AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಹೇಳೋರಿಲ್ಲ, ಕೇಳೋರಿಲ್ಲ! ಮತ್ತೊಂದೆಡೆ ಭೀಕರ ಬರಗಾಲದಿಂದ ಅನ್ನದಾತರು ವಿಲವಿಲ!

ಆ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದೆ. ಬಿಸಿಲಿನ ಹೊಡೆತಕ್ಕೆ ಭೂಮಿಗಳು ಬಾಯಿ ತೆರೆಯುತ್ತಿವೆ. ಒಣಗುತ್ತಿರೋ ಭೂಮಿ ನೋಡಿ ಅನ್ನದಾತರು ಅಕ್ಷರಶಃ ಕಂಗಾಲಾಗಿದ್ದಾರೆ. ಇನ್ನು ಬರಕಾಮಗಾರಿ, ಕೆಲಸಕ್ಕೆ ಅನ್ನದಾತರು ಜಿಲ್ಲಾ ಪಂಚಾಯತ್ ಕಚೇರಿಗೆ ಬಂದ್ರೆ, ಖಾಲಿ ಕುರ್ಚಿಗಳ ದರ್ಶನ ಆಗುತ್ತಿದೆ. ಹೀಗಾಗಿ ಇಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಆಡಿದ್ದೇ ಆಟವಾಗಿದೆ.

ಗದಗ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಹೇಳೋರಿಲ್ಲ, ಕೇಳೋರಿಲ್ಲ! ಮತ್ತೊಂದೆಡೆ ಭೀಕರ ಬರಗಾಲದಿಂದ ಅನ್ನದಾತರು ವಿಲವಿಲ!
ಗದಗ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Sep 26, 2023 | 6:19 PM

Share

ಗದಗ, ಸೆ.26: ರಾಜ್ಯಾದ್ಯಂತ ಈಗಾಗಲೇ ಬರದ ಛಾಯೆ ಆವರಿಸಿದೆ. ಅದರಂತೆ ಗದಗ(Gadag) ಜಿಲ್ಲೆಯಲ್ಲೂ ಬರ ತಾಂಡವ ಆಡುತ್ತಿದ್ದು, ಬರಗಾಲದಿಂದ ಅನ್ನದಾತರು ತತ್ತರಿಸಿದ್ದಾರೆ. ಹಸಿರಿನಿಂದ ಕಂಗೊಳಿಸಬೇಕಿದ್ದ ಭೂಮಿಗಳು ಬರಡಾಗಿವೆ. ಜೊತೆಗೆ ಭೂಮಿಗಳು ಬಿರುಕು ಬಿಡುತ್ತಿವೆ. ಜಿಲ್ಲೆಯ ಏಳು ತಾಲೂಕಿನಲ್ಲಿ ಆರು ತಾಲೂಕು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿದೆ. ಆದ್ರೆ, ಅನ್ನದಾತರ ಗೋಳು ಮಾತ್ರ ಜಿಲ್ಲೆಯಲ್ಲಿ ಕೇಳೋರಿಲ್ಲದಂತಾಗಿದೆ. ಹೌದು, ಕೃಷಿಯನ್ನೇ ನಂಬಿ ಜೀವನ ಮಾಡುತ್ತಿರುವ ಕೃಷಿ ಕಾರ್ಮಿಕರಿಗೆ ಕೆಲಸ ಇಲ್ಲ. ಇನ್ನು ಬರಗಾಲ ಆವರಿಸಿದ್ದರಿಂದ ‌ಬರ ಕಾಮಗಾರಿ, ನರೇಗಾ ಯೋಜನೆ ಆರಂಭ ಮಾಡಲು ಜಿಲ್ಲಾ ಪಂಚಾಯತ್ ಸಿಇಒ ಅವರೇ ಇಲ್ಲದಂತಾಗಿದೆ.

ಗದಗ ಜಿಲ್ಲಾ ಪಂಚಾಯತ್ ಕಚೇರಿಗೆ ಗ್ರಾಮೀಣ ಭಾಗದ ಜನರು ಆಗಮಿಸಿದರೆ, ಖಾಲಿ ಕುರ್ಚಿಗಳ ದರ್ಶನವಾಗುತ್ತದೆ. ಕಚೇರಿಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಸಿಗುತ್ತಿಲ್ಲ. ಸಿಇಒ ಅವರು ವರ್ಗಾವಣೆಯಾಗಿ ಎರಡು ತಿಂಗಳು ಕಳೆದಿವೆ. ಇನ್ನೂ ಗದಗ ಜಿಲ್ಲಾ ಪಂಚಾಯತ್​ಗೆ ಹೊಸ ಸಿಇಒ ಆಗಮಿಸಿಲ್ಲ. ಹೀಗಾಗಿ ಇಲ್ಲಿನ ಅಧಿಕಾರಿಗಳು, ಸಿಬ್ಬಂದಿಗಳು ನಾವು ಆಡಿದ್ದೇ ಆಟ ಎಂದು ಕಚೇರಿಗೆ ಬೇಕಾ ಬಿಟ್ಟಿಯಾಗಿ ಬರುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿದೆ. ಸಿಬ್ಬಂದಿಗಳು ಇಲ್ಲದ ಕಾರಣ ಕೆಲಸಕ್ಕೆ ಬರುವ ಜನರು ವಾಪಸ್ ಆಗುತ್ತಿದ್ದಾರೆ.

ಇದನ್ನೂ ಓದಿ:ಬರಗಾಲಕ್ಕೆ ಕಂಗಲಾದ ಚಿಕ್ಕಬಳ್ಳಾಪುರ; ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ

ಎರಡು ಹುದ್ದೆಯನ್ನು ನಿಭಾಯಿಸುತ್ತಿರುವ ಜಿಲ್ಲಾಧಿಕಾರಿ

ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ‌ಎಲ್ ಅವರು, ಕಳೆದ ಎರಡು ತಿಂಗಳಿಂದ ಜಿಲ್ಲಾಧಿಕಾರಿ ಹುದ್ದೆ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ಮೊದಲೇ ಜಿಲ್ಲಾಧಿಕಾರಿಗಳು 35 ಇಲಾಖೆಗಳನ್ನು ನೋಡಿಕೊಳ್ಳಬೇಕು. ಆದ್ರೆ, ಜೊತೆಗೆ ಸಿಇಒ ಅವರ 28 ಇಲಾಖೆಗಳು ನೋಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೂಡಲೇ ಸರ್ಕಾರ ಹಾಗೂ ಗದಗ ಉಸ್ತುವಾರಿ ಸಚಿವ ಎಚ್​.ಕೆ ಪಾಟೀಲ್ ಖಾಲಿ ಇರುವ ಸಿಇಒ ಹುದ್ದೆಗೆ ಸೂಕ್ತ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು, ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರು ಒತ್ತಾಯ ಮಾಡಿದ್ದಾರೆ.

ಇನ್ನು ಭೀಕರ ಬರ ಅನ್ನದಾತರನ್ನು ಕಂಗಾಲಾಗುವಂತೆ ಮಾಡಿದೆ. ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಸುಮಾರು 28 ಇಲಾಖೆಗಳು ಬರುತ್ತವೆ. ಅದ್ರೆ, ಭೀಕರ ಬರ ಪರಿಸ್ಥಿತಿಯಲ್ಲಿ 28 ಇಲಾಖೆಗೂ ಕಳೆದ ಎರಡು ತಿಂಗಳಿಂದ ಮುಖ್ಯಸ್ಥರೇ ಇಲ್ಲದಿರೋದು ಸಾರ್ವಜನಿಕರ ಆಕ್ರೊಶಕ್ಕೆ ಕಾರಣವಾಗಿದೆ. ಜಿಲ್ಲಾ ಪಂಚಾಯತ್​ನಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ನರೇಗಾ ಸೇರಿದಂತೆ ಯಾವುದೇ ಕೆಲಸ ಸರಿಯಾಗಿ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಒಂದು ಜಿಲ್ಲೆಗೆ ಎಸ್ಪಿ, ಡಿಸಿ ಹಾಗೂ ಸಿಇಒ ಮೂವರು ಇದ್ರೆ, ಮಾತ್ರ ಆಡಳಿತ ಯಂತ್ರ ಸರಿಯಾಗಿ ಸಾಗಲು ಸಾಧ್ಯ. ಆದ್ರೆ, ಸಿಇಒ ಇಲ್ಲದೆ ಎರಡು ತಿಂಗಳಾದ್ರು ಸರ್ಕಾರ ನೇಮಕ ಮಾಡುವ ಗೋಜಿಗೆ ಹೋಗಿಲ್ಲ. ಜಿಲ್ಲೆಯಲ್ಲಿ ಬರ ಆವರಿಸಿದ್ದು, ರೈತರು, ಕೃಷಿ ಕಾರ್ಮಿಕರು ಪರದಾಟ ನಡೆಸಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್‌ ಬಂದಿದೆ-ಬರಗಾಲ ತಂದಿದೆ; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ, ವ್ಯಂಗ್ಯ

ಮೊದಲೇ ಬರದಿಂದ ಜಿಲ್ಲೆ ತತ್ತರಿಸಿದೆ. ಸರ್ಕಾರ ಬರ ಪೀಡಿತ ತಾಲೂಕು ಅಂತಾ ಘೋಷಣೆ ಮಾಡಿದೆ. ಆದ್ರೆ, ಬರಗಾಲ ಕಾಮಗಾರಿ ಹಾಗೂ ನರೇಗಾ ಯೋಜನೆಯಿಂದ ರೈತ ಹಾಗೂ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಉನ್ನತ ಹುದ್ದೆಯೇ ಖಾಲಿ ಇರೋದರಿಂದ ಗದಗ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ.‌ ಕೂಡಲೇ ಸರ್ಕಾರ ಸಿಇಒ ಅವರನ್ನು ನೇಮಕ ಮಾಡಿಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ