ಕೋಲಾರಮ್ಮ ಕೆರೆಗೆ ಈಗ ಮರುಜೀವ; ಅವನತಿ ಹಿಡಿದಿದ್ದ ಕೆರೆಗೆ ಜಿಲ್ಲಾಡಳಿತ, ಇನ್ಫೋಸಿಸ್​ ಫೌಂಡೇಶನ್​ನಿಂದ ಕಾಯಕಲ್ಪ!

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 11, 2024 | 7:36 PM

ಅದು ಕೋಲಾರ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಂತೆ ಇರುವ ನಗರದ ಜೀವಕೆರೆ. ಎರಡು ವರ್ಷಗಳ ಹಿಂದೆಯಷ್ಟೇ ಕೆರೆ ಸರಿಯಾದ ನಿರ್ವಹಣೆ ಇಲ್ಲದೆ ಹೂಳು ತುಂಬಿ ಒತ್ತುವರಿಯಾಗಿ ಅವನತಿ ಹಾದಿ ಹಿಡಿದಿತ್ತು. ಆದರೆ, ಜಿಲ್ಲಾಡಳಿತ ಹಾಗೂ ಇನ್ಫೋಸಿಸ್​ ಫೌಂಡೇಶನ್ ತೆಗೆದುಕೊಂಡು ಅದೊಂದು ಕಾಮಗಾರಿ, ಈ ಕೆರೆಯ ಸ್ವರೂಪವನ್ನೇ ಬದಲಿಸಿ ನೋಡುಗರ ಕಣ್​ ಕುಕ್ಕುವಂತೆ ಮಾಡಿದೆ.

ಕೋಲಾರಮ್ಮ ಕೆರೆಗೆ ಈಗ ಮರುಜೀವ; ಅವನತಿ ಹಿಡಿದಿದ್ದ ಕೆರೆಗೆ ಜಿಲ್ಲಾಡಳಿತ, ಇನ್ಫೋಸಿಸ್​ ಫೌಂಡೇಶನ್​ನಿಂದ ಕಾಯಕಲ್ಪ!
ಕೋಲಾರಮ್ಮ ಕೆರೆ
Follow us on
ಕೋಲಾರ, ಜೂ.11: ಎರಡು ವರ್ಷಗಳ ಹಿಂದೆ ಕೋಲಾರ(Kolar) ನಗರದ ಕೋಲಾರಮ್ಮ ಕೆರೆ(Lake) ಜೊಂಡು ಹುಲ್ಲಿನಿಂದ ಆವರಿಸಿ, ಕೊಳಚೆ ನೀರಿನಿಂದ ತುಂಬಿ ತುಳುಕುತ್ತಿತ್ತು. ಅಷ್ಟೇ ಅಲ್ಲದೆ ಕೆರೆಯೊಳಗೆ ಇಟ್ಟಿಗೆ ಪ್ಯಾಕ್ಟರಿ ಸೇರಿದಂತೆ ಕೆರೆ ಅಂಗಳದಲ್ಲಿ ದೊಡ್ಡ ದೊಡ್ಡ ಪ್ರಪಾತಗಳಂತೆ ಗುಂಡಿಗಳು ಕಾಣಿಸುತ್ತಿದ್ದವು. ಸಾಕಷ್ಟು ಒತ್ತುವರಿ ಕೂಡ ಆಗಿತ್ತು. ಈ ವೇಳೆ ಏನಾದರೂ ಮಾಡಿ ಕೆರೆಯನ್ನು ಅಭಿವೃದ್ದಿ ಪಡಿಸಬೇಕೆನ್ನುವ ಜಿಲ್ಲಾಡಳಿತ ಪ್ರಯತ್ನಕ್ಕೆ ಇನ್ಫೋಸಿಸ್​ ಫೌಂಡೇಶನ್ ಸಾಥ್​​ ಕೊಟ್ಟಿದ್ದು, ಕಳೆದ ಎರಡು ವರ್ಷಗಳಿಂದ ಕೆರೆಯನ್ನು ವಿಭಿನ್ನವಾಗಿ ಅಭಿವೃದ್ದಿ ಮಾಡುವ ಕೆಲಸ ನಡೆಯುತ್ತಿದೆ.
ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ಫೋಸಿಸ್​ ಫೌಂಡೇಶನ್​​ನವರು ಯಾವುದೇ ಮಧ್ಯ ವರ್ತಿಗಳ ಪ್ರವೇಶಕ್ಕೆ ಅವಕಾಶ ನೀಡದೆ ತಾವೇ ಕಾಮಗಾರಿಯನ್ನು ನಡೆಸುತ್ತಿದ್ದು, ಕೆರೆಯ ಸೌಂದರ್ಯ ವೃದ್ದಿಯಾಗಿದೆ. ಅತ್ಯಾಧುನಿಕವಾಗಿ ಕೆರೆಯನ್ನು ಅಭಿವೃದ್ದಿ ಮಾಡಲಾಗುತ್ತಿದೆ. ಕೆರೆಯನ್ನು ವಿವಿಧ ಹಂತಗಳಲ್ಲಿ ಅಭಿವೃದ್ದಿ ಮಾಡಲಾಗುತ್ತಿದೆ. ಕೆರೆಗೆ ಬರುವ ಶುದ್ದ ನೀರು, ಕೊಳಚೆ ನೀರನ್ನು ಬೇರ್ಪಡಿಸಿ ಪ್ರತ್ಯೇಕವಾಗಿ ಮಾಡಿ ಕೊಳಚೆ ನೀರನ್ನು ನೈಸರ್ಗಿಕವಾಗಿ ಶುದ್ದೀಕರಿಸುವ ಕೆಲಸ ಮಾಡಲಾಗುತ್ತದೆ. ಅಲ್ಲದೆ ಮಳೆಯ ಶುದ್ದ ನೀರನ್ನು ಕೆರೆಯ ಬೇರೊಂದು ಬಾಗದಲ್ಲಿ ಸಂಗ್ರಹಿಸುವ ಕೆಲಸವಾಗುತ್ತಿದೆ.
ಇದನ್ನೂ ಓದಿ:ಹಾಸನದಲ್ಲಿ ಮತ್ತೊಂದು ದುರಂತ: ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸಾವು
ಜೊತೆಗೆ  ಕೆರೆಯ ಮೇಲೆ ಬೃಹತ್ತಾದ ಮತ್ತು ಆಕರ್ಷಣೀಯವಾದ ವಾಕಿಂಗ್​ ಪಾತ್​, ಕೆರೆಯಲ್ಲಿ ಐಲ್ಯಾಂಡ್​ ರೀತಿಯಲ್ಲಿ ಆಕರ್ಷಣೀಯ ಕೇಂದ್ರವಾಗಿ ಮಾಡಲಾಗುತ್ತಿದೆ. ಸದ್ಯ ಅರ್ಧದಷ್ಟು ಕಾಮಗಾರಿ ಮುಗಿದಿದೆ. ಇನ್ನು ಕೋಲಾರಮ್ಮ ಕೆರೆಗೆ ಕೆ.ಸಿ.ವ್ಯಾಲಿ ಯೋಜನೆ ನೀರು ಬರುವ ಮೊದಲು ಸಣ್ಣ ನೀರಾವರಿ ಇಲಾಖೆ 8 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೆರೆಯ ಹೂಳೆತ್ತು ಕಾರ್ಯ ಮಾಡಿತ್ತು. ಅದು ಯಾವುದೇ ಪ್ರಯೋಜವಾಗಲಿಲ್ಲ. ಕೆ.ಸಿ.ವ್ಯಾಲಿ ನೀರು ಬರುತ್ತಿದ್ದಂತೆ ಕಾಮಗಾರಿ ಏನಾಗಿದೆ ಎಮನ್ನುವುದೇ ತಿಳಿಯದಂತೆ ಕೆರೆಯ ತುಂಬೆಲ್ಲ ಜೊಂಡು ಹುಲ್ಲು ಬೆಳೆದು ನಿಂತಿತ್ತು.
ಅಲ್ಲದೆ ತ್ಯಾಜ್ಯ ನೀರನ್ನು ಶುದ್ದೀಕರಿಸಿ ಕೆರೆಗೆ ನೀರು ಹರಿಸಿದ ನಂತರ ಕೋಲಾರ ನಗರದ ತ್ಯಾಜ್ಯ ನೀರನ್ನು ಮತ್ತೆ ಅದೇ ಕೆರೆಗೆ ಬಿಡುವ ಮೂಲಕ ಕೆರೆ ಸಂಪೂರ್ಣ ಕೊಳಚೆ ನೀರಿನಿಂದಲೇ ತುಂಬಿ ತುಳುಕುತ್ತಿತ್ತು. ಹಾಗಾಗಿ ಇದೆಲ್ಲದಕ್ಕೂ ಪರಿಹಾರ ಎಂಬಂತೆ ತಜ್ಞರ ತಂಡ ವಿಶೇಷ ಪ್ಲ್ಯಾನ್​ ಮಾಡಿ, ಇನ್ಫೋಸಿಸ್​ ಫೌಂಡೇಶನ್ ಸಿಎಸ್​ಆರ್​ ಅನುದಾನದಲ್ಲಿ ಕಾಮಗಾರಿ ಕೈಗೆತ್ತುಕೊಂಡ ಎರಡೇ ವರ್ಷದಲ್ಲಿ ಕೆರೆಯ ಸ್ವರೂಪವೇ ಬದಲಾಗಿದ್ದು, ಕೋಲಾರಮ್ಮ ಕೆರೆ ನೋಡುಗರ ಕಣ್ಮನ ಸೆಳೆಯುತ್ತಿದೆ.
ಇನ್ನು ಅರ್ಧದಷ್ಟು ಕಾಮಗಾರಿ ಬಾಕಿ ಇರುವುದರಿಂದ ಕಾಮಗಾರಿ ಪೂರ್ಣವಾದ ಮೇಲಂತೂ ಇದು ಕೋಲಾರಿಗರನ್ನು ಆಕರ್ಷಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಅನ್ನೋದು ಕೋಲಾರದ ಜನರ ಮಾತಾಗಿದೆ. ಒಟ್ಟಾರೆ ಒತ್ತುವರಿ, ಕೊಳಚೆ ನೀರು, ಹೂಳಿನಿಂದ ಜೀವ ಕಳೆದುಕೊಂಡಿದ್ದ ಕೋಲಾರಮ್ಮ ಕೆರೆಗೆ ಈಗ ಮರು ಜೀವ ಬಂದಿದೆ. ಕೆರೆ ನೋಡುಗರ ಕಣ್ಮನ ಸೆಳೆಯುವ ಹಾಗೆ ಜನರನ್ನು ಆಕರ್ಷಿಸುವಂತೆ ಅಭಿವೃದ್ದಿ ಹೊಂದುತ್ತಿದೆ. ಕಾಮಗಾರಿ ಪೂರ್ಣವಾದ ಮೇಲೆ ನಿಜಕ್ಕೂ ಕೋಲಾರಮ್ಮ ಕೆರೆಗೆ ಕೋಲಾರದ ಜನರಿಗೆ ಅದ್ಬುತ ಮನೋರಂಜನಾ ಸ್ಥಳವಾಗೋದರಲ್ಲಿ ಯಾವುದೇ ಅನುಮಾನವಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:32 pm, Tue, 11 June 24