Narendra Modi: ಬೆಂಗಳೂರಿಗರ ಪರಿಸರ ಪ್ರೀತಿಗೆ ಕನ್ನಡದಲ್ಲೇ ಮೆಚ್ಚುಗೆ ಸೂಚಿಸಿದ ಪ್ರಧಾನಿ ಮೋದಿ

ಬೆಂಗಳೂರು ನಗರವು ಪ್ರಕೃತಿಯೊಂದಿಗೆ ಗಾಢವಾದ ಬಾಂಧವ್ಯವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Narendra Modi: ಬೆಂಗಳೂರಿಗರ ಪರಿಸರ ಪ್ರೀತಿಗೆ ಕನ್ನಡದಲ್ಲೇ ಮೆಚ್ಚುಗೆ ಸೂಚಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
|

Updated on: Apr 01, 2023 | 11:11 AM

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬೆಂಗಳೂರು (Bengaluru) ಹಾಗೂ ಕರ್ನಾಟಕದ (Karnataka) ವಿಚಾರಗಳ ಬಗ್ಗೆ ತಮ್ಮ ಭಾಷಣಗಳಲ್ಲಿ ಉಲ್ಲೇಖಿಸುವುದು, ಟ್ವೀಟ್ ಮಾಡುವುದನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅನುಸರಿಸುತ್ತಲೇ ಇದ್ದಾರೆ. ರಾಜ್ಯದ ಜನರ ಹೃದಯ ಗೆಲ್ಲುವ ನಿಟ್ಟಿನಲ್ಲಿ ಸದಾ ಒಂದಿಲ್ಲೊಂದು ತಂತ್ರಗಾರಿಕೆ ಅನುಸರಿಸುತ್ತಿರುವ ಪ್ರಧಾನಿ ಇದೀಗ ಬೆಂಗಳೂರಿಗರ ಪರಿಸರ ಪ್ರೀತಿಯ ಕುರಿತಾದ ಒಂದು ಟ್ವೀಟ್​​ಗೆ ಕನ್ನಡದಲ್ಲೇ ಪ್ರತಿಕ್ರಿಯಿಸಿ ಶಹಬ್ಬಾಸ್​ಗಿರಿ ನೀಡಿದ್ದಾರೆ. ಬೆಂಗಳೂರು ನಗರವು ಪ್ರಕೃತಿಯೊಂದಿಗೆ ಗಾಢವಾದ ಬಾಂಧವ್ಯವನ್ನು ಹೊಂದಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ನಗರಗಳ ಕುರಿತಾದ ಇಂಥ ಅಂಶಗಳನ್ನು ಹೆಚ್ಚು ಪ್ರಚುರಪಡಿಸಬೇಕಾದ ಅಗತ್ಯವಿದೆ ಎಂದೂ ಪ್ರತಿಪಾದಿಸಿದ್ದಾರೆ.

‘ಬೆಂಗಳೂರಿನಲ್ಲಿ ವರ್ಷಪೂರ್ತಿ ಅರಳುವ ವೈವಿಧ್ಯಮಯ ಮರಗಳ ಸಂಗ್ರಹವಿದೆ ಎಂದು ನಿಮಗೆ ತಿಳಿದಿದೆಯೇ? ಯುಗಗಳ ಹಿಂದೆ ನಗರವನ್ನು ಯೋಜಿಸಿದಾಗ, ಒಂದು ಮರವು ಅರಳುವುದನ್ನು ನಿಲ್ಲಿಸುವ ಸಂದರ್ಭದಲ್ಲಿ, ಇನ್ನೊಂದು ಮರವು ಅದರ ಸ್ಥಾನವನ್ನು ತುಂಬುವ ರೀತಿಯಲ್ಲಿ ಮರಗಳು ಇರುವಂತೆ ಗಿಡಗಳನ್ನು ನೆಟ್ಟು ಬೆಳೆಸಲಾಗಿತ್ತು. ಪರಿಣಾಮವಾಗಿ ಬೆಂಗಳೂರಿನ ಋತುಗಳು ಹೂವಿನ ಸ್ವರಮೇಳವಾಗಿ ಹೊರಹೊಮ್ಮಿದೆ’ ಎಂದು ಪರಿಸರಪ್ರಿಯೆ, ಕಲಾವಿದೆ, ಪರಿಸರ ಕುರಿತ ವಿಚಾರಗಳ ಅಂಕಣಕಾರ್ತಿಯೂ ಆಗಿರುವ ಸುಭಾಷಿಣಿ ಚಂದ್ರಮಣಿ ಎಂಬವರು ಟ್ವೀಟ್ ಮಾಡಿದ್ದರು.

ಜತೆಗೆ, ಬೆಂಗಳೂರಿನ ಪ್ರಾಕೃತಿಕ ವೈವಿಧ್ಯಕ್ಕೆ ಸಂಬಂಧಿಸಿ ಸರಣಿ ಟ್ವೀಟ್​ಗಳನ್ನು ಮಾಡಿದ್ದ ಸುಭಾಷಿಣಿ ಚಂದ್ರಮಣಿ, ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದರು.

ಇದನ್ನೂ ಓದಿ: ಏಪ್ರಿಲ್ 9ರಂದು ಪ್ರಧಾನಿ ಕರ್ನಾಟಕ ಪ್ರವಾಸ; ಬಂಡೀಪುರದಲ್ಲಿ ಸಫಾರಿ ನಡೆಸಲಿರುವ ನರೇಂದ್ರ ಮೋದಿ

ಬೆಂಗಳೂರಿನಲ್ಲಿ ಮಳೆಗಾಲದ ತಿಂಗಳುಗಳಲ್ಲಿಯೂ ಸಹ, ಹೂವುಗಳಿಂದ ಅಲಂಕರಿಸಲ್ಪಡುವ ಮರಗಳಿವೆ. ಕಾಲೋಚಿತವಾಗಿ ಹೂಡ ಬಿಡುವ ಮರಗಳ ಹೊರತಾಗಿ, ವರ್ಷಪೂರ್ತಿ ಹೋ ಅರಳಿರುವ ದೀರ್ಘಾವಧಿಯ ಮರಗಳಿವೆ. ಇವುಗಳು ಹೂಬಿಡುವ ಋತುವಿನಲ್ಲಿ ಸಣ್ಣ ಅಂತರವನ್ನು ತುಂಬುತ್ತವೆ. ಬೆಂಗಳೂರಿನ ಗಾಳಿಯು ಯಾವಾಗಲೂ ಪರಿಮಳಯುಕ್ತವಾಗಿರುತ್ತದೆ, ಆದ್ದರಿಂದ ಅದರ ಹೆಸರು ‘ದಿ ಗಾರ್ಡನ್ ಸಿಟಿ’ ಎಂದು ಅವರು ಮತ್ತೊಂದು ಟ್ವೀಟ್​ನಲ್ಲಿ ಉಲ್ಲೇಖಿಸಿದರು.

ಈ ಟ್ವೀಟ್​ಗಳಿಗೆ ಕನ್ನಡದಲ್ಲೇ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಇದು ಬೆಂಗಳೂರು ಮತ್ತು ಅದರ ಮರಗಳ ಬಗೆಗಿನ ಆಸಕ್ತಿದಾಯಕ ವಿಷಯವಾಗಿದೆ. ಬೆಂಗಳೂರು ನಗರವು ಮರಗಳು ಮತ್ತು ಕೆರೆಗಳು ಸೇರಿದಂತೆ ಪ್ರಕೃತಿಯೊಂದಿಗೆ ಬಹಳ ಗಾಢವಾದ ಬಾಂಧವ್ಯವನ್ನು ಹೊಂದಿದೆ. ತಮ್ಮ ಪಟ್ಟಣಗಳು ಮತ್ತು ನಗರಗಳ ಬಗೆಗಿನ ಇಂತಹ ಅಂಶಗಳನ್ನು ಪ್ರಚುರಪಡಿಸುವಂತೆ ನಾನು ಇತರರನ್ನು ಒತ್ತಾಯಿಸುತ್ತೇನೆ ಎಂದು ಉಲ್ಲೇಖಿಸಿದ್ದಾರೆ.

ಕಳೆದ ವಾರವಷ್ಟೇ ಮೋದಿ ಅವರು ಯುಗಾದಿ ಹಬ್ಬಕ್ಕೆ ಕನ್ನಡದಲ್ಲೇ ಶುಭ ಕೋರಿ ಟ್ವೀಟ್ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ