ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ದಾಖಲೆಯ 15ನೇ ಬಾರಿ ಬಜೆಟ್ ಮಂಡಿಸಲು ವಿಧಾನ ಸೌಧಕ್ಕೆ ಆಗಮಿಸಿದರು. ಇದಕ್ಕೂ ಮೊದಲು ರಾಜ್ಯ ಆರ್ಥಿಕ ಇಲಾಖೆ ಅಧಿಕಾರಿಗಳು (finance department officials) 2024-2025 ಸಾಲಿನ ಬಜೆಟ್ ಪುಸ್ತಕವನ್ನು ಕಾವೇರಿ ನಿವಾಸದ ಬಳು ಮುಖ್ಯಮಂತ್ರಿಯವರಿಗೆ ಹಸ್ತಾಂತರಿಸಿದರು. ತಮ್ಮ ಸಂಪುಟ ಕೆಲ ಸಹೋದ್ಯೋಗಿಗಳೊಂದಿಗೆ ಅವರು ಮುಗುಳ್ನಗುತ್ತಾ ಸದನಕ್ಕೆ ಆಗಮಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಒಳಗೆ ಪ್ರವೇಶಿಸುವ ಮೊದಲು ಅವರ ಬಜೆಟ್ ಪುಸ್ತಕ ಹೊತ್ತು ಮಿರಮಿರ ಮಿಂಚುತ್ತಿದ್ದ ಹೊಚ್ಚ ಹೊಸ ಲೆದರ್ ಬ್ಯಾಗನ್ನು ಮಾಧ್ಯಮದವರಿಗೆ ತೋರಿಸಿದರು. ಸಿದ್ದರಾಮಯ್ಯ ಜೊತೆ ಹೆಜ್ಜೆ ಹಾಕುತ್ತಿರುವ ಬಸವರಾಜ ರಾಯರೆಡ್ಡಿ (Basavaraj Rayareddy) ಅವರನ್ನು ವೀಕ್ಷಕರು ಗಮನಿಸಬೇಕು. ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರಾಗಿರುವ ರಾಯರೆಡ್ಡಿ ಬಜೆಟ್ ತಯಾರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಲಾಗಿದೆ.
ಯಲಬುರ್ಗಾದ ಶಾಸಕರಾಗಿರುವ ರಾಯರೆಡ್ಡಿ ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿದ್ದಾರೆ ಮತ್ತು ಸಿದ್ದರಾಮಯ್ಯನವರವ ಆಪ್ತರಲ್ಲಿ ಒಬ್ಬರಾಗಿದ್ದಾರೆ. ಚುನಾವಣೆ ಸಮಯದಲ್ಲಿ ಘೋಷಿಸಿದ ಗ್ಯಾರಂಟಿಗಳ ಜಾರಿಗೆ ಸಾಕಷ್ಟು ಹಣ ತೆಗೆದಿರಿಸಬೇಕಾಗಿರುವುದರಿಂದ, ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ವಿರೋಧ ಪಕ್ಷದ ನಾಯಕರು ಪದೇಪದೆ ಹೇಳುತ್ತಿರುವುದರಿಂದ ಆಯವ್ಯಯ ಪತ್ರವನ್ನು ಸಿದ್ದರಾಮಯ್ಯ ಹೇಗೆ ಬ್ಯಾಲೆನ್ಸ್ ಮಾಡಿದ್ದಾರೆ ಅನ್ನೋದು ಎಲ್ಲರ ಕುತೂಹಲ ಕೆರಳಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ