ಜಲ ಇಲ್ಲ…ಯೋಜನೆಯೂ ಇಲ್ಲ…ಕೋಲಾರದಲ್ಲಿ ಹಳ್ಳ ಹಿಡಿದ ಜಲ ಜೀವನ್​ ಮಿಷನ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 26, 2024 | 9:59 PM

ಅದು ಕೇಂದ್ರ ಮತ್ತು ರಾಜ್ಯ ಸರ್ಕಾರದ‌ ಮಹತ್ವಾಕಾಂಕ್ಷಿ ಕುಡಿಯುವ ನೀರಿನ ಯೋಜನೆ, ಪ್ರತಿಯೊಂದು ಮನೆಗೂ ಕುಡಿಯುವ ನೀರು ಕೊಡುವ ಮನೆ ಮನೆ‌ ಗಂಗೆ ಪ್ರಯೋಗಿಕವಾಗಿ ಗ್ರಾಮದಲ್ಲಿ ಮಾಡಲಾಗಿದ್ದ ಯೋಜನೆ. ಆದರೆ, ಗುತ್ತಿಗೆದಾರರ ಬೇಜವಾಬ್ದಾರಿ ಹಾಗೂ ಕಳಪೆ ಕಾಮಗಾರಿಯಿಂದ ಇತ್ತ ಗ್ರಾಮದ ಜನರು ಅತ್ತ ಯೋಜನೆಯೂ ಇಲ್ಲದೆ ನೀರು ಇಲ್ಲದೆ ಪರದಾಡುವಂತಾಗಿದೆ.

ಜಲ ಇಲ್ಲ...ಯೋಜನೆಯೂ ಇಲ್ಲ...ಕೋಲಾರದಲ್ಲಿ ಹಳ್ಳ ಹಿಡಿದ ಜಲ ಜೀವನ್​ ಮಿಷನ್
ಕೋಲಾರದಲ್ಲಿ ಹಳ್ಳ ಹಿಡಿದ ಜಲ ಜೀವನ್​ ಮಿಷನ್
Follow us on
ಕೋಲಾರ, ಜೂ.26: ಕೇಂದ್ರ ಸರ್ಕಾರದ ‘ಜಲ ಜೀವನ್​ ಮಿಷನ್’​(Jal Jeevan Mission) ಅಡಿಯಲ್ಲಿ ಕೋಲಾರ ಜಿಲ್ಲಾ ಪಂಚಾಯತಿ ವತಿಯಿಂದ ಜಲಜೀವನ್​ ಯೋಜನೆ ಕಾಮಗಾರಿ ನಡೆಯುತ್ತಿದೆ. ಅದರಲ್ಲೂ ಕೋಲಾರ(Kolar) ತಾಲ್ಲೂಕಿನ ಸೂಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗರುಡನಹಳ್ಳಿ ಗ್ರಾಮದಲ್ಲಿ ಈ ಯೋಜನೆ ಪ್ರಾಯೋಗಿವಾಗಿ ಮಾಡಲಾಯಿತು. ಆದರೆ, ಪ್ರಾಯೋಗಿಕ ಯೋಜನೆಯನ್ನೇ ಸರಿಯಾಗಿ ಮಾಡದೆ ಕಳಪೆ ಕಾಮಗಾರಿ ಹಾಗೂ ಅವೈಜ್ಞಾನಿಕವಾಗಿ ಕುಡಿಯುವ ನೀರಿನ ಪೈಪ್​ಗಳನ್ನು ಅಳವಡಿಸಲಾಗಿದೆ. ಇದರಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಮೊದಲ ಹಂತದಲ್ಲಿ ಹಳ್ಳ ಹಿಡಿದಿದೆ.
ಸುಮಾರು 200 ಮನೆಗಳಿರುವ ಗರುಡನಹಳ್ಳಿ ಗ್ರಾಮದಲ್ಲಿ ಸುಮಾರು 96 ಲಕ್ಷ ರೂ.ಗಳಲ್ಲಿ ಯೋಜನೆ ಕಾಮಗಾರಿ ಮಾಡಲಾಗಿದೆ. ಪೈಪ್ ಲೈನ್, ನಲ್ಲಿಗಳು, ಮೀಟರ್ ಅಳವಡಿಕೆಯನ್ನು ಮಾಡಲಾಗಿದೆ. ಆದ್ರೆ, ಕಳಪೆ ಕಾಮಗಾರಿಯಿಂದ ಯೋಜನೆ ಜನರಿಗೆ ತಲುಪುವ ಮೊದಲೇ ಹಾಳಾಗಿದ್ದು, ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಮನೆಗಳಿದ್ದು, ಶೇ.40 ರಷ್ಟು ಮನೆಗೆ ಸಮಪರ್ಕವಾಗಿ ನೀರು ಹೋಗುತ್ತಿಲ್ಲ. ‌ಜೊತೆಗೆ‌ ಹಾಕಿರುವಂತಹ ಮೀಟರ್, ಪೈಪ್​ನಲ್ಲಿ, ವಾಲ್ವ್​, ಎಲ್ಲವೂ ಕಳಪೆಯಿಂದ ಕೂಡಿದ್ದರ ಪರಿಣಾಮ ಪೈಪ್​ಗಳಲ್ಲಿ ಹರಿಯಬೇಕಿದ್ದ ನೀರು ರಸ್ತೆಯಲ್ಲೇ ಸೋರಿಕೆಯಾಗುತ್ತಿದೆ. ಜೊತೆಗೆ ಅವೈಜ್ಞಾನಿಕ ಕಾಮಗಾರಿಯಿಂದ ಅರ್ಧ ಗ್ರಾಮದ ಮನೆಗಳಿಗೆ ನೀರೇ ಹೋಗುತ್ತಿಲ್ಲ.
ಇದನ್ನೂ ಓದಿ:ಕೊಪ್ಪಳ: ಬಿಂದಿಗೆ ನೀರಿಗಾಗಿ ಜನರ ಪರದಾಟ; ಶಾಲೆ ಬಿಟ್ಟು ನೀರು ತುಂಬಿಸೋದನ್ನೇ ಕೆಲಸ ಮಾಡಿಕೊಂಡಿರುವ ಶಾಲಾ ಮಕ್ಕಳು
ಇನ್ನು ಕೋಲಾರ ಜಿಲ್ಲೆಯಲ್ಲಿ ಸುಮಾರು‌ 1813 ಗ್ರಾಮಗಳನ್ನು ಜಲಜೀವನ್ ಮಿಷನ್​ ಯೋಜನೆಯಲ್ಲಿ ಆಯ್ಕೆ ಮಾಡಲಾಗಿದೆ. ಯೋಜನೆಗಾಗಿ ಕೋಟ್ಯಾಂತರ ರೂಪಾಯಿಯನ್ನು ಸರ್ಕಾರಗಳು ವ್ಯಯ ಮಾಡಲಾಗುತ್ತಿದೆ. ಪ್ರತಿಯೊಂದು ಮನೆಗೂ ನೀರು ಕೊಡಲು ನೀಡಲು ಸರ್ಕಾರ ಮಹತ್ವದ ಯೋಜನೆ ರೂಪಿಸಲಾಗಿದೆ. ಕೋಲಾರ ಜಿಲ್ಲೆಯಲ್ಲಿ 1813 ಗ್ರಾಮಗಳ ಪೈಕಿ ಮೊದಲ‌ ಹಂತದಲ್ಲಿ  813 ಗ್ರಾಮಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಇನ್ನು 280 ಹಳ್ಳಿಗಳ ಟಿಂಡರ್ ಪ್ರಕ್ರಿಯೆ ನಡೆದಿದ್ದು, ವರ್ಕ್ ಆಡರ್ ಕೊಡಲಾಗುತ್ತಿದೆ. 50  ಗ್ರಾಮಗಳ ಟೆಂಡರ್ ಕರೆಯಬೇಕಾಗಿದ್ದು, ಸದ್ಯದಲ್ಲಿ ಎಲ್ಲಾ ಕಾಮಗಾರಿಗಳು ಆರಂಭವಾಗಲಿದೆ.
ಇನ್ನು ಗರುಡನಹಳ್ಳಿಯಲ್ಲಿ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ದೂರು ಕೇಳಿ ಬಂದಿದ್ದು, ಕೂಡಲೇ ಕಾಮಗಾರಿಯನ್ನು ಪರಿಶೀಲಿಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ  ನೀಡಲಾಗಿದೆ. ಜಲಜೀವನ‌ ಮಿಷನ್ ಯೋಜನೆಯ ಕಾಮಗಾರಿಯನ್ನು ಪ್ರತ್ಯಕ್ಷವಾಗಿ ನೋಡಿಕೊಳ್ಳಲು ವರ್ಲ್ಡ್ ಬ್ಯಾಂಕ್​ನಿಂದ ಇಂಜಿನೀಯರ್​ಗಳು ಬಂದಿದ್ದಾರೆ. ಅವರು ಸಹ ಯೋಜನೆಯನ್ನು ಪರಿಶೀಲನೆ ಮಾಡಿ ವರದಿಯನ್ನು ಕಳುಹಿಸಿಕೊಡುತ್ತಾರೆ. ಕಳಪೆ ಕಾಮಗಾರಿ ಕಂಡು ಬಂದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಪಂಚಾಯ್ತಿ ಸಿಇಓ ಹೇಳಿದ್ದಾರೆ.
ಒಟ್ಟಾರೆ ಎಲ್ಲಾ ಜನರಿಗೂ ನೀರು ಸಿಗಬೇಕು ಯಾರು ಸಹ ನೀರಿಗಾಗಿ ಪರದಾಡಬಾರದೆಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಗೆ ತಂದಿರುವ ಜಲಜೀವನ‌್ ಮಿಷನ್​ ಯೋಜನೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮೊದಲ ಹಂತದಲ್ಲಿ ಕಳಪೆ‌ ಕಾಮಗಾರಿ ಮುಖಾಂತರ ಕೋಟ್ಯಾಂತರ ರೂಪಾಯಿ ಯೋಜನೆ ಮೇಲೆ ಗ್ರಾಮದ ಜನರಿಗೆ ಬೇಸರ ಉಂಟುಮಾಡಿರುವುದಂತು ಸುಳ್ಳಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ