ಕರ್ನಾಟಕದಲ್ಲಿ ಇಂದು ವರಮಹಾಲಕ್ಷ್ಮಿ ಹಬ್ಬವನ್ನು ಭಕ್ತಿ, ಭಾವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹುಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿಯೇ ನಡೆದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳ ಮಾರುಕಟ್ಟೆಗಳಲ್ಲಿ ಜನಜಂಗುಳಿ ಇದೆ. ಅಲ್ಲದೇ ಬೆಲೆ ಏರಿಕೆ ಕೂಡ ಗ್ರಾಹಕರಿಗೆ ಬಿಸಿ ತಟ್ಟಿದೆ. ಇನ್ನು ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ವಿಚಾರವಾಗಿ ತಮಿಳುನಾಡು ಸಲ್ಲಿಸಿರುವ ಅರ್ಜಿಯನ್ನು ಇಂದು ಸುಪ್ರಿಂ ಕೋರ್ಟ್ನಲ್ಲಿ ವಿಚಾರಣೆ ಬರಲಿದೆ. ಇನ್ನು ರಾಜ್ಯ ಸರ್ಕಾರ ಕೂಡ 26 ಪುಟಗಳ ಅಫಿಡವಿಟ್ ಸಲ್ಲಿಸಿದೆ. ಇನ್ನು ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಸ್ವಲ್ಪಮಟ್ಟಿಗೆ ತೆರೆ ಮರೆಗೆ ಸರಿದಿದ್ದರೂ, ಮತ್ತೆ ಮುಖ್ಯ ವೇದಿಕೆ ಬರಲಿದೆ. ಅಲ್ಲದೇ ಕಳೆದ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮಮೂರ್ತಿಗೆ ಹೈಕೋರ್ಟ್ ಸಮನ್ಸ್ ನೀಡಲು ಸೂಚಿಸಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೆಟ್ಸ್ ಇಲ್ಲಿದೆ.
ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಯಶಸ್ವಿ ಹಿನ್ನೆಲೆ ಇಸ್ರೋ ಕಚೇರಿಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿದ್ದರೆ. ಇದೇ ವೇಳೆ ಇಸ್ರೋ ಅಧ್ಯಕ್ಷ ಸೋಮನಾಥ್ ಮತ್ತು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿದ್ದಾರೆ.
ಬೆಂಗಳೂರು, ಆಗಸ್ಟ್ 25: ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದೆ. ಹಾಗಾಗಿ ಸಾಧನೆ ಮಾಡಿದ ವಿಜ್ಞಾನಿಗಳ ಅಭಿನಂದಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಪೀಣ್ಯದಲ್ಲಿರುವ ಇಸ್ರೋ ಸೆಂಟರ್ಗೆ ಭೇಟಿ ನೀಡಿ, ವಿಜ್ಞಾನಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.
ನಾಳೆ ಬೆಂಗಳೂರಿನ ಇಸ್ರೋ ಸೆಂಟರ್ಗೆ ಪ್ರಧಾನಿ ಮೋದಿ: ರೂಟ್ ಮ್ಯಾಪ್ ಹೀಗಿದೆ
ದಾವಣಗೆರೆ ನೂತನ ಎಸ್ಪಿಯಾಗಿ ಉಮಾ ಪ್ರಶಾಂತ ಅಧಿಕಾರ ಸ್ವೀಕಾರ ಮಾಡಿದ್ದಾರೆ. ವರ್ಗಾವಣೆಯಾದ ಎಸ್ಪಿ ಡಾ.ಕೆ ಅರುಣ್ ಅವರಿಂದ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಮಾಲಿನಿಕೃಷ್ಣಮೂರ್ತಿ ಹಾಗೂ ಸೋನಿಯಾ ನಾರಂಗ್ ಅವರ ಬಳಿಗೆ ಮೂರನೇ ಮಹಿಳಾ ಎಸ್ಪಿಯಾಗಿ ಉಮಾ ಪ್ರಶಾಂತ್ ಅಧಿಕಾರ ಸ್ವೀಕರಿಸಿದ್ದಾರೆ.
ಚಂದ್ರನ ಅಂಗಳದಲ್ಲಿ ಪ್ರಜ್ಞಾನ್ ಕಾರ್ಯಾಚರಣೆ ಮುಂದುವರೆಸಿದೆ ಎಂದು ಚಂದ್ರಯಾನ-3 ರೋವರ್ ಕಾರ್ಯದ ಬಗ್ಗೆ ಇಸ್ರೋ ಟ್ವೀಟ್ ಮಾಡಿದೆ. ಎಲ್ಲಾ ಯೋಜಿತ ರೋವರ್ ಚಲನೆಗಳನ್ನು ಪರಿಶೀಲಿಸಲಾಗಿದೆ. ರೋವರ್ ಸುಮಾರು 8 ಮೀಟರ್ ದೂರ ಯಶಸ್ವಿಯಾಗಿ ಕ್ರಮಿಸಿದೆ ಎಂದು ಹೇಳಿದೆ.
ಇಸ್ರೋ ವಿಜ್ಞಾನಿಗಳನ್ನು ಸನ್ಮಾನಿಸಬೇಕೆಂದು ನಿರ್ಧಾರ ಮಾಡಿದ್ದೇವೆ. ವಿಜ್ಞಾನಿಗಳನ್ನು ಸನ್ಮಾನಿಸುವ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇನೆ. ನಾಳೆ ಇಸ್ರೋ ಸೆಂಟರ್ಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿದ್ದಾರೆ. ದೊಡ್ಡ ಸ್ಥಾನದಲ್ಲಿರುವವರೇ ಬಂದು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಂಥವರು ಬಂದು ಅಭಿನಂದಿಸುತ್ತಿರುವುದರಿಂದಲೇ ಪ್ರೇರಣೆ ಆಗುತ್ತಿದೆ ಎಂದು ಪೀಣ್ಯದ ಇಸ್ರೋ ಸೆಂಟರ್ ಬಳಿ ಪರಿಷತ್ ಸಭಾಪತಿ ಹೊರಟ್ಟಿ ಹೇಳಿದ್ದಾರೆ.
ಭಾರತೀಯರು ಯಾವುದರಲ್ಲೂ ಕಡಿಮೆಯಿಲ್ಲವೆಂದು ತೋರಿಸಿದ್ದೇವೆ. ಇಸ್ರೋ ವಿಜ್ಞಾನಿಗಳು ಬಹುದೊಡ್ಡ ಸಾಧನೆ ಮಾಡಿ ತೋರಿಸಿದ್ದಾರೆ ಎಂದು ಪೀಣ್ಯದ ಇಸ್ರೋ ಸೆಂಟರ್ ಬಳಿ ಪರಿಷತ್ ಸಭಾಪತಿ ಹೊರಟ್ಟಿ ಹೇಳಿದ್ದಾರೆ. ಇಸ್ರೋ ವಿಜ್ಞಾನಿಗಳನ್ನು ಸನ್ಮಾನಿಸಬೇಕೆಂದು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಚಂದ್ರಯಾನ-3 ಯಶಸ್ವಿ ಹಿನ್ನೆಲೆ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಸೆಂಟರ್ಗೆ ರಾಜ್ಯಪಾಲರ ಥಾವರ್ಚಂದ್ ಗೆಹ್ಲೋಟ್ ಭೇಟಿ ನೀಡಿದ್ದಾರೆ. ಇಸ್ರೋ ಅಧ್ಯಕ್ಷ ಸೋಮನಾಥ್, ವಿಜ್ಞಾನಿಗಳನ್ನು ಸನ್ಮಾನಿಸಿದ್ದಾರೆ.
ನಾಳೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆ ವಿಜ್ಞಾನಿಗಳ ಜತೆ ಚರ್ಚೆ ಮಾಡಿದ್ದು, ಸಿದ್ಧತಾ ಕಾರ್ಯ ಪರಿಶೀಲಿಸಿದ್ದಾರೆ.
ಹೃದಯಾಘಾತದಿಂದ ಹೋರಾಟಗಾರ ಜಿಗಣಿ ಶಂಕರ್(66) ಇಂದು ನಿಧನ ಹೊಂದಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬಂಡೆನಲ್ಲಸಂದ್ರ ನಿವಾಸದ ಬಳಿ ಅಂತಿಮ ನಮನಕ್ಕೆ ಸಿದ್ಧತೆ ಮಾಡಿದ್ದು, ಸಮಾಜ ಕಲ್ಯಾಣ ಸಚಿವ ಡಾ.ಮಹದೇವಪ್ಪ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.
ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಾರೆ. ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳನ್ನು ಪ್ರಧಾನಿ ಅಭಿನಂದಿಸಲಿದ್ದಾರೆ. ಹೆಚ್ಎಎಲ್ನಿಂದ ಪೀಣ್ಯದ ಇಸ್ರೋ ಕೇಂದ್ರದವರೆಗೂ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.
ನಾಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ ವಿಚಾರವಾಗಿ ಅಧಿಕೃತವಾಗಿ ಮೋದಿ ರೋಡ್ ಶೋ ಇರಲ್ಲ. ಕೆಲ ಸ್ಥಳಗಳಲ್ಲಿ ಜನರು ಜಮಾಯಿಸುವ ಸಾಧ್ಯತೆ ಬಗ್ಗೆ ಮಾಹಿತಿ ಇದೆ. ಆದರೆ ನಾಳೆ ಅಧಿಕೃತವಾಗಿ ಪ್ರಧಾನಿ ಮೋದಿ ರೋಡ್ ಶೋ ಇರಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸ್ಪಷ್ಟನೆ ನೀಡಿದ್ದಾರೆ.
ರಾಜಕೀಯವೇ ಬೇರೆ, ಪರಸ್ಪರ ವಿಶ್ವಾಸವೇ ಬೇರೆ. ರಾಜಕೀಯೇತರ ಹಲವು ವಿಚಾರಗಳನ್ನು ಸಿಎಂ, ಡಿಸಿಎಂ ಜೊತೆ ಚರ್ಚೆ ಮಾಡಲಾಗಿದೆ. ಅವರೂ ಕೂಡ ನನ್ನನ್ನು ಪಕ್ಷ ಸೇರ್ಪಡೆ ಆಗುವಂತೆ ಆಹ್ವಾನ ನೀಡಿಲ್ಲ. ನಾನು ಕೂಡ ಕಾಂಗ್ರೆಸ್ ಸೇರುತ್ತೇನೆ ಅಂತಾ ಎಲ್ಲಿಯೂ ಹೇಳಿಲ್ಲ ಎಂದು ಮಾಜಿ ಶಾಸಕ M.P.ರೇಣುಕಾಚಾರ್ಯ ಹೇಳಿದ್ದಾರೆ.
ಬರದ ವಿಚಾರವಾಗಿ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿಯಾಗಿ ಬಂದಿದ್ದೇನೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಮಾಜಿ ಶಾಸಕ M.P.ರೇಣುಕಾಚಾರ್ಯ ಹೇಳಿದರು. ಇಂದು ವರಮಹಾಲಕ್ಷ್ಮಿ ಪೂಜೆ ಯಡಿಯೂರಪ್ಪ, ಕೃಷ್ಣ ಬೈರೇಗೌಡ ರನ್ನೂ ಭೇಟಿಯಾಗಿರುವೆ ಎಂದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದು, ರಾಜ್ಯದ 120ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಬಹುತೇಕ ಅಣೆಕಟ್ಟುಗಳು ಬರಿದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕಾಲಹರಣ ಮಾಡದೆ ಕೂಡಲೇ ಕ್ರಮಕೈಗೊಳ್ಳಬೇಕು. ಬರಪೀಡಿತ ಪ್ರದೇಶಗಳನ್ನು ಘೋಷಿಸಿ, ರೈತರಿಗೆ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಾಜ್ಯದ 120ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಬಹುತೇಕ ಅಣೆಕಟ್ಟುಗಳು ಬರಿದಾಗಿ ನಮ್ಮ ರೈತ ಸಮುದಾಯ ಒಣ ಬೇಸಾಯವನ್ನೂ ಮಾಡಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಇನ್ನು ಕಾಲಹರಣ ಮಾಡದೆ, ಕೂಡಲೇ ಬರಪೀಡಿತ ಪ್ರದೇಶಗಳನ್ನು ಘೋಷಿಸಿ, ರೈತರಿಗೆ ಪರಿಹಾರ ನೀಡಬೇಕು, ಬರ ಪರಿಹಾರ ಕಾಮಗಾರಿಗಳನ್ನು…
— B.S.Yediyurappa (@BSYBJP) August 25, 2023
ಸಿಎಂ ಸಿದ್ದರಾಮಯ್ಯರನ್ನು ಬಿಜೆಪಿ ಮಾಜಿ ಶಾಸಕ ರೇಣುಕಾಚಾರ್ಯ ಭೇಟಿ ಮಾಡಿದ್ದಾರೆ. ಸಿಎಂ ಸರ್ಕಾರಿ ನಿವಾಸದಲ್ಲಿ 20 ನಿಮಿಷಗಳ ಕಾಲ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿದ್ದು, ಕ್ಷೇತ್ರದ ಸಂಬಂಧ ಚರ್ಚೆ ನಡೆಸಿ ತೆರಳಿದ್ದಾರೆ.
100ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ಎಂದು ಘೋಷಿಸುತ್ತೇವೆ ಎಂದು ವಿಧಾನಸೌಧದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ. ಮೋಡ ಬಿತ್ತನೆ ಬಗ್ಗೆ ಚಿಂತನೆಯಿಲ್ಲ, ಅದರಿಂದ ಪ್ರಯೋಜನವಾಗಿಲ್ಲ. ಈ ಹಿಂದೆ ಮೋಡ ಬಿತ್ತನೆ ಮಾಡಿದಾಗ ಪ್ರಯೋಜನವಾಗಿರಲಿಲ್ಲ ಎಂದು ಹೇಳಿದರು.
ಅಧಿಕಾರ ಹಾಗೂ ಸಂಪತ್ತು ಎರಡೂ ಬಲಾಢ್ಯರ ಕೈಯಲ್ಲಿ ಇರಬಾರದು ಎಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಧಿಕಾರ ಮತ್ತು ಸಂಪತ್ತು ಸಮಾಜದ ಎಲ್ಲರ ಕೈಗಳಿಗೂ ಹಂಚಿಕೆಯಾಗಬೇಕು. ಇಲ್ಲವಾದರೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದರು.
ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಶ್ರೀರಂಗಪಟ್ಟಣದಲ್ಲಿ ರೈತರು ನೇಣು ಕುಣಿಕೆಗಳನ್ನು ಕೈಯಲ್ಲಿ ಹಿಡಿದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ರೈತ ಮುಖಂಡ ನಂಜುಂಡೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದೆ. ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ರೈತರಿಗೆ ನೇಣುಭಾಗ್ಯ ನೀಡುತ್ತಿದೆ. ನೀರು ನಿಲ್ಲಿಸದಿದ್ದರೆ ಸಾಮೂಹಿಕ ಆತ್ಮಹತ್ಯೆಗೆ ಶರಣಾಗುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದರು.
ಬೆಂಗಳೂರು: ಬೆಂಗಳೂರು ಹಾಲು ಕರೆಯುವ ಹಸು, ಹಾಗಾಗಿ ಡಿಕೆ ಶಿವಕುಮಾರ್ ಬೆಂಗಳೂರಿಗೆ ಒತ್ತು ನೀಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಈಶಾನ್ಯ ರಾಜ್ಯದವರು ನಡೆಸುತ್ತಿರುವ ಅಂಗಡಿಗಳ ನಿಯೋಗ ಬಂದಿತ್ತು. ಸಣ್ಣಪುಟ್ಟ ಅಂಗಡಿ ಮಾಲೀಕರಿಂದಲೂ ಮಾಸಿಕ 15,000 ರೂ. ವಸೂಲಿ ಮಾಡಲಾಗುತ್ತಿದೆ. ಬಿಬಿಎಂಪಿಯವರು ಮಾಸಿಕ 15,000 ರೂ. ಕೇಳುತ್ತಿದ್ದಾರೆಂದು ತಿಳಿಸಿದ್ದಾರೆ. ಇದೇ ರೀತಿ ವಸೂಲಿಗೆ ಇಳಿದರೆ ಅವರೆಲ್ಲರೂ ಬೆಂಗಳೂರು ಬಿಡುತ್ತಾರೆ. ಯಾವ ಅಧಿಕಾರಿಗಳೂ ಸಮಾಧಾನದಿಂದಿಲ್ಲ, ಸ್ಥಳ ತೋರಿಸದೆ ವರ್ಗಾವಣೆ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇಂತಹ ಪರಿಸ್ಥಿತಿಯಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಂಸದೆ ಶೋಭಾ ವಾಗ್ದಾಳಿ ಮಾಡಿದರು.
ಈ ಮಧ್ಯಂತರ ಅವಧಿಯಲ್ಲಿ ಕಾವೇರಿ ನಿರ್ವಹಣಾ ಪ್ರಾಧಿಕಾರದ ಸಭೆ ಕರೆಯಬೇಕು. ಪ್ರಾಧಿಕಾರದಲ್ಲಿ ತಜ್ಞರಿದ್ದಾರೆ ನಾವು ತಜ್ಞರಲ್ಲ ಹಾಗಾಗಿ ಯಾವುದನ್ನೂ ತನಿಖೆ ಮಾಡದೆ ತಕ್ಷಣ ಆದೇಶ ಹೊರಡಿಸುವುದು ಕಷ್ಟ ಎಂದು
ಪ್ರಕರಣದ ವಿಚಾರಣೆಯನ್ನು ಮುಂದಿನ ವಾರ ಶುಕ್ರವಾರಕ್ಕೆ ಸುಪ್ರೀಂಕೋರ್ಟ್ ಮುಂದೂಡಿದೆ.
ಎರಡು ರಾಜ್ಯಗಳ ಜಲಾಶಯಗಳ ವಾಸ್ತವ ವರದಿ ಸಲ್ಲಿಸುವಂತೆ ಕಾವೇರಿ ನಿರ್ವಹಣಾ ಪ್ರಾದಿಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ನೀರು ಬಿಡದಿದ್ದರೆ, ಅವರ ವಿರುದ್ಧ ನ್ಯಾಯಾಂಗ ನಿಂದನೆಯನ್ನು ಮುಂದುವರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.
ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ನೀರು ಹರಿಸಿದ್ದೇವೆ. ತಮಿಳುನಾಡು ವ್ಯರ್ಥ ಆರೋಪ ಮಾಡುತ್ತಿದೆ
ನೀರು ಬಿಡಲು ಕಾವೇರಿ ನಿರ್ವಹಣಾ ಪ್ರಾಧಿಕಾರ ನೀಡಿದ್ದ ಗಡುವು ಇಂದಿಗೆ ಮುಕ್ತಾಯವಾಗುತ್ತಿದೆ
ಈ ನಡುವೆ ಆದೇಶ ಸರಿಯಾಗಿ ಪಾಲನೆಯಾಗಿಲ್ಲ. ಕಡಿಮೆ ಮಳೆಯ ವರ್ಷವಾಗಿದ್ದರೂ, ಪ್ರಸ್ತುತ ನಾವು ಅತ್ಯಂತ ಭೀಕರ ಬರವನ್ನು ಅನುಭವಿಸುತ್ತಿದ್ದೇವೆ, ನೀರು ಬಿಡದಿದ್ದರೆ ಭಾರಿ ಅನಾಹುತವಾಗಲಿದೆ.
ಕಾವೇರಿ ನಿರ್ವಹಣಾ ಪ್ರಾಧಿಕಾರದಲ್ಲಿ ನಾವು ನಮ್ಮ ಸಮಸ್ಯೆಗಳನ್ನು ಹೇಳಲು ಪ್ರಯತ್ನಿಸಿದಾಗ ತಮಿಳುನಾಡು ಸರ್ಕಾರದ ಅಧಿಕಾರಿಗಳು ಕೇಳದೆ ಸಭೆಯಿಂದ ಹೊರನಡೆದಿದ್ದಾರೆ. ಕಡಿಮೆ ಮಳೆಯಾಗಿದೆ. ಹೀಗಾಗಿ ನೀರಿನ ಪ್ರಮಾಣ ತುಂಬಾ ಕಡಿಮೆ ಇದೆ ಎಂದರು.
ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದು ಸ್ರುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಈ ಸಂಬಂಧ ಇಂದು
ನ್ಯಾಯಾದೀಶ್ ಬಿ.ಆರ್.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿದೆ. ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸುತ್ತಿದ್ದು, 15 ದಿನ 10 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ಪ್ರಾದಿಕಾರ ಆದೇಶಿಸಿತ್ತು. ಇದು ಮುಂದಿನ 20 ದಿನಗಳಿಗೆ ಮುಂದುವರಿಯಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕ 40 ಟಿಎಂಸಿ ನೀರು ಬಿಡುತ್ತಿಲ್ಲ ಎಂದು ವಾದ ಮಂಡಿಸಿದರು.
ಚಿಕ್ಕೋಡಿ: ಬೆಳಗಾವಿ, ಚಿಕ್ಕೋಡಿ ಎರಡು ಕ್ಷೇತ್ರಗಳ ಪೈಕಿ ಎಲ್ಲಿಯಾದರೂ ಸ್ಪರ್ಧಿಸಲು ನಾನು ಸಿದ್ಧನಿಂದ್ದೇನೆ. ನಾನೇನು ಸನ್ಯಾಸಿ ಅಲ್ಲ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋತು ಒಂದೂವರೆ ವರ್ಷ ಆಗಿದೆ ಎಂದು ಮಾಜಿ ವಿಧಾನ್ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಬೆಳಗಾವಿ: ರೈತರಿಗೆ 7 ಗಂಟೆ ಅನಿಯಮಿತ ವಿದ್ಯುತ್ ಹಾಗೂ ಬೆಳಗಾವಿ ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ನೇತೃತ್ವದಲ್ಲಿ ಬಿಜೆಪಿ ಮುಖಂಡರು
ಚಿಕ್ಕೋಡಿ ಉಪವಿಭಾಗಧಿಕಾರಿ ಮಾಧವ್ ಗಿತ್ತೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಕೋಲಾರ: ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ, ಕೋಲಾರದ ನಗರ ದೇವತೆ ಕೋಲಾರಮ್ಮ ದೇವಾಲಯದಲ್ಲಿ ಮಹಿಳೆಯರಿಗೆ ಮುಜರಾಯಿ ಇಲಾಖೆ ವತಿಯಿಂದ ಅರಿಶಿಣ ಕುಂಕುಮ ಬಾಗಿನ ವಿತರಣೆ ಮಾಡಲಾಗಿದೆ. ಕೋಲಾರಮ್ಮ ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ.
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ನಗರದಲ್ಲಿನ ವಿವಿಧ ಲಕ್ಷ್ಮಿ ದೇವಸ್ಥಾನ ಮತ್ತು ಮನೆಗಳಲ್ಲಿ ವಿಶೇಷ ಪೂಜೆ ನೆರವೇರಿದೆ. ಚಂದ್ರಯಾನ 3 ಮಾದರಿಯಲ್ಲಿ ವರಮಹಾಲಕ್ಷ್ಮಿಗೆ ಅಲಂಕರಿಸಿ ಪೂಜೆ ಮಾಡಲಾಗಿದೆ. ಕಮಲದ ಹೂಗಳಲ್ಲಿ ವರ ಮಹಾಲಕ್ಷ್ಮಿಗೆ ವಿಶೇಷ ಅಲಂಕಾರ ಮಾಡಲಾಗಿದೆ.
ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿದೆ. ದೇವಿಯ ದರ್ಶನ ಮಾಡಲು ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ದೊಡ್ಡಬಳ್ಳಾಪುರ: ವರಮಹಾಲಕ್ಷ್ಮೀ ಹಬ್ಬ ಹಿನ್ನಲೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ ಮಹಿಳೆಯರಿಗೆ ಅರಿಶಿಣ ಕುಂಕುಮ ಬಾಗಿನ ನೀಡಲಾಗುತ್ತಿದೆ. ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಅರಿಶಿನ ಕುಂಕುಮ ವಿತರಿಸಲಾಗುತ್ತಿದೆ. ಹಬ್ಬದ ಪ್ರಯುಕ್ತ ಸುಬ್ರಮಣ್ಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿದೆ.
ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದವರ ಆಪರೇಷನ್ ಹಸ್ತ ಯಶಸ್ವಿ ಆಗಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲಿನ ಭೀತಿ ಇದೆ. ರಾಜ್ಯದಲ್ಲಿ ಹೆಚ್ಚು ಲೋಕಸಭಾ ಸೀಟು ಬರಲ್ಲ ಅಂತ ಮಾಹಿತಿ ಇದೆ. ಹೆಚ್ಚು ಸೀಟ್ ಗೆಲ್ಲದಿದ್ದರೇ ಕಾಂಗ್ರೆಸ್ ಸರ್ಕಾರದ ಭವಿಷ್ಯಕ್ಕೆ ಸಮಸ್ಯೆ ಇದೆ. ಹೀಗಾಗಿ ರಾಜ್ಯದಲ್ಲಿ ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ಪಕ್ಷ ಕೈಹಾಕಿದೆ. ಕಾಂಗ್ರೆಸ್ ಪಕ್ಷದವರ ಆಪರೇಷನ್ ಹಸ್ತ ಯಶಸ್ವಿ ಆಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಧಾರವಾಡ: ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ನಗರದ ಮರಾಠಾ ಕಾಲನಿಯಲ್ಲಿರುವ ದುರ್ಗದೇವಿ ದೇವಸ್ಥಾನದಲ್ಲಿ ಮಹಿಳೆಯರಿಗೆ ಅರಿಶಿನ ಕುಂಕುಮದ ಬಾಗಿನ ನೀಡಲಾಗುತ್ತಿದೆ. ಜಿಲ್ಲೆಯ 880 ದೇವಸ್ಥಾನಗಳಲ್ಲಿ ಬಾಗಿನ ವಿತರಣೆ ಮಾಡಲಾಗುತ್ತಿದೆ.
ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆ ಆರೋಪದಡಿ ಕಾರವಾರ ಸೀಬರ್ಡ್ ನೌಕಾನೆಲೆಯ ಭೂಸ್ವಾಧೀನ ಅಧಿಕಾರಿಯನ್ನು ಪೊಲೀಸರು ಬಂಧಸಿದ್ದಾರೆ.
ಬೆಂಗಳೂರು: ನಾಳೆ (ಆ.26) ಬೆಂಗಳೂರಿನಲ್ಲಿರುವ ಇಸ್ರೋಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 4.30ರಿಂದ ಬೆಳಗ್ಗೆ 9.30ರವರೆಗೆ ಸಂಚಾರ ಬದಲಾವಣೆ ಮಾಡಲಾಗಿದೆ. ಹಳೇ ಏರ್ಪೋರ್ಟ್ ರಸ್ತೆ, ಹಳೇ ಮದ್ರಾಸ್ ರಸ್ತೆ, ಎಂ.ಜಿ.ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ(ಮೇಖ್ರಿ ಸರ್ಕಲ್) ಸಿ.ವಿ.ರಾಮನ್ ರಸ್ತೆ, ಯಶವಂತಪುರ ಫ್ಲೈಓವರ್, ತುಮಕೂರು ರಸ್ತೆ (ಯಶವಂತಪುರದಿಂದ ನಾಗಸಂದ್ರದವರೆಗೆ) ಮಾಗಡಿ ರಸ್ತೆ, ಗೊರಗುಂಟೆ ಪಾಳ್ಯ ಜಂಕ್ಷನ್ನಿಂದ ಸುಮನಹಳ್ಳಿ, ಗುಬ್ಬಿ ತೋಟದಪ್ಪ ರಸ್ತೆ, ಜಾಲಹಳ್ಳಿ ಕ್ರಾಸ್ ರಸ್ತೆಯಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ನಾಳೆ ಬೆಳಗ್ಗೆ 4ರಿಂದ ಬೆಳಗ್ಗೆ 11ರವರೆಗೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸುವಂತೆ ಬೆಂಗಳೂರು ನಗರ ಪೊಲೀಸರ ಮನವಿ ಮಾಡಿದ್ದಾರೆ.
ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಕೆಆರ್ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿ ನಡೆದಿದೆ. ಹಣ್ಣು ಹೂವು, ತರಕಾರಿ ಪೂಜಾ ಸಾಮಗ್ರಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಸಾವಿರಾರು ಜನರು ಇಂದು ಕೆ ಆರ್ ಮಾರ್ಕೆಟ್ನಲ್ಲಿ ಖರೀದಿ ಮಾಡ್ತಿದ್ದಾರೆ.
ಗದಗ: ಜಿಲ್ಲೆಯಲ್ಲಿ ಶ್ರೀ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಬಲು ಜೋರಾಗಿದೆ. ಶ್ರೀ ವರಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರ ನೆರವೇರುತ್ತಿವೆ. ನಗರದ ಹಾತಲಗೇರಿ ನಾಕಾ ಬಳಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಅಪರಾ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಮಹಾಲಕ್ಷ್ಮಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿದೆ.
ಬೆಂಗಳೂರು: ಇಂದು ರಾಜ್ಯದೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚಾರಿಸಲಾಗುತ್ತದೆ. ಹೀಗಾಗಿ ನಗರದ ಲಕ್ಷ್ಮಿ ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅದರಲ್ಲಂತೂ ಮಹಾಲಕ್ಷ್ಮಿ ಲೇಔಟ್ನಲ್ಲಿರುವ ಲಕ್ಷ್ಮಿ ದೇವಸ್ಥಾನದಲ್ಲಿ ಇಂದು ಬೆಳ್ಳಗ್ಗೆ 5 ಗಂಟೆಯಿಂದಲೇ ಅಮ್ಮನವರಿಗೆ ಪಂಚಾಭಿಷೇಕ, ಪುಷ್ಪಭಿಷೇಕ ನೇರೆವೇರುತ್ತಿದ್ದು ವಿಶೇಷ ಅಲಂಕಾರದ ನಂತರ ಬರುವ ಭಕ್ತದಿಗಳಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮತ್ತೊಂದೆಡೆ ನಗರದ ಬನಶಂಕರಿ, ಮಹಾಲಕ್ಷ್ಮಿ ಲೇಔಟ್ನ ಲಕ್ಷ್ಮಿ ದೇವಸ್ಥಾನ, ಕೆಆರ್ಮಾರ್ಕೆಟ್ನ ಕೋಟೆ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಇನ್ನು ಮುನ್ನುರಾಯಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಭಾಗಿನ ನೀಡುವ ವ್ಯವಸ್ಥೆ ಮಾಡಲಾಗಿದೆ.
Published On - 8:11 am, Fri, 25 August 23