ಅಮಿತ್ ಶಾ ಸಮ್ಮುಖದಲ್ಲಿ ನಾಳೆ 5 ನಿಮಿಷದ ಸಿ.ಡಿ. ಬಿಡುಗಡೆ, ಆದರೆ ಆ ಸಿ.ಡಿ.ಯಲ್ಲ: ನೂತನ ಸಚಿವ ಮುರುಗೇಶ್ ನಿರಾಣಿ

ನಾಳೆ 5 ನಿಮಿಷದ ಸಿಡಿ ಬಿಡುಗಡೆ ಮಾಡುತ್ತೇವೆ ಆದರೆ ಆ ಸಿಡಿಯಲ್ಲ. ಬದಲಿಗೆ ನಿರಾಣಿ ಸಮೂಹ ಸಂಸ್ಥೆಗಳ ಸಿಡಿ ಬಿಡುಗಡೆ ಮಾಡುತ್ತೇವೆ ಎಂದು ಗೊಂದಲಗಳಿಗೆ ತೆರೆ ಎಳೆದರು.

ಅಮಿತ್ ಶಾ ಸಮ್ಮುಖದಲ್ಲಿ ನಾಳೆ 5 ನಿಮಿಷದ ಸಿ.ಡಿ. ಬಿಡುಗಡೆ, ಆದರೆ ಆ ಸಿ.ಡಿ.ಯಲ್ಲ: ನೂತನ ಸಚಿವ ಮುರುಗೇಶ್ ನಿರಾಣಿ
ಸಚಿವ ಮುರುಗೇಶ್ ನಿರಾಣಿ
Edited By: ಸಾಧು ಶ್ರೀನಾಥ್​

Updated on: Jan 16, 2021 | 5:06 PM

ಬಾಗಲಕೋಟೆ: ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನೂತನ ಸಚಿವ ಮುರುಗೇಶ್ ನಿರಾಣಿ  ಅವರು ನಾಳೆ ನಡೆಯುವ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು. ಈ ಸಂದರ್ಭದಲ್ಲಿ ಸಿ.ಡಿ.ಯ ಬಗ್ಗೆ ಉಲ್ಲೇಖ ಮಾಡಿದ ಮುರುಗೇಶ್ ನಿರಾಣಿ, ನಾಳೆ 5 ನಿಮಿಷದ ಸಿ.ಡಿ. ಬಿಡುಗಡೆ ಮಾಡುತ್ತೇವೆ; ಆದರೆ ಆ ಸಿ.ಡಿ.ಯಲ್ಲ. ಬದಲಿಗೆ ನಿರಾಣಿ ಸಮೂಹ ಸಂಸ್ಥೆಗಳ ಸಿ.ಡಿ. ಬಿಡುಗಡೆ ಮಾಡುತ್ತೇವೆ ಎಂದು ಗೊಂದಲಗಳಿಗೆ ತೆರೆ ಎಳೆದರು. ಆದರೆ ಶಾಸಕರು ಆರೋಪಿಸುತ್ತಿರುವ ಸಿ.ಡಿ. ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.

ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುವೆ. ರಾಜ್ಯ, ದೇಶಕ್ಕೆ ಹೆಸರು ತರುವ ಕೆಲಸ ಮಾಡಿ ತೋರಿಸುವೆ. ಎಲ್ಲಾ ಸಚಿವರಿಗೆ ನೀಡಿ ಉಳಿದ ಖಾತೆ ಕೊಟ್ಟರೂ ಸಂತಸ ಎಂದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರ..
ಅಮಿತ್ ಶಾ ಭೇಟಿ ಮಾಡಿಸಲಿ ಎಂದು ನಿರಾಣಿಗೆ, ಬಸವ ಜಯಮೃತ್ಯುಂಜಯಶ್ರೀಗಳ ಸವಾಲಿನ ಬಗ್ಗೆ ಮಾತಾನಾಡಿದ ಅವರು, ನವದೆಹಲಿಯಲ್ಲಿ ಸಮಯ ನಿಗದಿಪಡಿಸಿ ಅಮಿತ್ ಶಾ ಜತೆ ಶ್ರೀಗಳ ಚರ್ಚೆಗೆ ಅವಕಾಶ ಮಾಡಿಕೊಡುವೆ. ಶ್ರೀಗಳ ಸವಾಲು ಸ್ವೀಕರಿಸುವುದಿಲ್ಲ, ತಿರಸ್ಕರಿಸುವುದೂ ಇಲ್ಲ. ಸ್ವಾಮೀಜಿ ಪಾದಯಾತ್ರೆಗೆ ಯಾವುದೇ ತಡೆಯೊಡ್ಡುವುದಿಲ್ಲ ಎಂದರು.

‘ಅಮಿತ್ ಶಾ ಗೋ ಬ್ಯಾಕ್’ ರೈತರ ಅಭಿಯಾನ ವಿಚಾರ..
ಕೇವಲ ರಾಜಕೀಯ ಉದ್ದೇಶದಿಂದ ವಿರೋಧ ಸರಿಯಲ್ಲ. ನಾನು ರೈತ ಕುಟುಂಬದಿಂದ ಬಂದವನು, ಅನ್ಯಾಯ ಮಾಡಲ್ಲ. ಕೋರ್ಟ್​ ಮೂಲಕ ಕೇದಾರನಾಥ ಶುಗರ್ಸ್​ ಪಡೆದಿರುವೆ. ರೈತರು ನನ್ನೊಂದಿಗೆ ನೇರವಾಗಿ ಚರ್ಚೆ ಮಾಡಿ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲಿ. ಹೀಗಾಗಿ ರೈತರು ಹೋರಾಟ, ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದರು.

ಸರ್ಕಾರ ಅನೈತಿಕವೆಂದು ಸಿದ್ದರಾಮಯ್ಯ ಮಾಡಿರುವ ಆರೋಪದ ಬಗ್ಗೆ ಮಾತಾನಾಡಿದ ಅವರು, ಸಿದ್ದರಾಮಯ್ಯನವರು ದೊಡ್ಡವರು, ಅವರ ಬಗ್ಗೆ ಮಾತಾಡಲ್ಲ ಎಂದರು. ಜೊತೆಗೆ 2010ರಲ್ಲಿ ನಿರಾಣಿ ಕಂಪನಿ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ನಿರಾಣಿ, ಆಲಂ ಪಾಷಾ ಓರ್ವ ಫ್ರಾಡ್ ಎಂದು ತೀವ್ರ ವಾಗ್ದಾಳಿ ನಡೆಸಿದರು. ಆ ಭೂಮಿಯನ್ನು ನಮ್ಮ ಸಂಬಂಧಿಕರಿಗೆ ಕೊಟ್ಟಿಲ್ಲ. ಆ ಭೂಮಿ ಇನ್ನೂ ಕೆಐಎಡಿಬಿಯಲ್ಲೇ ಇದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಭಿನ್ನಮತ ಸ್ಫೋಟ ವಿಚಾರ..
ಮನೆಯಲ್ಲಿ ಅಣ್ಣ ತಮ್ಮಂದಿರ ನಡುವೆ ಅಸಮಾಧಾನ ಇದ್ದಂತೆ ಇಲ್ಲೂ ಇದ್ದೆ ಇರುತ್ತದೆ. ಅಸಮಾಧಾನಗೊಂಡವರನ್ನು ವರಿಷ್ಠರು ಸಮಾಧಾನ ಪಡಿಸ್ತಾರೆ. ಹೌದಪ್ಪಗಳಿಗೆ ಸಚಿವ ಸ್ಥಾನವೆಂದು ಸಿದ್ದು ಸವದಿ ಆರೋಪ ಮಾಡಿದ್ದರ ಬಗ್ಗೆ ಮಾತಾನಾಡಿದ ನಿರಾಣಿ, ಹೌದಪ್ಪ, ಅಲ್ಲಪ್ಪ ತೆಗೆದಕೊಂಡು ನಾನೇನು ಮಾಡಲಿ ಎಂದು ಶಾಸಕ ಸಿದ್ದು ಸವದಿಗೆ ನಿರಾಣಿ ಪರೋಕ್ಷವಾಗಿ ತಿರುಗೇಟು ನೀಡಿದರು.

ಪಂಚಮಸಾಲಿ ಸ್ವಾಮೀಜಿ ಗುಡುಗು: ಒಂದು ವರ್ಷದ ನಂತರ ನಿರಾಣಿಗೆ ಸಚಿವ ಸ್ಥಾನದ ಗದ್ದುಗೆ

Loading...
Unable to load recommendations.
Follow Us