ಪ್ರಯಾಣಿಕರ ಜೀವದ ಜೊತೆ ಚಲ್ಲಾಟ; ರಾಜ್ಯದಲ್ಲಿ ಹೆಚ್ಚಾಗ್ತಿದೆ KSRTC, BMTC ಚಾಲಕರ ರೀಲ್ಸ್ ಕ್ರೇಜ್, ಸರ್ಕಾರದಿಂದ ಖಡಕ್ ಎಚ್ಚರಿಕೆ

| Updated By: ಆಯೇಷಾ ಬಾನು

Updated on: Jul 22, 2024 | 7:19 AM

ರೀಲ್ ಹುಚ್ಚಾಟದಿಂದಾಗಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸಾರಿಗೆ ಬಸ್ ಚಾಲಕ, ನಿರ್ವಾಹಕರಲ್ಲಿ ಅತಿಯಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಎಚ್ಚೆತ್ತ ಸಾರಿಗೆ ಇಲಾಖೆ ಕೆಲಸದ ಸಮಯದಲ್ಲಿ ರೀಲ್ಸ್ ಹುಚ್ಚಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದು ರೀಲ್ಸ್ ಮಾಡಿದ್ರೆ ಮನೆಗೆ ಕಳುಸ್ತಿವಿ ಅನ್ನೋ ಎಚ್ಚರಿಕೆ ನೀಡಿದೆ.

ಬೆಂಗಳೂರು, ಜುಲೈ.22: ಇತ್ತೀಚಿನ ದಿನಗಳಲ್ಲಿ ಜನರು ಸೋಶಿಯಲ್ ಮೀಡಿಯಾ ರೀಲ್ಸ್​ಗಳಿಗೆ (Reels) ಹೆಚ್ಚು ಅಡಿಕ್ಟ್ ಆಗುತ್ತಿದ್ದಾರೆ. ಅಲ್ಲದೆ ಈ ರೀಲ್ಸ್​ಗಳಿಂದಲೇ ಫೇಮಸ್ ಆಗಿ ಜೀವನವನ್ನೇ ಬದಲಾಯಿಸಿಕೊಂಡ ಕೆಲವರನ್ನು ಸ್ಫೂರ್ತಿಯಾಗಿ ಪಡೆದು ಮತ್ತಷ್ಟು ಹುಚ್ಚಾಟಕ್ಕೆ ಇಳಿಯುತ್ತಿದ್ದಾರೆ. ಇಲ್ಲಿ ಚರ್ಚಿಸುವ ವಿಷಯವೆಂದರೆ ಕೆಎಸ್​ಆರ್​ಟಿಸಿ (KSRTC), ಬಿಎಂಟಿಸಿ (BMTC) ಬಸ್ ಚಾಲಕರು, ನಿರ್ವಾಹಕರು ಕೂಡ ರೀಲ್ಸ್ ಮಾಡುತ್ತ ಪ್ರಯಾಣಿಕರ ಜೀವನದ ಜೊತೆ ಆಟ ಆಡ್ತಿದ್ದಾರೆ. ಹೀಗಾಗಿ ಸರ್ಕಾರ ಖಡಕ್ ಸೂಚನೆ ನೀಡಿದೆ.

ಎದುರಿಗಿನ ಬಸ್ ಚೇಸ್ ಮಾಡೋ ರೀಲ್ಸ್, ಸಿಂಹಾಂದ್ರಿಯ ಸಿಂಹ ಸಿನಿಮಾದ ಸಿಂಹ ಸಿಂಹ ಸಾಂಗಿಗೆ ಪ್ರಯಾಣಿಕರಿಗೆ ಕೈ ಬೀಸಿಕೊಂಡು ರೀಲ್ಸ್, ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಮಾಚಾರಿ ಸಿನಿಮಾದ ನುಗ್ಗೋದೆ ಸಿಂಗಲ್ಲು ಸಾಂಗ್ ಗೆ ಡ್ರೈವಿಂಗ್ ಮಾಡಿಕೊಂಡು ರೀಲ್ಸ್, ಭಯಾನಕ ಶಿರಾಡಿ ಗಾಟ್ ಸೆಕ್ಷನ್ ರೋಡ್ ನಲ್ಲಿ ಡ್ರೈವಿಂಗ್ ಮಾಡ್ಕೊಂಡು ರೀಲ್ಸ್ ಗೆ ಮಾಡಿದ ಡ್ರೈವರ್ ಗಳು ಹೀಗೆ ಡ್ರೈವಿಂಗ್ ಮಾಡುತ್ತಲೇ ಪ್ರಯಾಣಿಕರ ಪ್ರಾಣವನ್ನು ಲೆಕ್ಕಿಸದೇ ರೀಲ್ಸ್ ಮಾಡುತ್ತಿರುವ ಡ್ರೈವರ್ ಗಳ ಸಂಖ್ಯೆ ಹೆಚ್ಚಾಗಿದೆ. ಇತ್ತ ಬಿಎಂಟಿಸಿಯ ಲೇಡಿ ಕಂಡಕ್ಟರ್ ನೀ ಡ್ರೈವರ್ ಆ ನನ್ನ ಲವ್ವರ್ ಸಾಂಗ್ ಗೆ ಬಿಎಂಟಿಸಿ ಬಸ್ ನಲ್ಲೇ ರೀಲ್ಸ್ ಮಾಡಿದ್ದಾರೆ.

ರಾಜ್ಯದಲ್ಲಿ ಹೆಚ್ಚಾಗ್ತಿದೆ KSRTC ಬಿಎಂಟಿಸಿ ಚಾಲಕರ ರೀಲ್ಸ್ ಕ್ರೇಜ್

ರೀಲ್ಸ್ ಮಾಡೋದನ್ನೇ ಹವ್ಯಾಸ ಮಾಡಿಕೊಂಡಿರುವ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ‌ಸಾರಿಗೆ ಇಲಾಖೆಯ ಚಾಲಕ‌ ನಿರ್ವಾಹಕರಿಗೆ ಸಾರಿಗೆ ಸಚಿವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಬುಧವಾರ ಹುಬ್ಬಳ್ಳಿಯಲ್ಲಿ ರೀಲ್ಸ್ ಮಾಡುತ್ತಾ ಚಾಲಕನೋರ್ವ ಎತ್ತಿನ ಬಂಡಿಗೆ ಡಿಕ್ಕಿಯೊಡೆದ ಪರಿಣಾಮ ರೈತ ಗಂಭೀರ ಗಾಯಗೊಂಡಿದ್ದು, ಎರಡು ಹಸುಗಳು ಸಾವನ್ನಪಿದ್ದವು. ಈ ಘಟನೆ‌ ನಂತರ ಎಚ್ಚೆತ್ತ ಸಾರಿಗೆ ಸಚಿವರು ಇದಕ್ಕೆ ಕಡಿವಾಣ ಹಾಕಲು ಖಡಕ್‌ ನಿರ್ಧಾರ ಮಾಡಿದ್ದಾರೆ. ಯಾರೇ ರೀಲ್ಸ್ ಮಾಡಿದ್ರೂ ಅವರನ್ನ ಕೂಡಲೇ ಸಸ್ಪೆಂಡ್ ಮಾಡಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಬಸ್​ಗೆ ಕಾಯ್ತಿದ್ದ ವಿದ್ಯಾರ್ಥಿನಿ ಅಪಹರಣ: ನಾಲ್ವರು ಯುವಕರಿಂದ ಕಿಡ್ನ್ಯಾಪ್‌ ಆರೋಪ

ರೀಲ್ಸ್ ಮಾಡುವಾಗ ಎತ್ತಿನ ಗಾಡಿಗೆ ಡಿಕ್ಕಿಯೊಡೆದ ಚಾಲಕ

ಸಾರಿಗೆ ಬಸ್ ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತುಗಳು ಬಲಿಯಾದ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಬಳಿ ಬುಧವಾರ ನಡೆದಿತ್ತು. ಘಟನೆಯಲ್ಲಿ ಇಬ್ಬರು ರೈತರಿಗೆ ಗಂಭೀರವಾದ ಗಾಯಗಳಾಗಿವೆ.

ಬಸ್ಸಿನ ಒಳಗೆ ಛತ್ರಿ ಹಿಡಿದು ರೀಲ್ಸ್ ಮಾಡಿದ್ದ ಚಾಲಕ

ಬಸ್ಸಿನ‌ ಒಳಗೆ ಛತ್ರಿ ಹಿಡಿದು ರೀಲ್ಸ್ ಮಾಡಿದ್ದು ಸಾಕಷ್ಟು ವೈರಲ್ ಆಗಿತ್ತು. ಬಸ್ಸು ಸೋರುತ್ತಿದ್ಯಾ ಎಂದು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಇವಿಷ್ಟೇ ಅಲ್ಲದೇ ಹಲವು ರೀತಿ ರೀಲ್ಸ್ ಮಾಡಿ ಅವಘಡಗಳಿಗೆ ಕಾರಣವಾಗುತ್ತಿದ್ದಾರೆ ಎಂದು ಸಾರಿಗೆ ಸಚಿವ್ರು ಅಧಿಕಾರಿಗಳಿಗೆ ಎಚ್ಚರಿಕೆಯ ಸೂಚನೆ ನೀಡಿದ್ದಾರೆ. ಪ್ರಯಾಣಿಕರ ಜೊತೆಗೂ ರಿಲ್ಸ್ ಮಾಡಿ ಟ್ರೋಲ್ ಆಗೋದು, ಇನ್ಸ್ಟಾಗ್ರಾಮ್, ಫೇಸ್ ಬುಕ್ ನಲ್ಲಿ KSRTC, BMTC ಸಾರಿಗೆ ಇಲಾಖೆಯ ಚಾಲಕರ ರೀಲ್ಸ್ ವೈರಲ್ ಆಗ್ತಿವೆ. ಜೊತೆಗೆ ರೀಲ್ಸ್ ಮಾಡುವಾಗ್ಲೇ ಆ್ಯಕ್ಸಿಡೆಂಟ್ ಪ್ರಕರಣಗಳು ಆಗ್ತಿವೆ. ಈ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎರಡು ಎತ್ತುಗಳ ಬಲಿ ಜೊತೆಗೆ ರೈತನ ಗಂಭೀರ ಪರಿಸ್ಥಿತಿ‌ ನಂತರ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ರೀಲ್ಸ್ ಮಾಡೋ ಚಾಲಕರಿಗೆ ಸಸ್ಪೆಂಡ್ ಚಾಟಿ ಬೀಸಲು ಮುಂದಾಗಿದೆ. ಇನ್ಮುಂದೆ ರೀಲ್ಸ್ ಮಾಡೋಕೂ ಮುನ್ನಾ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ನೌಕರರು ಯೋಚನೆ‌ ಮಾಡಿ. ಇಲ್ಲಾಂದ್ರೆ ಕೆಲಸ ಕಳೆದುಕೊಳ್ಳುವುದು ಗ್ಯಾರಂಟಿ. ನಿಮ್ಮನ್ನು ನಂಬಿ ಬಸ್ ಹತ್ತುವ ಪ್ರಯಾಣಿಕರ ಜೀವಗಳು ನಿಮ್ಮ ಕೈಯಲ್ಲೇ ಇರುತ್ತದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ