ಸರ್ಕಾರಿ ನೌಕರಿ ಕೊಡಿಸುವುದಾಗಿ ಕೋಟ್ಯಾಂತರ ರೂ ವಂಚನೆ; ಜೆಡಿಎಸ್ ಅಭ್ಯರ್ಥಿ ಸೇರಿ 6 ಜನ ಅರೆಸ್ಟ್

| Updated By: ಆಯೇಷಾ ಬಾನು

Updated on: Oct 15, 2024 | 1:13 PM

ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಂಚಕರ ಕಿಂಗ್ ಪಿನ್ ರಾಜಕೀಯ ಪಕ್ಷದ ಮುಖಂಡ ಎನ್ನುವ ಸತ್ಯ ಬಹಿರಂಗವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿ, ಸೋಲು ಕಂಡವನೇ ಚೀಟರ್ ಗ್ಯಾಂಗ್ನ ಪ್ರಮುಖ ಆರೋಪಿ. ಆ ಜೆಡಿಎಸ್ ನಾಯಕ ಸೇರಿ 5ಜನರನ್ನು ಸೈಬರ್ ಪೊಲೀಸರು ಹೆಡೆಮುರಿ ಕಟ್ಟಿ ತನಿಖೆ ಚುರುಕುಗೊಳಿಸಿದ್ದಾರೆ.

ಸರ್ಕಾರಿ ನೌಕರಿ ಕೊಡಿಸುವುದಾಗಿ ಕೋಟ್ಯಾಂತರ ರೂ ವಂಚನೆ; ಜೆಡಿಎಸ್ ಅಭ್ಯರ್ಥಿ ಸೇರಿ 6 ಜನ ಅರೆಸ್ಟ್
ಸಾಂದರ್ಭಿಕ ಚಿತ್ರ
Follow us on

ಗದಗ, ಅ.15: ಸರ್ಕಾರಿ ನೌಕರಿ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಿಂಗ್ ಪಿನ್ ತಿಪ್ಪೇಸ್ವಾಮಿಯನ್ನು ಅರೆಸ್ಟ್ ಮಾಡಲಾಗಿದೆ. ಹೊಸದುರ್ಗ ಕ್ಷೇತ್ರದಿಂದ ಜೆಡಿಎಸ್ (JDS) ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ವ್ಯಕ್ತಿ ಈ ವಂಚನೆಯಲ್ಲಿ ಭಾಗಿಯಾಗಿರೋದು ಬಯಲಾಗಿದೆ. ಗದಗ (Gadag) ನಗರದಲ್ಲಿ ಸರ್ಕಾರಿ ನೌಕರಿ ಆಸೆಗೆ ಬಿದ್ದು 3 ಕೋಟಿ 30 ಲಕ್ಷ ರೂಪಾಯಿ ಪಂಗನಾಮ ಹಾಕಿಸಿಕೊಂಡ ಜನರು ಗೋಳಾಡುತ್ತಿದ್ದಾರೆ.

ಈ ಖದೀಮರು ಬಡವರನ್ನು ವಂಚಿಸಿ ಅವರ ಹಣದಲ್ಲಿ ಐಶಾರಾಮಿ ಕಾರುಗಳನ್ನು ಖರೀದಿ ಮಾಡಿ ಮಸ್ತ್ ಮಜಾ ಮಾಡ್ತಾಯಿದ್ದರು. ಸದ್ಯ ಈ ಗ್ಯಾಂಗ್ ಅನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಸುಮಾರು 39 ವಿದ್ಯಾವಂತ ಯುವಕರಿಗೆ ಕೋರ್ಟ್ ಹಾಗೂ ಸರ್ಕಾರಿ ಕಚೇರಿಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿ ಈ ಖತರ್ನಾಕ್ ಗ್ಯಾಂಗ್ ಮೋಸ ಮಾಡಿದೆ. ರಾಜ್ಯದ ನಾನಾ ಕೋರ್ಟ್ ಗಳಲ್ಲಿ, ಸಿಪಾಯಿ ಹಾಗೂ ಪ್ರೋಸೆಸ್ ಸರ್ವರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿದ್ದಾರೆ. ಮೊದಲು ಸರ್ಕಾರಿ ನೌಕರಿ ಇಲ್ಲ ಅಂತ ಮದುವೆಯಾಗದೇ ಯುವಕರು ಒದ್ದಾಡುತ್ತಿದ್ರು. ನಂತರ ನೌಕರಿ ಸಿಗುತ್ತಲ್ಲ ಅಂತ ನಂಬಿ ಜನರು ಜಮೀನು, ಮನೆ ಮಾರಿ ಲಕ್ಷ ಲಕ್ಷ ಹಣ ನೀಡಿದ್ದಾರೆ. ಆದ್ರೆ, ಈ ಖತರ್ನಾಕ್ ಗ್ಯಾಂಗ್ ಕೋಟ್ಯಾಂತರ ಹಣ ಸಂಗ್ರಹ ಮಾಡಿ ಮೋಸಮಾಡಿದೆ.

ಈ ಕುರಿತು ಗದಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ತ‌‌ನಿಖೆ ನಡೆಸುತ್ತಿದ್ದಾರೆ. ಮೊದಲು ಮಧ್ಯವರ್ತಿ ನಾಗಭೂಷಣ ಹಿರೇಮಠ ದೂರು ನೀಡದ ಮೇಲೆ, ಅವರ ಸಂಬಂಧಿಯಾದ ಅನ್ನದಾನೇಶ್ವರ ಹಿರೇಮಠ, ಸೇರಿದಂತೆ ನಾಲ್ಕು ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದ್ರು. ಆಗ ಇದರ ಕಿಂಗ್ ಯಾರು ಅಂತಾ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಇದರ ಕಿಂಗ್ ಪಿನ್ ತಿಪ್ಪೇಸ್ವಾಮಿ ಅಂತಾ ಹೇಳಿದು ಬಂದಿದೆ. ಈಗ ತಿಪ್ಪೇಸ್ವಾಮಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಈ ತಿಪ್ಪೇಸ್ವಾಮಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ನಮ್ಮ ಹಣ ಬಳಕೆ ಮಾಡಿಕೊಂಡಿದ್ದಾನೆ. ನಮಗೆ ಹಣ ವಸೂಲಿ ಮಾಡಿಕೊಡುವಂತೆ ವಂಚನೆಗೆ ಒಳಗಾದವದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹುಲಿ ಉಪಟಳಕ್ಕೆ ಬೇಸತ್ತ ಗ್ರಾಮಸ್ಥರು: ವ್ಯಾಘ್ರ ಸೆರೆಗೆ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ

ಇನ್ನೂ ಅರೆಸ್ಟ್ ಆಗಿರುವ ತಿಪ್ಪೇಸ್ವಾಮಿ, ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ. ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ತಿಪ್ಪೇಸ್ವಾಮಿ ಜನರಿಂದ ಮೋಸ ಮಾಡಿ ಪಡೆದ ಹಣವನ್ನು ಚುನಾವಣೆಯಲ್ಲಿ ಬಳಕೆ ಮಾಡಿದ್ದಾನಂತೆ. ಮುಂಡರಗಿ ಪಟ್ಟಣದ ಅನ್ನದಾನೇಶ್ವರ ಹಿರೇಮಠ ದಂಪತಿಗಳು ಸೇರಿದಂತೆ 10 ಜನರ ವಿರುದ್ಧ ದೂರು ದಾಖಲಾಗಿದೆ. ಸದ್ಯ ಆರು ಜನ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಇದರ ಪ್ರಮುಖ ಕಿಂಗ್ ಪಿನ್ ತಿಪ್ಪೇಸ್ವಾಮಿ ಎನ್ನುವುದು ತನಿಖೆಯಿಂದ ಗೊತ್ತಾಗುತ್ತಿದೆ. ಇನ್ನೂ ತಿಪ್ಪೇಸ್ವಾಮಿ ಹಾಗೂ ಡಾ ಜಿ ಎನ್ ವೆಂಕಟರೆಡ್ಡಿ ಅವರನ್ನು ಸದ್ಯ ಅರೆಸ್ಟ್ ಮಾಡಿ ಅವರಿಂದ ಎರಡು ಐಶಾರಾಮಿ ಕಾರು ವಶಕ್ಕೆ ಪಡೆಯಲಾಗಿದೆ. ಇದೊಂದು‌ ಚೀಟಿಂಗ್ ಕೇಸ್ ಆಗಿದ್ದು, ನಮ್ಮ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವುದೇ ರಾಜಕೀಯ ಒಳಗಾಗದೆ ತ‌ನಿಖೆ ಮಾಡ್ತಾಯಿದ್ದೇವೆ ಎಂದು ಗದಗ ಎಸ್ಪಿ ಬಿ,ಎಸ್ ನೇಮಗೌಡ ಅವರು ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ