ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್​ ಹಾಕುವ ಮುನ್ನ ಎಚ್ಚರ: ಇಲ್ಲಿದೆ ಆರೋಗ್ಯ ಇಲಾಖೆಯ ಗೈಡ್​ಲೈನ್ಸ್

ಕೆಮ್ಮಿನ ಸಿರಪ್ ಸೇವನೆಯಿಂದಾಗಿ ಮಕ್ಕಳ ಸರಣಿ ಸಾವಿನ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. 2 ವರ್ಷದೊಳಗಿನ ಮಕ್ಕಳಿಗೆ ಶೀತ, ಕೆಮ್ಮಿನ ಸಿರಪ್ ನೀಡಬೇಡಿ ಎಂದು ಈಗಾಗಲೇ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಆ ಬೆನ್ನಲ್ಲೇ ರಾಜ್ಯ ಸರ್ಕಾರವೂ ಗೈಡ್​ಲೈನ್ಸ್​ ಬಿಡುಗಡೆ ಮಾಡಿದೆ.

ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್​ ಹಾಕುವ ಮುನ್ನ ಎಚ್ಚರ: ಇಲ್ಲಿದೆ ಆರೋಗ್ಯ ಇಲಾಖೆಯ ಗೈಡ್​ಲೈನ್ಸ್
ಮಾರ್ಗಸೂಚಿ ಬಿಡುಗಡೆ
Updated By: ಪ್ರಸನ್ನ ಹೆಗಡೆ

Updated on: Oct 06, 2025 | 8:04 PM

ಬೆಂಗಳೂರು, ಅಕ್ಟೋಬರ್​ 06: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ (Cough Syrup)​ ಸೇವನೆಯಿಂದಾಗಿ ಮಕ್ಕಳ ಸರಣಿ ಸಾವಿನ ಬೆನ್ನಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಲರ್ಟ್​ ಆಗಿವೆ. 2 ವರ್ಷದೊಳಗಿನ ಮಕ್ಕಳಿಗೆ ಶೀತ, ಕೆಮ್ಮಿನ ಸಿರಪ್ ನೀಡಬೇಡಿ ಎಂದು ಈಗಾಗಲೇ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಈಗ ರಾಜ್ಯ ಆರೋಗ್ಯ ಇಲಾಖೆಯಿಂದಲೂ ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಹಲವು ಪ್ರಮುಖ ಅಂಶಗಳನ್ನ ಇದರಲ್ಲಿ ಉಲ್ಲೇಖಿಸಲಾಗಿದೆ.

ಮಾರ್ಗಸೂಚಿಯಲ್ಲಿ ಏನಿದೆ?

  • 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಅಥವಾ ಶೀತದ ಸಿರಪ್​ಗಳನ್ನು ನೀಡಬಾರದು.
  • 2ರಿಂದ 5 ವರ್ಷಗಳ ವಯಸ್ಸಿನ ಮಕ್ಕಳಿಗೆ ಸರಿಯಾದ ವೈದ್ಯಕೀಯ ಪರೀಕ್ಷೆಯ ನಂತರ ತಜ್ಞ ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಮಾತ್ರ ಔಷಧಿಗಳನ್ನು ನೀಡಿ.
  • ಸಾಧ್ಯವಾದಷ್ಟು ಕಡಿಮೆ ಅವಧಿಗೆ ಕನಿಷ್ಠ ಅಗತ್ಯವಿರುವ ಡೋಸ್ ಬಳಸಿ. ಬಹು ಔಷಧಿಗಳ ಸಂಯೋಜನೆ ಇರುವ ಸಿರಪ್​ಗಳ ಬಳಕೆ ಬೇಡ.
  • ಸುರಕ್ಷಿತ  ಮನೆ ಮದ್ದು, ಹೆಚ್ಚು ದ್ರವ ಪದಾರ್ಥಗಳನ್ನ ಮಕ್ಕಳಿಗೆ ನೀಡುವ ಜೊತೆ ವಿಶ್ರಾಂತಿ ಮತ್ತು ನಿದ್ರೆಗೆ ಅವಕಾಶ ಮಾಡಿಕೊಡಿ.
  • ಮಕ್ಕಳಿಗೆ ಸಾಧ್ಯವಾದಷ್ಟು ಪೌಷ್ಟಿಕ ಆಹಾರಗಳನ್ನೇ ನೀಡಿ. ಯಾವುದೇ ಕಾರಣಕ್ಕೂ ಸ್ವಯಂ ಔಷಧೋಪಚಾರ ಮಾಡಬೇಡಿ.
  • ವೈದ್ಯರ prescription ಇಲ್ಲದೆ ಕೆಮ್ಮಿನ ಸಿರಪ್​ಗಳನ್ನು ಎಂದಿಗೂ ಖರೀದಿಸಬೇಡಿ ಅಥವಾ ಬಳಸಬೇಡಿ.
  • ಈ ಹಿಂದೆ ಬಳಸಿ ಉಳಿದ ಔಷಧಗಳನ್ನು ಅಥವಾ ಇತರರು ಶಿಫಾರಸು ಮಾಡಿದ ಔಷಧಗಳನ್ನು ಬಳಸುವುದನ್ನು ನಿಲ್ಲಿಸಿ.
  • ಮಕ್ಕಳಲ್ಲಿ ಯಾವುದೇ ಅಸಹಜ ಪ್ರತಿಕ್ರಿಯೆ, ನಿದ್ರಾವಸ್ಥೆ, ವಾಂತಿ ಅಥವಾ ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣ ಹತ್ತಿರದ ತಜ್ಞ ವೈದ್ಯರಿಗೆ ತೋರಿಸಿ.
  • ಔಷಧದ ಅವಧಿ ಮುಗಿಯುವ ದಿನಾಂಕ  ಪರಿಶೀಲಿಸಿ ಮತ್ತು ಲೇಬಲ್​ಗಳನ್ನು ಎಚ್ಚರಿಕೆಯಿಂದ ಓದಿ.

ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್​ನಲ್ಲಿ ಕೋಲ್ಡ್ರಿಪ್ ಸಿರಪ್ ಬ್ಯಾನ್; ಮಾರಕ ಸಿರಪ್ ನಾವು ಬಳಸುವುದೇ ಇಲ್ಲ ಎಂದ ವೈದ್ಯರು

ಕರ್ನಾಟಕದಲ್ಲಿ ಮುನ್ನೆಚ್ಚರಿಕೆ

ರಾಜ್ಯದಲ್ಲಿ ಎಲ್ಲಾ ಕಂಪನಿಗಳ ಕೆಮ್ಮಿನ ಸಿರಪ್​ ಮಾದರಿ ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ಮಕ್ಕಳ ಸಾವಿಗೆ ಕಾರಣವಾಗಿರುವ ಕೆಮ್ಮಿನ ಸಿರಪ್ ಕರ್ನಾಟಕದಲ್ಲಿ ಸರಬರಾಜು ಆಗಿಲ್ಲ. ಹಾಗಾಗಿ ಯಾರೂ ಭಯಪಡಬೇಕಿಲ್ಲ. ಹೀಗಿದ್ದರೂ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಸಿರಪ್​ ಕುಡಿಸುವಾಗಲೂ ಪೋಷಕರು ಬಹಳ ಎಚ್ಚರ ವಹಿಸಿ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್‌ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:30 pm, Mon, 6 October 25