Woman Auto Driver: 30 ವರ್ಷಗಳಿಂದ ಅವಡುಗಚ್ಚಿ ಆಟೋ ಓಡಿಸುತ್ತಿರುವ ಸ್ವಾಭಿಮಾನಿ ನಿರ್ಮಲಾ ಜೀವನಗಾಥೆಯನ್ನೊಮ್ಮೆ ಓದಿ!

ಇನ್ನೇನು ವಯಸ್ಸಾಯ್ತು ಮನೆಯಲ್ಲಿರೋಣ ಅಂತ ಯೋಚಿಸೋವಾಗಲೇ, ಹೆಗಲೆತ್ತರಕ್ಕೆ ಬೆಳೆದಿದ್ದ ಮಗ ವಿರೇಶ್ ಅಕಾಲಿಕ ಮರಣಕ್ಕೆ ತುತ್ತಾಗಿದ್ದ. ಆಗ ಮತ್ತೆ ಅದೇ ಆಟೋ ಸೇವೆಯನ್ನು ನಿರ್ಮಲಾ ಮುಂದುವರೆಸಿದ್ದಾರೆ. ಇದೇ ದುಡಿಮೆಯಿಂದ ಅನಾರೋಗ್ಯ ಪೀಡಿತ ಪತಿಯ ಚಿಕಿತ್ಸಾ ಖರ್ಚು, ಮನೆ ಖರ್ಚು ನಿಭಾಯಿಸಿಕೊಂಡು ಮಗಳು ರೇಖಾ ಮದುವೆ ಮಾಡಿಸಿದ್ದಾರೆ. ಜೊತೆಗೆ ಮತ್ತೊಬ್ಬ ಪುತ್ರ ನರೇಶನನ್ನು ಉನ್ನತ ವ್ಯಾಸಂಗಕ್ಕಾಗಿ ವಿಶಾಖಪಟ್ಟಣಂಗೆ ಕಳುಹಿಸಿದ್ದಾರೆ.

Woman Auto Driver: 30 ವರ್ಷಗಳಿಂದ ಅವಡುಗಚ್ಚಿ ಆಟೋ ಓಡಿಸುತ್ತಿರುವ ಸ್ವಾಭಿಮಾನಿ ನಿರ್ಮಲಾ ಜೀವನಗಾಥೆಯನ್ನೊಮ್ಮೆ ಓದಿ!
ಸ್ವಾಭಿಮಾನಿ ನಿರ್ಮಲಾ ಜೀವನಗಾಥೆಯನ್ನೊಮ್ಮೆ ಓದಿ!
ಸಾಧು ಶ್ರೀನಾಥ್​

Updated on: May 23, 2023 | 11:15 AM

ಪತಿ ಕಿರುಕುಳ, ಗಂಡನಿಗೆ ದುಡಿಮೆಯಿಲ್ಲ, ಪತಿಗೆ ದೀರ್ಘ ಕಾಳದ ಅನಾರೋಗ್ಯ ಹೀಗೆ ಹತ್ತು ಹಲವು ಕಾರಣಗಳಿಂದ ಅದೆಷ್ಟೋ ಮಹಿಳೆಯರು ತವರು ಸೇರ್ತಾರೆ. ಆದ್ರೆ ಹೀಗೆ ಗಂಡನಿಂದ ದೂರವಾಗಿರೊ ಅದೆಷ್ಟೋ ಮಹಿಳೆಯರಿಗೆ ಬಿಸಿಲುನಾಡು ರಾಯಚೂರಿನ ಆ ಮಹಿಳೆಯ ಕಥೆಯನ್ನ ನೋಡಲೇಬೇಕು. ಒಮ್ಮೆ ಆ ಬಡ ಮಹಿಳೆ ಸ್ವಾಭಿಮಾನ ನೋಡಿದ್ರೆ ನೀವು ಚೇಂಜ್ ಆಗೋದು ಪಕ್ಕಾ. ಹೀಗೆ ಸರ್, ಸರ್ ಬನ್ನಿ.. ಎಲ್ಲಿಗೆ ಕರ್ಕೊಂಡ್ ಹೋಗ್ಬೇಕು ಹೇಳಿ.. ಆಟೋ.. ಬನ್ನಿ ಸಾರ್ ಆಟೋ – ಅಂತ ಕೂಗುತ್ತಿರೊ ಈ ಮಹಿಳೆಯನ್ನು ನೋಡಿ. ಗಂಡನ ಕಿರುಕುಳಕ್ಕೆ ಬೇಸತ್ತು ದೂರ ಆಗೋ ಅದೆಷ್ಟೋ ಮಹಿಳೆಯರಿಗೆ ಈ ಆಟೋ ಚಾಲಕಿ ಸ್ಪೂರ್ತಿ. ಅಷ್ಟಕ್ಕೂ ಈಕೆ ರಾಯಚೂರು (Raichur) ಜಿಲ್ಲೆಯ ಮೊಟ್ಟ ಮೊದಲ ಮಹಿಳಾ ಆಟೋ ಚಾಲಕಿ ಕಂ ಸ್ವಾಭಿಮಾನಿ ಮಹಿಳೆ (Woman Auto Driver).

ಹೌದು.. ಇಲ್ಲಿ ಕಾಣ್ತಿರೊ ಈ ಆಟೋ ಚಾಲಕಿ ಹೆಸರು ನಿರ್ಮಲಾ.. ವಯಸ್ಸು 53.. ರಾಯಚೂರು ನಗರದ ಆಶಾಪುರ ರಸ್ತೆಯ ಸಣ್ಣದೊಂದು ಮನೆಯೊಂದರಲ್ಲಿ ಪತಿ ರಾಮುಲು‌ ಜೊತೆ ವಾಸವಿದ್ದಾರೆ.. ಈ ಆಟೋ ಚಾಲಕಿ ನಿರ್ಮಲಾ ರಾಯಚೂರು ಜಿಲ್ಲೆಯ ಮೊದಲ ಹಾಗೂ ಏಕೈಕ ಮಹಿಳಾ ಆಟೋ‌ ಚಾಲಕಿ.. ನಿರ್ಮಲಾ ಪತಿ ರಾಮುಲು ಕೂಡ ಆಟೋ ಚಾಲಕ.. ಆತ ದುಡಿಯುವುದನ್ನು ಬಿಟ್ಟು ಪತ್ನಿ ನಿರ್ಮಲಾ ಹಾಗೂ ಮಕ್ಕಳಿಗೆ ಕಿರುಕುಳ ಕೊಡೋಕೆ‌ ಶುರುಮಾಡಿದ್ದ.

ಆಗ ಗಂಡನ ಮನೆ ಬಿಟ್ಟು ಹೋದರೆ ಸಮಾಜ ನೋಡೊದೇ ಬೇರೆ ಥರ ಅಂತ ತಾನೇ ಮುಂದುನಿಂತು ಮನೆ ಜವಾಬ್ದಾರಿ ಹೆಗಲಿಗೇರಿಸಿಕೊಂಡಳು. ನಿರ್ಮಲಾ ಕೊನೆಗೆ ಆಟೋ‌ ಚಾಲನೆ ಕಲಿತು ಗಂಡ ರಾಮುಲು ಬದಲು ತಾನೇ ಆಟೋ ಚಾಲನೆಗೆ ನಿಂತ್ರು.. 1992 ರಲ್ಲಿ ಆಟೋ ಚಾಲನೆ ಶುರು ಮಾಡಿದ ನಿರ್ಮಲಾ ಇಲ್ಲಿಯವರೆಗೆ ಸುಮಾರು 30 ವರ್ಷಗಳ ಕಾಲ ಸತತವಾಗಿ ಆಟೋ ಚಾಲನೆ ಮಾಡ್ತಾ ಸ್ವಾವಲಂಬನೆಯಿಂದ ಜೀವನ ನಡೆಸ್ತಿದ್ದಾರೆ. ಈ ಮಹಿಳಾ ಆಟೋ ಚಾಲಕಿ ನಿರ್ಮಲಾ ಅಂದ್ರೆ ಇಡೀ ರಾಯಚೂರು ಜನಕ್ಕೆ ಅಚ್ಚುಮೆಚ್ಚು. ಇವ್ರು ನಿರ್ಮಲಾ ಅಕ್ಕ ಅಂತಲೇ ಫೇಮಸ್..

ಇದನ್ನೂ ಓದಿ: ಆ ಮಹಿಳೆ ಆಟೋದವನನ್ನು ನಂಬಿ ವಾಹನ ಹತ್ತಿದಳು, ಆದರೆ ಅವನು ಆಕೆಯನ್ನು ಹೊಲದತ್ತ ಕರೆದೊಯ್ದು..

ಇತ್ತ ಸಂಸಾರದ ನೌಕೆ ಸಾಗಿಸುತ್ತಾ, ಪತಿ ರಾಮುಲು ಅವರನ್ನು ತಿದ್ದಿ, ಮೊದಲಿನಂತೆ ಒಳ್ಳೆ ದಾರಿಗೆ ತಂದಿದ್ದಾರೆ. ಇನ್ನೇನು ವಯಸ್ಸಾಯ್ತು ಮನೆಯಲ್ಲಿರೋಣ ಅಂತ ಯೋಚಿಸೋವಾಗಲೇ, ಹೆಗಲೆತ್ತರಕ್ಕೆ ಬೆಳೆದಿದ್ದ ಮಗ ವಿರೇಶ್ ಅಕಾಲಿಕ ಮರಣಕ್ಕೆ ತುತ್ತಾಗಿದ್ದ. ಆಗ ವಿಧಿಯಿಲ್ಲದೇ ಎದೆಗುಂದದೇ ಮತ್ತೆ ಅದೇ ಆಟೋ ಸೇವೆಯನ್ನು ನಿರ್ಮಲಾ ಮುಂದುವರೆಸಿದ್ದಾರೆ. ಇದೇ ದುಡಿಮೆಯಿಂದ ಅನಾರೋಗ್ಯ ಪೀಡಿತ ಪತಿಯ ಚಿಕಿತ್ಸಾ ಖರ್ಚು, ಮನೆ ಖರ್ಚು ನಿಭಾಯಿಸಿಕೊಂಡು ಮಗಳು ರೇಖಾ ಮದುವೆ ಮಾಡಿಸಿದ್ದಾರೆ.

ಜೊತೆಗೆ ಮತ್ತೊಬ್ಬ ಪುತ್ರ ನರೇಶ್ ನನ್ನು ಉನ್ನತ ವ್ಯಾಸಂಗಕ್ಕಾಗಿ ವಿಶಾಖಪಟ್ಟಣಂಗೆ ಕಳುಹಿಸಿದ್ದಾರೆ.. ಹೀಗೆ, ಆಟೋ ಸೇವೆ ವೇಳೆ ಬಡವರು, ತುರ್ತು ಪರಿಸ್ಥಿತಿಯದಲ್ಲಿರೋರು, ಮಹಿಳೆಯರ ಸಹಜ ಕಷ್ಟಗಳನ್ನು ಕಣ್ಣಾರೆ ಕಂಡು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ರು.. ಜೀವನ ನಡೆಸಲು ಬೇಕಾಗೋ ದುಡಿಮೆ ಜೊತೆ ಅದೇ ಆಟೋ ಸೇವೆ ಮೂಲಕ ಬಡವರಿಗೆ, ಗರ್ಭಿಣಿಯರಿಗೆ, ಹಣವಿಲ್ಲದ ವೃದ್ಧರಿಗೆ ಉಚಿತ ಸೇವೆಯನ್ನು ಕೊಡ್ತಾರೆ ಈ ನಿರ್ಮಲಾ..

ಆಟೋ ಚಾರ್ಜ್ ಕೊಡೊ ವೇಳೆ ಹಣವಿಲ್ಲ ಅಂತ ಯಾರಾದ್ರೂ ಮನವಿ ಮಾಡಿದ್ರೇ, ಅಂಥವರ ಜೊತೆ ಕಿರಿಕ್ ಮಾಡದೇ ಕೊಟ್ಟಷ್ಟು ಹಣ ಪಡೆದು ಆಟೋ ಸೇವೆ ನೀಡ್ತಾರೆ.. ಹೀಗೆ ಸಾರ್ಥಕ 30 ವರ್ಷಗಳ ಆಟೋ ಸೇವೆಯಲ್ಲಿ ನಿರ್ಮಲಾಗೆ ಅದೇಷ್ಟೋ ಮಹಿಳೆಯರು, ಹೆಣ್ಣು ಮಗಳಾಗಿ ಆಟೋ ಓಡಿಸೋದು ಕಷ್ಟ ಆಗಲ್ವ.. ಜನ ಸರಿಯಲ್ವಲ್ಲ ಅಂತೆಲ್ಲಾ ಪ್ರಶ್ನೆಗಳನ್ನು ಕೇಳ್ತಾರಂತೆ.. ಆ ವೇಳೆ, ಎಲ್ರೂ ಒಂದೇ ರೀತಿ ಇರಲ್ಲ.. ಎಲ್ಲರೂ ನಮ್ಮ ಅಣ್ಣ-ತಮ್ಮಂದಿರಂತೆ.. ಮಹಿಳೆಯರು ಮನೆಯಿಂದ ಹೊರ ಬಂದು ಸ್ವಾವಲಂಬಿಯಾಗಿ ದುಡಿಯ ಬೇಕು ಅಂತ ಮಹಿಳೆಯರಿಗೆ ಸಂದೇಶ ನೀಡಿದ್ದಾರೆ.

ಹೀಗೆ ರಾಯಚೂರು ಜನರ ಅಚ್ಚುಮೆಚ್ಚಿನ ಮಹಿಳಾ ಆಟೋ ಚಾಲಕಿ ನಿರ್ಮಲಾರನ್ನು ಕೆಲ ಸಂಘ ಸಂಸ್ಥೆಗಳು ಸನ್ಮಾನ ಮಾಡಿ ಗೌರವಿಸಿವೆ. ಅದೇನೆ ಇರಲಿ, ಗಂಡ ಕಿರುಕುಳ ನೀಡಿದ್ರೆ ಸಾಕು ತವರು ಸೇರುವ ಅದೆಷ್ಟೋ ಮಹಿಳೆಯರಿಗೆ, ಆಟೋ ಚಾಲಕಿ ನಿರ್ಮಲಾ ಅಕ್ಕಳನ್ನು ನೋಡಿ ಸ್ವಾವಲಂಬಿಯಾಗಿ ಬದುಕಿ, ಜಯಿಸಬೇಕು ಎಂಬ ಮಹತ್ತರ ಸಂದೇಶ ರವಾನೆಯಾಗುತ್ತದೆ.

ವರದಿ: ಭೀಮೇಶ್, ಟಿವಿ9, ರಾಯಚೂರು

 

Published On - 11:12 am, Tue, 23 May 23

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us