ಧಾರವಾಡ: ಮಳೆ ಬಾರದೇ ಒಣಗಿ ಹೋದ ಕಡಲೆ: ಕೈಕೊಟ್ಟ ಹಿಂಗಾರು, ರೈತ ಕಂಗಾಲು

Dharwad News: ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಮುಂಗಾರು ಕೈಕೊಟ್ಟ ಬಳಿಕ ಹಿಂಗಾರು ಮಳೆಯಾದರೂ ಆಗುತ್ತೆ ಅಂದುಕೊಂಡಿದ್ದ ರೈತರಿಗೆ ನಿರಾಸೆಯಾಗಿದೆ. ಏಕೆಂದರೆ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಾಗಲೆಲ್ಲಾ ಹಿಂಗಾರು ಮಳೆ ಕೈ ಹಿಡಿಯುತ್ತಿತ್ತು, ಆದರೆ ಈ ಬಾರಿ ಹಿಂಗಾರು ಮಳೆ ಕೂಡ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿ ಕಂಗಾಲಾಗಿ ಹೋಗಿದ್ದಾರೆ.

ಧಾರವಾಡ: ಮಳೆ ಬಾರದೇ ಒಣಗಿ ಹೋದ ಕಡಲೆ: ಕೈಕೊಟ್ಟ ಹಿಂಗಾರು, ರೈತ ಕಂಗಾಲು
ಕಡಲೆ ಬೆಳೆ
Edited By:

Updated on: Nov 16, 2023 | 8:04 PM

ಧಾರವಾಡ, ನವೆಂಬರ್​​​ 16: ಜಿಲ್ಲೆಯ ಪ್ರಮುಖ ಬೆಳೆಗಳ ಪೈಕಿ ಕಡಲೆ (Chickpeas) ಕೂಡ ಒಂದು. ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಹಿಂಗಾರು ಹಂಗಾಮಿನಲ್ಲಿ ಕಡಲೆ ಬೆಳೆಯುತ್ತಾರೆ. ಕಡಿಮೆ ಶ್ರಮ ಹಾಗೂ ಕಡಿಮೆ ನಿರ್ವಹಣೆ ಈ ಬೆಳೆಗೆ ಸಾಕು. ಅಲ್ಲದೇ ಕೊನೆ ಕೊನೆಗೆ ಚಳಿಯ ಮೇಲೆಯೇ ಈ ಬೆಳೆ ಕೈಗೆ ಬಂದು ಬಿಡುತ್ತೆ. ಇದೇ ಕಾರಣಕ್ಕೆ ಮುಂಗಾರು ಕೈಕೊಟ್ಟಿದ್ದಕ್ಕೆ ಹಿಂಗಾರಿನಲ್ಲಾದರೂ ಈ ಬೆಳೆ ಕೈ ಹಿಡಿಯಬಹುದು ಅಂದುಕೊಂಡು ಕಡಲೆ ಬಿತ್ತನೆ ಮಾಡಿದ ರೈತರಿಗೆ ಇದೀಗ ನಿರಾಸೆ ಮೂಡಿದೆ.

ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಮುಂಗಾರು ಕೈಕೊಟ್ಟ ಬಳಿಕ ಹಿಂಗಾರು ಮಳೆಯಾದರೂ ಆಗುತ್ತೆ ಅಂದುಕೊಂಡಿದ್ದ ರೈತರಿಗೆ ನಿರಾಸೆಯಾಗಿದೆ. ಏಕೆಂದರೆ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಾಗಲೆಲ್ಲಾ ಹಿಂಗಾರು ಮಳೆ ಕೈ ಹಿಡಿಯುತ್ತಿತ್ತು, ಆದರೆ ಈ ಬಾರಿ ಹಿಂಗಾರು ಮಳೆ ಕೂಡ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿ ಕಂಗಾಲಾಗಿ ಹೋಗಿದ್ದಾರೆ.

ಇದನ್ನೂ ಓದಿ: ಅದೊಂದಿದ್ದರೆ ಸಾಕಂತೆ ಪಡಿತರ ಬೇಡವಂತೆ… ಧಾರವಾಡ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಸಾವಿರಾರು ಜನ ಅನೇಕ ತಿಂಗಳಿಂದ ರೇಷನ್ ಪಡೆದೇ ಇಲ್ಲ!

ಅದರಲ್ಲೂ ಅನೇಕ ಕಡೆಗಳಲ್ಲಿ ಹಿಂಗಾರು ನಂಬಿ ಅನೇಕ ಕಡೆಗಳಲ್ಲಿ ಬಿತ್ತನೆ ಕಾರ್ಯ ಮಾಡಿದ್ದರು. ಅದರಲ್ಲೂ ಕಡಿಮೆ ನಿರ್ವಹಣೆ ಬೇಡುವ ಕಡಲೆ ಬಿತ್ತನೆ ಅನೇಕ ಕಡೆಗಳಲ್ಲಿ ಆಗಿತ್ತು. ಆದರೆ ಇದೀಗ ಅಂಥ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೇ ಒಂದು ಮಳೆ ಬಂದಿದ್ದರೂ ಸಾಕಿತ್ತು ಕಡಲೆ ಬೆಳೆ ಕೈಗೆ ಬರಲು. ಆದರೆ ಇದೀಗ ಎಲ್ಲವೂ ಮುಗಿದೇ ಹೋಗಿದೆ. ಒಂದು ಮಳೆ ಬಂದಿದ್ದರೆ ಮುಂದೆ ಚಳಿಯ ಮೇಲೆಯೇ ಕಾಳುಗಳು ಬಲಿತು, ಬೆಳೆ ಕೈಗೆ ಬರುತ್ತಿತ್ತು. ಆದರೆ ಮಳೆ ಬಾರದೇ ಗಿಡ ಒಣಗಿ ಹೋಗುತ್ತಿವೆ.

ಮುಂಗಾರು ಮಳೆಯಾಗದೇ ಭೂಮಿಯಲ್ಲಿ ತೇವಾಂಶವೇ ಇಲ್ಲದಾಗಿದೆ. ಮುಂಗಾರು ಮಳೆಯಾಗಿದ್ದರೆ ತೇವಾಂಶ ಉಳಿದುಕೊಂಡು, ಹಿಂಗಾರು ಮಳೆ ಕೊಂಚ ತಡವಾಗಿ ಬಂದಿದ್ದರೂ ನಡೆಯುತ್ತಿತ್ತು. ಆದರೆ ಮುಂಗಾರು ಮಳೆ ಕೈಕೊಟ್ಟು, ಇದೀಗ ಹಿಂಗಾರು ಕೂಡ ಕೈಕೊಟ್ಟಿದೆ. ಇದೆಲ್ಲದರ ಮೇಲೆ ಬಿಸಿಲಿನ ಪ್ರಮಾಣವೂ ಹೆಚ್ಚಾಗಿದೆ. ಹೀಗಾಗಿ ನೀರಿನ ಅಂಶ ಇಲ್ಲದೇ ಬೆಳೆ ಒಣಗುತ್ತಿರೋದು ಒಂದು ಕಡೆಯಾದರೆ, ವಿವಿಧ ರೋಗಗಳು ಬೆಳೆಗೆ ಮುತ್ತಿಕೊಳ್ಳುತ್ತಿರೋದು ಮತ್ತೊಂದು ಕಡೆ.

ಇದನ್ನೂ ಓದಿ: ಸಂತೋಷ-ಸಮಾಧಾನದ ಸಂಗತಿ! ಮುಂಗಾರು ಹಿಂಗಾರು ಕೈಕೊಟ್ಟರೂ ಆ ರೈತ ಮಾಡಿದ ಸೂಪರ್​ ಐಡಿಯಾಗೆ ಬಂಪರ್​ ಬೆಳೆ- ಮಹಿಳಾ ಕೃಷಿ ಕಾರ್ಮಿಕರಿಗೆ ಕೈತುಂಬಾ ಕೆಲಸ

ಪ್ರತಿವರ್ಷ ಉತ್ತಮ ಬೆಳೆ ಪಡೆಯುತ್ತಿದ್ದ ರೈತರಿಗೆ ಈ ಬಾರಿ ಎಕರೆಗೆ ಹತ್ತು ಕೇಜಿ ಕಾಳು ಕೂಡ ಬರೋದಿಲ್ಲ ಅನ್ನೋ ಸ್ಥಿತಿ ಬಂದಿದೆ. ಹೊಲ ಸಿದ್ಧ ಮಾಡಿಕೊಂಡು, ಬಿತ್ತನೆ ಕೆಲಸಕ್ಕೆ ಖರ್ಚು ಮಾಡಿದ್ದೂ ಕೂಡ ಈ ಬಾರಿ ಬರೋದಿಲ್ಲ. ಇದರಿಂದಾಗಿ ಮುಂದೆ ಏನೂ ಮಾಡದೇ ರೈತರು ಹೊಲಗಳಿಗೆ ಹೋಗೋದನ್ನೇ ಬಿಟ್ಟಿದ್ದಾರೆ.

ಧಾರವಾಡ ಜಿಲ್ಲೆಯ ಅನೇಕ ಭಾಗಗಳಲ್ಲಿ ಕಪ್ಪು ಮಣ್ಣು ಇರೋದ್ರಿಂದ ರೈತರು ಹಿಂಗಾರು ಮಳೆ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದಾರೆ. ಒಂದೆರಡು ಮಳೆಯಾಗಿಬಿಟ್ಟರೆ ರೈತರಿಗೆ ಬೆಳೆ ಕೈಗೆ ಸಿಕ್ಕುಬಿಡುತ್ತೆ. ಆದರೆ ಈ ಬಾರಿ ಮಾತ್ರ ಮುಂಗಾರಿನಲ್ಲಿಯೂ ಮಳೆ ಬರಲಿಲ್ಲ. ಇನ್ನು ಹಿಂಗಾರಿನಲ್ಲಿಯೂ ಮಳೆಯಾಗದೇ ರೈತರು ಕೈಸುಟ್ಟುಕೊಳ್ಳುವಂತಾಗಿರೋದು ವಿಪರ್ಯಾಸದ ಸಂಗತಿಯೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us