ದೀಪಾವಳಿ: ಖಾಸಗಿ ಬಸ್​​​ಗಳ ಟಿಕೆಟ್ ದರ ಭಾರಿ ದುಬಾರಿ, ಬೆಂಗಳೂರಿನಿಂದ ಊರಿಗೆ ತೆರಳುವವರಿಗೆ ಸಂಕಷ್ಟ

ದೀಪಾವಳಿ ಆಚರಣೆ ಮತ್ತು ಪ್ರವಾಸಿ ತಾಣಗಳಿಗೆ ಬೆಂಗಳೂರಿನಿಂದ ಹೋಗುವ ಜನರಿಗೆ ಖಾಸಗಿ ಬಸ್​​ ದುಬಾರಿ ದರದ ಬಿಸಿ ತಟ್ಟುತ್ತಿದೆ. ಈ ಮಧ್ಯೆ, ಹೆಚ್ಚುವರಿ ಶುಲ್ಕ ವಸೂಲಿ ಮಾಡದಂತೆ ಈಗಾಗಲೇ ಖಾಸಗಿ ಬಸ್ ನಿರ್ವಾಹಕರಿಗೆ ಎಚ್ಚರಿಕೆ ನೀಡಲಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುವುದಾಗಿ ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ದೀಪಾವಳಿ: ಖಾಸಗಿ ಬಸ್​​​ಗಳ ಟಿಕೆಟ್ ದರ ಭಾರಿ ದುಬಾರಿ, ಬೆಂಗಳೂರಿನಿಂದ ಊರಿಗೆ ತೆರಳುವವರಿಗೆ ಸಂಕಷ್ಟ
ಸಾಂದರ್ಭಿಕ ಚಕಿತ್ರ

Updated on: Nov 09, 2023 | 3:04 PM

ಬೆಂಗಳೂರು, ನವೆಂಬರ್ 9: ದೀಪಾವಳಿ (Diwali) ಹಬ್ಬದ ಪ್ರಯುಕ್ತ ಖಾಸಗಿ ಬಸ್​ನವರು (Private Bus Fare) ಟಿಕೆಟ್‌ ದರ ವಿಪರೀತ ಹೆಚ್ಚಿಸಿದ್ದು, ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದೆ. ಈ ಸಮಯದಲ್ಲಿ ಸಾವಿರಾರು ಜನ ತಮ್ಮ ಊರುಗಳಿಗೆ ಪ್ರಯಾಣಿಸುವುದರಿಂದ, ಖಾಸಗಿ ಟ್ರಾವೆಲ್ ಆಪರೇಟರ್‌ಗಳು ಟಿಕೆಟ್‌ಗಳ ಬೆಲೆಯನ್ನು ಶೇಕಡಾ 30 ರಷ್ಟು ಹೆಚ್ಚಿಸಿದ್ದಾರೆ. ಹೆಚ್ಚಿನ ಬೇಡಿಕೆಯಿರುವ ಮಾರ್ಗಗಳಲ್ಲಿ ಇದು ಇನ್ನೂ ಹೆಚ್ಚಾಗಿದೆ.

ಈ ಮಧ್ಯೆ, ಹೆಚ್ಚುವರಿ ಶುಲ್ಕ ವಸೂಲಿ ಮಾಡದಂತೆ ಈಗಾಗಲೇ ಖಾಸಗಿ ಬಸ್ ನಿರ್ವಾಹಕರಿಗೆ ಎಚ್ಚರಿಕೆ ನೀಡಲಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುವುದಾಗಿ ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಿಂದ ತಮಿಳುನಾಡಿನ ನಾಮಕ್ಕಲ್‌ಗೆ ಹವಾನಿಯಂತ್ರಿತವಲ್ಲದ ಸ್ಲೀಪರ್ ಬಸ್ ಸಾಮಾನ್ಯವಾಗಿ ಸುಮಾರು 1,000 ರೂ. ಇರುತ್ತದೆ. ನಾನು ಸಾಮಾನ್ಯವಾಗಿ ಟಿಕೆಟ್ ಬುಕಿಂಗ್ ಅಪ್ಲಿಕೇಶನ್‌ಗಳನ್ನು ಅವಲಂಬಿಸಿರುತ್ತೇನೆ. ಉತ್ತಮ ಆಫರ್​ಗಳು ಮತ್ತು ಕಡಿಮೆ ಬೆಲೆಗಾಗಿ ಪರಿಶೀಲಿಸುತ್ತೇನೆ. ಆದರೆ, ದೀಪಾವಳಿ ಬರುತ್ತಿದ್ದಂತೆ ಟಿಕೆಟ್ ದರ 2000 ರೂಪಾಯಿ ದಾಟಿದೆ. ಹಬ್ಬ ಹರಿದಿನಗಳಲ್ಲಿ ಖಾಸಗಿ ಟ್ರಾವೆಲ್‌ ಆಪರೇಟರ್‌ಗಳು ಬೇಡಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಸರಕಾರ ಅಂಥವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

ದೀಪಾವಳಿ ಆಚರಣೆ ಮತ್ತು ಪ್ರವಾಸಿ ತಾಣಗಳಿಗೆ ಬೆಂಗಳೂರಿನಿಂದ ಹೋಗುವ ಜನರಿಗೆ ಖಾಸಗಿ ಬಸ್​​ ದುಬಾರಿ ದರದ ಬಿಸಿ ತಟ್ಟುತ್ತಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಖಾಸಗಿ ಟ್ರಾವೆಲ್ ಆಪರೇಟರ್‌ಗಳಿಗೆ ಹೆಚ್ಚಿನ ಶುಲ್ಕ ವಿಧಿಸದಂತೆ ಎಚ್ಚರಿಕೆ ನೀಡಿದ್ದಾರೆ ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾವು ಕ್ರಮ ಕೈಗೊಳ್ಳುತ್ತೇವೆ ಮತ್ತು ನಿಯಮ ಉಲ್ಲಂಘಿಸುವ ಖಾಸಗಿ ಟ್ರಾವೆಲ್ ಆಪರೇಟರ್‌ಗಳಿಗೆ ದಂಡವನ್ನು ವಿಧಿಸುತ್ತೇವೆ ಎಂದು ಅವರು ತಿಳಿಸಿರುವುದಾಗಿ ‘ದಿ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಇದನ್ನೂ ಓದಿ: ದೀಪಾವಳಿ: KSRTC ಯಿಂದ 2 ಸಾವಿರ ಹೆಚ್ಚುವರಿ ವಿಶೇಷ ಬಸ್​​ ವ್ಯವಸ್ಥೆ: ಇಲ್ಲಿದೆ ಮಾಹಿತಿ

ಕೆಎಸ್​ಆರ್​ಟಿಸಿಯಿಂದ 2000 ವಿಶೇಷ ಬಸ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಬಳ್ಳಾರಿ, ಯಾದಗಿರಿ, ಮತ್ತು ಬೀದರ್ ಮುಂತಾದ ವಿವಿಧ ಸ್ಥಳಗಳಿಗೆ 2,000 ಹೆಚ್ಚುವರಿ ಬಸ್‌ಗಳನ್ನು ಓಡಿಸುವುದಾಗಿ ತಿಳಿಸಿದ್ದಾರೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಗೋವಾದಂತಹ ನೆರೆ ರಾಜ್ಯಗಳಿಗೂ ವಿಶೇಷ ಬಸ್​ಗಳು ಸಂಚರಿಸಲಿವೆ. ಖಾಸಗಿ ಬಸ್‌ಗಳ ಬದಲು ಸರ್ಕಾರಿ ಬಸ್‌ಗಳನ್ನು ಬಳಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us