ವಕ್ಫ್ ವಿರುದ್ಧ ಸಿಡಿದೆದ್ದ ಬಿಜೆಪಿ: ನಮ್ಮ ಭೂಮಿ, ನಮ್ಮ ಹಕ್ಕು ಘೋಷಣೆಯಡಿ ರಾಜ್ಯಾದ್ಯಂತ ಪ್ರತಿಭಟನೆ

ಬಿಜೆಪಿಯು ಕರ್ನಾಟಕದಾದ್ಯಂತ ವಕ್ಫ್ ಬೋರ್ಡ್ ನೋಟಿಸ್‌ ವಿರುದ್ಧ ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿದೆ. ರೈತರ ಭೂಮಿ ಮತ್ತು ದೇವಸ್ಥಾನಗಳ ಮೇಲಿನ ವಕ್ಫ್ ಬೋರ್ಡ್‌ನ ಹಕ್ಕುಸ್ವಾಮ್ಯದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯಾದ್ಯಂತ ನಡೆದ ಪ್ರತಿಭಟನೆಗಳಲ್ಲಿ ವಕ್ಫ್ ನೋಟಿಫಿಕೇಷನ್ ರದ್ದುಪಡಿಸುವಂತೆ ಒತ್ತಾಯಿಸಲಾಗಿದೆ.

ವಕ್ಫ್ ವಿರುದ್ಧ ಸಿಡಿದೆದ್ದ ಬಿಜೆಪಿ: ನಮ್ಮ ಭೂಮಿ, ನಮ್ಮ ಹಕ್ಕು ಘೋಷಣೆಯಡಿ ರಾಜ್ಯಾದ್ಯಂತ ಪ್ರತಿಭಟನೆ
ಚಿತ್ರದುರ್ಗದಲ್ಲಿ ಪ್ರತಿಭಟನೆ

Updated on: Nov 22, 2024 | 1:09 PM

ಬೆಂಗಳೂರು, ನವೆಂಬರ್ 22: ವಕ್ಫ್ ನೋಟಿಸ್​ಗಳ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ಕರ್ನಾಟಕದಾದ್ಯಂತ ‘ನಮ್ಮ ಭೂಮಿ, ನಮ್ಮ ಹಕ್ಕು ಘೋಷಣೆಯಡಿ’ ಪ್ರತಿಭಟನೆ ನಡೆಸುತ್ತಿದೆ. ಕೋಲಾರದಿಂದ ಮಂಗಳೂರಿನವರೆಗೆ, ಬೆಂಗಳೂರಿನಿಂದ ವಿಜಯಪುರದವರೆಗ ವಕ್ಫ್ ವಿವಾದ ವಿರೋಧಿಸಿ ಪ್ರತಿಭಟನೆಗಳಿದಿದೆ. ಕೂಡಲೇ ಗೆಜೆಟ್ ನೋಟಿಫಿಕೇಷನ್ ರದ್ದು ಮಾಡಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.

‘‘ರದ್ದಾಗಲಿ, ವಕ್ಫ್ ಬೋರ್ಡ್ ರದ್ದಾಗಲಿ’’ ಎಂಬ ಘೋಷಣೆ ಬಿಜೆಪಿ ಪ್ರತಿಭಟನೆ ವೇಳೆ ಎಲ್ಲೆಡೆ ಕೇಳಿಬಂತು. ರೈತರ ಜಮೀನು, ದೇವಸ್ಥಾನ ಸೇರಿದಂತೆ ಹಲವು ಆಸ್ತಿಗಳಲ್ಲಿ ವಕ್ಫ್ ಬೋರ್ಡ್ ಆಸ್ತಿ ಅಂತಾ ನಮೂದಾಗುತ್ತಿರುವುದನ್ನು ವಿರೋಧಿಸಿ ಬಿಜೆಪಿ ರಾಜ್ಯದ ಹಲವಡೆ ಪ್ರತಿಭಟನೆ ನಡೆಸಿತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯಡಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ನಾಯಕರು, ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅತ್ತ ಮೈಸೂರಿನಲ್ಲೂ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಪ್ರತಿಭಟನೆ ನಡೀತು. ಮಂಗಳೂರಿನಲ್ಲಿ ಗಾಂಧಿಪ್ರತಿಮೆ ಬಳಿ ಸ್ಥಳೀಯ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ಕೊಡಗಿನಲ್ಲಿ ಪ್ರತಾಪ್ ಸಿಂಹ ಸೇರಿ ಹಲವು ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದರು.

ಲೋಕಸಭೆ ಚುನಾವಣೆ ಬಳಿಕ ಮೊದಲ ಬಾರಿ ಬಿಜೆಪಿ ಪ್ರತಿಭಟನೆಯಲ್ಲಿ ಸುಮಲತಾ!

ಮಂಡ್ಯದಲ್ಲಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಲೋಕಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ಸುಮಲತಾ ಬಿಜೆಪಿ ಹೋರಾಟದಲ್ಲಿ ಕಾಣಿಸಿಕೊಂಡರು.

ವಕ್ಫ್ ವಿರುದ್ಧದ ಬಿಜೆಪಿ ಹೋರಾಟಕ್ಕೆ ಕಾಂಗ್ರೆಸ್ ನಾಯಕರ ಕಿಡಿ

ಬಿಜೆಪಿ ನಾಯಕರ ವಕ್ಫ್ ವಿರುದ್ಧದ ಹೋರಾಟಕ್ಕೆ ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದಾರೆ. ಪಬ್ಲಿಸಿಟಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ. ಕ್ರೆಡಿಟ್‌ಗಾಗಿ ಹೋರಾಟ ನಡೆದಿದೆ ಅಂತಾ ಎಂ.ಬಿ ಪಾಟೀಲ್ ವ್ಯಂಗ್ಯವಾಡಿದ್ದಾರೆ. ಹೋರಾಟ ಮಾಡದೇ ಇದ್ದರೆ ಅವರಿಗೆ ಹೇಗೆ ಸ್ಥಾನಮಾನ ಸಿಗುತ್ತದೆ ಎಂದು ಚಲುವರಾಯಸ್ವಾಮಿ ಕೂಡಾ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ವಕ್ಫ್ ವಿರುದ್ಧ ಯತ್ನಾಳ್ ಪ್ರತ್ಯೇಕ ಹೋರಾಟದ ಕಿಚ್ಚು

ಒಂದೆಡೆ ಬಿಜೆಪಿ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಬಸನಗೌಡ ಪಾಟೀಲ್ ಯತ್ನಾಳ್ ಬಣವೂ ಪ್ರತ್ಯೇಕ ಹೋರಾಟಕ್ಕೆ ಸಿದ್ದತೆ ನಡೆಸುತ್ತಿದೆ. ಹೀಗಾಗಿ ದೆಹಲಿ ಪ್ರವಾಸ ಕೈಗೊಂಡಿರೋ ಬಿವೈ ವಿಜಯೇಂದ್ರ, ಈ ಕುರಿತು ವರಿಷ್ಠರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಇದೇ ವೇಳೆ ಬಂಡಾಯ ನಾಯಕರ ಬಗ್ಗೆ ವಿಜಯೇಂದ್ರ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಡಿಸೆಂಬರ್​ನಲ್ಲಿ ಬಿಜೆಪಿಯ ಐದಾರು ಬಾಗಿಲುಗಳು ಮುಚ್ಚಲಿವೆ: ಬಿವೈ ವಿಜಯೇಂದ್ರ ಮಾರ್ಮಿಕ ಮಾತು

ಈ ಮಧ್ಯೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಸಚಿವ ಜಮೀರ್ ಅಹ್ಮದ್ ಕಚೇರಿಗೆ ಮುತ್ತಿಗೆ ಹಾಕಲು ತೆರಳಿದ್ದರು. ಮುತಾಲಿಕ್ ಸೇರಿ ಹಲವನ್ನ ದಾರಿಮಧ್ಯೆಯೇ ತಡೆದು ಪೊಲೀಸರು ವಶಕ್ಕೆ ಪಡೆದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us