
ರಾಮನಗರ, ಜೂನ್ 24: ರಾಮನಗರ (Ramnagar) ಜಿಲ್ಲೆ ಚನ್ನಪಟ್ಟಣ (Channapattana) ತಾಲೂಕಿನ ಮಾಕಳಿ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ (45) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಬಯಲು ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರವೊಂದರ ಪಕ್ಕದಲ್ಲಿ ಲೋಕೇಶ್ ಅವರ ಶವ ಪತ್ತೆಯಾಗಿದೆ. ಲೋಕೇಶ್ ಅವರ ಮೃತದೇಹದ ಬಳಿ ವಿಷದ ಬಾಟಲಿ ಪತ್ತೆಯಾಗಿದೆ. ಎಂ.ಕೆ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ದೇವನಹಳ್ಳಿ: ಕಾರು ಡಿಕ್ಕಿಯಾಗಿ ಪಾದಚಾರಿ ಮಹಿಳೆಯರಿಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೊಮ್ಮವಾರ ಗ್ರಾಮದಲ್ಲಿ ನಡೆದಿದೆ. ತಿಮ್ಮಕ್ಕ (60), ಯಶೋಧಾ (33) ಮೃತದುರ್ದೈವಿಗಳು.
ತಿಮ್ಮಕ್ಕ ಮತ್ತು ಯಶೋಧಾ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ. ಹಿಂದಿನಿಂದ ವೇಗವಾಗಿ ಬಂದ ಇಟಿಯೋಸ್ ಕಾರು ಮಹಿಳೆಯರಿಗ ಗುದ್ದಿದೆ. ಮಹಿಳೆಯರಿಗೆ ಡಿಕ್ಕಿ ಹೊಡೆದು, ಬಳಿಕ ಕಾರು ಮನೆಯ ಕಾಂಪೌಂಡ್ಗೆ ಗುದ್ದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜು ಆಗಿದೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಾಮನಗರದಲ್ಲಿ ನಕಲಿ ಕ್ಲಿನಿಕ್ಗಳ ಹಾವಳಿ: ನಕಲಿ ವೈದ್ಯನ ಚಿಕಿತ್ಸೆಯಿಂದ 6 ತಿಂಗಳ ಮಗು ಸಾವು
ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಯುವತಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಚೂಡಸಂದ್ರ ಬಳಿ ಸೋಮವಾರ (ಜೂ.23) ಸಂಜೆ ನಡೆದಿದೆ. ಆಂಧ್ರಪ್ರದೇಶ ಮೂಲದ ನಂದಿನಿ (23) ಮೃತ ದುರ್ದೈವಿ. ನಂದಿನಿ ನಿನ್ನೆ ಸ್ನೇಹಿತರ ಜೊತೆ ಕಟ್ಟಡದ ಮೇಲೆ ತೆರಳಿದ್ದರು. ಈ ವೇಳೆ ಆಯತಪ್ಪಿ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.