ಮಳೆಗೆ ಇದ್ದ ಮನೆಯೊಂದು ಕಳೆದುಕೊಂಡು ಪುಟ್ಟ ಮಕ್ಕಳೊಂದಿಗೆ ಲಾರಿಯಲ್ಲಿ ಆಶ್ರಯ ಪಡೆಯುತ್ತಿರುವ ಬಡ ಕುಟುಂಬ

ಹಾಸನ ಜಿಲ್ಲೆಯ ಕುಟುಂಬವೊಂದರ ಹೀಗೊಂದು ದುಸ್ಥಿತಿ. ಇದ್ದ ಒಂದು ಮನೆ ಕೂಡ ಮಳೆರಾಯ ಕಿತ್ತುಕೊಂಡ ನಂತರ ವಿಧಿ ಇಲ್ಲದೆ ಇಡೀ ಕುಟುಂಬವೇ ಲಾರಿಯಲ್ಲಿ ಆಶ್ರಯ ಪಡೆಯುವಂತಾಗಿದೆ.

ಮಳೆಗೆ ಇದ್ದ ಮನೆಯೊಂದು ಕಳೆದುಕೊಂಡು ಪುಟ್ಟ ಮಕ್ಕಳೊಂದಿಗೆ ಲಾರಿಯಲ್ಲಿ ಆಶ್ರಯ ಪಡೆಯುತ್ತಿರುವ ಬಡ ಕುಟುಂಬ
ಮಳೆಗೆ ಮನೆ ಕಳೆದುಕೊಂಡು ಪುಟ್ಟ ಮಕ್ಕಳೊಂದಿಗೆ ಲಾರಿಯಲ್ಲಿ ಆಶ್ರಯ ಪಡೆಯುತ್ತಿರುವ ಕುಟುಂಬ
Edited By: Rakesh Nayak Manchi

Updated on: Sep 24, 2022 | 10:24 AM

ಹಾಸನ ಜಿಲ್ಲೆಯ ಕುಟುಂಬವೊಂದರ ಹೀಗೊಂದು ದುಸ್ಥಿತಿ. ಇದ್ದ ಒಂದು ಮನೆ ಕೂಡ ಮಳೆರಾಯ ಕಿತ್ತುಕೊಂಡ ನಂತರ ವಿಧಿ ಇಲ್ಲದೆ ಇಡೀ ಕುಟುಂಬವೇ ಲಾರಿಯಲ್ಲಿ ಆಶ್ರಯ ಪಡೆಯುವಂತಾಗಿದೆ. ಸುರಿದ ಧಾರಾಕಾರ ಮಳೆಗೆ ಆಲೂರು ತಾಲ್ಲೂಕಿನ ಚನ್ನಹಳ್ಳಿ ಗ್ರಾಮದ ಸಲೀಂ ಎಂಬವರ ಮನೆ ಕುಸಿದುಬಿದ್ದ ಬೀದಿಯಲ್ಲಿ ನಿಲ್ಲುವಂತಾಗಿದೆ. ಮನೆಯ ಎಲ್ಲಾ ದಾಖಲೆ ಪತ್ರಗಳಿದ್ದರೂ ಮನೆ ಹೆದ್ದಾರಿ ಪಕ್ಕದಲ್ಲಿದೆ ಎಂಬ ಕಾರಣಕ್ಕೆ ಅಧಿಕಾರಿಗಳು ಪರಿಹಾರ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಇತ್ತ ಮಡದಿ ಮತ್ತು ಸಣ್ಣಪುಟ್ಟ ಮಕ್ಕಳನ್ನು ಹೊಂದಿರುವ ಸಲೀಂ ಸಂಸಾರಕ್ಕೆ ಆಶ್ರಯ ನೀಡಲು ಲಾರಿಗೆ ಟಾರ್ಪಲ್ ಹಾಕಿಕೊಂಡು ನೆಲೆಸಿದ್ದಾರೆ. ಮನಕಲಕುವ ಮತ್ತೊಂದು ಸಂಗತಿಯೆಂದರೆ ಸಲೀಂ ಮತ್ತು ಕುಟುಂಬ ಆಶ್ರಯ ಪಡೆಯುತ್ತಿರುವ ಲಾರಿ ಕೂಡ ಅವರದ್ದಲ್ಲ. ಲಾರಿ ಮಾಲೀಕರ ಅನುಮತಿ ಪಡೆದು ರಾತ್ರಿ ವೇಳೆ ನೆಲೆಸುತ್ತಿರುವ ಬಡ ಕುಟುಂಬ ಇದೀಗ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡುತ್ತಿದೆ.

ಸಲೀಂ ಮತ್ತು ಕುಟುಂಬ ಚನ್ನಹಳ್ಳಿ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡಿ 40 ವರ್ಷಗಳಿಂದ ಅದರಲ್ಲೇ ನೆಲೆಸಿದ್ದಾರೆ. ಆದರೆ  ಅಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಇದ್ದ ಒಂದು ಮನೆ ಕೂಡ ಕುಸಿದುಬಿದ್ದು ಬೀದಿಯಲ್ಲಿ ನಿಲ್ಲುವಂತಾಗಿದೆ. ಇತ್ತ ಮನೆ ಸರಿಪಡಿಸಲು ಪರಿಹಾರಕ್ಕಾಗಿ ಸಲೀಂ ಅತ್ತಿಂದಿತ್ತ ಓಡಾಡುತ್ತಲೇ ಇದ್ದಾರೆ. ಆದರೆ ಅದಿಕಾರಿಗಳ ನಿರ್ಲಕ್ಷ್ಯ ತೋರುತ್ತಿದ್ದಾರೆ. ಮನೆ ಹೆದ್ದಾರಿ ಬದಿಯಲ್ಲಿ ಇದೆ ಎಂಬ ಏಕೈಕ ಕಾರಣಕ್ಕೆ ಅಧಿಕಾರಿಗಳು ಪರಿಹಾರ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಸಲೀಂ ಅವರಿಗೆ ಸಣ್ಣ ಪುಟ್ಟ ಮಕ್ಕಳಿದ್ದಾರೆ. ಹೀಗಾಗಿ ತಾನು ಮತ್ತು ಕುಟುಂಬಕ್ಕೆ ರಾತ್ರಿ ಸಮಯದಲ್ಲಿ ಲಾರಿಯಲ್ಲಿ ಆಶ್ರಯ ಪಡೆಯಲು ಅನುಮತಿ ನೀಡುವಂತೆ ಲಾರಿ ಮಾಲೀಕರಲ್ಲಿ ಕೇಳಿದ್ದಾರೆ. ಲಾರಿ ಮಾಲೀಕರ ಒಪ್ಪಿಗೆ ಮೇರೆಗೆ ಸಲೀಂ ಅವರು ರಾತ್ರಿಯಲ್ಲಿ ಲಾರಿಗೆ ಟಾರ್ಪಲ್ ಕಟ್ಟಿ ಮಲಗುತ್ತಾ ದಿನ ಕಳೆಯುತ್ತಿದ್ದಾರೆ. ಮನೆಗೆ ಸಂಬಂಧಿಸಿದ ದಾಖಲೆಗಳಿದ್ದರೂ ತಿಂಗಳಿನಿಂದ ಅಲೆದಾಡುತ್ತಿದ್ದರೂ ಪರಿಹಾರ ಮಾತ್ರ ಸಿಗುತ್ತಲ್ಲ ಎಂದು ಕುಟುಂಬದ ಸದಸ್ಯರು ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ಕೂಡಲೆ ಮಳೆಗೆ ಹಾನಿಯಾದ ಮನೆಗೆ ಸೂಕ್ತ ಪರಿಹಾರ ನೀಡಿ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಬಡ ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಮುಖಾಂತರ ಮಾನವೀಯತೆ ತೋರಬೇಕಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:22 am, Sat, 24 September 22

Web contact

TV9 Kannada

Read More
Follow Us