ನನಗೆ ವೋಟ್​ ಹಾಕದಿದ್ದರೆ ನಿಮ್ಮ ಕೆಲಸ ಮಾಡಿಕೊಡಲ್ಲ: ಮುಸ್ಲಿಮರಿಗೆ ಶಾಸಕ ಪ್ರೀತಂಗೌಡ ಎಚ್ಚರಿಕೆ!

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನಗೆ ಮತ ಹಾಕಿ ಇಲ್ಲದಿದ್ದರೇ ನಿಮ್ಮ ಕೆಲಸ ಏನೂ ಮಾಡಿಕೊಡಲ್ಲ ಎಂದು ಹಾಸನದ ಬಿಜೆಪಿ ಶಾಸಕ‌ ಪ್ರೀತಂಗೌಡ ಮುಸ್ಲಿಮರಿಗೆ ಎಚ್ಚರಿಕೆ ನೀಡಿದ್ದಾರೆ.

ನನಗೆ ವೋಟ್​ ಹಾಕದಿದ್ದರೆ ನಿಮ್ಮ ಕೆಲಸ ಮಾಡಿಕೊಡಲ್ಲ: ಮುಸ್ಲಿಮರಿಗೆ ಶಾಸಕ ಪ್ರೀತಂಗೌಡ ಎಚ್ಚರಿಕೆ!
ಶಾಸಕ ಪ್ರೀತಮಗೌಡ್​​
Edited By: ವಿವೇಕ ಬಿರಾದಾರ

Updated on: Dec 11, 2022 | 5:46 PM

ಹಾಸನ: ಹಾಸನದ (Hassan) ಬಿಜೆಪಿ (BJP) ಶಾಸಕ‌ ಪ್ರೀತಂಗೌಡ (preetham gowda) ಮತದಾರರಿಗೆ ಬೆದರಿಕೆ ಹಾಕಿರುವ ವಿಡಿಯೋ ವೈರಲ್​ ಆಗಿದೆ. ನಗರದಲ್ಲಿ ಮುಸ್ಲಿಮರು (Muslim) ಹೆಚ್ಚಿನ ಸಂಖ್ಯೆಯಲ್ಲಿ ಇರೋ ಬಡಾವಣೆಗೆ ತೆರಳಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನಗೆ ಮತ ಹಾಕಿ ಇಲ್ಲದಿದ್ದರೇ ನಿಮ್ಮ ಕೆಲಸ ಏನೂ ಮಾಡಿಕೊಡಲ್ಲ ಎಂದು ಮುಸ್ಲಿಮರಿಗೆ ಎಚ್ಚರಿಕೆ ನೀಡಿದ್ದಾರೆ. ಹಿಂದೆ ಎಂ.ಎಲ್.ಎ, ಲೋಕಸಭೆ, ನಗರಸಭೆ, ಚುನಾವಣೆಯಲ್ಲಿ ನಮಗೆ ಮತ ಹಾಕಿಲ್ಲ ಎಂದರು.

ಕಳೆದ ವಾರ ರಾತ್ರಿ ಪ್ರೀತಂಗೌಡ ಸ್ಥಳೀಯರನ್ನು ಉದ್ದೇಶಿಸಿ ಮಾತನಾಡಿ ಯಾರು ಕೆಲಸ ಮಾಡಿರುತ್ತಾರೆ ಅವರಿಗೆ ವೋಟು ಹಾಕಬೇಕು. ಬಾಯಲ್ಲಿ ಅಣ್ಣಾ ಅಂತ ಹೇಳಿ ಕೊನೆಗೆ ನಾವು ಬಿಜೆಪಿಗೆ ವೋಟು ಹಾಕಲ್ಲ ಅಂತ ಹೇಳಿದರೇ ಕೆಲಸ‌ ಮಾಡಿದವರಿಗೆ ಉರಿ ಹತ್ತುತ್ತೆ ಎಂದು ಹೇಳಿದ್ದರು.

ನಾನು ಬಿಡಿಸಿ ಹೇಳ್ತಾ ಇದ್ದೀನಿ ಚಿಕ್ಕ ಮಕ್ಕಳಿಗೂ ಅರ್ಥ ಆಗ್ಲಿ ಅಂತ. ಇಲ್ಲಿ ಇರೋಲೆಲ್ಲರೂ ದೊಡ್ಡವರು ವೋಟು ಹಾಕುವರು. ನಾನು ಮನಸ್ಸು ಪೂರ್ವಕವಾಗಿ ಹೇಳುತ್ತಿದ್ದೇನೆ. ನಮ್ಮ ಮುಸಲ್ಮಾನ್ ನಮ್ಮ ಸಹೋದರರ ರೀತಿಯಲ್ಲಿ ಪ್ರಮಾಣಿಕವಾಗಿ ಪ್ರಿತಿಯಿಂದ ಕಾಣುತ್ತಿದ್ದೇನೆ. ಮುಂದೇನು ಕಾಣುತ್ತೇನೆ. ಆದರೆ ನಾನು ಕೆಲಸ ಮಾಡಿದ ಸಂದರ್ಭದಲ್ಲಿ ನೀವೇನಾದರೂ ಸಹಾಯ ಮಾಡಿಲ್ಲಾ ಅಂದರೇ, ಇವರಿಗೆ ಎಷ್ಟು ಕೆಲಸ ಮಾಡಿದರು ಅಷ್ಟೇ ನಮ್ಮ ಹಣೆಬರಹ ಬದಲಾಗಲ್ಲ, ಅಂತ ಹೇಳಿ ಈ ಕಡೆ ತಿರುಗಿ ನೋಡಬಾರದು ಅನ್ನುವ ತೀರ್ಮಾನಕ್ಕೆ ಬರ್ತಿನಿ ಎಂದರು.

ಆ ತೀರ್ಮಾನಕ್ಕೆ ಬರದೆ ಇರುವ ರೀತಿ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಮೂರು ಸಾರಿ ನನಗೆ ಕೈಕೊಟ್ಟಿದೀರಿ, ನನ್ನ ಎಂಎಲ್‌ಎ ಚುನಾವಣೆಯಲ್ಲಿ ವೋಟು ಹಾಕಿಲ್ಲ, ಕೌನ್ಸಿಲರ್ ಚುನಾವಣೆಯಲ್ಲಿ ವೋಟು ಹಾಕಿಲ್ಲ. ಎಂಪಿ ಚುನಾವಣೆಯಲ್ಲಿ ವೋಟು ಹಾಕಿಲ್ಲ. ಈಗ ಮತ್ತೆ ಐದು ವರ್ಷ ಆದ್ಮೇಲೆ ಚುನಾವಣೆ ಬರುತ್ತೆ. ಆ ಸಂದರ್ಭದಲ್ಲಿ ನೀವೇನಾದರು ಕೈಕೊಟ್ಟರೇ ನಾನು ಕೈ, ಕಾಲು ಕೊಡುತ್ತೇನೆ. ನನ್ನ ಮನೆಗೆ ಬಂದರೆ ಕಾಫಿ ಕುಡಿಸಿ ಕಳಿಸುತ್ತೇನೆ. ಇಷ್ಟಾದರೂ ವೋಟ್​ ಹಾಕಲಿಲ್ಲ ಅಂದರೇ ಯಾವ ಕೆಲಸವನ್ನು ಮಾಡಿಕೊಡೋದಿಲ್ಲ ನೇರವಾಗಿ ಹೇಳುತ್ತಿದ್ದೇನೆ ಎಂದು ಮಾತನಾಡಿದರು.

ರಸ್ತೆ, ಚರಂಡಿ, ನೀರು ಕೊಡುತ್ತೇನೆ ನನ್ನ ಕರ್ತವ್ಯ ಅದು. ಒಬ್ಬ ಶಾಸಕನಾಗಿ ಮಾಡಬೇಕು ಮಾಡುತ್ತೇನೆ. ಇನ್ನು ಉಳಿದಂತ ಯಾವುದೇ ಕೆಲಸ ವೈಯುಕ್ತಿಕವಾಗಿ ಮಾಡಲು ಆಗಲ್ಲ. ಇದರಲ್ಲಿ ಯಾವುದೇ ಮುಲಾಜಿಲ್ಲಾ. ಇವತ್ತೇ ನೀವೆಲ್ಲಾ ಸೇರಿ ತೀರ್ಮಾನ ಮಾಡಿಕೊಳ್ಳಿ, ಶಾಸಕರಿಗೆ ಒಂದೂವರೆ ಸಾವಿರ ಓಟು ಕೊಡುತ್ತೇನೆ ಅಂದರೆ ಇಲ್ಲಿಂದ ಹೊರಡುತ್ತೇನೆ ಎಂದು ನುಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us