Corona 2nd Wave ಕೊರೊನಾ 2ನೇ ಅಲೆ ಅಬ್ಬರ.. ಒಂದೇ ದಿನದಲ್ಲಿ 1 ಲಕ್ಷ 99 ಸಾವಿರ ಕೇಸ್ ಪತ್ತೆ

ಕೊರೊನಾ ಅಕ್ಷರಶಃ ರಕ್ಕಸನ ರೂಪ ತಾಳಿದೆ. ನಿನ್ನೆ ಒಂದೇ ದಿನ 1 ಲಕ್ಷ 99 ಸಾವಿರ ಕೇಸ್ ದೇಶಾದ್ಯಂತ ಕನ್ಫರ್ಮ್ ಆಗಿವೆ. ಪರಿಸ್ಥಿತಿ ಹೀಗಿರುವಾಗಲೇ ಪ್ರಧಾನಿ ಮೋದಿ ಹಾಗೂ ಉಪರಾಷ್ಟ್ರಪತಿ ದೇಶದ ಎಲ್ಲಾ ರಾಜ್ಯಗಳ ರಾಜ್ಯಪಾಲರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಕೊರೊನಾ ಕಂಟ್ರೋಲ್​ಗೆ ಅಗತ್ಯವಾದ ಸಲಹೆ ಹಾಗೂ ಸೂಚನೆ ನೀಡಿದ್ದಾರೆ.

Corona 2nd Wave ಕೊರೊನಾ 2ನೇ ಅಲೆ ಅಬ್ಬರ.. ಒಂದೇ ದಿನದಲ್ಲಿ 1 ಲಕ್ಷ 99 ಸಾವಿರ ಕೇಸ್ ಪತ್ತೆ
ದೆಹಲಿಯಲ್ಲಿ ಸ್ವಾಬ್ ಟೆಸ್ಟ್
Follow us
|

Updated on: Apr 15, 2021 | 8:33 AM

ದೆಹಲಿ: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕ್ರೂರಿ ಕೊರೊನಾ ತನ್ನ ಅಟ್ಟಹಾಸವನ್ನ ಮುಂದುವರಿಸಿದೆ. ಅದರಲ್ಲೂ ಭಾರತದಲ್ಲಿ 2ನೇ ಅಲೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ನಿನ್ನೆ ಒಂದೇ ದಿನ 1 ಲಕ್ಷ 99 ಸಾವಿರ ಕೇಸ್ ಕನ್ಫರ್ಮ್ ಆಗಿರೋದು, ದೇಶದಲ್ಲಿ ಕೊರೊನಾ 2ನೇ ಅಲೆಯ ಭೀಕರತೆಯನ್ನ ಸಾರಿ ಹೇಳುತ್ತಿದೆ. ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1,99,376 ಹೊಸ ಕೊರೊನಾ ಕೇಸ್​ಗಳು ಪತ್ತೆಯಾಗಿವೆ. ಕೊರೊನಾದ ಮೊದಲ ಅಲೆಯಲ್ಲೂ ಒಂದೇ ದಿನ ಇಷ್ಟೊಂದು ಕೇಸ್ ಪತ್ತೆಯಾಗಿರಲಿಲ್ಲ. ಅಮೆರಿಕಾದಲ್ಲಿ ಒಮ್ಮೆ ಎರಡು ಲಕ್ಷಕ್ಕೂ ಅಧಿಕ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿತ್ತು. ಈಗ ಭಾರತದಲ್ಲೂ ಆಮೆರಿಕಾದಂತೆ 24 ಗಂಟೆಯಲ್ಲಿ ಎರಡು ಲಕ್ಷ ಕೊರೊನಾ ಪಾಸಿಟಿವ್ ದೃಢವಾಗಿದೆ. ಇದರಿಂದ ಆತಂಕ ಹೆಚ್ಚಾಗಿದೆ.

ರಾಜ್ಯಪಾಲರ ಜೊತೆ ಪ್ರಧಾನಿ ಮೋದಿ ಮೀಟಿಂಗ್ ಇನ್ನು ದೇಶದ ಎಲ್ಲಾ ರಾಜ್ಯಗಳ ರಾಜ್ಯಪಾಲರು ಹಾಗೂ ಲೆಫ್ಟಿನೆಂಟ್ ಗವರ್​ನರ್​ಗಳ ಜೊತೆಗೆ ಸಭೆ ನಡೆಸಿದ ಪ್ರಧಾನಿ ಮೋದಿ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಹತ್ವದ ಸಲಹೆ ಸೂಚನೆ ನೀಡಿದ್ದಾರೆ. ರಾಜ್ಯಪಾಲರು ಮುಖ್ಯಮಂತ್ರಿಗಳ ಜೊತೆ ಕೊರೊನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಬೇಕು. ಸೋಂಕು ಹರಡದಂತೆ ಕ್ರಮಗಳನ್ನ ಕೈಗೊಳ್ಳಬೇಕೆಂದು ಉಪರಾಷ್ಟ್ರಪತಿ ಸೂಚಿಸಿದ್ರು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಪಿಎಂ ಮೋದಿ ಮಾತನಾಡಿ ಲಸಿಕಾ ಮಹೋತ್ಸವದ ಬಳಿಕ ದೇಶದಲ್ಲಿ ಲಸಿಕೆ ವಿತರಣೆ ಹೆಚ್ಚಳವಾಗಿರುವ ಬಗ್ಗೆ ತಿಳಿಸಿದ್ರು. ಇನ್ನೊಂದ್ಕಡೆ ಸಿಬಿಎಸ್​ಸಿ 10ನೇ ತರಗತಿ ಪರೀಕ್ಷೆಗಳನ್ನ ಕೇಂದ್ರ ಸರ್ಕಾರ ಕ್ಯಾನ್ಸಲ್ ಮಾಡಿದ್ದರೆ, ಸಿಬಿಎಸ್​ಸಿಯ 12ನೇ ತರಗತಿ ಪರೀಕ್ಷೆಗಳನ್ನ ಮುಂದೂಡಿ ಆದೇಶ ಹೊರಡಿಸಲಾಗಿದೆ. ಹಾಗೇ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬೋರ್ಡ್ ಎಕ್ಸಾಮ್​ಗಳನ್ನೂ ರದ್ದು ಮಾಡಲಾಗಿದೆ.

‘ಕುಂಭ ಮೇಳ’ದಲ್ಲಿ ಕೊರೊನಾ ಸ್ಫೋಟ ಇನ್ನು ಹರಿದ್ವಾರದಲ್ಲಿ ಕುಂಭ ಮೇಳ ಏಪ್ರಿಲ್ 30 ರವರೆಗೂ ಮುಂದುವರಿಯಲಿದೆ. ಮತ್ತೊಂದ್ಕಡೆ ಕಳೆದ 48 ಗಂಟೆ ಅವಧಿಯಲ್ಲಿ ಕುಂಭ ಮೇಳದಲ್ಲಿ ಭಾಗವಹಿಸಿದ್ದ 1 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಕನ್ಫರ್ಮ್ ಆಗಿದೆ. ಈ ನಡುವೆ ಕುಂಭ ಮೇಳ ಸ್ಥಗಿತಗೊಳ್ಳುವ ಮಾತುಗಳು ಕೇಳಿಬರುತ್ತಿದ್ದವು. ಆದರೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, ಯಾವುದೇ ಕಾರಣಕ್ಕೂ ಕುಂಭ ಮೇಳ ಅರ್ಧಕ್ಕೇ ನಿಲ್ಲುವುದಿಲ್ಲ ಎಂದಿದ್ದಾರೆ.

1ರಿಂದ 9ನೇ ತರಗತಿ ಪರೀಕ್ಷೆ ಭವಿಷ್ಯ ಇಂದು ನಿರ್ಧಾರ? ಇನ್ನು ಸಿಬಿಎಸ್‌ಇ 10 ನೇ ತರಗತಿ ಪರೀಕ್ಷೆಗಳು ರದ್ದಾಗ್ತಿದ್ದಂತೆ, ರಾಜ್ಯದಲ್ಲೂ ಎಸ್ಎಸ್‌ಎಲ್‌ಸಿ ಪರೀಕ್ಷೆಗಳು ರದ್ದಾಗಲಿವೆಯಾ ಅನ್ನೋ ಗೊಂದಲಗಳು ಶುರುವಾಗಿವೆ. ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌, ರಾಜ್ಯದಲ್ಲಿ SSLC ಪರೀಕ್ಷೆ ರದ್ದು ಮಾಡುವ ಯೋಚನೆ ಇಲ್ಲ. SSLC ಪರೀಕ್ಷೆ ಇರುವುದು ಜೂನ್​ನಲ್ಲಿ ಹಾಗೂ ದ್ವಿತೀಯ ಪಿಯು ಪರೀಕ್ಷೆ ಮೇ 24ರಿಂದ ಆರಂಭವಾಗಲಿದೆ. ಆ ವೇಳೆಗೆ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ. ಇಂದು ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಸುರೇಶ್‌ ಕುಮಾರ್‌ ಸಭೆ ನಡೆಸಿ 1 ರಿಂದ 9 ನೇ ತರಗತಿ ಪರೀಕ್ಷೆಗಳ ಬಗ್ಗೆ ತೀರ್ಮಾನ ಕೈಗೊಳ್ಳೋ ಸಾಧ್ಯತೆ ಇದೆ.

ಒಟ್ನಲ್ಲಿ ದೇಶಾದ್ಯಂತ ಮಹಾಮಾರಿ ಅಟ್ಟಹಾಸ ಮತ್ತೆ ಮುಂದುವರಿದಿದ್ದು, 2ನೇ ಅಲೆಯ ಅಬ್ಬರಕ್ಕೆ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ಈಗಾಗಲೇ ಬರೋಬ್ಬರಿ 2 ಲಕ್ಷದ ಗಡಿಗೆ ದಿನ ನಿತ್ಯದ ಸೋಂಕಿತರ ಸಂಖ್ಯೆ ಬಂದು ನಿಂತಿರುವುದು ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುವ ಆತಂಕ ಶುರುವಾಗಿದೆ. ಹೀಗಾಗಿ ಜನರು ಕೊರೊನಾ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.

(India Reports Nearly 2 Lakh Fresh Corona Cases on April 14)

ಇದನ್ನೂ ಓದಿ: ಹೆಚ್ಚಿನ ಕೊರೊನಾ ಸೋಂಕಿತರು ದೈಹಿಕವಾಗಿ ಚಟುವಟಿಕೆಗಳಿಂದ ಕೂಡಿರಲಿಲ್ಲ; ಅಧ್ಯಯನದಲ್ಲಿ ಹೊರಬಿತ್ತು ಕಟು ಅಂಶ