೃಷ್ಟಿಯಿಂದ ಕೆರೆಯ ನೀರನ್ನು ಹೊರ ಬಿಡಲಾಗಿದೆ. ನೀರು ಹೊರ ಬಿಟ್ಟಿದ್ದರಿಂದ ಕೆಲ ರೈತರು ಅಯ್ಯೋ ನೀರು ಹೊರಬಿಟ್ಟರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಅಬ್ಬಾ ನೀರು ಕಡಿಮೆಯಾಗಿ ನಮ್ಮ ತೋಟ ಉಳಿಯಿತು ಎಂದು ನಿಟ್ಟುಸಿರು ಬಿಟ್ಟರು. ಅದೇನೆ ಆಗಲಿ ಕೆರೆಯಲ್ಲಿದ್ದ ನೀರನ್ನು ಒಬ್ಬ ಜಿಲ್ಲಾಧಿಕಾರಿ ಕೋಡಿ ಒಡೆದು ಹೊರಬಿಡಲು ಆದೇಶಿರುವುದು ಇತಿಹಾಸದಲ್ಲೇ ಇದೆ ಮೊದಲು ಎಂಬುದು ಅಚ್ಚರಿಯ ಸಂಗತಿಯೇ ಸರಿ.

ವರದಿ: ಬಸವರಾಜ್ ದೊಡ್ಮನಿ, ಟಿವಿ9, ದಾವಣಗೆರೆ 

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:39 am, Sat, 31 December 22

Web contact

TV9 Kannada

Read More
Follow Us