ರಾಯಚೂರು: ಎಂಗೆಜ್​ಮೆಂಟ್​ಗಾಗಿ ತಂದಿಟ್ಟಿದ್ದ 14 ಲಕ್ಷ ಮೌಲ್ಯದ ಆಭರಣಗಳಲ್ಲಿ ಬೆಳ್ಳಿ ಬಿಟ್ಟು ಚಿನ್ನ ಎಗರಿಸಿದ ಖದೀಮರು

ಜಿಲ್ಲೆಯಲ್ಲೀಗ ಕಳ್ಳರ ಕಾಟ ಹೆಚ್ಚಾಗಿದೆ. ಎಂಗೆಜ್​ಮೆಂಟ್​ಗಾಗಿ ಬ್ಯಾಂಕ್​ನಿಂದ ಮನೆಗೆ ತಂದಿದ್ದ ಲಕ್ಷ ಲಕ್ಷ ಮೌಲ್ಯದ ಚಿನ್ನಾರಭಣವನ್ನ ಐನಾತಿಗಳು ದೋಚಿದ್ದಾರೆ. ಇಲ್ಲಿ ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ ಬೆಳ್ಳಿ ಆಭರಣ ಬಿಟ್ಟು ಕೇವಲ ಚಿನ್ನಾಭರಣವನ್ನ ಮಾತ್ರ ಕಳ್ಳತನ ಮಾಡಲಾಗಿದೆ.

ರಾಯಚೂರು: ಎಂಗೆಜ್​ಮೆಂಟ್​ಗಾಗಿ ತಂದಿಟ್ಟಿದ್ದ 14 ಲಕ್ಷ ಮೌಲ್ಯದ ಆಭರಣಗಳಲ್ಲಿ ಬೆಳ್ಳಿ ಬಿಟ್ಟು ಚಿನ್ನ ಎಗರಿಸಿದ ಖದೀಮರು
14 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ, ಕಣ್ಣೀರು ಹಾಕುತ್ತಿರುವ ಮಹಿಳೆ

Updated on: Mar 06, 2023 | 3:37 PM

ರಾಯಚೂರು: ಜಿಲ್ಲೆಯಲ್ಲಿ ಪ್ರತಿ ಬೇಸಿಗೆ ಕಾಲದಲ್ಲಿ ದಾಖಲೆ ಪ್ರಮಾಣದ ತಾಪಮಾನ ದಾಖಲಾಗುತ್ತದೆ. ಮಧ್ಯಾಹ್ನದ ವೇಳೆ ಬಿಸಲಿನ ಹೊಡೆತಕ್ಕೆ ಜನ ಮನೆಯಿಂದ ಹೊರಬರಲ್ಲ. ಹೀಗಾಗಿ ನಗರದಲ್ಲಿ ಕಳ್ಳರು ಹಾಡಹಗಲೇ ಕಳ್ಳತನ ಶುರು ಮಾಡುತ್ತಾರೆ‌. ಅದೇ ರೀತಿ ಜಿಲ್ಲೆಯ ಮಾನಸ ನಗರದಲ್ಲಿ ಈಗಾಗಲೇ ಐನಾತಿಗಳು ಬಾಲ ಬಿಚ್ಚಿದ್ದಾರೆ. ಮಾನಸ ನಗರದಲ್ಲಿ ಗೀತಾ ಎನ್ನುವವರ ಮನೆಯಲ್ಲಿ ಇದೇ ಮಾರ್ಚ್ 1 ರ ಮಧ್ಯಾಹ್ನ ಕಳ್ಳತನ ನಡೆದಿದೆ. ಗೀತಾ ಅವರ ಪತಿ ರಾಘವೇಂದ್ರ ದುಬೈನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಮನೆಯಲ್ಲಿದ್ದ ಸುಮಾರು 345 ಗ್ರಾಂ ಚಿನ್ನಾಭರಣವನ್ನ ದೋಚಲಾಗಿದೆ. ರಾಯಚೂರು ನಗರ ಆಂಧ್ರ, ತೆಲಂಗಾಣ ಗಡಿಯಲ್ಲಿರುವ ಹಿನ್ನೆಲೆ ಇಂಥ ಕೃತ್ಯಗಳನ್ನ ಆ ಭಾಗದ ಕಳ್ಳರೇ ಮಾಡಿರುವ ಅನುಮಾನವಿದೆ. ಇನ್ನು ಘಟನೆ ಬೆನ್ನಲ್ಲೇ ಆ ಮನೆಯವರು ಕಂಗಾಲಾಗಿದ್ದಾರೆ.

ಗೀತಾ ಮನೆಯಲ್ಲಿ ವಿವಿಧ ಬಗೆಯ ಸಾಕಷ್ಟು ಚಿನ್ನಾಭರಣ, ಬೆಳ್ಳಿ ಇತ್ತು. ಎಲ್ಲವನ್ನೂ ಇವರು ಬ್ಯಾಂಕ್ ಲಾಕರ್
ನಲ್ಲಿರಿಸಿದ್ರು. ಆದರೆ ಇದೇ ಮಾರ್ಚ್ 10 ರಂದು ಗೀತಾರ ಕುಟುಂಬಸ್ಥರೊಬ್ಬರ ಎಂಗೆಜ್​ಮೆಂಟ್ ಇದೆ. ಹೀಗಾಗಿ ಬ್ಯಾಂಕ್ ಲಾಕರ್​ನಲ್ಲಿದ್ದ 30 ತೊಲೆ ಬಂಗಾರದ ಆಭರಣ ಅಂದ್ರೆ‌ 300 ಗ್ರಾಂ ಚಿನ್ನಾಭರಣ ಮನೆಗೆ ತಂದಿದ್ರು. ಜೊತೆಗೆ ಗೀತಾ ಹಾಗೂ ಕುಟುಂಬಸ್ಥರ ಬೇರೆ ಕೆಲಸ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದರು. ಇದೇ ಮಾರ್ಚ್ 1 ರಂದು ಗೀತಾ ತಮ್ಮ ಮಗಳು ನಿಖಿತಾ ಜೊತೆ ಮಾರ್ಕೆಟ್​ಗೆ ಹೋಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗೀತಾ ಅವರು ಮನೆ ಸುತ್ತಲೂ ಕಬ್ಬಿಣದ ಗ್ರಿಲ್ ಹಾಕಿಸಿದ್ದಾರೆ.‌ ಆದರೆ ಐನಾತಿ ಕಳ್ಳರು ಅದೇ ಗ್ರಿಲ್​ಗಳನ್ನು ಹಿಡಿದುಕೊಂಡು ಮನೆ ಏರಿ ನಂತರ ಬಾಗಿಲು ಮುರಿದು ಒಳನುಗ್ಗಿದ್ದಾರೆ.

ಇದನ್ನೂ ಓದಿ:Gadag: ಮೊಬೈಲ್​ ಕಳ್ಳತನ ಮುಕ್ತ ನಗರವಾಗಿಸಲು ಪೊಲೀಸರಿಂದ ಮೊಬಿಫೈ ತಂತ್ರಜ್ಞಾನ ಜಾರಿ; ಏನಿದರ ವೈಶಿಷ್ಟ್ಯ, ಇಲ್ಲಿದೆ ಮಾಹಿತಿ

ಮನೆಯೊಳಗಿದ್ದ ಲಾಕರ್ ಮುರಿದು ವಿವಿಧ ಬಗೆಯ 345 ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದಾರೆ. ಇಲ್ಲಿ ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಇದೇ ಮನೆಯ ಮತ್ತೊಂದು ಲಾಕರ್​ನಲ್ಲಿ ಬೆಳ್ಳಿ ಆಭರಣಗಳಿದ್ದವು. ಆ ಲಾಕರ್ ಓಪನ್ ಕೂಡ ಮಾಡಿದ್ದು, ಆದ್ರೆ ಬೆಳ್ಳಿ ಆಭರಣವನ್ನ ಮುಟ್ಟಿಲ್ಲ, ಕೇವಲ ಚಿನ್ನಾಭರಣ ಮಾತ್ರ ದೋಚಿದ್ದಾರೆ. ಕುಟುಂಬಸ್ಥರೊಬ್ಬರ ಎಂಗೆಜ್​ಮೆಂಟ್​ಗಾಗಿ ಮನೆಯಲ್ಲಿಟ್ಟ ಚಿನ್ನಾಭರಣ ಕಳ್ಳ ಕಾಕರ ಪಾಲಾಗಿದೆ. ಹೀಗಾಗಿ ಕಷ್ಟ ಪಟ್ಟು ಸಂಪಾದಿಸಿದ್ದ ನಗ, ನಾಣ್ಯ ಹೋಯಿತಲ್ಲ ಎಂದು ಮಹಿಳೆ ಕಣ್ಣೀರಿಡುತ್ತಿದ್ದಾರೆ.

ಘಟನೆ ಬಳಿಕ ನೇತಾಜಿ ನಗರ ಪೊಲೀಸರು ಶ್ವಾನದಳದ ಮೂಲಕ ಘಟನಾ ಸ್ಥಳ ಪರಿಶೀಲನೆ‌ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಕಳ್ಳರ ಫಿಂಗರ್ ಪ್ರಿಂಟ್​ಗಳು ಪತ್ತೆಯಾಗಿದ್ದು, ಆ ಬಗ್ಗೆಯೂ ಸಾಕ್ಷ ಕಲೆ ಹಾಕಲಾಗಿದೆ. ಈ ಬಗ್ಗೆ ನೇತಾಜಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವರದಿ: ಭೀಮೇಶ್ ಪೂಜಾರ್ ಟಿವಿ9 ರಾಯಚೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:36 pm, Mon, 6 March 23