
ರಾಮನಗರ, ಏಪ್ರಿಲ್ 20: ಲೋಕಸಭೆ ಚುನಾವಣೆಗೆ (Lok sabha elections) ಬಿಜೆಪಿ (BJP) ಪರ ಮತಯಾಚನೆ ಮಾಡಿದ್ದಕ್ಕೆ ರಾಮನಗರ ಜಿಲ್ಲೆ ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗಿರಿಗೌಡನ ದೊಡ್ಡಿಯಲ್ಲಿ ಮಹಾದೇವ್ (32) ಎಂಬುವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಬಿಜೆಪಿ ಪರ ಮತಯಾಚನೆ ಮಾಡಿದ್ದಕ್ಕೆ ಮಹಾದೇವ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ. ಶುಕ್ರವಾರ ರಾತ್ರಿ ಮಹಾದೇವ್ ಅವರನ್ನು ಗುಂಪೊಂದು ಥಳಿಸುತ್ತಿರುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.
ಸ್ಥಳೀಯ ಪಂಚಾಯ್ತಿ ಮುಖಂಡರು ಥಳಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಮಧ್ಯೆ ರೌಡಿ ಚಟುವಟಿಕೆ ಮಾಡುತ್ತಿದ್ದುದಕ್ಕೆ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಇನ್ನು ಕೆಲವು ದೂರಿದ್ದಾರೆ. ಸದ್ಯ ಮಹಾದೇವ್ರನ್ನು ಹಾರೋಹಳ್ಳಿಯ ದಯಾನಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಪರ ಪ್ರಚಾರ ಮಾಡಿದ್ದಕ್ಕೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಂಚೆಪಾಳ್ಯದಲ್ಲಿ ಕೆಂಪನಹಳ್ಳಿ ಗ್ರಾಮ ಪಂಚಾಯತಿ ಜೆಡಿಎಸ್ ಬೆಂಬಲಿತ ಸದಸ್ಯ ಮಂಜುನಾಥ್ ಎಂಬವರ ಮೇಲೆ ಇತ್ತೀಚೆಗೆ ಹಲ್ಲೆ ಮಾಡಲಾಗಿತ್ತು. ಮಂಜುನಾಥ್ ಪರ ಪ್ರಚಾರ ಮಾಡಿದ್ದ ಬಿಜೆಪಿ ಕಾರ್ಯಕರ್ತ ನವೀನ್ ಮೇಲೆ ಕೂಡ ಹಲ್ಲೆ ನಡೆಸಲಾಗಿತ್ತು. ಕಾಂಗ್ರೆಸ್ಸಿನ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಪಾ‘ಕೈ’ಸ್ತಾನ್ ಸರ್ಕಾರದಿಂದ ತಾಲಿಬಾನ್ ಮಾಡೆಲ್ ಜಾರಿ: ಅಪರಾಧ ಪ್ರಕರಣಗಳ ಪಟ್ಟಿ ಮಾಡಿ ಬಿಜೆಪಿ ಕಿಡಿ
ಮತ್ತೊಂದೆಡೆ, ಕುಶಾಲನಗರದಲ್ಲಿ ಬಿಜೆಪಿಯ ಮೈಸೂರು ಕೊಡಗು ಅಭ್ಯರ್ಥಿ ಯದುವೀರ್ ಒಡೆಯರ್ ಪರ ಚುನಾವಣಾ ಪ್ರಚಾರ ನಡೆಸಿದ್ದ ಬಿಜೆಪಿ ಕಾರ್ಯಕರ್ತರೊಬ್ಬರು ಹಿಟ್ ಆ್ಯಂಡ್ ರನ್ಗೆ ಬಲಿಯಾಗಿದ್ದರು. ಇದೊಂದು ಉದ್ದೇಶಪೂರ್ವಕ ಕೃತ್ಯ ಎಂದು ಆರೋಪಿಸಿದ್ದ ಬಿಜೆಪಿ ಪ್ರತಿಭಟನೆ ನಡೆಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ