ನಿಖಿಲ್‌ ಕುಮಾರಸ್ವಾಮಿ ಸೋಲಿಗೆ ಬಿಜೆಪಿ, ಕಾಂಗ್ರೆಸ್‌, ರೈತ ಸಂಘಟನೆ ಕಾರಣ: ಹೆಚ್​ ಡಿ ಕುಮಾರಸ್ವಾಮಿ ಆರೋಪ

2019ರ ಲೋಕಸಭಾ  ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಮಂಡ್ಯ ಜಿಲ್ಲೆಯ ಜನರು ಸೋಲಿಸಲಿಲ್ಲ ಎಂದು ನಾಗಮಂಗಲ ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಸೋಲಿಗೆ ಬಿಜೆಪಿ, ಕಾಂಗ್ರೆಸ್‌, ರೈತ ಸಂಘಟನೆ ಕಾರಣ: ಹೆಚ್​ ಡಿ ಕುಮಾರಸ್ವಾಮಿ ಆರೋಪ
ಹೆಚ್​ ಡಿ ಕುಮಾರಸ್ವಾಮಿ
Edited By:

Updated on: Jul 31, 2022 | 6:34 PM

ಮಂಡ್ಯ: 2019ರ ಲೋಕಸಭಾ ಚುನಾವಣೆಯಲ್ಲಿ (Parliament Election)  ನಿಖಿಲ್‌ ಕುಮಾರಸ್ವಾಮಿ (Nikhil Kumarswamy) ಅವರನ್ನು ಮಂಡ್ಯ (Mandya) ಜಿಲ್ಲೆಯ ಜನರು ಸೋಲಿಸಲಿಲ್ಲ ಎಂದು ನಾಗಮಂಗಲ ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದ ಜೆಡಿಎಸ್‌ (JDS) ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ (HD Kumarswamy) ಹೇಳಿದ್ದಾರೆ. ನಿಖಿಲ್‌ ಕುಮಾರಸ್ವಾಮಿ ಅವರನ್ನು ಸೋಲಿಸಲು ಬಿಜೆಪಿ (BJP), ಕಾಂಗ್ರೆಸ್‌ (Congress), ರೈತ ಸಂಘಟನೆ ಮತ್ತು ಕೆಲ ಮಾಧ್ಯಮಗಳು ಸೇರಿ ಚಕ್ರವ್ಯೂಹ ರಚಿಸಿ ಸೋಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಜೆಡಿಎಸ್ ಸರ್ವನಾಶ ಮಾಡಿದ್ದೇವೆ ಅಂತಾ ಅಹಂನಲ್ಲಿದ್ದಾರೆ. ಅಷ್ಟು ಸುಲಭವಾಗಿ ಮಂಡ್ಯದಲ್ಲಿ ಸರ್ವನಾಶ ಮಾಡಲು ಸಾಧ್ಯವಿಲ್ಲ. ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ನಾವು ಅಂಥಾ ಹವಲು ಪಕ್ಷದವರು ಹೇಳುತ್ತಾರೆ. ಆದರೆ ನಾನು ಮುಖ್ಯಮಂತ್ರಿಯಾಗಿದ್ದು ನನ್ನ ತಂದೆ ತಾಯಿ ಆಶೀರ್ವಾದ ಹಾಗೂ ನಿಮ್ಮಿಂದ ಎಂದು ಹೇಳಿದರು.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಕಾರ್ಯಕ್ರಮಕ್ಕೆ ಬರಲು ಆಗದ ಸ್ಥಿತಿ ಇದೆ. ಯಾರದೋ ಕೆಟ್ಟ ಕಣ್ಣು ಬಿದ್ದಿದೆ. ನಾನು ಅಳಬಾರದು ಅಂತಾ ಇದ್ದೆ ಆದರೆ ನಮ್ಮದು ಕಟುಕ ಹೃದಯ ಅಲ್ಲ. ಇದು ನಾಟಕ ಅಲ್ಲ ಅವರ ಪರಿಸ್ಥಿತಿ ಕಣ್ಣೀರು ತರುತ್ತದೆ. ಅವರು ಇರುವ ಸ್ಥಿತಿ ನೋಡಿದರೆ ನೋವಾಗುತ್ತದೆ ಎಂದು ದೇವೆಗೌಡರನ್ನು ನೆನೆದು ಕಣ್ಣೀರು ಹಾಕಿದರು.

ಬಜೆಟ್ ಮಂಡಿಸುವಾಗ ಮಂಡ್ಯ ಬಜೆಟ್ ಅಂತಾ ನಗುತ್ತಿದ್ದರು. ನಾನು ನೀಡಿದ ಅನುದಾನವನ್ನು ವಾಪಸ್ ಪಡೆದರು. ನಾನು ಮಂಡ್ಯ ಜಿಲ್ಲೆಗೆ ಸೀಮಿತವಾದ ಆಡಳಿತ ನಡೆಸಿಲ್ಲ. ಇಡೀ ರಾಜ್ಯದ ಅಭಿವೃದ್ಧಿಗೆ ಪೂರಕ ಆಡಳಿತ ಕೊಟ್ಟಿದ್ದೇವೆ. ನಾನು ಮುಖ್ಯಮಂತ್ರಿಯಾಗುವುದು ಮುಖ್ಯವಲ್ಲ, ಜೆಡಿಎಸ್​ ಅಧಿಕಾರಕ್ಕೆ ಬಂದರೆ ಜನರಿಗೆ ಉಪಯೋಗ ಆಗುತ್ತೆ. ಕಳೆದ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ 7 ಸ್ಥಾನ ಗೆಲ್ಲಿಸಿದ್ದೀರಿ. ಅವತ್ತು ನಾನು ಸಿಎಂ ಆಗಲಿಕ್ಕೆ ಮಂಡ್ಯ ಜಿಲ್ಲೆ ಮುಂಚೂಣಿಯಲ್ಲಿತ್ತು ಎಂದು ನೆನೆದರು.

ಮುಂದಿನ ತಿಂಗಳಿನಿಂದ ಪಂಚರತ್ನ ರಥ ಅಭಿಯಾನ ಪ್ರಾರಂಭ ಮಾಡುತ್ತೇವೆ. 120 ದಿನಗಳ ಕಾಲ ರಾಜ್ಯಾದ್ಯಂತ ಪಂಚರತ್ನ ರಥ ಸಂಚಾರ ಮಾಡುತ್ತದೆ. ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ವಾಸ್ತವ್ಯ ಮಾಡುತ್ತೇನೆ. ಮಂಗಳೂರಿನಲ್ಲಿ 15 ವರ್ಷದಿಂದ ಕೋಮುಗಲಭೆ ನಡೀತಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಇಂತಹ ಒಂದು ಘಟನೆ ನಡೆದಿರಲಿಲ್ಲ. ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ ಅವರು  ಮಂಗಳೂರಿಗೆ ಭೇಟಿ ನೀಡಿ ಒಂದು ವರ್ಗಕ್ಕೆ ಮಾತ್ರ ಪರಿಹಾರ ನೀಡುತ್ತಾರೆ ಎಂದು ವಾಗ್ದಾಳಿ ಮಾಡಿದರು.

ಬೊಮ್ಮಾಯಿ ಮಂಗಳೂರಲ್ಲಿ ಇದ್ದಾಗಲೇ ಮತ್ತೊಂದು ಹತ್ಯೆಯಾಗಿದೆ. ಕನಿಷ್ಠ ಸೌಜನ್ಯಕ್ಕೂ ಮುಖ್ಯಮಂತ್ರಿ ಅಲ್ಲಿಗೆ ಹೋಗಲಿಲ್ಲ. ಅದು ಮುಖ್ಯಮಂತ್ರಿಗಳ ಸಂಕುಚಿತ ಮನಸ್ಸನ್ನು ತೋರಿಸುತ್ತದೆ ಎಂದು ಹರಿಹಾಯ್ದರು.

ಮಂಡ್ಯಗೆ ದೇವೇಗೌಡರ ಕುಟುಂಬದ ಕೊಡುಗೆ ಬಗ್ಗೆ ಪ್ರಶ್ನಿಸುತ್ತಾರೆ. ಇದನ್ನು ಕೇಳಿದಾಗ ನನ್ನ ರಕ್ತ ಕುದಿಯುತ್ತದೆ. ಸಿದ್ದರಾಮಯ್ಯ ಆಡಳಿತದಲ್ಲಿ 200 ರೈತರು ಆತ್ಮಹತ್ಯೆಗೆ ಶರಣಾದರು. ಸೌಜನ್ಯಕ್ಕಾದರೂ ರೈತರ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿಲ್ಲ. ರೈತರ ಕುಟುಂಬಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದು ನಾವು. ಹೃದಯವೈಶಾಲ್ಯತೆ ಇಲ್ಲದ ನೀವು ನಮ್ಮ ಬಗ್ಗೆ ಮಾತನಾಡುತ್ತೀರಾ? ಎಂದು ಪ್ರಶ್ನಿಸಿದರು.

ಕಟ್ಟಿಗೆ ಉಪಯೋಗಿಸಿ ಆರೋಗ್ಯ ಕೆಡಿಸಿಕೊಳ್ಳಬೇಡಿ ಅಂತಾ ಗ್ಯಾಸ್ ಕೊಟ್ಟರು. ಈಗ ಗ್ಯಾಸ್ ಬಳಸಬೇಕೆಂದರೆ ಸಾವಿರ ರೂಪಾಯಿ ಕೊಡಬೇಕು. ಇದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ. ಇಂದು ನಾಡಿನಲ್ಲಿ ಗ್ಯಾಸ್ ಕೊಳ್ಳುವ ಪರಿಸ್ಥಿತಿಯಲ್ಲಿ ಜನರಿಲ್ಲ. ಇನ್ನು ನನ್ನ ಕಾರ್ಯಕ್ರಮಗಳನ್ನು ನಾನು ಪ್ರಕಟಿಸಿಲ್ಲ. ಈಗ ಕಟ್ಟಿಗೆನೂ ಇಲ್ಲ, ದೇವೇಗೌಡರ ಕಾಲದಲ್ಲಿ ನೀಡುತ್ತಿದ್ದ ಸೀಮೆಎಣ್ಣೆನೂ ಇಲ್ಲ ಎಂದು ಹೇಳಿದ್ದಾರೆ.

ಬಡವರು ಅಡುಗೆಗೆ ಏನು ಮಾಡಬೇಕು ? ನಾನು ಅಧಿಕಾರಕ್ಕೆ ಬಂದರೆ ಮನೆಗೆ ಉಚಿತ 200 ಯುನಿಟ್ ವಿದ್ಯುತ್ ನೀಡುತ್ತೇನೆ. ಅಡುಗೆ ಮಾಡಲು, ಬೆಳಕು ಉರಿಸಲು ಉಚಿತ ವಿದ್ಯುತ್ ನೀಡುತ್ತೇವೆ. ಈ ಯೋಜನೆಗಳಿಗೆ ದುಡ್ಡು ಹೊಂದಿಸಲು ನನಗೆ ತಿಳಿದಿದೆ. ದೇವೇಗೌಡರು ನನಗೆ ಕಲಿಸಿಕೊಟ್ಟಿದ್ದಾರೆ. ರಾಜ್ಯದ ಸಂಪತ್ತು ಕೆಲವೇ ಕೆಲವು ಜನರ ಬಳಿ ಇದೆ. ಅವರಿಗೆ ದುಡ್ಡು ಹೋಗದ ಹಾಗೇ ತಡೆಯುವುದು ನನಗೆ ಗೊತ್ತು ಎಂದರು.

ಕೈ ಜೋಡಿಸಿ ನಿಮ್ಮ ಬಳಿ ಮನವಿ ಮಾಡುತ್ತೇನೆ ನಮ್ಮ ಪಕ್ಷ ಅಧಿಕಾರಕ್ಕೆ ತನ್ನಿ. ಈ ಪಕ್ಷ ಎಂಪಿ ಮಾಡಿದರೆ ಈಗ ನಾನೇ ಅಭ್ಯರ್ಥಿ ಎಂದು ಹಳ್ಳಿ ಸುತ್ತುತ್ತಿದ್ದಾರೆ ಎಂದು ಎಲ್ ಆರ್ ಶಿವರಾಮೇಗೌಡ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ ಮಾಡಿದ್ದಾರೆ.

ಸ್ವಾಭಿಮಾನ ಬದುಕು ಎಂದವರ ಮನೆ ಬಾಗಿಲಿಗೆ ಹೋಗಲು ಆಗುತ್ತಾ ? ಮಂಡ್ಯ ಮನೆ ಬೇರೆ ಬೆಂಗಳೂರಿನ ಮನೆಗೆ ಹೋಗೋಕಾಗುತ್ತಾ ? ನನ್ನ ಮನೆ ಬಾಗಿಲಿಗೆ ಬರುವ ಹಾಗೇ ಅವರ ಮನೆಗೆ ಹೋಗಲು ಸಾಧ್ಯಾನಾ ? ನಾನು ಸಂಪಾದಿಸಿರುವುದು ನಿಮ್ಮ ಪ್ರೀತಿ. ಎರಡು ಬಾರಿ ಮುಖ್ಯಮಂತ್ರಿಯಾದಗಾಲು ನನಗಾಗಿ ಏನು ಮಾಡಿಕೊಂಡಿಲ್ಲ. ನಾನು ಕಾಂಪ್ಲೆಕ್ಸ್ ಕಟ್ಟಿಸಿಲ್ಲ ಇಂಡಸ್ಟ್ರಿ ಎಜುಕೇಶನ್ ಇನ್ಸ್ಟಿಟ್ಯೂಟ್ ಇಲ್ಲ. ನಾನು ಸಂಪಾದನೆ ಮಾಡಿದ ಹಣದಲ್ಲಿ ಕೇತಗಳ್ಳಿ 40 ಎಕರೆ ಜಮೀನು ಅಷ್ಟೇ ಎಂದು ತಿಳಿಸಿದರು.

Published On - 6:34 pm, Sun, 31 July 22

Follow Us