ಕಾರವಾರದ INS ವಿಕ್ರಮಾದಿತ್ಯ ಯುದ್ಧನೌಕೆಯಲ್ಲಿ ಬೆಂಕಿ, ಅವಘಡ ತಪ್ಪಿಸಿದ ಸಿಬ್ಬಂದಿ

ಪ್ರಾಯೋಗಿಕ ಕಾರ್ಯಾಚರಣೆ ನಡೆಸುತ್ತಿದ್ದಾಗ ಕಾರವಾರ ಅರಗಾದ ನೌಕಾನೆಲೆಯಲ್ಲಿರುವ ವಿಕ್ರಾಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕಾರ್ಯೋನ್ಮಖರಾದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರವಾರದ INS ವಿಕ್ರಮಾದಿತ್ಯ ಯುದ್ಧನೌಕೆಯಲ್ಲಿ ಬೆಂಕಿ, ಅವಘಡ ತಪ್ಪಿಸಿದ ಸಿಬ್ಬಂದಿ
ಐಎನ್​ಎಸ್ ವಿಕ್ರಮಾದಿತ್ಯ ಯುದ್ಧ ನೌಕೆ
Updated By: Rakesh Nayak Manchi

Updated on: Jul 21, 2022 | 7:06 AM

ಉತ್ತರ ಕನ್ನಡ: ದೇಶದ ನೌಕಾಪಡೆಯ ಅತಿದೊಡ್ಡ ವಿಮಾನ ವಾಹಕ ಯುದ್ಧ ನೌಕೆ ಐಎನ್​ಎಸ್ ವಿಕ್ರಮಾದಿತ್ಯ (INS Vikramaditya) ದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಿಬ್ಬಂದಿಯ ಶೀಘ್ರ ಕಾರ್ಯಾಚರಣೆಯಿಂದಾಗಿ ಭಾರೀ ಅವಘಡವೊಂದು ತಪ್ಪಿದಂತಾಗಿದೆ. ಪ್ರಾಯೋಗಿಕ ಕಾರ್ಯಾಚರಣೆ ನಡೆಸುತ್ತಿದ್ದಾಗ ಕಾರವಾರ ಅರಗಾದ ನೌಕಾನೆಲೆಯಲ್ಲಿರುವ ವಿಕ್ರಾಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ನೌಕೆಗೆ ಬೆಂಕಿ ಹತ್ತಿಕೊಂಡ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಕಾರ್ಯೋನ್ಮುಖರಾದ ಸಿಬ್ಬಂದಿ ಯುದ್ಧ ನೌಕೆಯಲ್ಲಿರುವ ಅಗ್ನಿ ‌ನಿರೋಧಕ ಪರಿಕರಗಳನ್ನು ಬಳಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಬೆಂಕಿ ಕಾಣಿಸಿಕೊಂಡ ಘಟನೆ ಬಗ್ಗೆ ತನಿಖೆ ನಡೆಸುವಂತೆ ಉನ್ನತ ಅಧಿಕಾರಿಗಳು ಆದೇಶಿಸಿದ್ದಾರೆ.

ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಇದೇ ಮೊದಲೇನಲ್ಲ, ಕಳೆದ ವರ್ಷ ಮೇ 8ರಂದು ಬೆಂಕಿ ಕಾಣಿಸಿಕೊಂಡಿತ್ತು. ಕಾರಾವರ ಕದಂಬ ನೌಕಾ ನೆಲೆಯಲ್ಲಿದ್ದ ವಿಕ್ರಮಾದಿತ್ಯ ಯುದ್ಧ ಹಡಗಿನಲ್ಲಿ ಸಿಬ್ಬಂದಿ ವಸತಿ ಇರುವ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಘಟನೆ ವೇಳೆ ಹೊಗೆ ಕಾಣಿಸಿಕೊಂಡಿದ್ದರಿಂದ ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದರು. ಘಟನೆಯಲ್ಲಿ ಯಾವುದೇ ಗಾಯಗಳಾಗಿರಲಿಲ್ಲ. ಇದಕ್ಕೂ ಮುನ್ನ 2019ರ ಏ.26ರಂದು ಐಎನ್​ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಆದರೆ ಈ ದುರ್ಘಟನೆಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದರು.

ನವೆಂಬರ್ 2013 ರಲ್ಲಿ ರಷ್ಯಾದೊಂದಿಗೆ $2.33 ಬಿಲಿಯನ್ ಒಪ್ಪಂದದ ಅಡಿಯಲ್ಲಿ ಭಾರತೀಯ ನೌಕಾಪಡೆಯುINS ವಿಕ್ರಮಾದಿತ್ಯ ಅಥವಾ ನವೀಕರಿಸಿದ ಅಡ್ಮಿರಲ್ ಗೋರ್ಶ್ಕೋವ್ ಅನ್ನು ಸೇರ್ಪಡೆಗೊಳಿಸಿತು. 45 MiG-29K ಗಳನ್ನು ಅದರ ಡೆಕ್‌ನಿಂದ ಕಾರ್ಯನಿರ್ವಹಿಸಲು ಮತ್ತೊಂದು $2 ಶತಕೋಟಿಗೆ ಸ್ವಾಧೀನಪಡಿಸಿಕೊಂಡಿತು, ವಿಮಾನವಾಹಕ ನೌಕೆಯು ಭಾರತ ಇದುವರೆಗೆ ಖರೀದಿಸಿದ ಅತ್ಯಂತ ದುಬಾರಿ ಏಕ ಶಸ್ತ್ರಾಸ್ತ್ರ ವೇದಿಕೆಯಾಗಿದೆ.

ಹೊತ್ತಿ ಉರಿದ ಲೈಬ್ರರಿ, ಸುಟ್ಟುಕರಕಲಾಗಿರುವ ಪರಿಕರಗಳು

ಉತ್ತರ ಕನ್ನಡ: ಜಿಲ್ಲೆಯಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಶಾರ್ಟ್​ ಸರ್ಕ್ಯೂಟ್​ನಿಂದ ಗ್ರಂಥಾಲಯಕ್ಕೆ ಬೆಂಕಿ ಹತ್ತಿಕೊಂಡು ಪರಿಕರಗಳ ಸುಟ್ಟುಕರಕಲಾಗಿವೆ. ಹೊನ್ನಾವರದ ತಾಲೂಕಿನ ಗ್ರಂಥಾಲಯದಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಕಂಪ್ಯೂಟರ್​, ಕುರ್ಚಿ, ಟೇಬಲ್ ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟು ಭಸ್ಮವಾಗಿವೆ. ಗ್ರಂಥಾಲಯದಲ್ಲಿ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಅಕ್ಕ ಪಕ್ಕದ ಅಂಗಡಿಯವರು ಆತಂಕಗೊಂಡು ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಬೆಂಕಿ ನಂದಿಸಿದ್ದಾರೆ. ಆ ಮೂಲಕ ದೊಡ್ಡ ದುರಂತವೊಂದನ್ನು ತಪ್ಪಿದಂತಾಗಿದೆ.

Published On - 7:06 am, Thu, 21 July 22