ಕೊಪ್ಪಳ: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ಹುಲಗಿ ಕಟ್ಟೆಯ ಶಾಸನ ಪತ್ತೆ

| Updated By: ಗಣಪತಿ ಶರ್ಮ

Updated on: May 24, 2024 | 11:20 AM

ಕಮಲಾಪುರ-ಹಂಪಿಯ ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳ ಇಲಾಖೆಯ ಉಪ ನಿರ್ದೇಶಕರಾದ ಡಾ.ಆರ್.ಶೇಜೇಶ್ವರ ಹಾಗೂ ಪುರಾತತ್ತ್ವ ಸಹಾಯಕರಾದ ಡಾ.ಆರ್.ಮಂಜನಾಯ್ಕ ಕ್ಷೇತ್ರಕಾರ್ಯ ಕೈಗೊಂಡಾಗ ಅಲ್ಲಿ ಆರು ಸಾಲಿನ ವಿಜಯನಗರ ಅರಸರ ಕಾಲದ ಶಾಸನ ಕಂಡುಬಂದಿದೆ. ಹೆಚ್ಚಿನ ವಿವರ ಇಲ್ಲಿದೆ.

ಕೊಪ್ಪಳ: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ಹುಲಗಿ ಕಟ್ಟೆಯ ಶಾಸನ ಪತ್ತೆ
ಹುಲಗಿ ಕಟ್ಟೆಯ ಶಾಸನ
Follow us on

ಕೊಪ್ಪಳ, ಮೇ 24: ವಿಜಯನಗರ ಅರಸರ (Vijayanagara King) ಮೊದಲ‌ ರಾಜಧಾನಿಯಾಗಿದ್ದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ. ರಾಜಧಾನಿ ಹಂಪಿಗೆ ಸ್ಥಳಾಂತರವಾಗಿದ್ದರು ಕೂಡಾ ಕೊಪ್ಪಳ (Koppal) ಜಿಲ್ಲೆ ವಿಜಯನಗರ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಹೀಗಾಗಿ ಇಂದಿಗೂ ಕೊಪ್ಪಳ ಜಿಲ್ಲೆಯ ಹಲವಡೆ ವಿಜಯನಗ ಅರಸರ ಕಾಲದ ಶಿಲಾಶಾಸನಗಳು (Inscriptions) ಆಗಾಗ ಪತ್ತೆಯಾಗುತ್ತಲೇ ಇರುತ್ತವೆ. ಇದೀಗ ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ಹುಲಗಿ ಕಟ್ಟೆಯ ಶಾಸನ ಪತ್ತೆಯಾಗಿದೆ.

ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ಹೊಳೆ ಮುದ್ಲಾಪುರದ ಹತ್ತಿರ ಹುಲಗಿ ಅಣೆಕಟ್ಟೆಯ ಹತ್ತಿರ ಶಾಸನ ಪತ್ತೆಯಾಗಿದೆ.

ವಿಜಯನಗರ ಕಾಲುವೆ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮ, ವಿಜಯನಗರ ಕಾಲುವೆಗಳ ಆಧುನಿಕರಣ ಯೋಜನೆ, ನಂ-1 ತುಂಗಾಭದ್ರ ಜಲಾಶಯ ವಿಭಾಗ ಮುನಿರಾಬಾದ್ ಇವರು ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ಸಮಯದಲ್ಲಿ ಶಾಸನ ಕಂಡು ಬಂದಿದ್ದು, ಶಾಸನವು ಇರುವ ಬಗ್ಗೆ ಮಾಹಿತಿಯನ್ನು ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಗೆ ವಿಜಯನಗರ ಕಾಲುವೆ ಯೋಜನೆಯ ಸಂವಹನ ಮತ್ತು ದಾಖಲಾತಿತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ ಅವರು ತಿಳಿಸಿದ್ದಾರೆ.

ಕಮಲಾಪುರ-ಹಂಪಿಯ ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳ ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಡಾ.ಆರ್.ಶೇಜೇಶ್ವರ ಹಾಗೂ ಪುರಾತತ್ತ್ವ ಸಹಾಯಕರಾದ ಡಾ.ಆರ್.ಮಂಜನಾಯ್ಕ ಕ್ಷೇತ್ರಕಾರ್ಯ ಕೈಗೊಂಡಾಗ ಅಲ್ಲಿ ಆರು ಸಾಲಿನ ವಿಜಯನಗರ ಅರಸರ ಕಾಲದ ಶಾಸನಗಳು ಕಂಡುಬಂದಿದೆ.

ಶಾಸನವು ತುಂಗಾಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಹುಲಿಗೆಯ ಅಣೆಕಟ್ಟೆಯ ಹೊಳೆ ಮುದ್ಲಾಪುರದ ಹತ್ತಿರದ ಅಣೆಕಟ್ಟಿನ ಪಕ್ಕದಲ್ಲಿ ಹುಟ್ಟುಬಂಡೆಯಲ್ಲಿದೆ. ಇದು 14 ಆಡಿ ಉದ್ದ ಹಾಗೂ 3 ಆಡಿ ಅಗಲವಾಗಿದ್ದು ಆರು ಸಾಲಿನ ಕನ್ನಡ ಶಾಸನವಾಗಿದೆ. ಈ ಶಾಸನವು ತುಂಗಾಭದ್ರಾ ನೀರಿನಿಂದ ಮುಳುಗಿರುತ್ತಿತ್ತು ಈ ವರ್ಷ ಮಳೆ ಕಡಿಮೆ ಇದ್ದರಿಂದ ಶಾಸನವು ಕಂಡು ಬಂದಿದೆ.

ಶಾಸನದ ಸಾರಾಂಶ

ಶಾಸನವು ನೀರಿನಲ್ಲಿ ಮುಳುಗಿದ್ದರಿಂದ ತೃಟಿತವಾಗಿದೆ. ಆದರೆ ಶಾಸನವನ್ನು ಓದಿ ಅರ್ಥಯಿಸಲು ಸಾಧ್ಯವಾಗಿದ್ದು, ವಿಜಯನಗರದ ಅರಸರ ಮಹಾಪ್ರಧಾನ ನಾಗಂಣದಂಣನಾಯಕನು ಮಲಿನಾಥದೇವರ ವಾಯುವ್ಯಕ್ಕೆ ಕಲಊರ ಎಂಬ ಸ್ಥಳದಲ್ಲಿ ತುಂಗಾಭದ್ರಾ ನದಿಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿಸುತ್ತಾರೆ. ಈ ಕಟ್ಟೆಗೆ ಹುಲಿಗಿಯಕಟ್ಟಿ ಎಂಬ ಉಲ್ಲೇಖವಿದೆ. ಇಲ್ಲಿಂದ ಒಂದು ಕಾಲುವೆಯನ್ನು ನಿರ್ಮಿಸಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಗೆ ನೀರನ್ನು ಕಾಲುವೆಯ ಮುಖಾಂತರ ನೀರನ್ನು ಹರಿಸಿರುವುದು ಈ ಶಾಸನದಿಂದ ತಿಳಿದುಬರುತ್ತದೆ.

ಇದರಲ್ಲಿ ಕಾಲುವೆಯ ಉಲ್ಲೇಖವು ಸಹಾ ಇದೆ. ಶಾಸನದ ಕುರಿತು ಇಲಾಖೆಯಿಂದ ಹೆಚ್ಚಿನ ಅಧ್ಯಯನ ನಡೆಯುತ್ತಿದೆ.

ಇದನ್ನೂ ಓದಿ: ಉದ್ಯೋಗ ಕೊಡ್ತೇವೆ ಎಂದು ಸ್ಟೀಲ್ ಪ್ಯಾಕ್ಟರಿ ಹೆಸರಲ್ಲಿ ಭೂಮಿ ಖರೀದಿ; ದಶಕವಾದ್ರೂ ಕೆಲಸ ಇಲ್ಲ, ಜಮೀನೂ ಇಲ್ಲ

ಶಾಸನವನ್ನು ಓದಿಕೊಟ್ಟ ಡಾ.ಜಗದೀಶ ಅಗಸಿಬಾಗಿಲ ಹಾಗೂ ವಿಜಯನಗರ ಕಾಲುವೆ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮ, ವಿಜಯನಗರ ಕಾಲುವೆಗಳ ಆಧುನಿಕರಣ ಯೋಜನೆ. ನಂ-1 ತುಂಗಾಭದ್ರ ಜಲಾಶಯ ವಿಭಾಗ ಮುನಿರಾಬಾದ್ ಹಾಗೂ ವೆಂಕಟೇಶ ಇವರಿಗೆ ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಡಾ.ಆರ್.ಶೇಜೇಶ್ವರ ಧನ್ಯವಾದಗಳನ್ನು ತಿಳಿಸಿದ್ದಾರೆ.