ದೇವೇಗೌಡರ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಬಿಎಸ್​ವೈ ಬಳಿಕ ದೋಸೆ ಸವಿದರು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಆರೋಗ್ಯ ವಿಚಾರಿಸಿದರು. ಬಳಿಕ ಗಾಂಧಿ ಬಜಾರ್​ನಲ್ಲಿರುವ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ದೋಸೆ ಸವಿದರು.

ದೇವೇಗೌಡರ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಬಿಎಸ್​ವೈ ಬಳಿಕ ದೋಸೆ ಸವಿದರು
ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರನ್ನು ಭೇಟಿಯಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
Updated By: Rakesh Nayak Manchi

Updated on: Sep 20, 2022 | 8:32 PM

ಬೆಂಗಳೂರು: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ (H.D.Deve Gowda) ಅವರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರು ಭೇಟಿಯಾಗಿ ಆರೋಗ್ಯ (Health) ವಿಚಾರಿಸಿದರು. ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಇಂದು ಭೇಟಿ ನೀಡಿದ ಬಿಎಸ್​ವೈ, ಕೆಲವು ಸಮಯಗಳನ್ನು ದೇವೇಗೌಡರೊಂದಿಗೆ ಕಳೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ದೇವೇಗೌಡರಿಗೆ ಮಂಡಿನೋವು ಇದೆ, ನೆನಪಿನ ಶಕ್ತಿ ಚೆನ್ನಾಗಿದೆ. ಅವರು ಆರೋಗ್ಯದಿಂದ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ದೇವೇಗೌಡರನ್ನ 1 ತಿಂಗಳ ಹಿಂದೆಯೇ ಭೇಟಿ ಮಾಡಬೇಕು ಅಂತ ಅಂದೊಕೊಂಡಿದ್ದೆ. ದೇವೇಗೌಡರ ಅನಾರೋಗ್ಯ ಬಗ್ಗೆ ಪುತ್ರ ಕುಮಾರಸ್ವಾಮಿ ಹೇಳಿದ್ದರು. ದೇವೇಗೌಡರು ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ. ಈಗಲೂ ಅವರಿಗೆ ಓಡಾಡಬೇಕೆಂಬ ಅಪೇಕ್ಷೆ ಇದೆ. ಭೇಟಿ ವೇಳೆ ಅನೇಕ ಸಂಗತಿಗಳನ್ನು ನೆನಪುಮಾಡಿಕೊಂಡರು. ದೇವೇಗೌಡರು ಇನ್ನೂ ಹತ್ತಾರು ವರ್ಷ ಆರಾಮಾಗಿ ಇರುತ್ತಾರೆ. ದೇವರ ಆಶೀರ್ವಾದದಿಂದ ಧೀಮಂತ ನಾಯಕ ದೇವೆಗೌಡರು ಅನೇಕ ವರ್ಷಗಳು ಇನ್ನೂ ಓಡಾಡಲಿ ಎಂದರು. ಅಲ್ಲದೆ, ನಾನು ಕಂಡಂತೆ ಇಡೀ ರಾಜ್ಯವನ್ನು ಸುತ್ತಿದಂತ ವ್ಯಕ್ತಿ ಇದ್ದರೆ ಅದು ದೇವೇಗೌಡರು ಎಂದು ಬಣ್ಣಿಸಿದರು.

ದೋಸೆ ಸವಿದ ಬಿಎಸ್​ವೈ

ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಗಾಂಧಿ ಬಜಾರ್​ನಲ್ಲಿರುವ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದರು. ಇಲ್ಲಿ ಅವರು ಉಪಹಾರ ಸೇವಿಸಿದರು. ಮಾಜಿ ಸಿಎಂ ಯಡಿಯೂರಪ್ಪ ಜೊತೆ ಶಾಸಕರಾದ ಎಸ್.ಆರ್.ವಿಶ್ವನಾಥ್, ಉದಯ ಗರುಡಾಚಾರ್, ಎಂ.ಕೃಷ್ಣಪ್ಪ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಇದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ (ಸೆ.19)ದಂದು ದೇವೇಗೌಡ ಅವರ ನಿವಾಸಕ್ಕೆ ಭೇಟಿಕೊಟ್ಟು ಆರೋಗ್ಯ ವಿಚಾರಿಸಿದರು. ಒಂದುವರೆ ದಶಕದ ಬಳಿಕ ದೇವೆಗೌಡರ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದರು. ರಾಜಕೀಯವಾಗಿ ಸಿದ್ದರಾಮಯ್ಯ ಹಾಗೂ ದೇವೇಗೌಡ ವಿರೋಧಿಗಳಾಗಿದ್ದು ವೈಮನಸ್ಯ ಮರೆತು ದೇವೇಗೌಡರ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದರು. ಇದೇ ವೇಳೆ ಶಾಸಕರಾದ ಜಮೀರ್ ಅಹ್ಮದ್ ಖಾನ್,​ ಭೈರತಿ ಸುರೇಶ್, ಆರ್​.ವಿ ದೇಶಪಾಂಡೆ ಸಾಥ್ ನೀಡಿದರು. ಇತ್ತಿಚೆಗಷ್ಟೇ ದೇವೇಗೌಡರನ್ನ ಪದ್ಮನಾಭನಗರದ ಶಾಸಕ, ಕಂದಾಯ ಸಚಿವ ಆರ್. ಅಶೋಕ್ ಕೂಡ ಭೇಟಿಯಾಗಿದ್ದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ