Prabhuling Navadgi: ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ರಾಜೀನಾಮೆ

ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಮರುದಿನವೇ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ರಾಜೀನಾಮೆ ನೀಡಿದ್ದಾರೆ.

Prabhuling Navadgi: ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ರಾಜೀನಾಮೆ
ಪ್ರಭುಲಿಂಗ ನಾವದಗಿ

Updated on: May 14, 2023 | 3:03 PM

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಮರುದಿನವೇ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ (Prabhuling Navadgi) ರಾಜೀನಾಮೆ ನೀಡಿದ್ದಾರೆ. ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ನಾವದಗಿ ಭಾನುವಾರ ರಾಜೀನಾಮೆ ನೀಡಿದರು. 2018ರ ಮೇ 18ರಂದು ನಾವದಗಿ ಅವರು ರಾಜ್ಯದ ಅಡ್ವೋಕೇಟ್ ಜನರಲ್ ಆಗಿ ನೇಮಕಗೊಂಡಿದ್ದರು. 2018ಕ್ಕೂ ಮುನ್ನ ಮಧುಸೂದನ್ ನಾಯಕ್ ಅವರು ಅಡ್ವೋಕೇಟ್ ಜನರಲ್ ಆಗಿದ್ದರು. ಅ ನಂತರ ಉದಯ್ ಹೊಳ್ಳ ಅವರು ಅಡ್ವೋಕೇಟ್ ಜನರಲ್ ಆಗಿದ್ದರು. ಹೆಚ್​ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್, ಕಾಂಗ್ರೆಸ್ ಸರ್ಕಾರ 2019ರಲ್ಲಿ ಪತನಗೊಂಡ ನಂತರ ಅವರೂ ರಾಜೀನಾಮೆ ನೀಡಿದ್ದರು.

ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಕಾಂಗ್ರೆಸ್ ಪಕ್ಷವು 137 ಸ್ಥಾನ ಗಳಿಸಿ ಭರ್ಜರಿ ಬಹುಮತ ಪಡೆದಿದೆ. ಬಿಜೆಪಿ 65 ಹಾಗೂ ಜೆಡಿಎಸ್ 19 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿವೆ. ಇತರರು ಮೂರು ಕಡೆ ಗೆಲುವು ಸಾಧಿಸಿದ್ದಾರೆ.

ಸಿಎಂ ಸ್ಥಾನಕ್ಕೆ ರೇಸ್​​ನಲ್ಲಿ ಸಿದ್ದರಾಮಯ್ಯ, ಡಿಕೆಶಿ

ಸದ್ಯ ವರುಣಾ ಕ್ಷೇತ್ರದಿಂದ ಗೆದ್ದಿರುವ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಆದ್ಯತೆ ಎಂದು ಭಾವಿಸಲಾಗಿದೆ. ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಗೊಂದಲಗಳಿದ್ದವು. ನಂತರ ಅವರು ವರುಣಾ ಕ್ಷೇತ್ರದಿಂದ ಕಣಕ್ಕಿಳಿದು ಬಿಜೆಪಿಯ ವಿ ಸೋಮಣ್ಣ ಅವರನ್ನು ಸೋಲಿಸಿದ್ದಾರೆ. ಕುರುಬ ಸಮುದಾಯದ ಪ್ರಬಲ ವ್ಯಕ್ತಿಯಾಗಿರುವ ಸಿದ್ದರಾಮಯ್ಯ, ಹಿಂದುಳಿದ ಎಲ್ಲಾ ಸಮುದಾಯದ ಅಂದರೆ ಅಹಿಂದ ನಾಯಕ ಎಂದು ಹೆಸರಾಗಿದ್ದಾರೆ. ಈ ಮಧ್ಯೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ಆಕಾಂಕ್ಷಿಯಾಗಿದ್ದು, ಒಕ್ಕಲಿಗ ಸಮುದಾಯದ ಅನೇಕ ಸ್ವಾಮೀಜಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ