ಹಾಡಹಗಲೇ ದರೋಡೆಗೆ ಇಳಿದ ಖತರ್ನಾಕ್ ಗ್ಯಾಂಗ್; ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಪೊಲೀಸ್ರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 02, 2023 | 4:51 PM

ನಿರ್ಜನ ಪ್ರದೇಶದಲ್ಲಿ ಜನರನ್ನು ಟಾರ್ಗೆಟ್ ಮಾಡುತ್ತಿದ್ದ ಈ ದರೋಡೆ ಗ್ಯಾಂಗ್​ವೊಂದನ್ನು ಗದಗ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಘಟನೆ ನಡೆದಿದೆ. ಕೆಲ ದಿನಗಳಿಂದ ಚಿನ್ನಾಭರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾದ ಹಿನ್ನಲೆ ಎಚ್ಚೆತ್ತ ಪೊಲೀಸರು ಖದೀಮರನ್ನು ಅರೆಸ್ಟ್​ ಮಾಡಿದ್ದಾರೆ.

ಗದಗ, ಡಿ.02: ಹಾಡಹಗಲೇ ಖತರ್ನಾಕ್ ಗ್ಯಾಂಗ್​ವೊಂದು ದರೋಡೆಗೆ ಇಳಿದಿದ್ದು, ಕೂಡಲೇ ಎಚ್ಚೆತ್ತ ಪೊಲೀಸ(Police)ರು ಸಿನಿಮೀಯ ರೀತಿಯಲ್ಲಿ ದರೋಡೆ ಗ್ಯಾಂಗ್​ನ್ನು ಬೆನ್ನಟ್ಟಿ ಹಿಡಿದ ಘಟನೆ ಗದಗ(Gadag)ದಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಾಡರಹಳ್ಳಿ ಗ್ರಾಮದ ಸಂಜೀವ ಸುಂಕಪ್ಪ, ರಾಜಪ್ಪ ಬಂಧಿತ ಆರೋಪಿಗಳು. ಇನ್ನೂ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ.

ಬೈಕ್​ನಲ್ಲಿ ಹೋಗುತ್ತಿದ್ದವ್ರಿಗೆ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್

ನಿರ್ಜನ ಪ್ರದೇಶದಲ್ಲಿ ಜನರನ್ನು ಟಾರ್ಗೆಟ್ ಮಾಡುತ್ತಿದ್ದ ಈ ದರೋಡೆ ಗ್ಯಾಂಗ್, ಸಂಭಾಪೂರ ರಸ್ತೆಯಲ್ಲಿ ಬೈಕ್​ನಲ್ಲಿ ಹೋಗುತ್ತಿದ್ದವರಿಗೆ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದರು. ಅದರಂತೆ ಇತ್ತೀಚಿಗೆ ನಜೀರ್ ಅಹ್ಮದ್ ಎಂಬಾತ ಬೈಕ್ ಮೇಲೆ‌ ಹೋಗುತ್ತಿದ್ದಾಗ ಚಾಕು, ರಾಡ್ ತೋರಿಸಿ, ಹಣ, ಚಿನ್ನ ಹಾಗೂ ವಸ್ತುಗಳು ಕೊಡದಿದ್ರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿ ದರೋಡೆ ಮಾಡಿದ್ದರು. ಬಳಿಕ ಅವರಿಂದ ಬಚಾವ್ ಆಗಿ ಬಂದು ದೂರು‌ ನೀಡಿದ್ದರು.

ಇದನ್ನೂ ಓದಿ:ಮಹಾರಾಷ್ಟ್ರ ಗಡಿಯಲ್ಲಿ ‘ಚೀಟಿ’ ಗ್ಯಾಂಗ್ ಮಾಯಾಜಾಲ! ಕಿರಾಣಿ ಅಂಗಡಿ ಒಡತಿಯ ಮಾಂಗಲ್ಯ ದೋಚಿ ಎಸ್ಕೇಪ್ ಆದ ಐನಾತಿ

ಎಚ್ಚೆತ್ತ ಪೊಲೀಸರು

ಇನ್ನು ನಜೀರ್ ಅಹ್ಮದ್ ದೂರು ನೀಡುತ್ತಿದ್ದಂತೆ ಅಲರ್ಟ್ ಆದ ಬಡಾವಣೆ ಪೊಲೀಸರು, ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಶುರು ಮಾಡಿದ್ದಾರೆ. ಅದರಂತೆ ಇದೀಗ ಇಬ್ಬರು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಚೇಸ್​ ಮಾಡಿ ಅರೆಸ್ಟ್​ ಮಾಡಿದ್ದಾರೆ. ಈ ದರೋಡೆಕೋರರ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಲಿಗೆ, ವಂಚನೆ ಕೇಸ್ ದಾಖಲಾಗಿದ್ದು, ಅಷ್ಟೇ ಅಲ್ಲದೇ ನಕಲಿ ಚಿನ್ನ ಕೊಟ್ಟು ಅಸಲಿ ಎಂದು ವಂಚಿಸಿದ ಪ್ರಕರಣ​ಗಳು ದಾಖಲಾಗಿದೆ ಎಂದು ಟಿವಿ9 ಗೆ ಗದಗ ಎಸ್ಪಿ ಬಿ ಎಸ್ ನೇಮಗೌಡ ಹೇಳಿದ್ದಾರೆ.

ಕಾರಿನ ಗ್ಲಾಸ್ ಒಡೆದು 3 ಲಕ್ಷ ಹಣ ದೋಚಿದ ದುಷ್ಕರ್ಮಿಗಳು

ಕೊಪ್ಪಳ: ಗಂಗಾವತಿ ಪಟ್ಟಣದ ವಿನಾಯಕ ನರ್ಸಿಂಗ್ ಹೋಮ್ ಮುಂದೆ ದುಷ್ಕರ್ಮಿಗಳು ಕಾರಿನ ಗ್ಲಾಸ್ ಒಡೆದು 3 ಲಕ್ಷ ಹಣ ದೋಚಿದ ಘಟನೆ ನಡೆದಿದೆ. ತಾವರಗೇರಾ ಗ್ರಾಮದ ವೀರನಗೌಡ ಎಂಬುವರಿಗೆ ಸೇರಿದ ಹಣ ಇದಾಗಿದ್ದು, ಕಾರಿನಲ್ಲಿ ಹಣ ಇಟ್ಟು, ದಂಪತಿ ವಿನಾಯಕ ನರ್ಸಿಂಗ್ ಹೋಮ್​ಗೆ ಚಿಕಿತ್ಸೆಗೆ ಹೋಗಿದ್ದರು. ಈ ವೇಳೆ ಖದೀಮರು ಕೈಚಳಕ ತೋರಿಸಿದ್ದಾರೆ. ಸ್ಥಳಕ್ಕೆ ಗಂಗಾವತಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ