ಕೊಪ್ಪಳಕ್ಕೂ ಕಾಲಿಟ್ಟ ವಕ್ಫ್​ ವಿವಾದ: ಸರ್ಕಾರಿ ಜಾಗ, ರೈತರ ಜಮೀನು ಪಹಣಿಯಲ್ಲಿ ವಕ್ಫ್​ ಹೆಸರು

ವಕ್ಫ್ ಬೋರ್ಡ್ ಕೊಪ್ಪಳ ಜಿಲ್ಲೆಯ ರೈತರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ. ರೈತರ ಪಹಣಿಯಲ್ಲಿ ವಕ್ಫ್ ಎಂದು ನಮೂದಿಸಲಾಗಿದೆ. ನೋಟಿಸ್ ನೀಡದೆ ಪಹಣಿಯಲ್ಲಿ ವಕ್ಫ್ ಅಂತ ನಮೂದು​ ಮಾಡಲಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಕೊಪ್ಪಳಕ್ಕೂ ಕಾಲಿಟ್ಟ ವಕ್ಫ್​ ವಿವಾದ: ಸರ್ಕಾರಿ ಜಾಗ, ರೈತರ ಜಮೀನು ಪಹಣಿಯಲ್ಲಿ ವಕ್ಫ್​ ಹೆಸರು
ರೈತರ ಜಮೀನು ಪಹಣಿಯಲ್ಲಿ ವಕ್ಫ್​​ ಹೆಸರು
Edited By: ವಿವೇಕ ಬಿರಾದಾರ

Updated on: Oct 31, 2024 | 10:20 AM

ಕೊಪ್ಪಳ, ಅಕ್ಟೋಬರ್​ 31: ಕರ್ನಾಟಕದಲ್ಲಿ ವಕ್ಫ್ (Waqf)​​ ಆಸ್ತಿ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ವಕ್ಫ್​ ವಿವಾದ ಕೊಪ್ಪಳ (Koppal) ಜಿಲ್ಲೆಗೂ ಕಾಲಿಟ್ಟಿದೆ. ಕೊಪ್ಪಳ ಜಿಲ್ಲೆಯ ರೈತರ (Farmers) ಮತ್ತು ಸರ್ಕಾರ ಕಚೇರಿಯ ಜಾಗದ ಪಹಣಿಯಲ್ಲಿ ವಕ್ಫ್ ಬೋರ್ಡ್​​​ ಎಂದು ನಮೂದಾಗಿದೆ. ಕುಕನೂರು ಪಟ್ಟಣದಲ್ಲಿರುವ ಪಟ್ಟಣ ಪಂಚಾಯತ್ ಕಚೇರಿಯ 13 ಗುಂಟೆ ಜಾಗ ವಕ್ಫ್​​ಗೆ ಸೇರಿದೆ ಅಂತ ಪಹಣಿಯಲ್ಲಿ ನಮೂದಾಗಿದೆ.

ಕೊಪ್ಪಳ ವಿಭಾಗಾಧಿಕಾರಿ ಆದೇಶ ಅನ್ವಯ ಕುಕನೂರ ಉಪ ತಹಶಿಲ್ದಾರ್ 2019ರಲ್ಲಿ​ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹೆಸರಿನಲ್ಲಿರುವ ಸರ್ವೇ ನಂಬರ್ 54ರ 13 ಗುಂಟೆ ಜಾಗದ ಪಹಣಿಯಲ್ಲಿ ವಕ್ಫ್​ ಬೋರ್ಡ್​​ ನಮೂದಿಸಿದ್ದಾರೆ.

ರೈತರ ಪಹಣಿಯಲ್ಲಿ ವಕ್ಫ್​

ಕೊಪ್ಪಳ ತಾಲೂಕಿನ ಕವಲೂರು, ಹೂವಿನಾಳ ಕುಕನೂರು, ಯಲಬುರ್ಗಾ ತಾಲೂಕಿನ ಹಲವು ರೈತರ ಜಮೀನು ಪಹಣಿಯ ಕಾಲಂ 11ರಲ್ಲಿ ವಕ್ಫ್ ಬೋರ್ಡ್​ ಅಂತ ಹೆಸರು ನಮೂದಾಗಿದೆ. ಅನೇಕ ರೈತರಿಗೆ ನೋಟಿಸ್ ನೀಡದೆ 2021ರಲ್ಲಿ ಪಹಣಿಯಲ್ಲಿ ವಕ್ಫ್​​ ಬೋರ್ಡ್​ ಅಂತ ನಮೂದಾಗಿದೆ. ವಕ್ಫ್​ ಬೋರ್ಡ್​ 2023ರಲ್ಲಿ ಅನೇಕ ರೈತರಿಗೆ ನೋಟಿಸ್ ನೀಡಿದೆ. ತಮ್ಮ ಮೂಲ ದಾಖಲೆಗಳನ್ನು ಹಾಜರುಪಡಿಸುವಂತೆ ಹೇಳಿದೆ. ​​

ವಕ್ಫ್​ ವಿವಾದ ಹೆಚ್ಚಾಗುತ್ತಿದ್ದಂತೆ ರೈತರು ತಮ್ಮ ಪಹಣಿ ಪರಿಶೀಲಿಸಿದಾಗ ವಿಚಾರ ಬೆಳಕಿಗೆ ಬಂದಿದೆ. ಪಹಣಿಯಲ್ಲಿ ವಕ್ಫ್​​ ಆಸ್ತಿ ಎಂದು ಉಲ್ಲೇಖಿಸಿದ್ದನ್ನು ಕಂಡು ರೈತರು ಕಂಗಾಲಾಗಿದ್ದಾರೆ.

ಇದನ್ನೂ ಓದಿ: ರೈತರನ್ನು ಟೆಂಟ್​ನಲ್ಲಿ ಕೂರಿಸಿದವರನ್ನು ಜೈಲಿನಲ್ಲಿ ಕೂರಿಸೋಣ ಎಂದ ಜೋಶಿ

ಕೆಲವು ಧಾರ್ಮಿಕ ಕೇಂದ್ರಗಳು ಸಹ ವಕ್ಫ್​​​​ಗೆ ಸೇರಿಕೊಳ್ಳುತ್ತವೆ: ದಿನೇಶ್​

ರೈತರ ಭೂಮಿ ವಕ್ಫ್​ಗೆ ಸೇರಿಸಿದ್ದಾರೆಂಬುದು ಸುಳ್ಳು, ಅರೆಬರೆ ಸುದ್ದಿ. ಹಿಂದಿನ ಬಿಜೆಪಿ ಅವಧಿಯಲ್ಲಿ ವಕ್ಫ್​ ವಿಚಾರದಲ್ಲಿ ನೋಟಿಸ್​ ನೀಡಲಾಗಿದೆ. ರೈತರ ಜಮೀನುಗಳನ್ನು ವಕ್ಫ್​ ಬೋರ್ಡ್​ ಕಿತ್ತುಕೊಳ್ಳಲು ಸಾಧ್ಯವಿಲ್ಲ. ವಕ್ಫ್​ ಆಸ್ತಿ ಬಗ್ಗೆ ಇರುವ ಗೊಂದಲವನ್ನು ನಿವಾರಣೆ ಮಾಡುತ್ತೇವೆ. ದಾನ ಮಾಡಿರುವ ಭೂಮಿ ವಕ್ಫ್​​ ಬೋರ್ಡ್​ಗೆ ಸೇರಿರುತ್ತೆ. ಕೆಲವು ಧಾರ್ಮಿಕ ಕೇಂದ್ರಗಳು ಸಹ ವಕ್ಫ್​​​​ ಆಸ್ತಿಗೆ ಸೇರಿಕೊಳ್ಳುತ್ತವೆ. ಈ ಸಂಬಂಧ ಈಗಾಗಲೇ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಈ ವಿಚಾರದಲ್ಲಿ ಬಿಜೆಪಿಯವರು ಮುಸ್ಲಿಮರ ಹೆಸರನ್ನು ತಂದಿದ್ದಾರೆ. ಹಿಂದೂ, ಮುಸ್ಲಿಮರ ನಡುವೆ ದ್ವೇಷ ಮೂಡಿಸುವುದೇ ಬಿಜೆಪಿ ಉದ್ದೇಶ. ಕಾಂಗ್ರೆಸ್ ದೇಶ ಮತ್ತು ರಾಜ್ಯದಲ್ಲಿ ಭೂಸುಧಾರಣೆ ಕಾಯ್ದೆ ಜಾರಿ ಮಾಡಿದೆ​​​​. ಹಿಂದೆ ಕಾಂಗ್ರೆಸ್ ಸರ್ಕಾರ ರೈತರಿಗೆ ಜಮೀನ್ದಾರರಿಂದ ಭೂಮಿ ಕೊಡಿಸಿದೆ. ಯಾರು ಕೂಡ ರಾಜ್ಯದ ರೈತರಿಗೆ ಮೋಸ ಮಾಡಲು ಸಾಧ್ಯವಿಲ್ಲ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:32 am, Thu, 31 October 24

Sanjayya Chikkamath

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ನಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಕೊಪ್ಪಳಕ್ಕೆ ಬಂದು ನಿಂತಿದೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Follow Us