ಧಾರವಾಡ: ಭಾವೈಕ್ಯತೆ ಮೆರೆದ ಎರಡೂ ಕೋಮಿನ ಜನ; ವಿಗ್ರಹ, ಬೋರ್ಡ್​ ತೆರವುಗೊಳಿಸಲು ನಿರ್ಧಾರ

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಕೋಮುಗಲಭೆಗಳು ಎದ್ದು ಬಿಡುತ್ತಿವೆ. ಎರಡೂ ಕೋಮಿನ ಜನರು ಎದುರುಕಡೆ ನಿಂತು ಹೊಡೆದಾಡೋದು, ಕಲ್ಲು ತೂರುವುದು ನಡೆದೇ ಇದೆ. ಆದರೆ, ಇಂಥ ವಿಚಾರಗಳ ಮಧ್ಯೆ ಧಾರವಾಡದಲ್ಲಿ ಎರಡು ಕೋಮುಗಳ ಜನರು ಭಾವೈಕ್ಯತೆ ಮೆರೆದು ದೇಶಕ್ಕೇ ಮಾದರಿಯಾಗಿದ್ದಾರೆ. ಏನಿದು ಕಥೆ ಅಂತೀರಾ? ಈ ಸ್ಟೋರಿ ಓದಿ.

ಧಾರವಾಡ: ಭಾವೈಕ್ಯತೆ ಮೆರೆದ ಎರಡೂ ಕೋಮಿನ ಜನ; ವಿಗ್ರಹ, ಬೋರ್ಡ್​ ತೆರವುಗೊಳಿಸಲು ನಿರ್ಧಾರ
ಧಾರವಾಡ: ಭಾವೈಕ್ಯತೆ ಮೆರೆದ ಎರಡೂ ಕೋಮಿನ ಜನ; ವಿಗ್ರಹ
Edited By: ಕಿರಣ್ ಹನುಮಂತ್​ ಮಾದಾರ್

Updated on: Sep 20, 2024 | 6:55 PM

ಧಾರವಾಡ, ಸೆ.20: ಕೆಲ ವರ್ಷಗಳ ಹಿಂದಷ್ಟೇ ಧಾರವಾಡ(Dharwad) ನಗರದಲ್ಲಿ ಸೂಪರ್ ಮಾರ್ಕೆಟ್​ನ್ನು ಅಭಿವೃದ್ಧಿಪಡಿಸಲಾಗಿದೆ. ಈ ವೇಳೆ ಸುಮಾರು 8 ಗುಂಟೆ ಜಾಗವನ್ನು ಪಾರ್ಕಿಂಗ್ ಸಲುವಾಗಿ ಬಿಡಲಾಗಿದೆ. ಆ ಜಾಗದಲ್ಲಿ ಇರುವ ಒಂದು ಮರದ ಕೆಳಗಡೆ ಆಂಜನೇಯ ಸೇರಿದಂತೆ ಹಲವಾರು ದೇವರ ಹಳೆಯ ವಿಗ್ರಹಗಳನ್ನು ಇಡಲಾಗಿತ್ತು. ನಿತ್ಯವೂ ಅಲ್ಲಿನ ಹಿಂದೂ ಸಮುದಾಯದ ಸಣ್ಣ ವ್ಯಾಪಾರಿಗಳು ಆ ವಿಗ್ರಹಗಳಿಗೆ ಪೂಜೆ ಮಾಡಿ, ಭಕ್ತಿ ಮೆರೆಯುತ್ತಿದ್ದರು. ಇದೇ ವೇಳೆ ಅದೇ ಜಾಗದಲ್ಲಿ ಮತ್ತೊಂದು ಮರದ ಕೆಳಗಡೆ ಮುಸ್ಲಿಂ ಸಮುದಾಯದವರು ಮೆಹಬೂಬ ಸುಭಾನಿ ದರ್ಗಾ ಎಂದು ನಾಮಫಲಕವನ್ನು ಇಟ್ಟಿದ್ದರು. ಈ ವಿಚಾರ ಇಂದು ಒಮ್ಮೆಲೇ ಭುಗಿಲೆದ್ದಿತು. ಹಿಂದೂಪರ ಸಂಘಟನೆಗಳ ಯುವಕರು ಆ ನಾಮಫಲಕವನ್ನು ತೆರೆವುಗೊಳಿಸುವಂತೆ ಆಗ್ರಹಿಸಿದರು. ಇದೇ ವೇಳೆ ಹಿಂದೂ ದೇವರ ವಿಗ್ರಹಗಳನ್ನು ತೆರವುಗೊಳಿಸಿ ಎಂದು ಮುಸ್ಲಿಮರು ಕೂಡ ಆಗ್ರಹಿಸಿದರು.

ಈ ವೇಳೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಎರಡೂ ಕೋಮಿನ ಮುಖಂಡರನ್ನು ಕರೆದು ಮಾತನಾಡಿಸಿದರು. ಆದರೆ, ಮೊದಲಿಗೆ ಎರಡೂ ಕಡೆಯವರು ಒಪ್ಪಲಿಲ್ಲ. ಹಿಂದೂಗಳು ಈ ದೇವರು ಹಲವಾರು ವರ್ಷಗಳಿಂದ ಇಲ್ಲಿಯೇ ಇವೆ. ಮುಸ್ಲಿಮರು ಇತ್ತೀಚಿಗಷ್ಟೇ ಇಲ್ಲಿ ದರ್ಗಾ ನಿರ್ಮಿಸಲು ಸಂಚು ರೂಪಿಸಿ, ನಾಮಫಲಕ ಅಳವಡಿಸಿದ್ದಾರೆ. ಹೀಗಾಗಿ ಅವರ ನಾಮಫಲಕವನ್ನು ತೆರವುಗೊಳಿಸುವಂತೆ ಪಟ್ಟು ಹಿಡಿದರು. ಇದೇ ವೇಳೆ ವಿಗ್ರಹಗಳನ್ನು ಈ ಸ್ಥಳದಿಂದ ತೆರವುಗೊಳಿಸಿದರೆ ನಾವೂ ನಾಮಫಲಕವನ್ನು ತೆಗೆಯೋದಾಗಿ ಮುಸ್ಲಿಂ ಮುಖಂಡರು ಹೇಳಿದರು.

ಇದನ್ನೂ ಓದಿ:ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು

ಕೊನೆಗೆ ಎರಡೂ ಕೋಮಿನ ಮುಖಂಡರೊಂದಿಗೆ ನಗರ ಠಾಣೆ ಪೊಲೀಸರು ಮಾತುಕತೆ ನಡೆಸಿ, ಇಬ್ಬರ ಮನವೊಲಿಸುವಲ್ಲಿ ಯಶಸ್ವಿಯಾದರು. ಎರಡೂ ಕೋಮಿನ ಜನರು ಪರಸ್ಪರ ಒಪ್ಪಿಗೆ ಸೂಚಿಸಿ, ಈ ಸಮಸ್ಯೆಯನ್ನು ಭಾವೈಕ್ಯತೆಯಿಂದ ಮುಕ್ತಾಯಗೊಳಿಸಲು ನಿರ್ಧರಿಸಿದರು. ಹಿಂದೂಗಳು ವಿಗ್ರಹಗಳಿಗೆ ಪೂಜೆ ಸಲ್ಲಿಸಿ ತೆರವುಗೊಳಿಸಿದರೆ, ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿ ನಾಮಫಲಕ ತೆರವುಗೊಳಿಸಿದರು. ಆ ಮೂಲಕ ನಾಡಿಗೇ ಭಾವೈಕ್ಯತೆಯ ಪಾಠ ಹೇಳಿದರು.

ಕೆಲ ವರ್ಷಗಳ ಹಿಂದಷ್ಟೇ ಹುಬ್ಬಳ್ಳಿಯಲ್ಲಿ ಕೋಮುಗಲಭೆ ಸೃಷ್ಟಿಯಾಗಿ ಅನೇಕ ರಾದ್ಧಾಂತಗಳು ಜರುಗಿದ್ದವು. ಹುಬ್ಬಳ್ಳಿಯಂತೆ ಧಾರವಾಡವೂ ಸೂಕ್ಷ್ಮ ನಗರವಾಗಿರೋದ್ರಿಂದ ಈ ಪ್ರಕರಣ ಅಷ್ಟು ಸುಲಭವಾಗಿ ಮುಗಿಯೋದಿಲ್ಲ ಅಂದುಕೊಳ್ಳಲಾಗಿತ್ತು. ಆದರೆ, ಪೊಲೀಸರ ಕಾರ್ಯಕ್ಷಮತೆ ಹಾಗೂ ಎರಡೂ ಕೋಮಿನ ಜನರ ಗಟ್ಟಿ ನಿರ್ಧಾರದಿಂದಾಗಿ ಈ ಸಮಸ್ಯೆ ಇದೀಗ ಸುಖಾಂತ್ಯ ಕಂಡಿದೆ. ಒಟ್ಟಿನಲ್ಲಿ ಕೋಮು ಗಲಭೆಗಳಾಗದಂತೆ ತಡೆಯಬೇಕೆಂದರೆ ಎರಡೂ ಕೋಮಿನ ಜನರು ಪರಸ್ಪರ ಸೌಹಾರ್ದಯುತವಾಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎನ್ನುವುದು ಈ ಪ್ರಕರಣದಿಂದ ತಿಳಿದು ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us