ಮಹಿಳೆಯರೇ ಗಮನಿಸಿ: ಉಚಿತ ಪ್ರಯಾಣಕ್ಕೂ ಟಿಕೆಟ್​ ಪಡೆಯಲೇಬೇಕು: ಫ್ರೀ ಬಸ್ ಟಿಕೆಟ್ ಹೇಗರಲಿದೆ ಗೊತ್ತಾ?

ಕರ್ನಾಟಕ ಕಾಂಗ್ರೆಸ್ ಘೋಷಣೆ ಮಾಡಿದ 5 ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಸಹ ಒಂದು. 'ಶಕ್ತಿ' ಹೆಸರಿನ ಈ ಯೋಜನೆಗೆ ಜೂನ್ 11ರಂದು ಚಾಲನೆ ಸಿಗಲಿದೆ. ಬಸ್‌ನಲ್ಲಿ ಮಹಿಳೆಯರು ಉಚಿತವಾಗಿ ಸಂಚಾರ ನಡೆಸಬೇಕಾದರೂ ಸಹ ಟಿಕೆಟ್ ಪಡೆಯಬೇಕಿದೆ.

ಮಹಿಳೆಯರೇ ಗಮನಿಸಿ: ಉಚಿತ ಪ್ರಯಾಣಕ್ಕೂ ಟಿಕೆಟ್​ ಪಡೆಯಲೇಬೇಕು: ಫ್ರೀ ಬಸ್ ಟಿಕೆಟ್ ಹೇಗರಲಿದೆ ಗೊತ್ತಾ?
ಮಹಿಳೆಯರಿಗಾಗಿ ಫ್ರೀ ಬಸ್ ಟಿಕೆಟ್

Updated on: Jun 04, 2023 | 4:29 PM

ಬೆಂಗಳೂರು: ಕಾಂಗ್ರೆಸ್ ಪಕ್ಷ​ ಅಧಿಕಾರ ಬಂದ ಕೂಡಲೇ ಚುನಾವಣೆಗೂ ಮುನ್ನ ಘೋಷಿಸಿದ್ದ ಶಕ್ತಿ ಯೋಜನೆಯನ್ನು (Free Bus Travel For Women Scheme) ಜಾರಿಗೆ ತರಲು ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ಈ ಯೋಜನೆಗೆ ಜೂನ್ 11ರಂದು ಚಾಲನೆ ಸಿಗಲಿದ್ದು, ಉಚಿತವಾಗಿ ಪ್ರಯಾಣಿಸುವ ಮಹಿಳೆ ಅಂಕಿ-ಅಂಶವನ್ನು ಲೆಕ್ಕಹಾಕಲು ಸರ್ಕಾರ ಕೆಲ ಹೊಸ ಮಾದರಿಯ ಟಿಕೆಟ್ ಜಾರಿಗೆ ತರಲು ಮುಂದಾಗಿದೆ. ಹೌದು.. ಸರ್ಕಾರಿ ಬಸ್‌ನಲ್ಲಿ ಮಹಿಳೆಯರು ಉಚಿತವಾಗಿ ಸಂಚಾರ ನಡೆಸಬೇಕಾದರೂ ಸಹ ಟಿಕೆಟ್ ಪಡೆಯಬೇಕಿದೆ. ಹೀಗಾಗಿ ಕೆಎಸ್ಆರ್‌ಟಿಸಿ, ಬಿಎಂಟಿಸಿ ಹೊಸ ಮಾದರಿ ಟಿಕೆಟ್ ಬಿಡುಗಡೆ ಮಾಡಲಿವೆ. ಆದರೆ ಈ ಟಿಕೆಟ್ ಪಡೆಯಲು ಮಹಿಳೆಯರು ಹಣ ಕೊಡಬೇಕಿಲ್ಲ. ಹಾಗಿದ್ರೆ ಬಸ್ ಗಳಲ್ಲಿ ಮಹಿಳೆಯರಿಗೆ ನೀಡುವ ಟಿಕೆಟ್ ಯಾವ ರೀತಿ ಇರುತ್ತೆ ಎನ್ನುವುದು ಈ ಕೆಳಗಿನಂತಿದೆ ನೊಡಿ.

ಇದನ್ನೂ ಓದಿ: Karnataka Guarantee Schemes: 5 ಗ್ಯಾರಂಟಿ ಜಾರಿ, ಅಧಿಕೃತವಾಗಿ ಘೋಷಿಸಿದ ಸಿಎಂ: ಕಂಡೀಷನ್​ಗಳೇನು? ಇಲ್ಲಿದೆ ವಿವರ

ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಬಸ್​ನಲ್ಲಿ ಟಿಕೆಟ್ ಪಡೆಯುವ ಗೋಜಿಲ್ಲ ಎಂದು ಮಹಿಳೆಯರು ಅಂದುಕೊಳ್ಳಬೇಡಿ. ಏಕೆಂದರೆ, ಕಂಡಕ್ಟರ್​ ಮಹಿಳೆಯರಿಗೂ ಟಿಕೆಟ್ ಕೊಡುತ್ತಾರೆ. ಟಿಕೆಟ್​ ಮೇಲೆ ‘ಮಹಿಳಾ ಪ್ರಯಾಣಿಕರ ಉಚಿತ ಚೀಟಿ ಶಕ್ತಿ ಯೋಜನೆ’ ಎಂದು ಬರೆದಿರುತ್ತಾರೆ ಮತ್ತು ಟಿಕೆಟ್​ನಲ್ಲಿ ಯಾವುದೇ ಬೆಲೆ ನಮೂದಾಗಿರುವುದಿಲ್ಲ. ಆದ್ರೆ, ಎಲ್ಲಿಂದ ಎಲ್ಲಿಗೆ ಎನ್ನುವ ಮಾಹಿತಿ ಹಾಕಿ ನಿರ್ವಾಹಕರು ಟಿಕೆಟ್ ನೀಡಲಿದ್ದಾರೆ.

ನಾಲ್ಕು ನಿಗಮದ ಬಸ್ಸುಗಳಲ್ಲು ಮಹಿಳೆಯರಿಗೆ ಈ ರೀತಿಯ ಟಿಕೆಟ್ ನೀಡಲಾಗುತ್ತದೆ. ಹೀಗಾಗಿ ಮಹಿಳೆಯರು ಮಾಮೂಲಿಯಂತೆ ಕಂಡಕ್ಟರ್​ ಬಳಿ ಟಿಕೆಟ್​ ಪಡೆದುಕೊಳ್ಳಬೇಕು. ಸರ್ಕಾರ ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು ಹಣ ನೀಡಲು ಲೆಕ್ಕ ಬೇಕಾಗಿರುವ ಕಾರಣದಿಂದ ಈ ಮಾರ್ಗ ಅನುಸರಿಸಲಾಗಿದೆ.

ರಾಜ್ಯದ ಮಹಿಳೆಯರಿಗೆ ಮಾತ್ರ ಬಸ್ಸುಗಳಲ್ಲಿ ಉಚಿತ ಅವಕಾಶ ನೀಡಲಾಗಿದ್ದು, ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ರೇಷನ್ ಕಾರ್ಡ್ ಕಡ್ಡಾಯವಾಗಿರುತ್ತದೆ. ರಾಜಹಂಸ ಸೇರಿದಂತೆ ಎಸಿ ಬಸ್ಸುಗಳನ್ನು ಹೊರತು ಪಡಿಸಿ ಎಲ್ಲಾ ವೇಗದೂತ ಮತ್ತು ನಾರ್ಮಲ್ ಬಸ್ಸುಗಳಲ್ಲಿ ಪ್ರಯಾಣ ಮಾಡಬಹುದು. ಇದರೊಂದಿಗೆ ಉಚಿತ ಪ್ರಯಾಣದ ವೇಳೆ ಮಹಿಳೆರಿಗೆ ಟಿಕೆಟ್​ ಕೊಡುತ್ತಾರಾ? ಅಥವಾ ಯಾವುದಾದರೂ ದಾಖಲೆ ತೆಗೆದುಕೊಂಡು ಹೋಗಬೇಕಾ ಎಂಬ ಗೊಂದಲ ಮಹಿಳೆಯರಲ್ಲಿತ್ತು. ಆದ್ರೆ, ಇದೀಗ ಆ ಗೊಂದಲಕ್ಕೆ ಈಗ ತೆರೆಬಿದ್ದಿದೆ.

Published On - 4:27 pm, Sun, 4 June 23

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us